ಶಾಲೆಗೆ ಮರಳುವ ಆತಂಕ
Team Udayavani, Oct 31, 2021, 6:05 AM IST
ಲಸಿಕೆ ದರದಲ್ಲಿ ಪ್ರಗತಿ ಮತ್ತು ಸಕ್ರಿಯ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದಂತೆ ಕೋವಿಡ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳನ್ನು ಒಂದೊಂದಾಗಿ ಸಡಿಲಿಸಲಾಗುತ್ತಿದೆ. ಮಕ್ಕಳು ಶಾಲೆಗೆ ಪುನರಾಗಮಿಸುತ್ತಿದ್ದಾರೆ. ಎರಡು ವರ್ಷಗಳ ಸುದೀರ್ಘ ವಿರಾಮದ ಬಳಿಕ ಏಕಾಏಕಿ ತರಗತಿ ಕೊಠಡಿಗೆ ಮರಳುವುದು ಅಷ್ಟು ಸುಲಭವಲ್ಲ. ಹಿಂದೆ ಬೇಸಗೆ ರಜೆಯ ಬಳಿಕ ನಮ್ಮ ದಿನಚರಿಗಳನ್ನು ಪುನಾರೂಪಿಸಿಕೊಂಡು, ಶಾಲಾರಂಭಕ್ಕೆ ಹೊಂದಿಕೊಳ್ಳುವುದು ಎಷ್ಟು ಕಷ್ಟವಾಗುತ್ತಿತ್ತು ಎಂಬುದನ್ನು ನಾವು ಬಲ್ಲೆವು. ಆದರೆ ಈ ಬಾರಿ ಹಲವು ತಿಂಗಳುಗಳ ಅವಧಿಯನ್ನು ಮನೆಯಲ್ಲಿ ಕಳೆದ ಬಳಿಕ ಮಕ್ಕಳು ಮತ್ತೆ ಶಾಲೆಗೆ ಹೋಗುತ್ತಿದ್ದಾರೆ. ಈ ದೀರ್ಘ ಅವಧಿಯಲ್ಲಿ ಅನೇಕ ಮಕ್ಕಳು ತಮ್ಮ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆ. ಜತೆಗೆ ಸಾಮಾಜಿಕ ಕೌಶಲಗಳನ್ನು ಮೈಗೂಡಿಸಿಕೊಳ್ಳುವುದಕ್ಕೆ ನಿರ್ಣಾಯಕವಾಗಿರುವ ಸಹ ವಯಸ್ಕರ ಜತೆಗಿನ ಒಡನಾಟ ತಪ್ಪಿಹೋದುದರಿಂದ ಈ ವಿಚಾರದಲ್ಲಿಯೂ ಅವರು ಹಿಂದುಳಿದುಬಿಟ್ಟಿದ್ದಾರೆ. ಹೀಗಾಗಿ ಅವರು ಮರಳಿ ಶಾಲೆಗೆ ತೆರಳುತ್ತಿರುವ ಈ ಹೊತ್ತಿನಲ್ಲಿ ಎಲ್ಲ ಸುರಕ್ಷಾ ಕ್ರಮಗಳನ್ನು ಪಾಲಿಸಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವ ಒತ್ತಡದ ಜತೆಗೆ ಅವರ ಕಲಿಕೆಯನ್ನು ವೇಗವರ್ಧಿಸುವ ಮತ್ತು ಸಾಮಾಜಿಕ ಕೌಶಲಗಳನ್ನು ಮೈಗೂಡಿಸಿಕೊಳ್ಳುವ ಜವಾಬ್ದಾರಿಯೂ ಇದೆ.
