ಬಾಲ ಯಕ್ಷರ ಪ್ರದರ್ಶನ: ಆಂಗ್ಲ ಮಾಧ್ಯಮ ಮಕ್ಕಳ ಶಶಿಪ್ರಭಾ ಪರಿಣಯ
Team Udayavani, May 4, 2018, 6:00 AM IST
ಮಕ್ಕಳಿಗೆ ಸೂಕ್ತ ತರಬೇತಿ ನೀಡಿದರೆ ದೇಶಿ ಕಲೆಯನ್ನು ಪರಿಣಾಮ ಕಾರಿಯಾಗಿ ಅಭಿವ್ಯಕ್ತಿಪಡಿಸಬಲ್ಲರು ಎನ್ನುವುದಕ್ಕೆ ವಂಡ್ಸೆ ಆತ್ರಾಡಿಯ ವಿಜಯ ಮಕ್ಕಳ ಕೂಟ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ವಾರ್ಷಿಕ ಮಕ್ಕಳ ಸಾಂಸ್ಕೃತಿಕ ವೈಭವದ ಯಕ್ಷಗಾನವೇ ಸಾಕ್ಷಿ.
ಓದುತ್ತಿರುವುದು ಆಂಗ್ಲ ಮಾಧ್ಯಮವಾದರೂ ಆರನೇ ತರಗತಿಯೊಳಗಿನ ವಿದ್ಯಾರ್ಥಿಗಳು ಎಲ್ಲಿಯೂ ಆಂಗ್ಲ ಪದ ಬಳಕೆ ಮಾಡದೆ ಶಶಿಪ್ರಭಾ ಪರಿಣಯ ಎನ್ನುವ ಆಖ್ಯಾನವನ್ನು ಸುಂದರವಾಗಿ ಅಭಿನಯಿಸಿ ತೋರಿಸಿದರು.ಭಾಗವತ, ಯಕ್ಷಗುರು ಎಂ.ಎಚ್.ಪ್ರಸಾದ್ ಕುಮಾರ್ ಮೊಗೆಬೆಟ್ಟು ಸಾರಥ್ಯದಲ್ಲಿ ಪುಟಾಣಿಗಳು ತಯಾರಾಗಿದ್ದರು. ಬಣ್ಣಗಾರಿಕೆ ಪ್ರಧಾನವಾದ ಯಕ್ಷಗಾನದ ಬಗ್ಗೆ ಮಕ್ಕಳ ಕುತೂಹಲ, ಪರಿಣಾಮಕಾರಿ ಪಾಲ್ಗೊಳ್ಳುವಿಕೆಗೆ ಈ ಪ್ರದರ್ಶನ ಸಾಕ್ಷಿಯಾಯಿತು.
ಪ್ರಾರಂಭದಿಂದ ಅಂತ್ಯದ ತನಕ ಎಲ್ಲಿಯೂ ತೊಡಕಾಗದೆ ಮಕ್ಕಳು ನೃತ್ಯ, ಅಭಿವ್ಯಕ್ತಿ, ಸಂಭಾಷಣೆಯ ಮೂಲಕ ಗಮನ ಸಳೆದರು. ಪ್ರವೇಶ ಮತ್ತು ನಿರ್ಗಮನ ಸ್ತುತ್ಯರ್ಹವಾಗಿತ್ತು. ಶ್ರಾವ್ಯ, ಪ್ರತೀಕ್ಷಾ , ನಂದಾ ,ಅಶ್ವಿತ್ ರಂಗದಲ್ಲಿ ಕಳೆಗಟ್ಟಿದರು.ಅಕ್ಷಯ ಅನುಶ್ರೀ , ಸುಮಂತ್, ನಿಹಾರ, ಶ್ರೀಶ , ವೈಭವಿ, ನಿಶ್ಚಿತಾ, ಧನ್ವಿ, ದೀಕ್ಷಾ, ಆಶ್ರಿತ್ ಅಭಿನಯ ಭಾವಪೂರ್ಣವಾಗಿತ್ತು.
ಬೇಡ| ವನ ಕಾಯುವ ನೌಕರಿ| ಪದ್ಯ ಮತ್ತೆ ಮತ್ತೆ ಕೇಳುವಂತಿದ್ದರೆ, ಪ್ರಾರಂಭದಲ್ಲಿಯೇ ಬೇರೆ ಬೇರೆಯಾಗಿ| ಹಾಡು ಕರತಾಡನ ಪಡೆಯಿತು. ಸುದೀಪ, ಅನ್ವೇಷಾ, ಶಶಾಂಕ, ಭ್ರವಿತ್, ಅನನ್ಯಾ, ಆಶಿಕ್, ರಶುತ ಮುದ್ದು ಮುದ್ದಾಗಿ ಕುಣಿದರು. ಎಂ.ಎಚ್.ಪ್ರಸಾದ್ ಕುಮಾರ್ ಭಾಗವತಿಕೆ ಹೃನ್ಮನಗಳಿಗೆ ಹೊಸ ಅನುಭೂತಿ ನೀಡಿತು. ಮದ್ದಳೆಯಲ್ಲಿ ರಾಘವೇಂದ್ರ ಭಟ್ ಸಕ್ಕಟ್ಟು, ಚಂಡೆಯಲ್ಲಿ ಭಾಸ್ಕರ ಆಚಾರ್ಯ ಕನ್ಯಾನ ಸಹಕರಿಸಿದರು.
ನಾವಂಬ ಗೇರುಕಟ್ಟೆ