ಶಾಲೆಗೆ ಬಂದ ದಸರಾ
Team Udayavani, Oct 5, 2019, 3:03 AM IST
ನವರಾತ್ರಿ ಬಂತೆಂದರೆ, ಶಾಲೆಯ ಮಕ್ಕಳಿಗೆ ರಜೆಯ ಸಂಭ್ರಮ. ಇನ್ನೊಂದು ವಾರ ಶಾಲೆಗೆ ಹೋಗುವುದ ಬೇಡ ಅನ್ನೋ ಖುಷಿ. ಆದರೆ, ರಾಜಾಜಿನಗರದ ಶ್ರೀ ವಾಣಿ ಶಿಕ್ಷಣ ಸಂಸ್ಥೆಯ ಮಕ್ಕಳ ಸಡಗರಕ್ಕೆ ಕಾರಣವೇ ಬೇರೆ.
ಕಳೆದ ಐದು ದಶಕಗಳಿಂದ, ಶೈಕ್ಷಣಿಕ ಅಭಿವೃದ್ಧಿಯ ಜೊತೆಜೊತೆಗೆ ಭಾರತೀಯ ಸಂಸ್ಕೃತಿಯನ್ನು ಸಾರುತ್ತಿರುವ ವಾಣಿ ಶಿಕ್ಷಣ ಸಂಸ್ಥೆಯು ಪ್ರತಿ ವರ್ಷವೂ ದಸರಾ ಬೊಂಬೆ ಪ್ರದರ್ಶನವನ್ನು ನಡೆಸುತ್ತದೆ. ಶಿಕ್ಷಕರ ನೇತೃತ್ವದಲ್ಲಿ, ಮಕ್ಕಳೇ ಈ ಪ್ರದರ್ಶನದ ಜವಾಬ್ದಾರಿ ಹೊರುವುದು ವಿಶೇಷ. ಪೌರಾಣಿಕ ಪರಿಕಲ್ಪನೆಯಲ್ಲಿ ನಡೆಯುವ ಬೊಂಬೆ ಪ್ರದರ್ಶನದ ಈ ಬಾರಿಯ ವಿಷಯ ರಾಮಾಯಣ.
ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜೀವನ ಕಥನವನ್ನು ಸಾರುವ ಬೊಂಬೆಗಳನ್ನು, ಶಿಕ್ಷಕರು-ಮಕ್ಕಳು ಜೊತೆಯಾಗಿ ತಯಾರಿಸಿದ್ದಾರೆ. ಕಣ್ಮನ ಸೆಳೆಯುವ ರಂಗೋಲಿಗಳು, ರಾಮನ ಕತೆ ಹೇಳುವ ಚಿತ್ರಗಳು ಈ ಪ್ರದರ್ಶನದ ವಿಶೇಷ ಆಕರ್ಷಣೆ.
ಅಷ್ಟೇ ಅಲ್ಲ, ಪ್ರತಿದಿನ ಸಂಜೆ 5.30- 8.30 ರವರೆಗೆ ನಡೆಯುವ ಸಂಗೀತೋತ್ಸವದಲ್ಲಿ, ವಿದ್ಯಾಸಂಸ್ಥೆಯ ಮಕ್ಕಳು ಹಾಗೂ ವಿವಿಧ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಬಸವೇಶ್ವರನಗರ ಶಾಖೆಯಲ್ಲಿ, ದಕ್ಷಿಣ ಭಾರತದ ಹಬ್ಬಗಳು ಎಂಬ ಪರಿಕಲ್ಪನೆಯಲ್ಲಿ ಬೊಂಬೆ ಪ್ರದರ್ಶನ ನಡೆಯುತ್ತಿದೆ.