ಪಮೇಲಾ “ಅರಣ್ಯ ಕಾಂಡ’

25 ವರ್ಷದಿಂದ ದಂಪತಿಯ ವನವಾಸ

Team Udayavani, Nov 23, 2019, 5:14 AM IST

pamela

ಅದು 1993. ಅಪ್ಪನ ಅಸ್ಥಿಯನ್ನು ಗಂಗೆಯಲ್ಲಿ ಬಿಡಲು, ಹರಿದ್ವಾರಕ್ಕೆ ಬಂದರು ಡಾ. ಅನಿಲ್‌. ಸಂಗಾತಿ ಪಮೇಲಾಗೆ ಅಲ್ಲಿ ಕಲುಷಿತಗೊಂಡಿದ್ದ ನದಿ, ಪರಿಸರದ ಮೇಲೆ ಕಾಳಜಿ ಉಕ್ಕಿತಂತೆ. ಹಿಮಾಲಯದ ಬುಡದಲ್ಲಿ ನೆಲೆ ನಿಲ್ಲಲು, ಕಾನೂನಿನ ಅಡ್ಡಿಯಿಂದ ಸಾಧ್ಯವಾಗಲಿಲ್ಲ. ಅಂಥದ್ದೇ ನಿಸರ್ಗ ಹುಡುಕಿಕೊಂಡು “ದಕ್ಷಿಣದ ಕಾಶ್ಮೀರ’ ಕೊಡಗಿಗೆ ಬಂದಾಗ, ಸೆಳೆದಿದ್ದು ಬ್ರಹ್ಮಗಿರಿಯ ತಪ್ಪಲು… 25 ವರ್ಷಗಳಿಂದ ಈ ಕಾಡೊಳಗೆ, ವನ್ಯಜೀವಿಗಳೊಟ್ಟಿಗೆ ತಾವೂ ಒಂದಾಗಿದ್ದಾರೆ…

ದೂರದಲೊಂದು ಕಾಡಿತ್ತು. ಕಾಡಲಿ ಒಂದು ಮನೆಯಿತ್ತು… ಅಲ್ಲೊಂದು ಸಣ್ಣ ಕೊಳದ ಪಕ್ಕದಲ್ಲಿ ಅಲೆಗಳನ್ನೆಬ್ಬಿಸಿ ಓಲಾಡುವ, ಜುಳುಜುಳು ನಾದಗೈಯ್ಯುವ ನದಿ. ಆ ನೀರ್ಗನ್ನಡಿಯಲ್ಲಿ ಮುಖ ನೋಡುತ್ತಾ, ತಂಪಾಗುವ ವನ್ಯಮೃಗಗಳು; ರೆಂಬೆಯ ಮರೆಯಲ್ಲಿ, ಹಸಿರೆಲೆಯ ಕಿರೀಟ ಧರಿಸಿ, ಹಾಡುವ ಬಣ್ಣದ ಹಕ್ಕಿಗಳು… ಮುಗಿಲು ಮುತ್ತಿಕ್ಕುವ ಹೆಮ್ಮರಗಳ ಕೆಳಗೆ, ತರಗೆಲೆಯ ಮೇಲೆ ಹಗೂರ ಹೆಜ್ಜೆ ಇಡುತ್ತಾ, ಓಡಾಡುವ ದಂಪತಿ… 25 ವರ್ಷಗಳಿಂದ, ಕೊಡಗಿನ ಬ್ರಹ್ಮಗಿರಿಯ ದಟ್ಟಾರಣ್ಯವೇ ಈ ಜೋಡಿಗೆ ಆವಾಸ.

