ಮನೋಧರ್ಮ ಮರೆಯಾಗುತ್ತಿದೆ ನೃತ್ಯಮನೆಯೊಳಗೆ…


Team Udayavani, Jul 7, 2017, 4:12 PM IST

KALA-8.jpg

ನಾವು ಸಂಗೀತದವರು, ಹಾಡುವ ಪ್ರತೀ ಕೃತಿಗೂ ಮನೋಧರ್ಮಕ್ಕನುಗುಣವಾಗಿ ಸ್ವಂತ ಸ್ವರ-ಪ್ರಸ್ತಾರ, ತನಿ-ಆವರ್ತನಗಳನ್ನು ಹೊಸೆದು ಹಾಡಬಲ್ಲೆವು; ನುಡಿಸಬಲ್ಲೆವು. ಆದರೆ ಇದೇ ಸಾಧ್ಯತೆ ಭರತನಾಟ್ಯದಂತಹ ನೃತ್ಯಕ್ರಮದಲ್ಲೇಕಿಲ್ಲ? ಸ್ವ ಅಭ್ಯಾಸ ಮಾಡಿಕೊಳ್ಳುವುದಾದರೆ ಪರವಾಗಿಲ್ಲ. ಆದರೆ ಮಗ್ಗಿ ಉರುಹೊಡೆದಂತೆ ರಿಹರ್ಸಲ್‌ಗ‌ಳು ಮಾಡಿ, “ಪಫೆìಕ್ಟ್’ ಆಗಿಯೇ ರಂಗಕ್ಕೇರಬೇಕೆಂದರೆ ಅದರ ಆಯುಷ್ಯ ಎಷ್ಟು? ನೃತ್ಯಕ್ರಮಕ್ಕೆ ಪಕ್ಕವಾದ್ಯದವರ ಸಾಂಗತ್ಯದ ಹಿನ್ನೆಲೆಯಲ್ಲಿ ಒಂದಷ್ಟು ಪೂರ್ವ ತಯಾರಿಗಳಿರಬೇಕೇನೋ ನಿಜ. ಸಂಗೀತದವರಾಗಿ ನಾವೂ ಮಾಡುತ್ತೇವೆ. ಆದರೆ ಕಛೇರಿಯ ಹಂತಹಂತಕ್ಕೂ ಒಂದಿಷ್ಟು ಬದಲಾವಣೆಯಿಲ್ಲದೆ ಕಂಠಪಾಠ ಮಾಡಿಕೊಂಡು ಒಂದೇ ನೃತ್ಯವನ್ನು ಜೀವನದುದ್ದಕ್ಕೂ ಪ್ರಾಕ್ಟೀಸ್‌, ರಿಹರ್ಸಲ್‌ ಮಾಡುವುದಾದರೆ ಏನಿದೆ ಸ್ವಾರಸ್ಯ? “ಮಕ್ಕಳಿಗೆ ಸುಲಭವಾಗಬೇಕು’ ಎಂಬ ಕಾರಣ ಕೊಡುವುದಾದರೆ ಯಾಕೆ ಪೂರ್ಣ ಕಲಿಯುವ ಮುಂಚೆಯೇ ರಂಗಕ್ಕೆ ಹತ್ತಿಸಬೇಕು? ಗ್ರೂಪ್‌ನಲ್ಲಿ ಮಾಡುವುದಾದರೆ ಏನೋ ಪರವಾಗಿಲ್ಲವೆನ್ನಬಹುದು. ಆದರೆ ಏಕವ್ಯಕ್ತಿಯ ನೃತ್ಯ ಪ್ರದರ್ಶನಕ್ಕೂ ಇದೇ ಜಾಯಮಾನವೆಂದರೆ ಹ್ಯಾಗೆ? ಅದಿರಲಿ, ಕಲಿಯುವಾಗ ಅಥವಾ ಕಲಿಸುವಾಗಲೂ ಶಿಕ್ಷಕರು, ಗುರುಗಳು ಇದೇ ವರ್ತನೆ ತೋರಿಸುತ್ತಾರಲ್ಲ! ಸಿದ್ಧ ಮಾದರಿಯ ಬೊಂಬೆಗಳನ್ನು ಮಾಡಿಡುವುದಾದರೆ ಕಲೆಗೆ ಏನು ಪ್ರಯೋಜನ? ಕೊರಿಯೋಗ್ರಫಿ ಎಂದರೆ ಇದೇನಾ? ಸಹೃದಯ ರಸಿಕನಿಗೆ ಸಿಗುವ ಕಲಾಸ್ವಾದವೇನು? ಸರಿ, ಕಲಾವಿದನಿಗೂ “ಬೋರ್‌’ ಹೊಡೆಯುವುದಿಲ್ಲವೇ? ಅಷ್ಟಕ್ಕೂ ರಂಗದಲ್ಲೇ ಮನೋಧರ್ಮಕ್ಕನುಗುಣವಾದ ಕಲೆ ಸೃಷ್ಟಿ ಮಾಡುವ ಸಾಮರ್ಥ್ಯವಿಲ್ಲದವನು ಕಲಾವಿದ ಹೇಗಾದಾನು? ನೋಡಹೊರಟರೆ ನಮ್ಮದೂ ಶಾಸ್ತ್ರೀಯ; ನಿಮ್ಮದೂ ಶಾಸ್ತ್ರೀಯ; ಹೀಗಿದ್ದಾಗ್ಯೂ ಏಕೆ ಈ ಅಂತರ?’ ಎಂದು ಸ್ನೇಹಿತರ ಮಡದಿ ಪ್ರಶ್ನೆ ಮೇಲೆ ಪ್ರಶ್ನೆ ಮುಂದಿಟ್ಟಾಗ ಎಲ್ಲಿಲ್ಲದ ಕಸಿವಿಸಿಯಾಯಿತು.

