ಸಂತ ನಿಂತ ಸಂತೆಯಲಿ…
Team Udayavani, Jan 12, 2019, 6:44 AM IST
1892, ಚಿಕಾಗೋ ಭಾಷಣಕ್ಕೂ ಒಂದು ವರ್ಷ ಮುಂಚಿನ ದೃಶ್ಯ… ಬಳೇಪೇಟೆಯ ತುಳಸಿ ತೋಟದ ಕಾಳಪ್ಪ ಚೌಲಿó ಅಂತಾಂದ್ರೆ, ಭೈರಾಗಿಗಳು- ಸಾಧುಗಳೆಲ್ಲ ತಂಗುವ ತಾಣ. ಚೌಲಿóಯ ಮುಂದಿನ ಕಲ್ಯಾಣಿಯಲ್ಲಿ ಮಿಂದು, ಭಿಕ್ಷಾನ್ನ ಉಂಡು, ಒಂದೆರಡು ರಾತ್ರಿ ತಂಗಿ, ಅವರೆಲ್ಲ ಪರ ಊರಿಗೆ ತೆರಳುತ್ತಿದ್ದರು.
ಅದೇ ಚೌಲಿó ರಸ್ತೆಯ ಕೊನೆಯಲ್ಲಿ ಒಂದು ಜ್ಯುವೆಲರಿ. ಸೂಗಪ್ಪ ಎನ್ನುವವರಿಗೆ ಸೇರಿದ್ದ ಜ್ಯುವೆಲರಿಯ ಎದುರು, ಅಕ್ಕಸಾಲಿಗರಿಗೆ ವಿರಮಿಸಲೆಂದು, ಮೂರ್ನಾಲ್ಕು ಕಲ್ಲುಬೆಂಚುಗಳನ್ನು ಹಾಸಲಾಗಿತ್ತು. ಅಕ್ಟೋಬರ್ನ ಒಂದು ಚುಮುಚುಮು ಬೇಸಿಗೆ. ಛತ್ರದಲ್ಲಿ ಆಶ್ರಯಿಸಲು ಬಂದಿದ್ದ, ಆಜಾನುಬಾಹು ಸಂತನೊಬ್ಬ, ಕೌದಿ ಧರಿಸಿ, ಆ ಬೆಂಚಿನ ಮೇಲೆಯೇ ನಿತ್ಯವೂ ಬಂದು ಆಸೀನರಾಗುತ್ತಿದ್ದರು. ಕಾಂತಿಭರಿತ ಅವರ ಕಂಗಳಲ್ಲಿ ಏನೋ ಅಳುಕಿತ್ತು. ಮೈ ತುಂಬಾ ಚಿಕನ್ ಪಾಕ್ಸ್ನ ಗುಳ್ಳೆಗಳು. ಕೇಸರಿ ಪೇಟ ಧರಿಸಲಾಗದಷ್ಟು, ತಲೆಯಲ್ಲೂ ನೋವಿನ ಸೆಳೆತ.
ಅಕ್ಕಸಾಲಿಗ ಸೂಗಪ್ಪ ಮತ್ತು ಅವರ ಪತ್ನಿಗೆ, ಆ ಯೋಗಿಯನ್ನು ಮಾತಾಡಿಸಲೇನೋ ಭಯ. ನೋಡಲು ಬಲು ಎತ್ತರದ ಆಸಾಮಿ, ನೋಟದಲ್ಲಿ ದಿಟ್ಟ ನಿಲುವು… ಇವನಾರೋ, ಏನೋ? ಅವನಾಡುವ ಇಂಗ್ಲಿಷು, ಹಿಂದಿ ಇವರಿಗೆ ತಿಳಿಯುತ್ತಿರಲಿಲ್ಲ. ಆ ಸಾಧುವಿನ ಏಕಾಂತಕ್ಕೆ ಯಾವುದೇ ತೊಂದರೆ ಕೊಡದೇ, ಅವರ ಪಾಡಿಗೆ ಅವರಿರಲಿಯೆಂದು ಬಿಟ್ಟಿದ್ದರು. ಪಾಪ, ಆ ಸಂತ ತನಗಂಟಿದ ಚಿಕಾನ್ ಪಾಕ್ಸ್ ಬೇರಾರಿಗೂ ದಾಟದೇ ಇರಲಿಯೆಂಬ ಕಾಳಜಿಯಿಂದ ಈ ಕಲ್ಲುಬೆಂಚಿನ ಮೇಲೆ ಒರಗುತ್ತಿದ್ದರಂತೆ. ವಾರಗಟ್ಟಲೆ ಅಲ್ಲೇ ಇದ್ದು, ಎಲ್ಲವೂ ಗುಣವಾದ ಮೇಲೆ, ಅಲ್ಲಿಂದ ಹೊರಟರಂತೆ.