ಶಾಲೆಗೆ ಹೋಗುವುದೆಂದರೆ ಕಲಿಕೆಯಷ್ಟೇ ಅಲ್ಲ; ಅದರ ಜತೆಗೆ ಹೊಸ ಗೆಳೆಯ-ಗೆಳತಿಯರನ್ನು ಮಾಡಿಕೊಳ್ಳುವುದು, ಹೊಸ ಕೌಶಲಗಳನ್ನು ಕಲಿಯುವುದು, ಶಾಲೆಯಲ್ಲಾಗುವ ದೈಹಿಕ-ಮಾನಸಿಕ ಕಿರುಕುಳಗಳನ್ನು ನಿಭಾಯಿಸುವುದು, ಮಗು ವಸತಿ ಶಾಲೆಯಲ್ಲಿ ಇರುವುದಾಗಿದ್ದರೆ ಮನೆಯಿಂದ ದೂರವಿರುವ ಸವಾಲುಗಳನ್ನು ನಿಭಾಯಿಸಲು ಕಲಿಯುವುದು… ಹೀಗೆ ಹತ್ತು ಹಲವು ಇರುತ್ತದೆ.
ನಿಮ್ಮ ಮಗು ಮರಳಿ ಶಾಲೆಗೆ ತೆರಳುತ್ತಿರುವ ಈ ಸಂದರ್ಭದಲ್ಲಿ ಅವರಿಗೆ ಸಹಾಯ ಮಾಡಲು ಹೆತ್ತವರಿಗೆ ಕೆಲವು ಸಲಹೆಗಳು ಇಲ್ಲಿವೆ.
– ದಿನಚರಿಗಳನ್ನು ಮರು ಹೊಂದಾಣಿಕೆ ಮಾಡಿಸಿ. ಮಗುವಿನ ನಿದ್ದೆ ಮಾಡುವುದು- ಏಳುವುದು ಇತ್ಯಾದಿಗಳ ಜೈವಿಕ ಗಡಿಯಾರವನ್ನು ಮರುಹೊಂದಾಣಿಕೆ ಮಾಡಿ, ಶಾಲಾ ದಿನಗಳಿಗೆ ಸರಿಯಾಗಿ ಊಟ- ಉಪಾಹಾರ ರೂಢಿಸಿ ಕೊಳ್ಳುವುದಕ್ಕೆ ನೆರವಾಗಿ. ಶಾಲೆ ಆರಂಭವಾಗುವುದಕ್ಕೆ ಕೆಲವು ವಾರ ಮುನ್ನ ಇದನ್ನು ನಿಧಾನವಾಗಿ ಆರಂಭಿಸಬೇಕು.
– ಮಗುವಿನಲ್ಲಿ ಆತ್ಮವಿಶ್ವಾಸದ ಪ್ರಜ್ಞೆಯನ್ನು ಮೂಡಿಸಿ. ನಿಮ್ಮ ಮಕ್ಕಳು ಪುಟ್ಟ ಮನಸ್ಸುಗಳಲ್ಲಿ ನೂರಾರು ಅಂಜಿಕೆ- ಅಳುಕುಗಳು ಮನೆ ಮಾಡಿರಬಹುದು. ಒಂದೊಂದಾಗಿ ಅವುಗಳ ಬಗ್ಗೆ ಮಗುವಿನ ಜತೆಗೆ ಮಾತನಾಡುತ್ತ ಪರಿಹರಿಸಲು ಪ್ರಯತ್ನಿಸಿ. ಸವಾಲುಗಳನ್ನು ಎದುರಿಸಿ ಗೆಲ್ಲಲು ನೀವು ಸಹಾಯ ಮಾಡುವಿರಿ ಎಂಬ ಭಾವನೆಯನ್ನು ಮಗುವಿನಲ್ಲಿ ಉಂಟು ಮಾಡಿ.
– ತಮ್ಮ ಭಾವನೆಗಳನ್ನು ನಿಮ್ಮ ಬಳಿ ಹಂಚಿಕೊಳ್ಳುವುದನ್ನು ಉತ್ತೇಜಿಸಿ. ಪ್ರತೀ ದಿನವೂ ಮಗುವಿನ ಜತೆಗೆ ಸ್ವಲ್ಪ ಹೊತ್ತು ಕಳೆಯುವ ಮೂಲಕ ಅವರು ತಮ್ಮ ಅಳುಕು, ಅಂಜಿಕೆ, ಭಾವನೆಗಳನ್ನು ನಿಮ್ಮ ಜತೆಗೆ ಹಂಚಿಕೊಳ್ಳಲು ಪೂರಕ ವಾತಾವರಣ ನಿರ್ಮಾಣ ಮಾಡಿ.
