“ವೃತ್ತಿಕಲಾವಿದರ ನಿರ್ವಹಣೆಯ ನೆರಳು ಹವ್ಯಾಸಿಗಳ ಮೇಲೆ’


Team Udayavani, Dec 1, 2017, 2:44 PM IST

01-47.jpg

ಪ್ರತೀ ವರುಷವೂ ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಳ್ಳುವ ಸಂಪಾಜೆ ಯಕ್ಷೋತ್ಸವದಲ್ಲಿ ಈ ವರುಷ ನಡೆದ ಒಂದು ವಿಶೇಷ ಕಾರ್ಯಕ್ರಮ ಹವ್ಯಾಸೀ ಯಕ್ಷಗಾನ ಕಲಾವಿದರ ಸ್ಪರ್ಧಾ ಪ್ರದರ್ಶನ. 2017ರ ನವೆಂಬರ್‌ 2, 3, ಮತ್ತು 4ರಂದು ಪೂರ್ವಾಹ್ನ ನಡೆದ ಈ ಪ್ರದರ್ಶನಕ್ಕೆ ಚಾಲನೆ ನೀಡಿದವರು ಸುಮನಾ ಶ್ಯಾಮ್‌ ಭಟ್‌. ಒಟ್ಟು 18 ತಂಡಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಪ್ರಸಂಗ “ಇಂದ್ರಜಿತು ಕಾಳಗ’. ರಾವಣ, ಇಂದ್ರಜಿತು, ರಾಮ, ಹನೂಮಂತ, ವಿಭೀಷಣ, ಶುಕ್ರಾಚಾರ್ಯ, ಲಕ್ಷ್ಮಣ ಈ ಏಳು ಪಾತ್ರಗಳು ಸ್ಪರ್ಧೆಗೆ ಒಳಗಾಗಿದ್ದವು. ಕಿನ್ನಿಗೋಳಿಯ “ಮೋಹಿನಿ ಕಲಾಸಂಪದ’ ಪ್ರಥಮ ಪ್ರಶಸ್ತಿಗೆ ಪಾತ್ರವಾಯಿತು. ದ್ವಿತೀಯ ಬಹುಮಾನ ವನ್ನು ಪಡೆದ ತಂಡ “ಯಕ್ಷಕೂಟ ಪುತ್ತೂರು’. ಬೆಂಗಳೂರಿನ “ಯಕ್ಷಲೋಕ’ ತಂಡಕ್ಕೆ ತೃತೀಯ ಬಹುಮಾನ. ತಂಡಗಳನ್ನು ಪ್ರಶಸ್ತಿ ಪತ್ರ, ಪ್ರಶಸ್ತಿ ಫ‌ಲಕ, ನಗದಿನೊಂದಿಗೆ ಗೌರವಿಸಲಾಯಿತು. ಪ್ರತೀ ಪಾತ್ರಕ್ಕೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳಿದ್ದವು. 

ರಾವಣನ ಪಾತ್ರದಲ್ಲಿ ಮನೀಶ್‌ ಕುಮಾರ್‌ ಎಡನೀರು, ರಾಮನಾಗಿ ಸಂತೋಷ ಗೋಖಲೆ, ಶುಕ್ರಾಚಾರ್ಯನಾಗಿ ನಂದನಾ ನಾಯ್ಕ ಸಿದ್ಧಾಪುರ, ಹನೂಮಂತನಾಗಿ ಸುನಿಲ್‌, ವಿಭೀಷಣನಾಗಿ ಜೈತನ್ಯ ಮುಳಿಯ, ಇಂದ್ರಜಿತುವಾಗಿ ಶಶಾಂಕ ನೆಲ್ಲಿತ್ತಾಯ, ಲಕ್ಷ್ಮಣನಾಗಿ ಅಕ್ಷಯ ಭಟ್‌, ಮೂಡಬಿದ್ರೆ ಪ್ರಥಮ ಬಹುಮಾನ ಪಡೆದರು. ಸಚಿನ್‌ ಕೆ.ಅಮೀನ್‌ (ರಾವಣ), ವಿಜಯಶಂಕರ ಆಳ್ವ ಮಿತ್ತಳಿಕೆ (ರಾಮ), ಕಾರ್ತಿಕ್‌ ಕಲ್ಮಡ್ಕ (ಶುಕ್ರಾಚಾರ್ಯ), ರವಿಕಾಂತ ಕಾರ್ಕಳ (ಹನೂಮಂತ), ಜಯಕೀರ್ತಿ (ವಿಭೀಷಣ), ಅಭಿಜಿತ್‌ ರಾವ್‌ (ಇಂದ್ರಜಿತು), ಶಿವರಾಜ್‌ ಪೆರ್ಲ (ಲಕ್ಷ್ಮಣ) ದ್ವಿತೀಯ ಬಹುಮಾನ ಪಡೆದರು. 

