ತ್ರಿವಳಿ ಗಾಯಕರ ತ್ರಿವಿಕ್ರಮ ಸಾಧನೆ
Team Udayavani, Apr 26, 2019, 5:00 AM IST
ಉಡುಪಿ ಕೃಷ್ಣ ಮಠದ ರಾಜಾಂಗಣದಲ್ಲಿ ಇತ್ತೀಚೆಗೆ ತ್ರಿವಳಿ ಗಾಯಕರಾದ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ, ವಿ| ಸುಧೀರ್ ರಾವ್ ಕೊಡವೂರು ಹಾಗೂ ಕೃಷ್ಣ ಆಚಾರ್ಯ ಪಾಣೆಮಂಗಳೂರು ಇವರ ಗಾಯನದ 400ನೇ ಸಂಗೀತ ಕಾರ್ಯಕ್ರಮ ಪ್ರಸ್ತುತಿಗೊಂಡಿತು.
ಕಾರ್ಯಕ್ರಮದ ಪ್ರಥಮ ಆವರ್ತದಲ್ಲಿ ಮೂವರೂ ಗಾಯಕರು ಪತ್ಯೇಕವಾಗಿ ವಿಘ್ನ ವಿನಾಶಕ ವಿಘ್ನೇಶನನ್ನು ವಿಭಿನ್ನ ಶೈಲಿಯಲ್ಲಿ ಸ್ತುತಿಸಿದ ರೀತಿ ಅನನ್ಯವಾಗಿತ್ತು. ಅದರಲ್ಲೂ ಸುಧೀರ್ರಾವ್ ಪದ್ಯದ ನಡುವೆ ಜತಿಸ್ವರವನ್ನು ಆಳವಡಿಸಿ, ತಬಲಾ ಹಾಗೂ ಮೃದಂಗವಾದಕರಿಗೆ ಜುಗಲ್ಬಂದಿ ಅವಕಾಶ ಒದಗಿಸಿದ್ದು ಸಂಗೀತ ಕಾರ್ಯಕ್ರಮಕ್ಕೆ ವಿಶೇಷ ಜೀವಕಳೆಯನ್ನು ನೀಡಿತು. ಮುಂದೆ ಶ್ರೀಕೃಷ್ಣನ ಕುರಿತಾಗಿ ಭಕ್ತಿ – ಭಾವಪೂರ್ಣವಾಗಿ ಗಾಯಕರ ಕಂಠದಿಂದ ಹೊರ ಹೊಮ್ಮಿದ ಮೂರು ದಾಸರ ಪದಗಳು ಶ್ರೋತೃಗಳ ಮನಗೆದ್ದಿತು. ಈ ಮಾಲಿಕೆಯಲ್ಲಿ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ ಇವರ “ಪಿಳ್ಳಂಗೋವಿಯ ಚೆಲ್ವ ಕೃಷ್ಣನ’ ಹಾಡು ವಿದ್ಯಾಭೂಷಣರನ್ನು ನೆನಪಿಸಿದರೂ ತನ್ನದೆ ಶೈಲಿಯನ್ನು ಆಳವಡಿಸಿಕೊಂಡು ಗಾಯಕರು ಹಾಡನ್ನು ವಿಭಿನ್ನವಾಗಿ ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ಹೆಚ್ಚಿನೆಲ್ಲಾ ಹಾಡುಗಳು ನಾಡಿನ ದಾಸವರೇಣ್ಯರ ಕೃತಿಗಳಾಗಿದ್ದರೂ ಒಂದೇ ಹಾಡನ್ನು ಒಬ್ಬರಾದ ಮೇಲೆ ಇನ್ನೊಬ್ಬರು,ಕೆಲವೊಮ್ಮೆ ಇಬ್ಬರೂ ಸೇರಿ, ಮಗದೊಮ್ಮೆ ಮೂವರೂ ಏಕಕಂಠದಿಂದ ಮಂದ್ರ ಸ್ಥಾಯಿಯಿಂದ ಉಚ್ಚಸ್ಥಾಯಿಗೆ, ಮಂದಗತಿಯಿಂದ ತೀವ್ರಗತಿಗೆ ತಾಳ ವೈವಿಧ್ಯತೆಯೊಂದಿಗೆ ಹಾಡುತ್ತಾ ಕೇಳುಗರಿಗೆ ವಿಶಿಷ್ಟ ಅನುಭವ ನೀಡಿದರು. ಇವರಿಗೆ ಸಮರ್ಥ ಹಿಮ್ಮೇಳದೊಂದಿಗೆ ಸಹಕರಿಸಿದ ಬಾಲಚಂದ್ರ ಭಾಗವತ್ (ಮೃದಂಗ) , ತಬಲಾ, ಮಾಂತ್ರಿಕ ವಿ| ಮಾಧವ ಆಚಾರ್, ಶರ್ಮಿಳಾ ಕೆ. ರಾವ್ (ವಯಲಿನ್), ಶರತ್ ಹಳೆಯಂಗಡಿ (ಗಿಟಾರ್) ಇವರು ಅಭಿನಂದನಾರ್ಹರು. ಅದರಲ್ಲೂ ಗಿಟಾರ್ ವಾದಕರು ತಮ್ಮ ಕೌಶಲ್ಯದಿಂದ ಸಾಂಪ್ರದಾಯಿಕ ಭಕ್ತಿಗೀತೆಗಳಿಗೆ ಫ್ಯೂಷನ್ ಸಂಗೀತದ ಮೆರುಗನ್ನು ನೀಡಿ ಶ್ರೋತೃಗಳ ಮೆಚ್ಚುಗೆ ಗಳಿಸಿದರು. ನಾವು ಊಟ ಮಾಡುವಾಗ ಏನು ಕೇಳುತ್ತೇವೋ/ನೋಡುತ್ತೇವೋ ಅದಕ್ಕನುಗುಣವಾಗಿ ನಾವು ತಿಂದ ಆಹಾರ ಪಚನವಾಗಿ ಸಾತ್ವಿಕ/ರಾಜಸ/ತಾಮಸ ರಕ್ತವಾಗಿ ಪರಿವರ್ತಿತವಾಗುತ್ತದೆ ಎಂದು ನಮ್ಮ ಶಾಸ್ತ್ರ-ಪುರಾಣಗಳು ಸಾರುತ್ತವೆ. ಇದನ್ನು ವಿಜ್ಞಾನವೂ ಪುಷ್ಟೀಕರಿಸುತ್ತದೆ. ಆದ್ದರಿಂದ ಊಟದ ಸಮಯದಲ್ಲಿ ಭಕ್ತಿಗೀತೆ ಕೇಳುವುದರಿಂದ ನಮ್ಮ ಆರೋಗ್ಯದ ಮೇಲೆ ಸಾತ್ವಿಕ ಪರಿಣಾಮ ಉಂಟಾಗುವ ಕಾರಣದಿಂದಾಗಿ ಊಟದ ಹೊತ್ತಿನ ಕಾರ್ಯಕ್ರಮಗಳಿಗೆ ಹೆಚ್ಚಿನ ಬೇಡಿಕೆಯಿದೆ ಎನ್ನುತ್ತಾರೆ ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ.
ಜನನಿ ಭಾಸ್ಕರ ಕೊಡವೂರು