ಕಣ್ಣುಗಳಿಗೇಕೆ ಬೇಕು ಸಂರಕ್ಷಣಾ ಸಾಧನ?
Team Udayavani, Mar 5, 2017, 3:45 AM IST
(ಹಿಂದಿನ ವಾರದಿಂದ) ಚೂಪು ವಸ್ತುಗಳಿಂದ ಕಣ್ಣುಗುಡ್ಡೆ ಗಳಿಗೆ ಹಾನಿಯಾಗುವುದು: ಚೂಪು ವಸ್ತುಗಳಾದ ಚೂರಿ, ಸೋಡಾ ಬಾಟಲ್ ಅನ್ನು ತೆರೆಯುವಾಗ ಅದರ ಮುಚ್ಚಳವು ಕಣ್ಣುಗಳಿಗೆ ತಾಗಿ ಆಗುವ ಪೆಟ್ಟು, ಪೆನ್ಸಿಲ್, ಲೋಹದ ಚಕ್ಕೆಗಳಿಂದ ಆಗುವ ಹಾನಿಯಿಂದ ಅಕ್ಷಿಪಟ/ಬಿಳಿಯ ಭಾಗವು ಹರಿದು ಹೋಗಬಹುದು. ಈ ಕಾರಣದಿಂದಲೂ ಸಹ ಕಣ್ಣಿನ ಒಳಭಾಗದಲ್ಲಿ ಹರಿಯುವುದು, ಕಣ್ಣಿನಲ್ಲಿ ಪೊರೆ ಕಾಣಿಸಿಕೊಳ್ಳುವುದು (ಕ್ಯಾಟರಾಕ್ಟ್), ಅಕ್ಷಪಟಲ ಕಳಚಿಕೊಳ್ಳುವುದು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಯಾವತ್ತೇ ಆದರೂ ಇಂತಹ ಪೆಟ್ಟು ಬಿದ್ದರೆ, ಆಗಿರುವ ಹಾನಿಯನ್ನು ಸರಿಪಡಿಸಲು ರೋಗಿಗೆ ಅನಸ್ತೀಶಿಯಾ ಕೊಟ್ಟು ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸುವ ಆವಶ್ಯಕತೆ ಇರಬಹುದು. ಈ ಸಂದರ್ಭದಲ್ಲಿ ರೋಗಿಗೆ ತಿನ್ನಲು ಅಥವಾ ಕುಡಿಯಲು ಏನನ್ನೂ ಕೊಡಬಾರದು, ಯಾಕೆಂದರೆ ಇದು ಅನಸ್ತೀಶಿಯಾ ಪ್ರಭಾವವನ್ನು ತಗ್ಗಿಸಬಹುದು. ಇಲ್ಲಿಯೂ ಸಹ ರೋಗಿಯು ಚೇತರಿಸಿಕೊಳ್ಳುವ, ಅಂದರೆ ಮರಳಿ ಹಿಂದಿನ ದೃಷ್ಟಿ ಸಾಮರ್ಥ್ಯವನ್ನು ಪಡೆಯುವ ಸಾಧ್ಯತೆಯು ಬಹಳ ಬಹಳ ಕಡಿಮೆ ಇರಬಹುದು.
ತೇಜಸ್, ಮಿಲ್ಸ್ ಆಂಡ್ ಬೂನ್ಸ್ ಕೃತಿಗಳಲ್ಲಿ ಬರುವಂತಹ ಹೀರೋಗಳ ಹಾಗೆ ಕಪ್ಪಗೆ, ಉದ್ದಕ್ಕೆ ಮತ್ತು ಸು#ರದ್ರೂಪಿ ಆಗಿದ್ದ ಮತ್ತು ಬಿ.ಕಾಂ ಫೈನಲ್ ಇಯರ್ನಲ್ಲಿ ಓದುತ್ತಿದ್ದ. ಜೀವನದಲ್ಲಿ ಅವನಿಗಿದ್ದ ಒಂದೇ ಒಂದು ಗುರಿ ಎಂದರೆ ಪೈಲೆಟ್ ಆಗಬೇಕು ಎಂಬುದು. ಒಬ್ಬನೇ ಮಗನಾದ ತೇಜಸ್ ಹೆತ್ತವರ ಮುದ್ದಿನ ಮಗ ಹಾಗೂ ಕಾಲೇಜಿನಲ್ಲಿ ಟಾಪರ್ ಆಗಿರುವುದರಿಂದ ಶಿಕ್ಷಕರ ನೆಚ್ಚಿನ ವಿದ್ಯಾರ್ಥಿಯೂ ಆಗಿದ್ದ. ಹೀರೋ ಅಂದ್ರೆ ಇಷ್ಟೇ ಇದ್ದರೆ ಸಾಕೇ? ಸಾಲೋದಿಲ್ಲ ಅಲ್ವೇ, ತಿರುಗಾಡಲು ಬೈಕ್ ಬೇಕೇ ಬೇಕು. ಫೈನಲ್ ಎಕ್ಸಾಂಗೆ ಓದಿ ಓದಿ ಬೋರಾಗಿದೆ, ಒಂದು ಲಾಂಗ್ ರೈಡ್ ಹೋಗೋಣ ಅಂದೊRಂಡು ಗೆಳತಿಯ ಜೊತೆಗೆ ನೂರು-ನೂರಿಪ್ಪತ್ತರ ಸ್ಪೀಡಿನಲ್ಲಿ ಅಪಘಾತ ಚಿಹ್ನೆಗಳನ್ನು ಲೆಕ್ಕಿಸದೆ, ಹೆಲ್ಮೆಟ್ ಧರಿಸದೆ ತೇಜಸ್ ಹೊರಟ. ದಾರಿಯಲ್ಲಿ ಬಸ್ಸಿಗೆ ಅಕಸ್ಮಾತ್ ಆಗಿ ಢಿಕ್ಕಿ ಹೊಡೆದು ತೇಜಸ್ ಹಾಗೂ ಅವನ ಗೆಳತಿ ಇಬ್ಬರೂ ಗಾಯಗೊಂಡರು. ತೇಜಸ್ಗೆ ಮೆದುಳಿಗೆ ತೀವ್ರ ಪೆಟ್ಟಾಗಿ ಒಂದು ಕಣ್ಣಿಗೂ ಅತೀವ ಹಾನಿಯಾಯಿತು. ತೇಜಸ್ನ ಒಂದು ಕಣ್ಣಿನ ನರ ಸಂಪೂರ್ಣವಾಗಿ ಹಾನಿಗೊಂಡಿತು. ಅವನಿಗೆ ಎಲ್ಲಾ ರೀತಿಯ ವೈದ್ಯಕೀಯ ಚಿಕಿತ್ಸೆ ಮಾಡಿದರೂ (ಹೈ ಡೋಸ್ ಸ್ಟಿರಾಯ್ಡ ಇಂಜೆಕ್ಷನ್ಗಳು, ಮಾತ್ರೆಗಳು ಇತ್ಯಾದಿ) ದೃಷ್ಟಿ ಮರಳಿ ಬರಲಿಲ್ಲ. ಈ ಪರಿಸ್ಥಿತಿಯಲ್ಲಿ ದೃಷ್ಟಿ ಮರುಕಳಿಸಲು ದಾನ ಮಾಡಿದ ಕಣ್ಣುಗಳನ್ನು ಹಾಕಿದ್ದಲ್ಲಿ ಅವನಿಗೆ ದೃಷ್ಟಿ ಬರಬಹುದೇ, ಹಾಗಿದ್ದಲ್ಲಿ ನಾವು ನಮ್ಮ ಕಣ್ಣುಗಳನ್ನು ದಾನ ಮಾಡುತ್ತೇವೆ ಎಂದು ಹೆತ್ತವರು ಹೇಳಿದರು, ತೇಜಸ್ಗಿದ್ದ ಪೈಲೆಟ್ ಆಗುವ ಗುರಿಯನ್ನು ಈಡೇರಿಸಲು ನಾವು ಏನನ್ನಾದರೂ ಮಾಡುತ್ತೇವೆ ಎಂದು ದುಃಖೀಸಿದರು.
ಓದುಗರೇ, ಕಣ್ಣಿನ ನರಕ್ಕೆ ಪೆಟ್ಟಾದಾಗ ಅದನ್ನು ದಾನ ಮಾಡಿದ ಕಣ್ಣುಗಳಿಂದ ಸರಿಪಡಿಸಲಾಗುವುದಿಲ್ಲ. ಕಣ್ಣಿನ ನರದ ಹಾನಿಯನ್ನು ಸರಿಪಡಿಸುವುದು ಕ್ಲಿಷ್ಟಕರ ಹಾಗೂ ಹೆಚ್ಚಾಗಿ ಅಸಾಧ್ಯದ ಮಾತು. ಈ ರೀತಿಯ ಅಪಘಾತಗಳಿಂದ ಆಗುವ ಹಾನಿಯನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ನೀವು ವಾಹನ ಚಲಾಯಿಸುವಾಗ ನಿಮ್ಮ ವೇಗದ ಬಗ್ಗೆ, ನಿಮ್ಮ ಜೀವದ ಬಗ್ಗೆ……ಜೊತೆಗೆ ನಿಮ್ಮ ಜೀವನದ ಬಗ್ಗೆ ನಿಗಾ ಇರಲಿ.