ಏನು ಹೇಳ್ಳೋಣ? ನಮ್ಮ ಕ್ಷೇತ್ರದ ಸತ್ಯಾಸತ್ಯತೆ, ಸಾಧ್ಯಾಸಾಧ್ಯತೆ, ಪ್ರಸ್ತುತ ಕಾಲಘಟ್ಟದ ಅತಿರೇಕ-ಉದಾಸೀನಗಳ ಬಗ್ಗೆ ಅರಿವಿದ್ದೂ ಬಾಯಿ ಮುಚ್ಚಿಕೊಂಡು ಪೆಚ್ಚುಪೆಚ್ಚಾಗಿ ನಗೆ ಬೀರುವ ದುಃಸ್ಥಿತಿ ಎನ್ನಬೇಕಷ್ಟೇ! ಬಾಯಿಬಿಟ್ಟರೆ ಬಣ್ಣಗೇಡು ಎಂಬುದು ಅಂದಿಗೆ ಅಕ್ಷರಶಃ ಅನ್ನಿಸಿತ್ತು. ಎಲ್ಲಿ ನೋಡಿದರಲ್ಲಿ ರಿಹರ್ಸಲ್‌, ಪ್ರಾಕ್ಟೀಸ್‌ ಎಂಬ ಕ್ರಮವತ್ತಾದ ಕಲಾಸಂಸ್ಕಾರದಲ್ಲಿ ರಸಯಾತ್ರೆಯ ಶವಸಂಸ್ಕಾರವೂ ಆಗುತ್ತಿದೆ ಎಂಬುದನ್ನು ಬೇರೆ ಹೇಳಬೇಕಿರಲಿಲ್ಲ.

ಅದೇನೇ ಪೊಳ್ಳು ಇತಿಹಾಸಗಳನ್ನು ನೇಯ್ದರೂ; ಕರ್ನಾಟಕ ಸಂಗೀತದಂತಹ ಅವಿಚ್ಛಿನ್ನ ಪರಂಪರೆಯ ಆಧಾರದಲ್ಲೇ ಮೈತಳೆದದ್ದು ಇಂದು ನಾವು ಕಾಣುತ್ತಿರುವ ದೇಸೀ ಸ್ಪರ್ಶದ ಭರತನಾಟ್ಯ ಎಂಬುದು ನಿರ್ವಿವಾದ. ಮೊದಮೊದಲು ಭರತನಾಟ್ಯದ ಮೈಸೂರು ನೃತ್ಯಸಂಪ್ರದಾಯದಲ್ಲಿ ಆಶುಕವಿತ್ವಕ್ಕೆ ನರ್ತಿಸುವ ಪ್ರತಿಭಾಸಂಪನ್ನತೆ, ಪ್ರಯೋಗಶೀಲತೆ ಇತ್ತಾದರೂ; ಬರಬರುತ್ತಾ ಇದರ ಲಕ್ಷಣಗಳು ಕುಸಿಯತೊಡಗಿತು. ರಾಜರ ಆಸ್ಥಾನದಲ್ಲಿ ನರ್ತಿಸುವ ಮಾನ್ಯತೆ ಪಡೆಯಬೇಕಾದರೆ ಸ್ಥಳದಲ್ಲೇ ಸಾಹಿತ್ಯರಚನೆ, ಸ್ವರ-ಅಭಿನಯ-ನೃತ್ತ ನಿರ್ಮಾಣದ ಸಾಮರ್ಥ್ಯ ಬೇಕಿತ್ತು.

