ರಾವ್ ಸಹೋದರಿಯರ ಕಛೇರಿ
Team Udayavani, Nov 1, 2019, 3:31 AM IST
ಮಡ್ಯಾರು ಶ್ರೀ ಪರಾಶಕ್ತಿ ದೇಗುಲ ಸಮುಚ್ಚಯದಲ್ಲಿ ಇತ್ತೀಚೆಗೆ ಕು| ಅನುಶ್ರೀ ರಾವ್ ಮತ್ತು ಕು| ಸ್ವಾತಿ ರಾವ್ ಮಂಗಳಾದೇವಿ ಇವರಿಂದ ಸಂಗೀತ ಕಾರ್ಯಕ್ರಮ ನೆರವೇರಿತು. ರಾವ್ ಸೋದರಿಯರು ದರ್ಬಾರು ವರ್ಣದ ಸುಶ್ರಾವ್ಯವಾದ ಪ್ರಸ್ತುತಿಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿದರು. ಮುಂದೆ ಚಕ್ರವಾಕ ರಾಗದ ಸೊಗಸಾದ ಆಲಾಪನೆಯೊಂದಿಗೆ “ಗಜಾನನಯುತಂ’ ಮುತ್ತು ಸ್ವಾಮಿ ದೀಕ್ಷಿತರ ರಚನೆಯನ್ನು ಹಾಡಿ ವಿಘ್ನೇಶ್ವರನನ್ನು ಸ್ತುತಿಸಿದರು. ಹರಿಕೇಸನಲ್ಲೂರು ಮುತ್ತಯ್ಯ ಭಾಗವತ್ರವರ ಜನಪ್ರಿಯ ಕೃತಿ “ಹಿಮಗಿರಿ ತನಯೇ’ ತ್ಯಾಗರಾಜರ “ನೀದು ಚರಣಮುಲೆ’ ಮನೋಜ್ಞವಾಗಿ ಪ್ರಸ್ತುತಪಡಿಸಿ ಶೋತೃಗಳನ್ನು ಒಲಿಸಿಕೊಂಡರು.
ಶ್ರೀ ತ್ಯಾಗರಾಜ ವಿರಚಿತ “ಸಾಮಜವರಗಮನ’, “ಸೊಗಸುಗ ಮೃದಂಗ ತಾಳಮು’ ಸೂಕ್ತವಾದ ರಾಗಾಲಾಪನೆ, ಸ್ವರ ಪ್ರಸ್ತಾರಗಳೊಂದಿಗೆ ಮೂಡಿಬಂತು. ಮೈಸೂರು ವಾಸುದೇವಾಚಾರ್ಯರ ಪ್ರಸಿದ್ಧ ರಚನೆ “ಬ್ರೋಚೇವಾರೆವರುವಾ ನಿನ್ನುವಿನ ರಘುವರಾ’, ಪುರಂದರ ದಾಸರ ವೆಂಕಟಾಚನಿಲಯಂ’, ಜಗದೋದ್ಧಾರನ’, ಪ್ರಸ್ತುತಿ ಮನಸೆಳೆಯಿತು.ಡಾ| ಮಂಗಳಪಲ್ಲಿ ಬಾಲಮುರಳಿ ಕೃಷ್ಣ ರಚಿತ ಬೃಂದಾವನಿ ರಾಗದ ತಿಲ್ಲಾನ ಹಾಗೂ ಪಾಂಬಟ್ಟಿ ಸಿದ್ಧರ್ ವಿರಚಿತ ತಮಿಳು ರಚನೆಯೊಂದರ ಕನ್ನಡಾನುವಾದಿತ ಪ್ರಸ್ತುತಿ ಪ್ರಶಂಸೆಗೊಳಪಟ್ಟಿತು. ಶ್ರೀಧರ್ ಆಚಾರ್ಯ ವಯೋಲಿನ್ ಹಾಗೂ ಹರಿಕೃಷ್ಣ ಮೃದಂಗ ವಾದನದ ಮೂಲಕ ಸಹಕರಿಸಿದರು.
ಪಿ.ನೇಮು ಕೊಟ್ಟಾರಿ