ಮಲೆನಾಡ ರಂಗ ತಂಡದ ಕಚಗುಳಿ
Team Udayavani, Oct 6, 2018, 2:24 PM IST
ಮಲೆನಾಡಿನ ರಂಗಪ್ರಪಂಚಕ್ಕೆ “ಹೊಂಗಿರಣ’ ರಂಗ ತಂಡದ ಹೆಸರು ಸಾಕಷ್ಟು ಪರಿಚಿತ. “ಶ್ರೀಕೃಷ್ಣ ಸಂಧಾನ’,”ಕೃಷ್ಣೇಗೌಡರ ಆನೆ’ಯಿಂದ ಹಿಡಿದು ಹೊಸ ತಲೆಮಾರಿನ “ಸುಪಾರಿ ಕೊಲೆ’ಯಂಥ ನಾಟಕದ ವರೆಗೂ ತನ್ನ ಯಶಸ್ವಿ ರಂಗಯಾತ್ರೆ ಪೂರೈಸಿದೆ. ಶಿವಮೊಗ್ಗ ನೆಲದಲ್ಲಿದ್ದು ರಂಗ ಚಟುವಟಿಕೆಗಳನ್ನು ನಡೆಸುತ್ತಿದ್ದ “ಹೊಂಗಿರಣ’ವು ತನ್ನ ಕಲಾವಿದ ಬಳಗವನ್ನು ಕಟ್ಟಿಕೊಂಡು ಇದೀಗ ರಾಜಧಾನಿಯ ಬಸ್ಸನ್ನೇರಿದೆ. ಕಾರಣ, ಬೆಂಗಳೂರಿನಲ್ಲಿ “ಹಾಸ್ಯ ರಂಗೋತ್ಸವ: ಹೊಂಗಿರಣೋತ್ಸವ- 7′ ಅನ್ನು ಹಮ್ಮಿಕೊಂಡಿದೆ. ಈ ಪ್ರಯುಕ್ತ 3 ನಾಟಕಗಳನ್ನು ಏರ್ಪಡಿಸಿದೆ. ಮಲ್ಲತ್ತಹಳ್ಳಿ ಸಮೀಪದ ಕಲಾಗ್ರಾಮದಲ್ಲಿ ಪ್ರದರ್ಶನಗಳು ನಡೆಯಲಿವೆ.
ಸಂಪರ್ಕ: 9844367071
1.ನನ್ನ ಪ್ರೀತಿಯ ನರಕ..!?
ಪ್ರೀತಿಗೆ ಬರುವ ಅಡ್ಡಿ ಆತಂಕಗಳು ಒಂದೆರಡಲ್ಲ. ಇಂಥದ್ದೇ ಅಡ್ಡಿಗಳು ನರಕದಲ್ಲೂ ಇಲ್ಲವೆಂದಲ್ಲ. ಯಮನ ಮಗಳನ್ನು ಚಿತ್ರಗುಪ್ತನ ಮಗ ಪ್ರೀತಿಸಿದ ವಿಷಯ ತಿಳಿದ ಯಮ, ಅಂತಸ್ತಿನ ಮಾತಾಡಿ, ಚಿತ್ರಗುಪ್ತನನ್ನು ಅವಮಾನಿಸುತ್ತಾನೆ. ಚಿತ್ರಗುಪ್ತ ಇದನ್ನೇ ಪ್ರತಿಷ್ಠೆಯಾಗಿ ಸ್ವೀಕರಿಸಿ, ಮಕ್ಕಳ ಪ್ರೀತಿಯನ್ನು ಯಶಸ್ವಿಗೊಳಿಸಲು ಹೋರಾಟ ತಂತ್ರ ರೂಪಿಸುವುದೇ ನಾಟಕದ ಕತೆ. ಡಾ. ಸಾಸ್ವೆಹಳ್ಳಿ ಸತೀಶ್ ನಿರ್ದೇಶಿಸಿರುವ ಈ ನಾಟಕವನ್ನು ಹೊಂಗಿರಣ ತಂಡವು ಅಭಿನಯಿಸುತ್ತಿದೆ. ರಂಗ ಮೇಲೆ ಶಿವಕುಮಾರ ಮಾವಲಿ, ಸುರೇಂದ್ರ ಕೆ.ಎನ್., ಚಂದ್ರಶೇಖರ ಹಿರೇಗೋಣಿಗೆರೆ, ಇತರರು ನಟಿಸುತ್ತಿದ್ದಾರೆ.