ಆದರೆ ಬರಬರುತ್ತಾ ಮಾತೃಬೇರಿನ ಮೂಲಾಂಶಗಳನ್ನೇ ಅರಿಯಲು ವಿಫ‌ಲವಾಗಿದೆಯೆಂದರೆ ಅಂಧಾನುಕರಣೆ ಎಲ್ಲಿಂದ, ಯಾವ ಕಾಲದಿಂದ, ಎಷ್ಟರಮಟ್ಟಿಗೆ ವ್ಯಾಪಿಸಿರಬೇಕು ಎಂಬುದೇ ಒಂದು ಸಂಶೋಧನೆಯ ವಸ್ತುವಾಗುತ್ತದೆ. ಸಿದ್ಧಸೂತ್ರಗಳ ಚೌಕಟ್ಟಿನಲ್ಲೇ ಬದುಕು. ಫ‌ಲವಾಗಿ ಕೊರಿಯೋಗ್ರಫಿಯ ಮೂಲಾಂಶಗಳನ್ನೇ ಮರೆಸುವ, ವುತ್ಪತ್ತಿಯ ಚಿಂತನೆಗಳೇ ಅರಳದ “ಡ್ಯಾನ್ಸ್‌ ಐಟಂ’ ಕಲಿಯುವ ಬಿಸಿನೆಸ್‌.

ರಸಪ್ರಜ್ಞೆ ಇಲ್ಲದಿದ್ದರೆ, ಅದಕ್ಕೆ ಪೂರಕ-ಪೋಷಕವಾದ ಆಂಗಿಕಾದಿ ಅಭಿನಯಗಳಿಲ್ಲದಿದ್ದರೆ ಮನೋಧರ್ಮವೆಂಬುದು ಕನಸು. ಆದರೆ ಸಂಗೀತದ ಮನೋಧರ್ಮ ಪ್ರಜ್ಞೆ ಅಪೇಕ್ಷಿಸುವುದು ಒತ್ತಟ್ಟಿಗಿರಲಿ; ಕನಿಷ್ಠಪಕ್ಷ ಹೆಜ್ಜೆಯ ಹದ ತಪ್ಪಿದರೂ; ತಾಳ ನುಡಿಕಾರಗಳ ವ್ಯತ್ಯಾಸಗಳಾದರೂ ಸಾವರಿಸಿಕೊಂಡು ಮುನ್ನಡೆಯುವ ಪ್ರತಿಭಾ ವುತ್ಪತ್ತಿ ಸಾವಿರಕ್ಕೆ ಒಬ್ಬಿಬ್ಬರಿಗಿದ್ದರೆ ಅದೇ ಇಂದಿನ ಪುಣ್ಯ. ನರ್ತಕರಿಗೆ ವುತ್ಪತ್ತಿಯೇ ಇಲ್ಲವೆಂದಾದರೆ ಪಕ್ಕವಾದ್ಯದವರಿಗೆ, ಗಾಯಕರಿಗೆ ಅದರ ಅಭ್ಯಾಸ ಬರುವುದು ಎಲ್ಲಿಂದ? ಅದೇ ರಾಗ, ಅದೇ ಹಾಡು ಎಂಬುದಕ್ಕೇ ಅದೇ ನೃತ್ಯ ಎಂಬ ಹೊಸ ನುಡಿಗಟ್ಟು ಸೇರಿಸಲು ಅಡ್ಡಿಯೇನಿಲ್ಲ. 

