ಗುಂಡ್ಮಿಯಲ್ಲಿ ದ್ರೌಪದಿ ವಸ್ತ್ರಾಪಹರಣ
Team Udayavani, Apr 12, 2019, 6:00 AM IST
ಗುಂಡ್ಮಿ ಶಂಕರ ನಾರಾಯಣ ಉಪಾಧ್ಯರ ಸಂಸ್ಮರಣಾ ಕಾರ್ಯಕ್ರಮದ ಅಂಗವಾಗಿ ಆರು ವರ್ಷದಿಂದ ಯಕ್ಷಗಾನ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವ ಉಪಾಧ್ಯರ ಕುಟುಂಬಿಕರು, ಈ ಬಾರಿ ಯಕ್ಷಗಾನ ಕಲಾಕೇಂದ್ರ(ರಿ.) ಹಂಗಾರಕಟ್ಟೆ ಇವರ ಸಹಕಾರದಲ್ಲಿ ಗುಂಡ್ಮಿಯ ಸದಾನಂದ ರಂಗ ಮಂಟಪದಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯೊಂದಿಗೆ ದ್ರೌಪದಿ ವಸ್ತ್ರಾಪಹರಣ ಎನ್ನುವ ಪ್ರಸಂಗವನ್ನು ನಡೆಸಿಕೊಟ್ಟರು.
ಜೂಜಿನ ಕಣದಲ್ಲಿ ತಮ್ಮನ್ನೇ ತಾವು ಪಣಕ್ಕಿಟ್ಟು ಸೋತ ಪಾಂಡವರು ಕೊನೆಯಲ್ಲಿ ದ್ರೌಪದಿಯನ್ನೇ ಪಣಕ್ಕಿಟ್ಟು ಸೋಲುತ್ತಾರೆ. ಮುಂದೆ ತುಂಬಿದ ಸಭೆಯಲ್ಲಿ ದುಶ್ಯಾಸನನಿಂದ ಆಕೆಯ ವಸ್ತ್ರಾಪಹರಣ, ಭೀಮನಿಂದ ಪ್ರತಿಜೆ`, ಕೊನೆಯಲ್ಲಿ ಧೃತರಾಷ್ಟ್ರನು ದ್ರೌಪದಿಗೆ ಎರಡು ವರಗಳನ್ನು ಪ್ರದಾನ ಮಾಡುವಲ್ಲಿಗೆ ಕಥಾನಕವು ಮುಕ್ತಾಯಗೊಳ್ಳುತ್ತದೆ. ದ್ರೌಪದಿಯಾಗಿ ಶಶಿಕಾಂತ ಶೆಟ್ಟಿಯವರು ದ್ರೌಪದಿಗಾದ ಅವಮಾನ, ಅವಳ ಅಸಹಾಯಕತೆ ಮತ್ತು ಮನದಾಳದ ಭಾವನೆಗಳನ್ನು, ನಿಸ್ಸಹಾಯಕರಾಗಿ ಕುಳಿತ ಐವರು ಪತಿಯರು ಸಹಿತ ತುಂಬಿದ ಸಭೆಯಲ್ಲಿ ಅಭಿವ್ಯಕ್ತಿಗೊಳಿಸಿದ ಪರಿ ಮನಕಲಕುವಂತಿತ್ತು. ನಿಷ್ಕರುಣಿ ದುಶ್ಯಾಸನನಾಗಿ ಪ್ರಸನ್ನ ಶೆಟ್ಟಿಗಾರ್ ಅವರ ಅಭಿನಯ ಬಹಳವಾಗಿ ಸೆಳೆಯಿತು. ದುರಹಂಕಾರಿ ಕೌರವನಾಗಿ ನರಸಿಂಹ ಗಾಂವ್ಕರ್, ಧರ್ಮರಾಯನಾಗಿ ಶಿವಾನಂದ ಮಯ್ಯ, ಭೀಮನಾಗಿ ಬೇಳಿಂಜೆ ಸುಂದರ ನಾಯ್ಕ, ಅರ್ಜುನನಾಗಿ ವಿಭವನ, ನಕುಲನಾಗಿ ಪ್ರಣವ್ ಹೊಳ್ಳ, ಸಹದೇವನಾಗಿ ರೋಹನ್, ಧೃತರಾಷ್ಟ್ರನಾಗಿ ಅಶೋಕ್ ಆಚಾರ್, ಗಾಂಧಾರಿಯಾಗಿ ಸತೀಶ ಬೀಜಾಡಿ, ವಿಕರ್ಣನಾಗಿ ಯೋಗೀಂದ್ರ ಮರವಂತೆ, ಪ್ರತಿಕಾಮಿಯಾಗಿ ಹಳ್ಳಾಡಿ ಕೃಷ್ಣ ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಪ್ರಶಂಸನೀಯವಾಗಿತ್ತು. ಪೂರ್ವ ರಂಗದಲ್ಲಿ ಬಾಲಗೋಪಾಲರಾಗಿ ವಿಷ್ಣು ಮತ್ತು ಗೌತಮ್ ಸೊಗಸಾದ ಹೆಜ್ಜೆಯೊಂದಿಗೆ ನಿರ್ವಹಿಸಿದರೆ, ಉದಯ ಕುಮಾರ್ ಹೊಸಾಳರ ಭಾವಪೂರ್ಣ ಭಾಗವತಿಕೆಗೆ ಮದ್ದಲೆಗಾರರಾಗಿ ಪ್ರಶಾಂತ್ ಭಂಡಾರಿ ಮತ್ತು ಜನಾರ್ದನ್ ಆಚಾರ್ ಚೆಂಡೆಯಲ್ಲಿ ಉತ್ತಮವಾದ ಸಹಕಾರ ನೀಡಿದರು. ವೇಷಭೂಷಣ ಗಣೇಶ್ ಆಚಾರ್ ಜನ್ನಾಡಿಯವರದ್ದಾಗಿತ್ತು.
ಕೆ. ದಿನಮಣಿ ಶಾಸ್ತ್ರಿ