ಅದಾಗಿ ಕೆಲವೇ ತಿಂಗಳಲ್ಲಿ ಅಮೆರಿಕದ ಚಿಕಾಗೋ ಭಾಷಣದಲ್ಲಿ ಒಬ್ಬ ಸನ್ಯಾಸಿ, ವಿದ್ವತ್ ಭಾಷಣ ಮಾಡುತ್ತಾರೆ. ಬೆಂಗಳೂರಿನ ಸ್ಥಳೀಯ ಪತ್ರಿಕೆಗಳ ಮುಖಪುಟದಲ್ಲೂ ಆ ಸಂತನ ಪೋಟೋ- ಸುದ್ದಿಗಳು ಅಚ್ಚಾದವು. ಅದನ್ನು ನೋಡಿದ ಸೂಗಪ್ಪ ಅವರ ಪುತ್ರ, ಬಿ.ಎಸ್. ಪುಟ್ಟಯ್ಯ ಒಮ್ಮೆ ಕನ್ನಡ ತೆಗೆದು, ಕಣ್ಣುಜ್ಜಿಕೊಂಡು ಪುನಃ ನೋಡಿದರು. ಕುಟುಂಬದ ಮಂದಿಗೂ ತೋರಿಸಿದರು. ಎಲ್ಲರೂ ಹೌದೌದೆಂದು, “ಇವರೇ ಅಲ್ಲವೇ ಅಂದು ನಮ್ಮ ಮನೆ ಮುಂದೆ ಮಲಗುತ್ತಿದ್ದ ಸಾಧು!?’ ಎನ್ನುವ ವಿಸ್ಮಯ ಎಲ್ಲರನ್ನೂ ತಬ್ಬಿಬ್ಬುಗೊಳಿಸಿತು. ಕೂಡಲೇ ಹೋಗಿ, ಮನೆ ಮುಂದೆ ಹಾಸಿದ್ದ ಕಲ್ಲು ಬೆಂಚಿಗೆ ಎಲ್ಲರೂ ದೀರ್ಘದಂಡ ನಮಸ್ಕಾರ ಹಾಕಿದರಂತೆ.
ಆ ದಿವ್ಯ ಕ್ಷಣವನ್ನು ಅವರ ಬಾಯಿಂದಲೇ ಮರು ಕಟ್ಟಿಕೊಳ್ಳಲು ಇಂದು ಸೂಗಪ್ಪ ಅವರು ಬದುಕಿಲ್ಲ. ಪುಟ್ಟಯ್ಯ ಅವರೂ ಇಲ್ಲ. ನಂತರದ ಪೀಳಿಗೆಯ ಬಿ.ಸಿ. ಲೋಕನಾಥ್, ತಾತ ಹೇಳಿದ ನೆನಪಿನ ಕಪಾಟಿಗೆ ಕೈಹಾಕುತ್ತಾ, ಇವತ್ತಿಗೂ ಭಾವುಕರಾಗುತ್ತಾರೆ. “ಸ್ವಾಮಿ ವಿವೇಕಾನಂದರು ಬಂದು ಹೋದ ಆ ಮನೆ ಈಗ ಇಲ್ಲ. ಅದನ್ನು ಕೆಡವಿ ಒಂದು ಕಾಂಪ್ಲೆಕ್ಸ್ ಕಟ್ಟಿದ್ದೇವೆ’ ಎನ್ನುತ್ತಾರೆ ಲೋಕನಾಥ್. 1997ರಲ್ಲಿ ಆ ಹಳೇ ಮನೆಯನ್ನು ಕೆಡವುವಾಗ, ವಿವೇಕಾನಂದರು ಕುಳಿತ ಆ ಕಲ್ಲು ಬೆಂಚನ್ನು ರಾಮಕೃಷ್ಣಾಶ್ರಮಕ್ಕೆ ಹಸ್ತಾಂತರಿಸಿದರಂತೆ. ಇವತ್ತಿಗೂ ಬಸವನಗುಡಿಯ ರಾಮಕೃಷ್ಣಾಶ್ರಮಕ್ಕೆ ಹೋದರೆ, ವಿವೇಕಾನಂದರು ಧ್ಯಾನಸ್ಥ ರಾಗಿ ಕುಳಿತ ಆ ಮೂರ್ತಿಯ ಕೆಳಗೆ, ಪೀಠವೆಂಬಂತೆ ಆ ಕಲ್ಲು ಬೆಂಚಿದೆ. ಅದೇ ಒಂದು ಕತೆ ಹೇಳುತ್ತದೆ.