ರಾವಣನಾಗಿ ಗೋಪಾಲಕೃಷ್ಣ ಭಟ್‌ ನಿಡುವಜೆ, ರಾಮನಾಗಿ ಮೊಹಮ್ಮದ್‌ ಅಶ್ವತ್ಥ್ ಹುಸೈನ್‌, ಶುಕ್ರಾಚಾರ್ಯನಾಗಿ ಅಶ್ವಿ‌ನಿ ಆಚಾರ್ಯ, ಹನೂಮಂತ ನಾಗಿ ಈಶ್ವರಚಂದ್ರ ನಿಡ್ಲೆ, ವಿಭೀಷಣನಾಗಿ ನಿರುಪಾ ಭಟ್‌, ಇಂದ್ರಜಿತುವಾಗಿ ರಂಜಿತಾ ಎಲ್ಲೂರು, ಲಕ್ಷ್ಮಣನಾಗಿ ದಿಶಾ ಶೆಟ್ಟಿ ತೃತೀಯ ಬಹುಮಾನ ಪಡೆದವರು.

ಇಂದ್ರಜಿತುವಾಗಿ ಚಿನ್ನ ಪಡೆದವರು ಶಶಾಂಕ ನೆಲ್ಲಿತ್ತಾಯ. ರಜತ ಪದಕ ಪಡೆದವರು ಅಭಿಜಿತ್‌ ರಾವ್‌. ಲಕ್ಷ್ಮಣನಾಗಿ ಅಕ್ಷಯ ಭಟ್‌ ಮೂಡಬಿದ್ರೆ ಬಂಗಾರ, ಶಿವರಾಜ್‌ ಪೆರ್ಲ ರಜತ ಪದಕ ಗಳಿಸಿದರು. ಡಾ| ಟಿ. ಶ್ಯಾಮ್‌ ಭಟ್‌, ಸುಮನಾ ಶ್ಯಾಮ್‌ ಭಟ್‌ ವಿಜೇತರಿಗೆ ಬಹುಮಾನ ವಿತರಿಸಿದರು. ತೀರ್ಪುಗಾರರಾಗಿ ಪದ್ಯಾಣ ಶಂಕರನಾರಾಯಣ ಭಟ್‌, ಶಿವರಾಮ ಜೋಗಿ, ಉಬರಡ್ಕ ಉಮೇಶ ಶೆಟ್ಟಿ, ಸುಣ್ಣಂಬಳ ವಿಶ್ವೇಶ್ವರ ಭಟ್‌ ಮತ್ತು ತಾರಾನಾಥ ವರ್ಕಾಡಿ ಭಾಗವಹಿಸಿದ್ದರು.