ಅಷ್ಟಕ್ಕೂ ಇದು ಭರತನಾಟ್ಯದ್ದೊಂದೇ ಮಾತಾಗಿದ್ದರೆ ಪ್ರಾರಬ್ಧವೆಂದು ಹಳಿದು ಸುಮ್ಮನಿರಬಹುದಿತ್ತು. ದುರಂತವೆಂದರೆ ಒಡಿಸ್ಸಿ, ಕೂಚಿಪುಡಿ, ಕಥಕ್‌ ಮುಂತಾದ ನೃತ್ಯಪದ್ಧತಿಯಾದ್ಯಂತ ಇದೇ ಮಾದರಿಯು ಬೆಂಬಿಡದೆ ಹಿಂಬಾಲಿಸುತ್ತಿದೆ. “ಇಂದಿನ ಭರಾಟೆಯ ಕಾಲಮಾನಕ್ಕೆ ಪಕ್ಕವಾದ್ಯದವರೊಂದಿಗೆ ಸಾಂಗತ್ಯ ಹೊಂದಬೇಕಾದರೆ ತಕ್ಕಮಟ್ಟಿನ ಪೂರ್ವ ತಯಾರಿ ನಿರೀಕ್ಷಿತ, ಇಲ್ಲವೇ ನೃತ್ಯಕ್ರಮವೇ ಬಿದ್ದುಹೋಗುತ್ತದೆ’ ಎಂಬ ಹಣೆಪಟ್ಟಿ ಅಂಟಿಸಿಕೊಂಡು ಗಿಣಿಪಾಠ ಒಪ್ಪಿಸುವುದೇ ಒಂದು ಹೆಚ್ಚುಗಾರಿಕೆಯ ವಿಷಯ ಎಂಬ ಸೋಗು ಹಾಕುತ್ತಾರೆ. “ರಿಹರ್ಸಲ್‌’ ಎಂಬ ಪೂರ್ವಾಭ್ಯಾಸದ “ಸಮಯ’ ಸಂಪಾದನೆ ಈ ದಂಧೆಯ ಸಾಲಿಗೆ ಹೊಸ ಸೇರ್ಪಡೆ. ಅಷ್ಟೇ ಏಕೆ? ಸಂಗೀತ ಮತ್ತು ವಾದ್ಯದ ತನಿ ಆವರ್ತನಕ್ಕೆ ನರ್ತಿಸಲ್ಪಡುವ ಆಶುನೃತ್ಯಗಳೆಂಬವೂ ಮಾಡುವುದು ಕೂಡ ಮೂಗಿಗೆ ತುಪ್ಪ ಹಚ್ಚುವ ಕಾಯಕವನ್ನೇ! ವಂಚನೆ ಎಸಗುತ್ತಿರುವುದು ಯಾರಿಗೆ- ನಮಗೋ? ಕಲೆಗೋ? ಸಹೃದಯರಿಗೋ?

ಕಲೆಯ ಚಲನೆಯುದ್ದಕ್ಕೂ “ಪರಂಪರೆ, ಸಂಪ್ರದಾಯ’ ಎಂಬೆಲ್ಲ ದೊಡ್ಡ ಶಬ್ದಗಳ ಎರವಲು ಪಡೆದು ಪ್ರಾಥಮಿಕ ಹಂತದ ಅಭ್ಯಾಸ ಮಾದರಿಯನ್ನೇ ರಂಗಪ್ರದರ್ಶನಕ್ಕೂ ಹೆಮ್ಮೆಯಿಂದ ಚಾಚೂ ತಪ್ಪದೆ ವಿಸ್ತರಿಸುತ್ತಲೇ ಬಂದಿದ್ದೇವೆ. ಪುಸ್ತಕ ನೋಡಿಕೊಂಡು ಅಡುಗೆ ಮಾಡುವವವರ ಸಂಖ್ಯೆಯೇ ಪರಂಪರೆಯಾಗಿ ಮುಂದುವರಿಯುವ ಮತ್ತು ಪ್ರೋತ್ಸಾಹವೂ ಇರುವ ಹೊತ್ತಿನಲ್ಲಿ “ಶಾಸ್ತ್ರೀಯ ಬಡತನ’ದ ನಿವಾರಣೆ ಅಷ್ಟು ಸುಲಭವಲ್ಲ. ಇನ್ನು ಕ್ರಾಂತಿಕಾರಿಗಳಿಗೆ ಇರುವ ಬೆಲೆಯೂ ಅಷ್ಟಕ್ಕಷ್ಟೇ !