ತುಳಸಿ ತೋಟದ ನೋಟವೀಗ…
ವಿವೇಕಾನಂದರು ಅಂದು ಓಡಾಡಿದ್ದ, ಬಳೇಪೇಟೆಯ ಆ ಚೌಲಿó ರಸ್ತೆಯಲ್ಲಿ ನಿತ್ಯವೂ ಸಹಸ್ರಾರು ಜನ ಓಡಾಡುವ ಮಾರ್ಗ. ಟ್ರಾಫಿಕ್ಕಿನ ಗಿಜಿಗಿಜಿಯಲ್ಲಿ, ಹೊಗೆ- ಕೆಂಧೂಳು ಚೆಲ್ಲುವ ಪರಿಸರದಲ್ಲಿ “ಇಲ್ಲೇ ವಿವೇಕಾನಂದರು ಇದ್ದರಂತೆ’ ಎಂದು ಅರೆಕ್ಷಣ ಬ್ರೇಕ್ ಹಾಕಿ, ಧನ್ಯತೆ ಅನುಭವಿಸುವಷ್ಟು ಪುರುಸೊತ್ತು ಯಾರಿಗೂ ಇಲ್ಲ. ಅಷ್ಟಕ್ಕೂ ಬಹುತೇಕರಿಗೆ ಈ ಪ್ರಸಂಗವೇ ತಿಳಿದಿಲ್ಲ. ಇದೇ ಜಾಗವೆಂದು ಪುಳಕಗೊಳ್ಳಲು, ಐತಿಹ್ಯ ಕುರುಹೂ ಇಲ್ಲಿ ಕಾಣಿಸದು.
ಆದರೆ, ಅದೇ ಜಾಗದಲ್ಲಿ ಮೇಲೆದ್ದ ಕಾಂಪ್ಲೆಕ್ಸ್ನಲ್ಲಿ ಓರಿಯೆಂಟಲ್ ಹ್ಯಾಟ್ ಮ್ಯಾನುಪ್ಯಾಕ್ಚರ್ ಅಂಗಡಿ ಇದೆ. ಅದರ ಮಾಲೀಕ ದುಗೇìಶ್, ನಿತ್ಯ ಬೆಳಗ್ಗೆ 11ಕ್ಕೆ ಷಟರ್ ಎತ್ತುವಾಗ, ಒಮ್ಮೆ ಆ ನೆಲವನ್ನು ಮುಟ್ಟಿ ನಮಸ್ಕರಿಸಿ, ಅದರ ಪಾವಿತ್ರ್ಯವನ್ನು ಕಣ್ಣಿಗೊತ್ತಿಕೊಳ್ಳುತ್ತಾರೆ. ವಿವೇಕಾನಂದರು ಧ್ಯಾನಸ್ಥರಾದ ಸ್ಥಳದಲ್ಲಿ, ವ್ಯಾಪಾರದ ಧ್ಯಾನದಲ್ಲಿ ಕಳೆದುಹೋಗುವ ಕಕ್ಕುಲಾತಿ ದುಗೇìಶ್ ಅವರದು. ಆಗಾಗ್ಗೆ ಕನ್ಯಾಕುಮಾರಿಗೆ ಹೋಗಿಬರುವುದರಲ್ಲೂ ಅವರು ಸುಖ ಕಾಣುತ್ತಾರೆ.