ನಿರೀಕ್ಷೆಗೆ ಮೀರಿದ ಪ್ರದರ್ಶನ
ಹವ್ಯಾಸಿ ತಂಡಗಳ ಪ್ರದರ್ಶನ ನಮ್ಮ ನಿರೀಕ್ಷೆಯ ಮಟ್ಟವನ್ನು ಮೀರಿತ್ತು. ಒಳ್ಳೆಯ ಪ್ರದರ್ಶನಗಳು. ಎಲ್ಲ ಕಲಾವಿದರ ಪ್ರಯತ್ನವೂ ಶ್ಲಾಘನೀಯ. ಇದು ಒಳ್ಳೆಯ ಬೆಳವಣಿಗೆ. ಎಳೆಯರು ತುಂಬಾ ತಯಾರಾಗಿದ್ದಾರೆ, ಇದನ್ನು ಹಿರಿತನದ ಅನುಭವದಿಂದ ಹೇಳುತ್ತಿದ್ದೇನೆ. ಹಿಮ್ಮೇಳದ ಕೊರತೆಯಿಂದ ಕೆಲವು ತಂಡಗಳು ಹಿಂದೆ ಬಿದ್ದವು. ಹೆಂಗಸರು ಕೂಡ ಗಂಡಸರಿಗೆ ಸರಿಮಿಗಿಲೆನಿಸಿ ಪ್ರದರ್ಶನ ನೀಡಿದ್ದಾರೆ. ಭಾವದ ಕೊರತೆ ಹೆಚ್ಚಿನವರಿಗಿತ್ತು. ಶುಕ್ರಾಚಾರ್ಯ ಸಾಂಪ್ರದಾಯಿಕ ಹಾಸ್ಯವನ್ನು ಅನುಕರಿಸಬೇಕಾದ ಅಗತ್ಯವಿರಲಿಲ್ಲ. ಹೊಲಸಾಗಿ ಬೆಳೆಯುತ್ತಿರುವ ಯಕ್ಷಗಾನವನ್ನು ಹುಲುಸಾಗಿ ಬೆಳೆಸಲು ಸಾಧ್ಯ ಎಂದು ಈ ಪ್ರದರ್ಶನಗಳು ತೋರಿಸಿಕೊಟ್ಟಿವೆ. ಇಂತಹ ಕಾರ್ಯಕ್ರಮ ಸಂಘಟಿಸಿದ ಸಂಘಟಕರ ದೃಷ್ಟಿ ಶ್ಲಾಘನೀಯ.
ಪದ್ಯಾಣ ಶಂಕರನಾರಾಯಣ ಭಟ್‌ 