– ಸಂಭಾವ್ಯ ಪ್ರತಿಕೂಲ ಸ್ಥಿತಿಗಳಿಗೆ ಅವರನ್ನು ಸನ್ನದ್ಧಗೊಳಿಸಿ. ಅಕಸ್ಮಾತ್ ಸೋಂಕು ಉಂಟಾದರೆ ಸಂಭಾವ್ಯ ಕ್ವಾರಂಟೈನ್ ಮತ್ತು ಶಾಲೆಗೆ ಹೋಗುವುದು ಮತ್ತೆ ಸ್ಥಗಿತಗೊಳ್ಳುವುದು ಇತ್ಯಾದಿ ಕ್ರಮಗಳನ್ನು ಎದುರಿಸಲು ಅವರನ್ನು ಸಿದ್ಧಗೊಳಿಸಿ. ಇದರಿಂದಾಗಿ ಈ ಕ್ರಮಗಳಿಂದ ಉಂಟಾಗುವ ಮಾನಸಿಕ ಆಘಾತಗಳನ್ನು ಎದುರಿಸಲು ಅವರಿಗೆ ಸಾಧ್ಯವಾಗುತ್ತದೆ.
– ನೆರೆಹೊರೆಯವರು, ಕುಟುಂಬಗಳ ಜತೆಗೆ ಮಾತನಾಡಿ. ಇತರ ಕುಟುಂಬಗಳು, ನಿಮ್ಮ ಮಕ್ಕಳ ಗೆಳೆಯ-ಗೆಳತಿಯರ ಹೆತ್ತವರ ಜತೆಗೆ ಮಾತನಾಡಿ ಅವರು ಎದುರಿಸುತ್ತಿರುವ ಪರಿಸ್ಥಿತಿಯಗಳನ್ನು ಹಂಚಿಕೊಳ್ಳಿ. ಆಗ ಸವಾಲುಗಳು ಮತ್ತು ಅವುಗಳನ್ನು ಅವರು ಎದುರಿಸಿ ಗೆದ್ದ ಬಗೆ ನಿಮಗೆ ತಿಳಿಯುತ್ತದೆ. ಜತೆಗೆ, ನಿಮ್ಮ ಮಕ್ಕಳ ಗೆಳೆಯ-ಗೆಳತಿಯರ ಜತೆಗೆ ಕೆಲವು ಗೆಟ್ ಟುಗೆದರ್ ಏರ್ಪಡಿಸಿ ಶಾಲಾ ವಾತಾವರಣಕ್ಕೆ ಅವರು ಹೊಂದಿಕೊಳ್ಳುವುದಕ್ಕೆ ಸಹಕರಿಸಿ.
– ವೃತ್ತಿಪರರ ಸಹಾಯವನ್ನು ಪಡೆಯಿರಿ. ಮಗುವಿನ ಜತೆಗೆ ಮಾತನಾಡಿ ಮರಳಿ ಶಾಲಾರಂಭಕ್ಕೆ ಮಗುವನ್ನು ಸರಾಗವಾಗಿ ಅಣಿಗೊಳಿಸುವುದು ಮುಖ್ಯ. ಆದರೆ ಮಗುವಿನ ವರ್ತನೆಗಳಲ್ಲಿ ಯಾವುದೇ ಗಂಭೀರ-ಗಮನಾರ್ಹ ಬದಲಾವಣೆ ಕಂಡುಬಂದರೆ ಆದಷ್ಟು ಬೇಗನೆ ವೃತ್ತಿಪರರ ಸಹಾಯ ಪಡೆಯಿರಿ.
-ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್ ಸೈಕಿಯಾಟ್ರಿ,
ಕೆಎಂಸಿ ಆಸ್ಪತ್ರೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ
Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ
Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ
Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ
Kundapur: ಬೈಕ್ ಢಿಕ್ಕಿ; ಸ್ಕೂಟರ್ ಸವಾರೆಗೆ ಗಾಯ