ನ್ಯೂಜೆರ್ಸಿಯ ಪಮೇಲಾ, ಉತ್ತರ ಭಾರತದ ಡಾ. ಅನಿಲ್‌ ಮಲ್ಹೋತ್ರಾ ದಂಪತಿ, 300 ಎಕರೆಯ “ಏಷ್ಯಾದ ಮೊಟ್ಟ ಮೊದಲ ಖಾಸಗಿ ಅಭಯಾರಣ್ಯ’ದೊಳಗೆ, ತಾವೂ ಒಂದಾಗಿ ಬದುಕುತ್ತಿರುವುದು ಈ ಪರಿ. ಪ್ರೀತಿಸಿ ಮದುವೆಯಾದ ಪಮೇಲಾ ದಂಪತಿ, ಮಧುಚಂದ್ರಕ್ಕೆಂದು ಹವಾಯಿ ದ್ವೀಪಕ್ಕೆ ಹೋಗಿದ್ದರಂತೆ. ಅಲ್ಲಿನ ಪ್ರಕೃತಿಯ ಸೌಂದರ್ಯದ ಮುಂದೆ, ಅದುವರೆಗೂ ಕಂಡಿದ್ದ ಗರಿಗರಿ ಡಾಲರ್‌ ನೋಟು, ಐಷಾರಾಮಿ ಕಾರು, ಲಕ್ಷುರಿ ವಿಲ್ಲಾಗಳೆಲ್ಲ ಏನೂ ಅಲ್ಲ ಅಂತನ್ನಿಸಿತು. ನಗರ ಬಿಟ್ಟು, ಕಾಡಿನಲ್ಲೇ ಬದುಕಬೇಕೆಂಬ ಕನಸು ಕಣ್ತೆರೆಯುತ್ತಿದ್ದಾಗಲೇ, ಅನಿಲ್‌ರ ತಂದೆ ಕಣ್ಮುಚ್ಚಿದ್ದರು.

ಅಪ್ಪನ ಅಸ್ಥಿಯನ್ನು ಗಂಗೆಯಲ್ಲಿ ಬಿಡಲು, ಹರಿದ್ವಾರಕ್ಕೆ ಬಂದರು ಅನಿಲ್‌. ಕಲುಷಿತಗೊಂಡಿದ್ದ ನದಿಯನ್ನು ಕಂಡು ಬೇಸರ ಹುಟ್ಟಿತು. ಪರಿಸರದ ರಕ್ಷಣೆಯನ್ನೇ ಜೀವನದ ಜಪ ಮಾಡಿಕೊಂಡ ದಂಪತಿ, ಹಿಮಾಲಯದ ಬುಡದಲ್ಲಿ ನೆಲೆ ನಿಲ್ಲಲು ಮುಂದಾದರು. ಕಾಡುವ ಕಾಡೇನೋ ಸಿಕ್ಕಿತು; ಆದರೆ, ಖರೀದಿಗೆ ಕಾನೂನಿನದ್ದೇ ಅಡ್ಡಿ. ಅಂಥದ್ದೇ ನಿಸರ್ಗ ಹುಡುಕಿಕೊಂಡು “ದಕ್ಷಿಣದ ಕಾಶ್ಮೀರ’ ಕೊಡಗಿಗೆ ಬಂದಾಗ, ಸೆಳೆದಿದ್ದು, ಬ್ರಹ್ಮಗಿರಿಯ ತಪ್ಪಲು. ಹಿಂದೆ ನೋಡಿದ್ದ ನಿಸರ್ಗಕ್ಕಿಂತ, ಪ್ರಶಸ್ತ; ಕರುನಾಡೇ ಸ್ವರ್ಗ ಅಂತನ್ನಿಸಿತು. “ಸಾಯಿ ಸ್ಯಾಂಕ್ಚುರಿ’ ಎಂಬ ವನ್ಯಮೃಗಗಳ ಅಭಯಧಾಮದ ಹುಟ್ಟಿನ ಹಿಂದೆ ಇಷ್ಟೆಲ್ಲ ಕತೆಯುಂಟು.

ಖಾಸಗಿ ಅಭಯಾರಣ್ಯ…: ದೂರದಲ್ಲಿ ಬ್ರಹ್ಮಗಿರಿ. ಪಕ್ಕದಲ್ಲಿ ನಾಗರಹೊಳೆ ಅಭಯಾರಣ್ಯ. ಮತ್ತೂಂದು ದಿಕ್ಕಿಗೆ ಬಂಡೀಪುರದ ಹೆಗ್ಗಾಡು. ಇವುಗಳ ನಡುವಿನ ಅರಣ್ಯಧಾಮವೇ “ಸಾಯಿ ಸ್ಯಾಂಕ್ಚುರಿ’. 1993ರಲ್ಲಿ, ಇಲ್ಲಿ ಯಾವುದೇ ಮೂಲ ಸೌಕರ್ಯಗಳಿರದ ಕಾಲದಲ್ಲಿ, 55 ಎಕರೆ ಅರಣ್ಯ ಖರೀದಿಸಿ, ಇವರು ಸೊನ್ನೆಯಿಂದ ಬದುಕಿನ ಪುಟ ತೆರೆದರು. ಅಂದು ಇವರ ಜೊತೆಯಾಗಿದ್ದು, ಕಾಡುಪ್ರಾಣಿಗಳು, ಚಿಲಿಪಿಲಿಗುಟ್ಟುವ ಹಕ್ಕಿಗಳು ಮಾತ್ರವೇ. ಮಲ್ಹೋತ್ರಾ ದಂಪತಿ ಇಂದು 300 ಎಕರೆಯಷ್ಟು ಜಾಗದಲ್ಲಿ ಖಾಸಗಿ ಅಭಯಾರಣ್ಯವನ್ನು ರಕ್ಷಿಸಿದ್ದಾರೆ. Save Animal Initiate (SAI) ಎನ್ನುವ ಜಾಗೃತಿ ಮಂತ್ರವೇ, ಅದೇ ಹೆಸರಿನ ಸ್ಯಾಂಕ್ಚುರಿಯಿಂದ ಹಸಿರ ಸ್ವರ್ಗವಾಗಿದೆ.