ಮಹಿಳೆಯರ ಪರಿಶ್ರಮ ಪ್ರಶಂಸನೀಯ
ತಮ್ಮ ನಿರ್ವಹಣೆಯ ಒಳಿತು-ಕೆಡುಕುಗಳನ್ನು ಗುರುತಿಸುವವರು ಇದ್ದಾರೆಂದು ತಿಳಿ ದರೆ ಹವ್ಯಾಸೀ ಕಲಾವಿದರಲ್ಲಿ ಕಲಾಪ್ರಜ್ಞೆ ಮೂಡುತ್ತದೆ. ಸ್ಪರ್ಧೆಗಳಲ್ಲಿ ತೀರ್ಪುಗಾರರು ಇರುವು ದರಿಂದ ಕುಂದುಕೊರತೆಗಳನ್ನು ಗುರುತಿಸಲು ಅವಕಾಶವಾಗುತ್ತದೆ. ಹೆಚ್ಚಿನ ಕಲಾವಿದರು ರಾಜವೇಷ ಮತ್ತು ಪುಂಡುವೇಷದ ಕುಣಿತಗಳ ವ್ಯತ್ಯಾಸವನ್ನು ಗಮನಿಸಿದಂತೆ ಕಾಣಲಿಲ್ಲ. ರಸ-ಭಾವಗಳ ಬಗೆಗೆ ಗಮನವಿರಲಿಲ್ಲ, ತ್ರಾಣ ಪ್ರದರ್ಶನವೇ ಕಲೆ ಎಂದು ತಿಳಿದಂತಿತ್ತು. ಒಂದೇ ರೀತಿಯ ಕಸುಬುಗಾರಿಕೆ, ವೈವಿಧ್ಯ ಇರಲಿಲ್ಲ. ಕಲಾವಿದರ ಪರಿಶ್ರಮ ಎದ್ದು ಕಂಡರೂ ಪಾತ್ರೋಚಿತ ನಿರ್ವಹಣೆಗೆ ನೀಡಿದ ಪ್ರಾಶಸ್ತ ಕಡಿಮೆ. ಆದುದರಿಂದ ಒಂದು ರೀತಿಯ ಏಕತಾನತೆ ಪ್ರದರ್ಶನಗಳ ಉದ್ದಕ್ಕೂ ಕಾಣುತ್ತಿತ್ತು. ಲಕ್ಷ್ಮಣ, ಇಂದ್ರಜಿತು, ರಾಮ, ಹನುಮಂತ ಈ ಪಾತ್ರಗಳ ವೀರರಸದ ಅಭಿವ್ಯಕ್ತಿ ಭಿನ್ನ-ಭಿನ್ನವಾದುದು ಎಂಬುದನ್ನು ಕಲಾವಿದರು ಅವಶ್ಯ ಅರಿಯಬೇಕು. ಶುಕ್ರಾಚಾರ್ಯ ಪಾತ್ರವನ್ನು ಹಾಸ್ಯಗಾರರು ಮಾಡಿದರೂ ಹಾಸ್ಯರಸವೇ ಸು#ರಿಸಲಿಲ್ಲ. ಒಂದು ತಂಡದವರು ಮಾತ್ರ ಶುಕ್ರಾಚಾರ್ಯರ ಪಾತ್ರದ ಗಾಂಭೀರ್ಯವನ್ನು ಅರಿತಿದ್ದಂತೆ ತೋರಿತು. ಮಹಿಳೆಯರ ಪರಿಶ್ರಮ ಪ್ರಶಂಸನೀಯ. ಸ್ತ್ರೀಯರು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವುದರಿಂದ ಇಡೀ ಯಕ್ಷಗಾನ ಪ್ರಪಂಚವೇ ಒಂದು ಮನೆಯಾಗುತ್ತದೆ. ಮಕ್ಕಳೂ ಯಕ್ಷಗಾನ ಕಲಿಯುತ್ತಾರೆ. ಹೆಚ್ಚಿನ ಕಲಾವಿದರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಸಂಪಾಜೆಯಂತಹ ಪ್ರತಿಷ್ಠಿತ ವೇದಿಕೆಯಲ್ಲಿ ಅವಕಾಶ ನೀಡಿದ್ದೇ ದೊಡ್ಡ ಪ್ರಶಸ್ತಿ. ಹವ್ಯಾಸೀ ಕಲಾವಿದರಿಗೆ ಉತ್ತೇಜನ ನೀಡಿದ ಸಂಘಟಕರ ಪ್ರೋತ್ಸಾಹ ದೊಡ್ಡದು.
ಸುಣ್ಣಂಬಳ ವಿಶ್ವೇಶ್ವರ ಭಟ್‌

