ರಂಗ ಅಧ್ಯಯನ ಕೇಂದ್ರದಲ್ಲಿ ಯಕ್ಷ ಸಂಭ್ರಮ
Team Udayavani, Sep 13, 2019, 5:00 AM IST
ರಂಗ ಅಧ್ಯಯನ ಕೇಂದ್ರ ಹಾಗೂ ಭಾರತ ಸರಕಾರದ ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಯಕ್ಷಗಾನ ನಳ ಕಾರ್ಕೋಟಕ ಮನ ಸೂರೆಗೊಂಡಿತು.ಸೂರ್ಯವಂಶದ ದೊರೆಯಾದ ನಳ ಮಹಾರಾಜನ ಸತ್ಯ ಸಂಧತೆಯನ್ನು ಲೋಕ ಕ್ಕೆ ಪ್ರಚಾರ ಪಡಿಸುವುದೇ ಈ ಪ್ರಸಂಗದ ಕಥಾವಸ್ತು.
ಶನಿಪೀಡಿತನಾಗಿ ಅರಣ್ಯದಲ್ಲಿ ಹೆಂಡತಿ ದಮಯಂತಿಯನ್ನು ಒಂಟಿಯಗಿ ಬಿಟ್ಟು ಕಾರ್ಕೋಟಕ ಎಂಬ ಹಾವನ್ನು ಬೆಂಕಿಯಿಂದ ಕಾಪಾಡಲು ಹೋಗಿ ವಿಕಾರ ರೂಪವನ್ನು ತಾಳಿದ ನಳನು ಬಾಹುಕ ಎಂಬ ಹೆಸರಿನಿಂದ ಮಿತ್ರನಾದ ಋತುಪರ್ಣ ರಾಜನಲ್ಲಿಗೆ ಹೋಗುತ್ತಾನೆ. ಋತುಪರ್ಣನು ಬಾಹುಕನನ್ನು ಕೆಲಸಕ್ಕೆ ಇಟ್ಟುಕೊಳ್ಳುತ್ತಾನೆ. ಒಮ್ಮೆ ಸುಬಾಹು ಎಂಬ ಬ್ರಾಹ್ಮಣ ಆಸ್ಥಾನಕ್ಕೆ ಬಂದು ಅಲ್ಲಿ ಬಾಹುಕ ಮಾಡಿದ ಭೋಜನವನ್ನು ಉಂಡಾಗ ಅವನ ಮನಸಲ್ಲಿ ಬಾಹುಕನ ಬಗ್ಗೆ ಶಂಕೆ ಮೂಡುತ್ತದೆ. ಈ ವಿಷಯವನ್ನು ದಮಯಂತಿಗೆ ಹೇಳುತ್ತಾನೆ. ಇದರಿಂದ ಬಾಹುಕನೇ ನಳನೆಂದು ದಮಯಂತಿಯು ತಿಳಿದುಕೊಂಡು ಸ್ವಯಂವರದ ಕರೆಯೋಲೆಯನ್ನು ಋತುಪರ್ಣನಿಗೆ ಕಳುಹಿಸುತ್ತಾಳೆ.
ಕುದುರೆಗಳ ಹೃದಯ ವಿದ್ಯೆಯನ್ನು ಬಲ್ಲ ಬಾಹುಕನು 15 ದಿನಗಳಲ್ಲಿ ಕ್ರಮಿಸಬಹುದಾದ ದಾರಿಯನ್ನು ಒಂದೇ ದಿನದಲ್ಲಿ ಕ್ರಮಿಸಿ ಸ್ವಯಂವರ ಮಂಟಪವನ್ನು ಮುಟ್ಟುತ್ತಾನೆ. ಇದರಿಂದ ದಮಯಂತಿಗೆ ಬಾಹುಕನೇ ನಳನೆಂದು ಅರಿವಾಗಿ ಅವನೊಂದಿಗೆ ಸ್ವಯಂವರ ಮಾಡಿಕೊಳ್ಳುತ್ತಾಳೆ. ಭಾಗವತರಾಗಿ ಪ್ರಸಾದ ಮೊಗೆಬೆಟ್ಟು, ಮದ್ದಳೆಯಲ್ಲಿ ಎನ್.ಜಿ. ಹೆಗಡೆ ಯಲ್ಲಾಪುರ, ಚಂಡೆಯಲ್ಲಿ ಶ್ರೀನಿವಾಸಪ್ರಭು ಹಾಗೂ ಮುಮ್ಮೇಳದಲ್ಲಿ ಬಾಹುಕನಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ, ಋತುಪರ್ಣನಾಗಿ ಶಶಾಂಕ್ ಪಟೇಲ್ ಕೆಳಮನೆ, ದಮಯಂತಿಯಾಗಿ ಪ್ರತೀಶ್ ಬ್ರಹ್ಮಾವರ, ಸುಬಾಹುವಾಗಿ ನರಸಿಂಹ ತುಂಗ ಕೋಟ, ಛೇದಿರಾಣಿಯಾಗಿ ಸ್ಪೂರ್ತಿ ಭಟ್ ಮಂದಾರ್ತಿ ಅಭಿನಯಿಸಿದರು.