“ವಿಶೇಷತಃ ರಸಾಭಿನಯದಲ್ಲಿ ಆಶುಸ್ಫೂರ್ತಿಯ ವಿಲಾಸ ಅಪಾರ. ಆಶುವೈಭವದಲ್ಲಿ ಸ್ವಂತಿಕೆಗೆ, ಸೊÌàಪಜ್ಞತೆಗೆ ಪರಮೋಚ್ಚ ಪ್ರಾಶಸ್ತ. ಇಲ್ಲಿ ಚೈತನ್ಯಾತ್ಮಕವಾದ ಕಲಾವಿದನಿಗೆ ಅಥವಾ ಯಾವುದೇ ವ್ಯಕ್ತಿಗೆ ಹೆಚ್ಚಿನ ಬೆಲೆಯಿಲ್ಲದೆ ಇನ್ನಿತರ ಜಡಯಂತ್ರ-ತಂತ್ರಕೋಲಾಹಲಗಳಿಲ್ಲ. ದುರ್ದೈವದಿಂದ ಇಂದು ನಮ್ಮ ಈಗಿನ ಭರತನಾಟ್ಯದಂತಹ ಕಲೆಗಳಲ್ಲಿ ಪೂರ್ವಸಿದ್ಧತೆಯೇ ಮಿಗಿಲಾಗಿ, ಅಭಿನಯವೂ ಶುಕಪಾಠವಾಗುತ್ತಿದೆ’ ಎನ್ನುತ್ತಾರೆ ಶತಾವಧಾನಿ ಡಾ| ಆರ್‌. ಗಣೇಶ್‌. ಯಕ್ಷಗಾನ ಮತ್ತು ತಾಳಮದ್ದಳೆ ಕಲೆಗಳು ಈ ಮಾತಿಗೆ ಅಪವಾದವೆಂದು ಗಣೇಶರಂದರೂ, ಬರಬರುತ್ತಾ ಕಂಠಪಾಠದ ಸೋಗಿನೊಳಗೆ ಆಶುಸ್ಫೂರ್ತಿ ಪೀಠಸ್ಥವಾಗುತ್ತಿದೆಯೇನೋ ಎಂದೆನಿಸುತ್ತಿದೆ.  

ರಸವೆಂದರೆ ನವರಸಾಭಿನಯ ಎಂತಲೋ ರಸವೆಂದರೆ ಅದು ಥಿಯರಿಯ ಸರಕೆಂದೋ ಪಾಠ ಮಾಡುವವರಿಗೋ ಆಶುಸ್ಫೂರ್ತಿಯ ರಸವಿಲಾಸ ಅರ್ಥವಾಗಲು ಎಷ್ಟು ಶತಮಾನಗಳುರುಳಬೇಕು? ಕಲೆಯನ್ನೇ ಜೀವನೋಪಾಯವಾಗಿಸಿಕೊಂಡು ಹೊಟ್ಟೆ ಹೊರೆಯುತ್ತಿರುವವರಿಗಾದರೆ ನಾಟ್ಯಸರಸ್ವತಿಯ ಕ್ಷಮೆಯಿರಬಹುದು. ಆದರೆ ಹೆಸರಿನ ಚಪಲಕ್ಕೆ, ಪ್ರತಿಷ್ಠೆಯ ಸೋಗಲಾಡಿತನಕ್ಕೆ ವೇಷ ಹಾಕಿಕೊಂಡು ದಂಧೆಯಾಗಿಸುವವರಿಗೆ…? ಒಟ್ಟಿನಲ್ಲಿ ಶಿಕ್ಷಣದ ತಪ್ಪುಗಳು ಶತಮಾನದುದ್ದಕ್ಕೂ ಅನಾಥಪ್ರೇತಗಳಾಗಿ ತೆವಳುವ ಈ ಕಾಲಕ್ಕೆ ಪ್ರತಿಯೊಬ್ಬರದೂ ಒಂದಲ್ಲ ಒಂದು ಕೊಡುಗೆಯೇ! 

ಡಾ| ಮನೋರಮಾ ಬಿ. ಎನ್‌.

ಟಾಪ್ ನ್ಯೂಸ್

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

Chattisgarh: ಕಳೆದ 4 ತಿಂಗಳಲ್ಲಿ 80 ನಕ್ಸಲೀಯರ ಸಾವು, 125 ಮಂದಿ ಬಂಧನ; 150 ಶರಣಾಗತಿ!

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.