ಆಶಾದಾಯಕ ಪ್ರದರ್ಶನಗಳು
ಹವ್ಯಾಸೀ ಕಲಾವಿದರ ನಿರ್ವಹಣೆ ಆಶಾದಾಯಕವಾಗಿತ್ತು. ಯಕ್ಷಗಾನ ಅಳಿವಿನಂಚಿನಲ್ಲಿದೆ ಎಂಬ ಭ್ರಮೆಯನ್ನು ಸುಳ್ಳಾಗಿಸಿದ್ದಾರೆ. ಸ್ತ್ರೀಯರ ನೈಸರ್ಗಿಕವಾದ ಸ್ವರಭಾರವನ್ನು ಹೊರತು ಪಡಿಸಿದರೆ ಪುರುಷರಿಗೆ ಕಡಿಮೆಯಿಲ್ಲದಂತೆ ಪಾತ್ರನಿರ್ವಹಣೆ ಮಾಡಿದ್ದಾರೆ. ಶುಕ್ರಾಚಾರ್ಯ ಪಾತ್ರಗಳು ವೃತ್ತಿಪರ ಹಾಸ್ಯಗಾರರ ಅನುಕರಣೆಯಿಂದ ತಮ್ಮತನವನ್ನು ಕಳೆದುಕೊಂಡಿದ್ದವು. ಹೆಚ್ಚಿನ ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ. ಹಳೆಯ ತಲೆಮಾರಿನ ಪ್ರಬುದ್ಧ ಪಾತ್ರಗಳನ್ನು ನೋಡಿದವರು ಯಾರೂ ಇದ್ದಂತಿರಲಿಲ್ಲ. ಹೊಸ ತಲೆಮಾರಿನ ಕಲಾವಿದರ ಅನುಕರಣೆಯೇ ಅಧಿಕವಾಗಿತ್ತು. ಕಳಪೆ ಪ್ರದರ್ಶನ ನೀಡಿದ ತಂಡವೂ ಒಂದಿತ್ತು. ರೋಷಾವೇಶದಿಂದ ಇನ್ನೊಂದು ಪಾತ್ರವನ್ನು ಹಿಡಿದೆಳೆಯುವುದು ಆಭಾಸಕರ. ಬಣ್ಣದ ವೇಷಧಾರಿಗಳು ತಮ್ಮ ಗತಿಯ ಬಗ್ಗೆ ಗಮನ ಹರಿಸಬೇಕು. ಮುಂಬಯಿಯ ಕಲಾವಿದರು ಪಾತ್ರಗಳಿಗೆ ಜೀವ ತುಂಬಿದ್ದಾರೆ.
ಉಬರಡ್ಕ ಉಮೇಶ ಶೆಟ್ಟಿ 

ತೀರ್ಪುಗಾರರ ನುಡಿ
ಹೊಸ ಪೀಳಿಗೆಯಲ್ಲಿ ಸಾಕಷ್ಟು ಕಲಾವಿದರಿದ್ದಾರೆಂಬುದು ಸ್ಪಷ್ಟ ವಾಗಿದೆ. ಕಲಾವಿದೆಯರು ಕಲಾವಿದರಂತೆಯೇ ಮೆರೆದಿದ್ದಾರೆ. ರಾಜವೇಷ ಧರಿಸಿ ವೇಷದ ಗತ್ತು ಗಾಂಭೀರ್ಯದೊಂದಿಗೆ ಕುಣಿದವರ ಸಂಖ್ಯೆ ವಿರಳ. ಹೆಚ್ಚಿನ ರಾಜ ವೇಷಗಳು ಪುಂಡುವೇಷದಂತೆ ಕುಣಿದದ್ದು ಅನುಚಿತ ವೆನಿಸಿತು. ಸಂಘಟಕರು ಹವ್ಯಾಸಿ ಕಲಾವಿದ ರಿಗೆ ಉತ್ತೇಜನ ನೀಡುವ ಅತ್ಯುತ್ತಮ ಕಾರ್ಯಕ್ರಮ ಆಯೋಜಿಸಿದ್ದಾರೆ. 
ಶಿವರಾಮ ಜೋಗಿ