ಆ ಹಸಿವು ಕರಗಿಲ್ಲ…
ಹಗಲು ಹೊತ್ತಿನಲ್ಲಿ, ಇಲ್ಲಿ ವ್ಯಾಪಾರವೇ ಧ್ಯಾನವಾದರೆ, ರಾತ್ರಿಯ ಹೊತ್ತಿನಲ್ಲಿ ಆ ಜಾಗದಲ್ಲಿ ಅಲೆಮಾರಿ ಪುಟಾಣಿಗಳ ಚಿಲಿಪಿಲಿ ಮಾನವೀಯ ಹೃದಯಿಗಳ ನಿದ್ದೆಗೆಡಿಸುತ್ತದೆ. ಯಾವ ಬಡತನ, ಯಾವ ಹಸಿವು ಈ ಭಾರತದಿಂದ ತೊಲಗಲಿ ಎಂದು ವಿವೇಕಾನಂದರು ಬಯಸಿದ್ದರೋ, ಅದರ ನಾನಾ ರೂಪಗಳ ದರ್ಶನ ಇಲ್ಲಾಗುತ್ತದೆ. ತುಳಸಿ ತೋಟದ ರಸ್ತೆಯಲ್ಲೇ ಅಲೆಮಾರಿಗಳ ಪುಟ್ಟ ಪುಟ್ಟ ಪ್ಲಾಸ್ಟಿಕ್ ಟೆಂಟಿನ ಬೀಡುಗಳಿವೆ. ದಾರಿ ಬದಿಯೇ ಅಡುಗೆ- ಸಂಸಾರ ನಡೆಸಿ, ಬೆಳಗು ಕಾಣುವ ಅವರ ಧಾವಂತದಲ್ಲೂ ಜೀವನಪ್ರೀತಿಯ ಧ್ಯಾನವಿದೆ.
ಅಂದು ಸಾಧುಗಳು ತಂಗುತ್ತಿದ್ದ ಛತ್ರ ಇಂದು, ಬಿಇಒ ಕಚೇರಿ. ಅದರ ಮುಂಭಾಗದಲ್ಲಿ ಇಂದು ಕಲ್ಯಾಣಿ ಇಲ್ಲ; ಆಟದ ಮೈದಾನವಾಗಿದೆ. ಅಲ್ಲಿ ಗಡ್ಡ ಬಿಟ್ಟ ಸಾಧುಗಳಿಲ್ಲ; ಮೆಜೆಸ್ಟಿಕ್ ಸುತ್ತಮುತ್ತಲಿನ ಭಿಕ್ಷುಕರೇ ಗಡ್ಡ ಬಿಟ್ಟ ಸಾಧುಗಳಂತೆ ತೋರುತ್ತಾರೆ. ನಮ್ಮೆಲ್ಲರ ದಾರಿದ್ರéವನ್ನು ಶಾಶ್ವತವಾಗಿ ಓಡಿಸುವ ಸಂತನೊಬ್ಬ ಇದೇ ದಾರಿಯಲ್ಲೇ ಹಾದು ಬರುತ್ತಾನೆಂದು, ವಿವೇಕಾನಂದರು ಓಡಾಡಿದ ಹಾದಿಯತ್ತ ಅವರೆಲ್ಲ ದೃಷ್ಟಿ ನೆಡುತ್ತಾರೆ. ಎದುರಾದ ಮುಖಗಳಲ್ಲೇ ಸಂತನನ್ನು ಹುಡುಕುತ್ತಾರೆ. ಅರೆಕ್ಷಣ ನಿರಾಶರಾಗುತ್ತಾರೆ. ಮತ್ತೆ ಮತ್ತೂಂದು ಮೋರೆಯತ್ತ ನೋಟ ಚಿಮ್ಮಿಸುತ್ತಾರೆ.ಆ ಪವಾಡವನ್ನು ನಿರೀಕ್ಷಿಸುವುದೂ ಅವರಿಗೊಂದು ಧ್ಯಾನ.
ಇಂದು ವಿವೇಕಾನಂದರು ಹುಟ್ಟಿದ ದಿನ. ಅದರ ಸಂಭ್ರಮ ತುಳಸಿ ತೋಟದ ರಸ್ತೆಯ ಕೆಲವೇ ಹಳಬರಿಗೆ ಇರಬಹುದಷ್ಟೇ. ಮಿಕ್ಕಂತೆ ಇಲ್ಲಿನವರನ್ನು “ಏಳಿ, ಎದ್ದೇಳಿ, ಗುರಿ ಮುಟ್ಟುವ ತನಕ ನಿಲ್ಲದಿರಿ’ ಎನ್ನುವ ಮಾತೊಂದು ಅವಸರಕ್ಕೆ ನೂಕಿರುವಂತೆ ತೋರುತ್ತದೆ.
