ಸೋಮವಾರದಿಂದ ಕಡಲೆಕಾಯಿ ಪರಿಷೆ
Team Udayavani, Dec 1, 2018, 3:31 PM IST
ಬೆಂಗಳೂರು ಅಭಿವೃದ್ಧಿ ಹೊಂದುವುದಕ್ಕೂ ಮೊದಲು, ಬಸವನಗುಡಿಯ ಪ್ರದೇಶ ಕೃಷಿ ಭೂಮಿಯಾಗಿತ್ತು. ಅಲ್ಲಿ ಹೆಚ್ಚಾಗಿ ಕಡಲೆಕಾಯಿ ಬೆಳೆಯುತ್ತಿದ್ದರು. ಫಸಲು ಬಲಿಯುತ್ತಿದ್ದಂತೆಯೇ
ಯಾವುದೋ ಪ್ರಾಣಿ, ರಾತ್ರೋರಾತ್ರಿ ಅದನ್ನು ತಿಂದು ಹಾಕುತ್ತಿತ್ತು. ಗಾಬರಿಯಾದ ರೈತರು,
ರಾತ್ರಿಯ ವೇಳೆ ಅಡಗಿ ಕುಳಿತು ಪರೀಕ್ಷಿಸಿದಾಗ- ಭಾರೀ ಗಾತ್ರದ ಹೋರಿಯೊಂದು ಕಡಲೆಕಾಯಿ
ಬೆಳೆಯನ್ನು ತಿನ್ನುವುದು ಕಾಣಿಸಿತು. ಅದು ಸಾಮಾನ್ಯ ಹೋರಿಯಲ್ಲ. ದೈವಾಂಶ ಸಂಭೂತವಾದ
ಬಸವಣ್ಣ ಎಂದು ಊಹಿಸಿದ ರೈತರು- ನಮ್ಮ ಬೆಳೆಯನ್ನು ಹಾಳು ಮಾಡಬೇಡ. ಪ್ರತಿ ವರ್ಷವೂ
ಕೃಷಿ ಚಟುವಟಿಕೆ ಮುಗಿದ ನಂತರ, ನಿನ್ನ ಹೆಸರಿನಲ್ಲಿ ಪರಿಷೆ ಮಾಡುತ್ತೇವೆ ಎಂದು ಹರಕೆ
ಕಟ್ಟಿಕೊಂಡರಂತೆ…
ಇದು ಬಸವನಗುಡಿಯಲ್ಲಿ ನಡೆಯುವ ಕಡಲೆಕಾಯಿ ಪರಿಷೆಗೆ ಇರುವ ಹಿನ್ನೆಲೆ. ಈ ಬಾರಿ, ಡಿಸೆಂಬರ್ 3ರ ಸೋಮವಾರದಂದು ಪರಿಷೆ ಆರಂಭವಾಗಲಿದೆ. ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಉದ್ಘಾಟಿಸಲಿದ್ದು, ಮುಜರಾಯಿ ಇಲಾಖೆ ಸಚಿವ ಬಸವರಾಜ ಪಾಟೀಲ, ಮೇಯರ್ ಗಂಗಾಂಬಿಕೆ, ಶಾಸಕ ರವಿಸುಬ್ರಹ್ಮಣ್ಯ ಮುಂತಾದವರು
ಪಾಲ್ಗೊಳ್ಳಲಿದ್ದಾರೆ.