ತೀರ್ಪುಗಾರರಾಗಿ ಭಾಗವಹಿಸಿದ ಅನುಭವೀ ಯಕ್ಷಗಾನ ಕಲಾವಿದರ ಅಭಿಪ್ರಾಯಗಳನ್ನು ಗಮನಿಸಿದರೆ ಹವ್ಯಾಸಿ ಯಕ್ಷಗಾನ ರಂಗಭೂಮಿಯ ಸ್ಥಿತಿ-ಗತಿಗಳೇನೆಂಬುದರಿವಾಗದಿರದು. ತೀರ್ಪುಗಾರರಲ್ಲಿ ಓರ್ವನಾಗಿ ಹವ್ಯಾಸಿಗಳ ಪ್ರದರ್ಶನ ಕಂಡು ಬೆರಗಾಗಿದ್ದೇನೆ. ವೃತ್ತಿಪರ ಕಲಾವಿದರಿಗಿಂತಲೂ ಹೆಚ್ಚಿನ ಸಾಮರ್ಥ್ಯ ಕೆಲವು ಹವ್ಯಾಸಿ ಕಲಾವಿದರಲ್ಲಿತ್ತು. ಒಬ್ಬರಿಗಿಂತ ಒಬ್ಬರು ಹೆಚ್ಚು ಎನ್ನುವಂತಹ ಕುಣಿತ. ಈ ಭರದಲ್ಲಿ ವಿಭಿನ್ನ ತಾಳಗಳ ವೈವಿಧ್ಯಮಯ ಲಯಗಳ ಕುಣಿತ ಮತ್ತು ಪಾತ್ರೋಚಿತ ನಿರ್ವಹಣೆಯ ಕರ್ತವ್ಯ ಮರೆತೇ ಹೋಗಿತ್ತು! ಅನುಕರಣೆಯ ಗೀಳಿನಲ್ಲಿ ಸೃಜನಶೀಲತೆ ಮರೆಯಾಗಿತ್ತು. ಹವ್ಯಾಸಿ ಕಲಾವಿದರಲ್ಲಿ ಅನುಪಮ ಶಕ್ತಿಯಿದೆ. ಅದು ಸರಿಯಾದ ದಾರಿಯಲ್ಲಿ ಸಾಗಬೇಕು. ಅದಕ್ಕಾಗಿ ಕಲಾಪ್ರಜ್ಞೆಯುಳ್ಳ ಅನುಭವೀ ಹಿರಿಯ ಕಲಾವಿದರ ಮಾರ್ಗದರ್ಶನ ಪಡೆಯುವುದು ಅವರ ಭವಿಷ್ಯಕ್ಕೆ ಪೂರಕ. ಕಲಾಸೌಂದರ್ಯ ಕಾಪಾಡುವುದಕ್ಕೂ ಅಗತ್ಯ. ಸ್ಪರ್ಧೆಯ ಮೊದಲು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಘೋಷಿಸಿದ ಸಂಘಟಕರು ಕೊನೆಗೆ ತೃತೀಯ ಬಹುಮಾನವನ್ನು ನೀಡುವುದು ಅನಿವಾರ್ಯವಾಯಿತು. ಇದು ಸ್ಪರ್ಧೆಯ ತೀವ್ರತೆಗೆ ಸಾಕ್ಷಿ. ಬಹುಮಾನ ಸಿಗದ ಕಲಾವಿದರು ಕೇವಲ ಒಂದೆರಡು ಅಂಕಗಳ ಅಂತರದಲ್ಲಿರಬಹುದಷ್ಟೆ. 
ಕಲಾವಿದೆಯರು ತಮ್ಮ ಅದ್ಭುತ ಸಾಮರ್ಥ್ಯವನ್ನು ಮೆರೆದಿದ್ದಾರೆ. ಯಕ್ಷಗಾನದಲ್ಲಿ ಗಂಡಿನೊಳಗೆ ಹೆಣ್ಣು ಮಾತ್ರ ಅಲ್ಲ, ಹೆಣ್ಣಿನೊಳಗೆ ಗಂಡೂ ಇದ್ದಾನೆ ಎಂಬುದನ್ನು ಸ್ಥಾಪಿಸಿದ್ದಾರೆ. ಮುಂಬೈಯ ವಿಷ್ಣುಮೂರ್ತಿ ಬಂಟ ಯಕ್ಷಕಲಾ ವೇದಿಕೆ ತಂಡ ಅಚ್ಚುಕಟ್ಟಾದ ಪ್ರದರ್ಶನ ನೀಡಿ ಮಹಾರಾಷ್ಟ್ರದ ಮಹಾನಗರದಲ್ಲಿರುವ ಸಾಂಪ್ರದಾಯಿಕ ಯಕ್ಷಗಾನದ ಬೆಳವಣಿಗೆಯನ್ನು ಸಾಬೀತುಪಡಿಸಿದರು. ಬೆಂಗಳೂರಿನ ಯಕ್ಷಲೋಕ ತಂಡ ಸಾಂಪ್ರದಾಯಿಕತೆಯೊಂದಿಗೆ ನೂತನ ಪ್ರಯೋಗ ಸಾಧ್ಯತೆಯನ್ನು ತೆರೆದಿಟ್ಟಿತು. 