ಸನ್ಯಾಸಿಯ ಬೆಂಗಳೂರು ಪ್ರವೇಶ…
ಸ್ವಾಮಿ ವಿವೇಕನಾಂದರು 1892ರ ಹೊತ್ತಿನಲ್ಲಿ ಬೆಳಗಾವಿಯ ಸ್ನೇಹಿತನನ್ನು ನೋಡಲು ಬಂದು, ಅಲ್ಲಿಂದ ಮರ್ಮಗೋವಾಕ್ಕೆ ತೆರಳಿದ್ದರು. ಅಲ್ಲಿ ಕೆಲ ಕಾಲ ಇದ್ದು, ನಂತರ ಪುನಃ ಕರ್ನಾಟಕದ ಧಾರವಾಡ ಮೂಲಕ ಬೆಂಗಳೂರಿನ ಒಬ್ಬ ಸ್ನೇಹಿತನನ್ನು ನೋಡಲು ಬಂದಿದ್ದರಂತೆ. ಕಲಾಸಿಪಾಳ್ಯದ ಗರಡಿಮನೆಯ ಆ ಸ್ನೇಹಿತನಿಂದ ಇಲ್ಲೇ ಸಾಧುಗಳು ನೆಲೆನಿಲ್ಲುವ ಜಾಗ ಇರುವುದಾಗಿ ತಿಳಿದು, ತುಳಸಿ ತೋಟದ ಕಾಳಪ್ಪ ಛತ್ರಕ್ಕೆ ಬರುತ್ತಾರೆ. ಜೀವನದುದ್ದಕ್ಕೂ ಆರೋಗ್ಯವಂತರಾಗಿದ್ದ ವಿವೇಕಾನಂದರಿಗೆ ಅದ್ಹೇಗೋ ಚಿಕನ್ ಪಾಕ್ಸ್ ದಾಟಿತು ಎಂಬುದನ್ನು ಬೆಳಗಾವಿಯೇ ಸ್ನೇಹಿತ ಭಾಟೆ ಅವರು ತಮ್ಮ ಬರಹಗಳಲ್ಲಿ ಉಲ್ಲೇಖೀಸಿದ್ದಾರೆ.
ಬೀದಿಯಿಂದ ಅರಮನೆಗೆ…
ಆ ಹೊತ್ತಿನಲ್ಲಿ ಚಿಕನ್ ಪಾಕ್ಸ್ ರೋಗಕ್ಕೆ ಚಿಕಿತ್ಸೆ ಕೊಡುತ್ತಿದ್ದು, ಸರ್ಕಾರ ನೇಮಿಸಲ್ಪಟ್ಟಿದ ವೈದ್ಯ ಡಾ. ಪುಲ್ಪು. ಕೇರಳ ಮೂಲದ ಅವರು ಮೈಸೂರಿನ ಅರಸರ ಆಶ್ರಯದಲ್ಲಿ ವೈದ್ಯರಾಗಿದ್ದರು. ವಿವೇಕಾನಂದರ ವಿಚಾರಗಳಿಗೆ ಪ್ರಭಾವಿತರಾಗಿ, ದಿವಾನ ಶೇಷಾದ್ರಿ ಅಯ್ಯರ್ಗೆ ಈ ಸಂತನ ಕುರಿತು ತಿಳಿಸುತ್ತಾರೆ. ನಂತರ ಖುದ್ದಾಗಿ ಅಯ್ಯರ್ ಅವರೇ ಬಂದು, ವೀರ ಸನ್ಯಾಸಿಯನ್ನು ಕರೆದೊಯ್ದು, ಮೈಸೂರು ಮಹಾರಾಜರಿಗೆ ಭೇಟಿ ಮಾಡಿಸುತ್ತಾರೆ!
ಸ್ವಾಮಿ ವಿವೇಕಾನಂದರು ಬೆಂಗಳೂರಿಗೆ ಬಂದಾಗ, ಇಲ್ಲಿನ ಜನತೆಗೆ ಅವರ್ಯಾರೆಂದೇ ಗೊತ್ತಿರುವುದಿಲ್ಲ. ಚಿಕಾಗೋ ಭಾಷಣದ ಸುದ್ದಿ ಪತ್ರಿಕೆಯಲ್ಲಿ ಬಂದಾಗ ಎಲ್ಲರೂ ವಿಸ್ಮಯಗೊಳ್ಳುತ್ತಾರೆ.
– ಸುರೇಶ್ ಮೂನ, ಇತಿಹಾಸ ತಜ್ಞ