ಶಾಲೆಯಲ್ಲಿ ಮಕ್ಕಳು ಪೆನ್ಸಿಲ್, ಕಂಪಾಸ್ಗಳಿಂದ ಗಾಯ ಮಾಡಿಕೊಳ್ಳುವುದು, ಆಟವಾಡುವಾಗ ಕೆಲವೊಮ್ಮೆ ಬೆಂಚಿನ ಮೇಲೆ ಹಾರಿ ಬಿದ್ದು ಕಣ್ಣಿಗೆ ಪೆಟ್ಟಾಗುವುದು ಸಾಮಾನ್ಯವಾಗಿ ನೋಡುತ್ತೇವೆ. ಕಾರ್ಖಾನೆಗಳಲ್ಲಿ, ವೆಲ್ಡಿಂಗ್ ಮಾಡುವವರಲ್ಲಿ, ಗ್ಯಾರೇಜ್ ಕೆಲಸ ಮಾಡುವವರಲ್ಲಿ, ಗಾರೆ ಕೆಲಸ ಮಾಡುವವರಲ್ಲಿ ಇಂತಹಾ ಕೂಲಿ ಕೆಲಸ ಮಾಡಿ ಕುಟುಂಬವನ್ನು ಸಾಕುವ 20 ರಿಂದ 35 ವರ್ಷದ ಜನರು ಸೂಕ್ತ ಪೊ›ಟೆಕ್ಟಿವ್ ವೇರ್ (ಸುರಕ್ಷಾ ಕನ್ನಡಕಗಳು) ಹಾಕದೆ ದೃಷ್ಟಿಯನ್ನು ಕಳೆದುಕೊಳ್ಳುವುದನ್ನು ನಾವು ಸಾಮಾನ್ಯವಾಗಿ ನೋಡುತ್ತೇವೆ. ಮೇಲೆ ಉಲ್ಲೇಖೀಸಿದ ಪ್ರಸಂಗಳಲ್ಲೆಲ್ಲಾ ಕಿಂಚಿತ್ ಜಾಗರೂಕತೆ ವಹಿಸಿದ್ದಲ್ಲಿ ಸಂಭವಿಸಬಹುದಾಗಿದ್ದ ದೃಷ್ಟಿಯ ಹಾನಿಯನ್ನು ತಡೆಯಬಹುದಾಗಿತ್ತು.
ನಾನು ನನ್ನ ಜೀವನದ ಬಗ್ಗೆ ಒಂದು ಅರೆಕ್ಷಣ ಯೋಚನೆ ಮಾಡಿದ್ದರೆ, ನನಗೆ ಬಂದಿರುವ ಈ ಆಪತ್ತನ್ನು ತಪ್ಪಿಸಬಹುದಾಗಿತ್ತು ಬಹುಶ್: ಅಪಘಾತಗಳಿಂದ ಕಣ್ಣುಗಳನ್ನು ಕಳೆದುಕೊಂಡಿರುವ ಎಲ್ಲಾ ನತದೃಷ್ಟರು ಒಮ್ಮೆಯಾದರೂ ಈ ರೀತಿ ಯೋಚಿಸಿರಬಹುದು ಅಲ್ಲವೇ?
ಕೈಯಲ್ಲಿ ನೇತಾಡುವ ಹೆಲ್ಮೆಟ್ಗಳು… ಪೋಲೀಸರಿಗೆ ಹೆದರಿ ಆಗೊಮ್ಮೆ ಈಗೊಮ್ಮೆ ತಲೆಗೆ ಏರುವ ಹೆಲ್ಮೆಟ್ಗಳು… ಇದು ನಮಗೆ ಅಲ್ಲಲ್ಲಿ, ಆಗಾಗ ಕಾಣಸಿಗುವ ನೋಟಗಳು. ನೀವು ಮಾಡುತ್ತಿರುವುದು ಸರಿಯೇ ಯೋಚನೆ ಮಾಡಿ …! ನಿಮ್ಮ ಸುಂದರವಾದ ಕೂದಲುಗಳು ಉಳಿಯಬೇಕಾದರೆ, ಮೊದಲು ನಿಮ್ಮ ತಲೆ ಉಳಿಯಬೇಕು …ಅಲ್ಲವೇ? ಅದಕ್ಕಾಗಿಯೇ ತಿಳಿದವರು ಹೇಳ್ತಾರೆ ಚಿಕಿತ್ಸೆಗಿಂತ ಮುನ್ನೆಚ್ಚರಿಕೆಯೇ ಉತ್ತಮ ಎಂದು, ನಿಮ್ಮ ಕಣ್ಣುಗಳ ಬಗ್ಗೆ ಕಾಳಜಿ ಇರಲಿ….!