ವೃತ್ತಿಕಲಾವಿದರ ನಿರ್ವಹಣೆಯ ಒಳಿತು-ಕೆಡುಕುಗಳು ಹವ್ಯಾಸಿಗಳ ಮೇಲೂ ಪರಿಣಾಮ ಬೀರುತ್ತದೆಯೆಂದು ಈ ಸ್ಪರ್ಧೆ ಎತ್ತಿ ತೋರಿದೆ. ಇದು ಗಂಭೀರವಾಗಿ ಯೋಚಿಸಬೇಕಾದ ವಿಷಯ. ಆದುದರಿಂದ ವೃತ್ತಿಪರರು ಹೊಣೆಯರಿತು ಪಾತ್ರ ನಿರ್ವಹಿಸದಿದ್ದರೆ ಅದರ ದುಷ್ಪರಿಣಾಮ ಇಡೀ ಯಕ್ಷಗಾನದ ಪ್ರದರ್ಶನಗಳ ಮೇಲಾಗುತ್ತದೆ ಎಂಬುದನ್ನು ಗಮನಿಸಬೇಕು. ಸೃಜನಶೀಲ ಅಭಿವ್ಯಕ್ತಿಯೇ ಯಕ್ಷಗಾನದ ಜೀವಸೆಲೆ. ವಿಭಿನ್ನ ತಾಳಗಳಿಗೆ ಇರುವ ಲಯವನ್ನು ತಿಳಿದು ಸಮರ್ಥವಾಗಿ ಬಳಸಿಕೊಂಡರೆ ಪಾತ್ರೋಚಿತ ಅಭಿನಯ, ಕುಣಿತ ಸಿದ್ಧಿಸಿಕೊಂಡರೆ ಹವ್ಯಾಸಿ ಯಕ್ಷಗಾನದ ಭವಿಷ್ಯ ಉಜ್ವಲವಾಗಿದೆ. ಇಲ್ಲದಿದ್ದರೆ, ಹೊಸತನದ ಹೆಸರಿನಲ್ಲಿ ಕಳೆಗುಂದುತ್ತಿರುವ ವೃತ್ತಿ ರಂಗಭೂಮಿಯಂತೆ ಹವ್ಯಾಸೀ ರಂಗಭೂಮಿಯೂ ಸತ್ವ ಕಳೆದುಕೊಳ್ಳುವ ದಿನಗಳು ದೂರವಿಲ್ಲ. ರೂಪಾಂತರಗೊಳ್ಳುವ ಯಕ್ಷಗಾನದ ಸಾಂಪ್ರದಾಯಿಕ ಶುದ್ಧ ಸುಂದರ ಸ್ವರೂಪವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಹೊಣೆಯನ್ನು ಹವ್ಯಾಸಿ ಕಲಾವಿದರು ಹೊರಬೇಕಾಗಿದೆ. ಇಡೀ ಕಲಾಲೋಕದ ಪ್ರಜ್ಞೆಯನ್ನು ನಿಕಷಕ್ಕೊಡ್ಡುವ ಇಂತಹ ಸ್ಪರ್ಧೆಯೊಂದನ್ನು ಆಯೋಜಿಸಿದ ಡಾ| ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನದ ಕಾರ್ಯ ಸರ್ವಥಾ ಸ್ತುತ್ಯರ್ಹವಾಗಿದೆ.

ತಾರಾನಾಥ ವರ್ಕಾಡಿ

ಟಾಪ್ ನ್ಯೂಸ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

10-fusion

UV Fusion: ಭಕ್ತಿಯ ಜಾತ್ರೆ ನೋಡುವುದೇ ಚೆಂದ

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.