ಯಾವಾಗ?: ಅ.12, ಶುಕ್ರವಾರ,ರಾ.7.30
2. ಬಯಲು ಸೀಮೆ ಕಟ್ಟೆಪುರಾಣ
ಪ್ರಸ್ತುತ ವಿದ್ಯಮಾನಗಳನ್ನು ಗ್ರಾಮೀಣರು ತಮ್ಮದೇಯಾದ ವಿಶ್ಲೇಷಣೆಯ ಮೂಲಕ ಅರ್ಥೈಸುವ ಕಥಾವಸ್ತು ಇದರದ್ದು. ಸರ್ಕಾರಗಳು ಬದಲಾಗುತ್ತವೆ. ರಾಜಕಾರಣಿಗಳ ಪಾತ್ರ ಬದಲಾಗುತ್ತಲೇ ಇರುತ್ತದೆ. ನೂರಾರು ಯೋಜನೆಗಳು ರೂಪುಗೊಳ್ಳುತ್ತವೆ. ಆದರೆ, ಪ್ರಯೋಜನ ಮಾತ್ರ ಶೂನ್ಯ. ವಿಡಂಬನಾತ್ಮಕ ನಾಟಕ, ಗ್ರಾಮೀಣ ಜನರ ನೋವು- ನಲಿವುಗಳನ್ನು ಚಿತ್ರಿಸುತ್ತದೆ. ಬಿ. ಚಂದ್ರೇಗೌಡ ಅವರು ರಚಿಸಿರುವ ಈ ನಾಟಕವನ್ನು ಎಸ್.ಆರ್. ಗಿರೀಶ್ ನಿರ್ದೇಶಿಸಿದ್ದಾರೆ. ಶಿವಮೊಗ್ಗದ “ನಮ್ ಟೀಮ್’ ತಂಡ ಅಭಿನಯಿಸುತ್ತಿದೆ.
ಯಾವಾಗ?: ಅ.13, ಶನಿವಾರ, ರಾ.7.30
3.ವೀರ ಉತ್ತರಕುಮಾರ
ಮಹಾಭಾರತದ ವಿಲಕ್ಷಣ ಪಾತ್ರ ಈ ಉತ್ತರಕುಮಾರ. ಈ ಹುಡುಗ ಏಕೆ ಹೀಗಾದ? ಇವನಿಂದಾಗಿಯೇ ಉತ್ತರನ ಪೌರುಷ ಎಂಬ ನಾಣ್ಣುಡಿ ಹುಟ್ಟಿತಲ್ಲ ಏಕೆ ಎಂಬಿತ್ಯಾದಿ ಉತ್ತರವಿಲ್ಲದ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನ ನಾಟಕದಲ್ಲಿದೆ. ನಮ್ಮ ದೇಶದ ರಾಜಕೀಯ ನಾಯಕರು ಸದ್ಯದ ಪರಿಸ್ಥಿತಿಯಲ್ಲಿ ಉತ್ತರನಂತೆ ಮಾತಾಡುತ್ತಾ, ಮುಂದುವರಿದ ಪೀಳಿಗೆಯಂತೆ ಕಾಣುತ್ತಿರುವುದು ನಾಟಕದ ವಿಶೇಷತೆಯಾಗಿ ಪ್ರಕಟವಾಗುತ್ತದೆ. ಇದರ ರಚನೆ, ವಿನ್ಯಾಸ, ನಿರ್ದೇಶನ ಡಾ. ಸಾಸ್ವೆಹಳ್ಳಿ ಸತೀಶ್ ಅವರದು.
ಯಾವಾಗ?: ಅ.14, ಭಾನುವಾರ, ರಾ.7.30