ಮಸ್ತ್ ರುಚಿಯ ಮತ್ಸ್ಯ
Team Udayavani, Mar 2, 2019, 12:30 AM IST
ಬೆಂಗಳೂರಿಗೆ ಕಡಲು ಬಹಳ ದೂರ. ತಾಜಾ ಮೀನುಗಳನ್ನು ಫ್ರೀಜ್ ಮಾಡಿ, ಒಂದೆರಡು ದಿನಗಳ ಬಳಿಕ ಬಳಕೆ ಮಾಡುವ ಈ ಮಹಾನಗರದಲ್ಲಿ ಒಂದು ಭಿನ್ನ ಹೋಟೆಲ್ ಇದೆ. ಇಲ್ಲಿ ಎಲ್ಲವೂ ಫ್ರೆಶ್. ಅಷ್ಟೇ ಅದ್ಭುತ ರುಚಿ. ಆ ದಿನದ ಮೀನನ್ನು ಆ ದಿನವೇ ಬಳಸುವ ಪರಿಪಾಠ ಇಲ್ಲಿನ ಮೀನೂಟದ ಸ್ಪೆಷಾಲಿಟಿ. ಅದಕ್ಕೇ ಜನ “ಮತ್ಸ್ಯ’ ಹೋಟೆಲ್ ಅಂದ್ರೆ, ಹುಡುಕಿಕೊಂಡು ಬಂದು, ಹೊಟ್ಟೆ ಭರ್ತಿ ಮಾಡ್ಕೊಂಡು ಹೋಗ್ತಾರೆ. ಮೀನು ಅಂದ್ರೆ, ಕಾಣೆ, ಬೂತಾಯಿ, ಬಂಗಡೆ ಅಷ್ಟೇ ಅಂತ ಅಂದುಕೊಂಡವರಿಗೆ ಇಲ್ಲಿ ಸಾಕಷ್ಟು ಆಯ್ಕೆಗಳಿವೆ. ಪಕ್ಕಾ ಕರಾವಳಿ ರುಚಿ. ಚಪ್ಪರಿಸಿ ತಿನ್ನುವಷ್ಟು ರುಚಿಯ ಚಮತ್ಕಾರ.
ಹೆಸರೇ “ಮತ್ಸ್ಯ’, ಮೀನೇ ಸ್ಪೆಷಲ್!
ಶೇಷಾದ್ರಿಪುರದಲ್ಲಿ “ಮತ್ಸ್ಯ’ ಹೋಟೆಲ್ ಅನ್ನು ಪ್ರಾರಂಭಿಸಿದವರು, ಬಂಟ್ವಾಳದ ಸಂತೋಷ ಸಾಲಿಯಾನ ಮತ್ತು ಮಂಗಳೂರಿನ ಮನೋಜ ಕುಮಾರ ಎಂಬವರು. ಮಂಗಳೂರಿನ ಮೀನಿನ ಅಡುಗೆ ಹೇಗಿರುತ್ತದೆ ಎಂಬುದರ ಬಗ್ಗೆ ಸ್ವಾನುಭವ ಹೊಂದಿದ್ದ ಕರಾವಳಿಯ ಈ ಮಿತ್ರರು, ತಮ್ಮೂರಿನ ಅಪ್ಪಟ ಮೀನಿನ ಸ್ವಾದವನ್ನು ಉಣ ಬಡಿಸುವ ಉದ್ದೇಶದಿಂದ ಈ ಹೋಟೆಲ್ ಅನ್ನು ತೆರೆದರು. 2018ರ ಸೆಪ್ಟೆಂಬರ್ ನಲ್ಲಿ ಪ್ರಾರಂಭವಾದ ಈ ಹೋಟೆಲ್, ಅತಿ ಕಡಿಮೆ ಅವಧಿಯಲ್ಲಿ, ತನ್ನ ಶುಚಿ-ರುಚಿಯ ಕಾರಣದಿಂದ ಹೆಸರು ಮಾಡು¤ತಿದೆ. ಇಲ್ಲಿನ ನುರಿತ ಬಾಣಸಿಗರು ಮಂಗಳೂರು ಶೈಲಿಯಲ್ಲಿ ಮೀನಿನ ಅಡುಗೆ ಮಾಡುವುದರಲ್ಲಿ ಎತ್ತಿದ ಕೈ.
ಏನೇನ್ ಸಿಗತ್ತೆ?
ಬಂಗುಡೆ, ಬೂತಾಯಿ, ಬೋಂಡಸ್, ಅಂಜಲ್, ಪಾಂಪ್ಲೆಟ್, ಕೊಡೈಕಾಣೆ, ಸಿಲ್ವರ್ μಷ್, ಹೊಳೆ ಮೀನು… ಹೀಗೆ ಥರಹೇವಾರಿ ಮೀನುಗಳಿಂದ ಮಾಡುವ ಬಗೆಬಗೆಯ ಖಾದ್ಯಗಳು ಇಲ್ಲಿ ಸಿಗುತ್ತವೆ. ನಾಟಿ ಸ್ಟೈಲ್ ಜೊತೆಗೆ ನೀರು ದೋಸೆ, ಮಂಗಳೂರು ಕಡುಬು, ಕೇರಳ ಪರೋಟ, ಕುಚ್ಚಲಕ್ಕಿ ಅನ್ನ, ಒತ್ತು ಶ್ಯಾವಿಗೆಯನ್ನೂ ಸವಿಯಬಹುದು.