ಕಾಡಿಗೆ ಕಾಲಿಟ್ಟಾಗ…:
ಅಂದು ಇಲ್ಲಿಗೆ ಕಾಲಿಟ್ಟಾಗ, ಕಣ್ಮನ ಸೆಳೆಯುವ ವಿಲ್ಲಾ ಕಟ್ಟಬಹುದಿತ್ತು; ಮನೆಯ ಹೆಸರಿನಲ್ಲಿ ದೊಡ್ಡ ಬಿಲ್ಡಿಂಗ್‌ ಎದ್ದುನಿಲ್ಲಿಸಲು ಕೈಯಲ್ಲಿ ಕಾಸೂ ಇತ್ತು. ಆದರೆ, ಅಂಥ ವಿಲಾಸಿ ಬದುಕು ಪಮೇಲಾ ದಂಪತಿಗೆ ಬೇಡವಾಗಿತ್ತು. ದೊಡ್ಡ ಕಾಡಿನಲ್ಲಿ ಬೆಚ್ಚಗಿರಲು ಪುಟ್ಟ ಗೂಡು ಸಾಕೆನಿಸಿತು. ಸೂರ್ಯ ಇಣುಕುತ್ತಾ, ಕಾಡೊಳಗೂ ಬಂದ. ಸೋಲಾರ್‌ ದೀಪ ಬೆಳಗಿತು. ರೈತರು ಬಳಸದೆ ಇದ್ದ ಜಮೀನನ್ನು ಸೂಕ್ತ ಹಣ ಕೊಟ್ಟು ಖರೀದಿಸಿ, ಅಭಯಧಾಮ ಸೃಷ್ಟಿಸಿದರು. ಒಂದು ಮರವನ್ನೂ ಕಡಿಯಲಿಲ್ಲ; ದುರುಗುಟ್ಟಿದ ಪ್ರಾಣಿಗಳನ್ನೂ ಓಡಿಸಲಿಲ್ಲ; ಬೇಲಿಯನ್ನೂ ಹಾಕಲಿಲ್ಲ. ಮಳೆ ನೀರು ಕೊಯ್ಲು ಆಯಿತು. ಕಲ್ಲುಭೂಮಿಗೂ ಜೀವಬಂತು. ಮೂರು ಟರ್ಬೈನ್‌ಗಳು ಸಾಕಾಗುವಷ್ಟು ವಿದ್ಯುತ್‌ ಕೊಟ್ಟವು.

ಯೋಗ, ಧ್ಯಾನ, ಆರಾಮ…: ನಸುಕಿನಲ್ಲಿ ಹಕ್ಕಿಗಳ ಗಿಲಕಿಯೇ ನಿದ್ದೆಯಿಂದ ಎಬ್ಬಿಸುತ್ತದೆ. ಪುಟ್ಟ ಪ್ರಾರ್ಥನೆ, ಧ್ಯಾನದಿಂದ ದಿನಾರಂಭ. ಕಾಡಿನ ತಪ್ಪಲಿನಲ್ಲಿ ಚಾರಣ ಮಾಡುತ್ತಾ, ಕೊಳದಲ್ಲಿರುವ ಜಲಚರಗಳನ್ನು ನೋಡುತ್ತಾ, ನದಿಯ ಜುಳುಜುಳುವಿಗೆ ಕಿವಿಗೊಡುತ್ತಾ ಸೂರ್ಯೋದಯ ವೀಕ್ಷಿಸುವುದು ಇವರ ನಿತ್ಯದ ಭಾಗ್ಯ. ಹಸಿರ ನಡುವೆ ಯೋಗ. ತಿಂಡಿ ಪೂರೈಸಿ, ಕೆಲಸಗಾರರೊಟ್ಟಿಗೆ ಆ ದಿನ ಮಾಡಬೇಕಾದ ಕೆಲಸಗಳ ಬಗ್ಗೆ ಚರ್ಚೆ. ಅವರೊಂದಿಗೆ ತಾವೂ ಆಳಾಗಿ ದುಡಿಯುವ ದೊಡ್ಡ ಮನಸ್ಸು.

ಟೆರೇಸಿನ ಮೇಲೆ ನಿಂತರೆ, ಸೂರ್ಯ ತಪ್ಪಲಿನಿಂದ ಜಾರುವ ಕ್ಷಣಗಳು ಪುಳಕ ಹುಟ್ಟಿಸುತ್ತವೆ. ತಾವೇ ಬೆಳೆದ ತರಕಾರಿ- ದಿನಸಿಯಿಂದ ಅಡುಗೆ ಘಮಗುಟ್ಟುತ್ತದೆ. ಅನಾರೋಗ್ಯ, ಹುಷಾರು ತಪ್ಪುವಿಕೆ- ಇಲ್ಲಿ ನಿಷೇಧಕ್ಕೊಳಪಟ್ಟ ಸಂಗತಿಗಳು. ಒಂದು ಕಾಡಿನಲ್ಲಿ ವನ್ಯಮೃಗಗಳು ಹೇಗೆ ಬದುಕುತ್ತವೋ, ಅಂಥದ್ದೇ ವಾತಾವರಣದ ಮರು ನಿರ್ಮಾಣ ಈ ಸ್ಯಾಂಕ್ಚುರಿಯ ಹೆಗ್ಗಳಿಕೆ. ಸಸ್ಯವನ್ನು ಅವಲಂಬಿಸಿರುವ ಪ್ರಾಣಿಗಳಿಗಾಗಿ, ಅಲ್ಲಲ್ಲಿ ಹಲಸಿನ ಮರಗಳಂಥ ವಿವಿಧ ಕಾಡುಹಣ್ಣಿನ ಮರಗಳನ್ನು ಬೆಳೆಸಲಾಗಿದೆ.

ಕಾಡುಪ್ರಾಣಿಗಳು ಆಹಾರವನ್ನರಸಿ ನಾಡಿಗೆ ಹೋಗಿ, ರೈತರ ಕೃಷಿ ಚಟುವಟಿಕೆಗೆ ಅಡ್ಡಿಪಡಿಸಬಾರದೆಂದು, ಆರಂಭದಲ್ಲಿ ಇಡೀ ಕಾಡನ್ನೇ ಫ‌ುಡ್‌ ಐಲ್ಯಾಂಡ್‌ ಆಗಿ ರೂಪಿಸಲಾಗಿತ್ತು. ಪ್ರಾಣಿಗಳಿಗೆ ಸಾಯಿ ಸ್ಯಾಂಕ್ಚುರಿ ಜತೆಗೆ ಅಟ್ಯಾಚ್‌ ಬೆಳೆದಿದ್ದೇ ಈ ಕಾರಣದಿಂದ. ಮಾಂಸಾಹಾರಿ ಪ್ರಾಣಿಗಳು, ಅವುಗಳ ಆಹಾರವನ್ನು ಅವುಗಳೇ ಬೇಟೆಯಾಡಿದವು. “ಪ್ರಾಣಿಗಳಿಂದ ಇದುವರೆಗೂ ಯಾವುದೇ ತೊಂದರೆಯಾಗಿಲ್ಲ’ ಎನ್ನುತ್ತಾರೆ ಪಮೇಲಾ. ಹೊರ ಪ್ರಪಂಚದಿಂದ ದೂರವುಳಿದು, ಸಕಲ ಖುಷಿಯನ್ನೂ ಕೊಡುತ್ತಿರುವ ಕಾಡೇ ದೊಡ್ಡ ಪ್ರಪಂಚ ಎನ್ನುವ ಭಾವ ಅವರ ಕಣ್ಣಲ್ಲಿತ್ತು.