ಬರೀ ಮೀನಷ್ಟೇ ಅಲ್ಲ… ವೆಜ್ ಕರಿ ರೈಸ್, ಎಗ್ ಕರಿ ರೈಸ್, ಮಟನ್ ಕರಿ ರೈಸ್, ಚಿಕನ್ ಕರಿ ರೈಸ್, ಚಿಕನ್ ರೋಸ್ಟ್, ಚಿಕನ್ ಸುಕ್ಕಾ, ಚಿಕನ್ ಕಬಾಬ್, ಚಿಕನ್ ಫ್ರೈ, ಚಿಕನ್ ಚಿಲ್ಲಿ, ಚಿಕನ್ ಮಂಚೂರಿಯನ್, ಚಿಕನ್ ಖೊಲ್ಲಾಪುರಿ, ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ, ಎಗ್ ಬಿರಿಯಾನಿ, ವೆಜ್ ಬಿರಿಯಾನಿ, ಪ್ರಾನ್ಸ್ ಬಿರಿಯಾನಿ ಮುಂತಾದವೂ ಲಭ್ಯ. ಸಿನಿಮಾ ನಟರಾದ ಆದಿತ್ಯ, ಕೋಮಲ್, ರೇಖಾ ಅವರಿಗೆ ಈ ಹೋಟೆಲ್ ಅಂದ್ರೆ ಬಲು ಇಷ್ಟ.
ಆರೋಗ್ಯಭರಿತ ದೇಸಿರುಚಿ ಹೋಟೆಲ್ ಊಟ ಮಾಡಿ ಹೊಟ್ಟೆ ಕೆಟ್ಟಿತು ಅಂತ ಇಲ್ಲಿನ ಗ್ರಾಹಕರು ಹೇಳುವುದಿಲ್ಲ. ಯಾಕಂದ್ರೆ, ಇಲ್ಲಿನ ಯಾವ ಅಡುಗೆಗೂ ಸೋಡಾ, ಕೃತಕ ಬಣ್ಣ, ಟೇಸ್ಟಿಂಗ್ ಪೌಡರ್
ಗಳನ್ನು ಬಳಸುವುದಿಲ್ಲ. ಮತ್ತೂಂದು ವಿಶೇಷವೆಂದರೆ, ಕೆಲವು ಗ್ರಾಹಕರು ಎಣ್ಣೆಯಲ್ಲಿ ಕರಿದ ತಿನಿಸುಗಳನ್ನು ತಿನ್ನಲು ಹಿಂಜರಿಯುತ್ತಾರೆ. ಅಂಥವರಿಗಾಗಿ ಈ ಹೋಟೆಲ್ನಲ್ಲಿ, ಪುದೀನಾ, ಶುಂಠಿ, ಬೆಳ್ಳುಳ್ಳಿ, ಮೆಣಸು, ಉಪ್ಪು ಹಾಕಿ ಮಾಡಿದ ಪೇಸ್ಟ್ ಅನ್ನು ಮೀನಿಗೆ ಸವರಿ, ಅದನ್ನು ಬಾಳೆಎಲೆಯಲ್ಲಿ ಕಟ್ಟಿ, ತಂದೂರ್ ಹಬೆಯಲ್ಲಿಟ್ಟು ಬೇಯಿಸುತ್ತಾರೆ. ಈ ರೀತಿ ಖಾದ್ಯ ತಯಾರಿಸುವ ಹೋಟೆಲ್ಗಳು ಬಹಳ ವಿರಳ.
ಕುಡ್ಲದ ಮೀನಿನ ರುಚಿ ಕಂಡಿರಾ?
ರುಚಿ ಮಂಗಳೂರಿನದ್ದು ನಿಜ.ಆದರೆ, ಮೀನು ಎಲ್ಲಿಯದ್ದು ಅಂದುಕೊಂಡ್ರಾ? ಅದು ಕೂಡ ಕುಡ್ಲದ್ದೇ. ಒಂದೆರಡು ದಿನದ ಹಿಂದಿನ ಮೀನುಗಳನ್ನು ಫ್ರೀಜ್ ಮಾಡಿ, ಬಳಸುವ ಹೋಟೆಲ್ ಅಲ್ಲ ಇದು. ಪ್ರತಿದಿನವೂ ಮಂಗಳೂರಿನಿಂದ ತಾಜಾ ಮೀನುಗಳನ್ನು ತರಿಸಿಕೊಳ್ಳಲಾಗುತ್ತದೆ. ಬಾಳೆ ಎಲೆ ಊಟದಲ್ಲಿ ಆ ಮೀನಿನ ಖಾದ್ಯಗಳನ್ನು ಸವಿಯುವ ಗಮ್ಮತ್ತೇ ಬೇರೆ.
ಎಲ್ಲಿದೆ?:
ಮತ್ಸ್ಯ, 33,
1ನೇ ಮುಖ್ಯರಸ್ತೆ,ಸಿಂಡಿಕೇಟ್ ಬ್ಯಾಂಕ್ನಪಕ್ಕ, ಶೇಷಾದ್ರಿಪುರ
ಸಮಯ:ಮ. 12- ರಾ. 12
ದೂ.ಸಂಖ್ಯೆ:080-23364777,9740017171
ಬಳಕೂರು ವಿ.ಎಸ್. ನಾಯಕ