ಕಾಡಿನ ಸದಸ್ಯರು ನಾವು…
-ಅಪರೂಪದ ಸಸ್ಯ, ಮರಗಳು
-ಬಂಗಾಳಿ ಹುಲಿ, ಚಿರತೆ, ಏಷ್ಯಾ ಆನೆಗಳು, ನೀಲಗಿರಿ ಲಂಗೂರ್‌, ಕಾಡೆಮ್ಮೆ…
-ಪುನುಗು ಬೆಕ್ಕುಗಳು, ಹಾವುಗಳು, ಅಳಿವಿನಂಚಿನಲ್ಲಿರುವ ಮಾರ್ಟಿನ್‌, ಸಾಂಬಾರ್‌, ಜಿಂಕೆಗಳು, ಚಿಟ್ಟೆಗಳು…
-305ಕ್ಕಿಂತಲೂ ಹೆಚ್ಚು ಪ್ರಭೇದದ ಹಕ್ಕಿಗಳು…

ಸಿಸಿ ಕ್ಯಾಮೆರಾದ ಕಣ್ಗಾವಲು
-16 ಸಿಸಿ ಕ್ಯಾಮೆರಾಗಳನ್ನು ಈ ಕಾಡಿನ ಅಲ್ಲಲ್ಲಿ ಅಳವಡಿಸಲಾಗಿದೆ.
-ಮರಗಳ್ಳರು, ಕಾಡುಪ್ರಾಣಿ ಬೇಟೆಗಾರರು ಅತಿಕ್ರಮವಾಗಿ ಪ್ರವೇಶಿಸಲು ಸಾಧ್ಯವಿಲ್ಲ.
-ಪಮೇಲಾ ದಂಪತಿಯ ಪರಿಸರ ಕಾಳಜಿಗೆ ಅರಣ್ಯ ರಕ್ಷಕರ ಬೆಂಬಲವೂ ಇದೆ.

ನಮ್ಮ ಸ್ಯಾಂಕ್ಚುರಿಯಲ್ಲಿ ಎಲ್ಲವನ್ನೂ ಪ್ರಕೃತಿಯೇ ಕೊಡುತ್ತದೆ. ಪ್ರಾಣಿಗಳಿಗೆ ನಾವೇನೂ ವಿಶೇಷವಾಗಿ ಕೊಡುತ್ತಿಲ್ಲ.
-ಪಮೇಲಾ, ನ್ಯೂಜೆರ್ಸಿ ಮೂಲ

* ರಜನಿ ಭಟ್‌

ಟಾಪ್ ನ್ಯೂಸ್

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

ಕಾಂಗ್ರೆಸ್ ಸರಕಾರ ಬಂದಾಗಿನಿಂದ ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಾಗಿದೆ: ಜೋಶಿ

Apex

CAA: ದೇಶದಲ್ಲಿ ಸಿಎಎ ಜಾರಿಗೆ ತಡೆ ನೀಡಲ್ಲ, 3 ವಾರದೊಳಗೆ ಉತ್ತರ ನೀಡಿ: ಸುಪ್ರೀಂಕೋರ್ಟ್

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!

ವಸಂತ ಕಾಲ ಬಂದಾಗ…ತಾಪಮಾನ ಏರಿಕೆ- ಭಾರತದಲ್ಲಿ ವಸಂತ ಋತು ಕಣ್ಮರೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

Yadgiri: ಜೆಡಿಎಸ್ ಪಕ್ಷಕ್ಕೆ ಅಂಗಲಾಚುವ ಸ್ಥಿತಿ ಬಂದಿಲ್ಲ… ಶಾಸಕ‌ ಕಂದಕೂರು

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

ಇಂಡಿಯನ್ ಆಯಿಲ್ ಕಂಪನಿಗೆ ನಿರ್ದೇಶಕರಾಗಿ (ಎಚ್‌ಆರ್) ರಶ್ಮಿ ಗೋವಿಲ್ ಅಧಿಕಾರ ಸ್ವೀಕಾರ

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

OTT: ಸದ್ದಿಲ್ಲದೆ ಓಟಿಟಿಗೆ ಬಂತು ʼಒಂದು ಸರಳ ಪ್ರೇಮಕಥೆ’: ಯಾವುದರಲ್ಲಿ ಸ್ಟ್ರೀಮಿಂಗ್?‌

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

Lok Sabha 2024: ಮೇಘಾಲಯದಲ್ಲಿ ಯಾವಾಗ ಜಾನ್‌ ಎಫ್‌ ಕೆನಡಿ ಹಿಟ್ಲರ್‌ ನನ್ನು ಬಂಧಿಸಿದ್ದು!

17

ನಿರ್ಮಾಪಕನಾದ ರಾಜಮೌಳಿ ಪುತ್ರ: ಎರಡು ಹೊಸ ಸಿನಿಮಾ ಅನೌನ್ಸ್; ಲೀಡ್‌ ರೋಲ್ ನಲ್ಲಿ ಫಾಫಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.