ಸಿಟಿ ಸೇರಿದ ಸೀತೆಯರು
"ಯಾಕ್ರೇ, ಬೆಂಗಳೂರು ಹುಡುಗನೇ ಬೇಕಾ ನಿಮಗೆಲ್ಲಾ?'
Team Udayavani, Mar 7, 2020, 6:11 AM IST
ನಾಳೆ (ಮಾ.8) ಅಂತಾರಾಷ್ಟ್ರೀಯ ಮಹಿಳಾ ದಿನ. ಹೆಣ್ಣಿಗೆ ಈ ದಿನ ಏನೋ ಸಂಭ್ರಮ. ಆದರೆ, ಬೆಂಗಳೂರಿನ ಸ್ತ್ರೀಯರಿಗೆ ನಿತ್ಯವೂ ಮಹಿಳಾ ದಿನವೇ. ಒಂದರ್ಥದಲ್ಲಿ ಇವರೆಲ್ಲ ಅದೃಷ್ಟವಂತರು. ಯಾಕೆ ಗೊತ್ತೇ?
“ಅಕ್ಕಿ ಅನ್ನಾ, ಚಿಕ್ಕಿ ಸೀರೀ, ಮಕ್ಕೀ ಮಾಲೀ… ಬೆಂಗಳೂರಿನ ಹೆಣ್ಣು ಮಕ್ಕಳು ಅಂದ್ರ ಇಷ್ಟ ನೋಡು. ಪುಣ್ಯವಂತರು ಅವರು. ಏನ್ಯಾಕ ಆಗಲೀ ನಿನ್ನ ಮಗಳನ ಬೆಂಗಳೂರು ವರಕ್ಕೇ ಮದಿವಿ ಮಾಡಿ ಕೊಡು… ಇಪ್ಪತ್ತೈದು ವರ್ಷದ ಹಿಂದೆ ಬೆಂಗಳೂರಿನಿಂದ ಬಂದಿದ್ದ ತನ್ನ ಓರಗಿತ್ತಿಯನ್ನು ಓರೆನೋಟದಲ್ಲಿ ನೋಡುತ್ತಾ ಅಜ್ಜಿ, ಅಪ್ಪನಿಗೆ ಹೇಳುತ್ತಿದ್ದರೆ, ನಾನು ಮುಸಿಮುಸಿ ನಗುತ್ತಿದ್ದೆ. “ಅಜ್ಜೀ ಹಂಗಂದರೇನ..?’ ಅಂದ್ರೆ ಸಾಕು, ಬೆಂಗಳೂರಿನ ಹೆಂಗಸರ ಕುರಿತಾದ ಅವಳ ಹೊಟ್ಟೆ ಕಿಚ್ಚು ಪ್ರಕಟವಾಗುತ್ತಿತ್ತು.
“ಅವ್ವಾ , ಏನ ಕೇಳತೀ ಬೆಂಗಳೂರು ಹೆಣಮಕ್ಕಳ ಸುಖಾ? ನಮ್ಮಂಗ ಒಲೀ ಊದಬೇಕಾಗಿಲ್ಲಾ, ಸ್ಟೋದ ಮ್ಯಾಲೆ ಅಡಿಗಿ ಅವರದು. ಬುಟ್ಟಿಗಟ್ಟಲೇ ಭಕ್ರೀ ಬಡಿಯೋದಿಲ್ಲಾ. ಉಡಸಾರಣಿ, ಉಪಗಾರಣಿ ಇಲ್ಲಾ, ಬಾವೀ ನೀರೂ ಸೇದಂಗಿಲ್ಲಾ. ಗಿರ್ರಂತ ನಳಾ ತಿರವಿದರ ಭರ್ರಂತ ನೀರಂತ… ಅಡಿಗಿಮನಿ, ಬಚ್ಚಲಾ, ಪಾಯಖಾನಿ ಎಲ್ಲಾ ಕಡೆ ನೀರ ಬರತದಂತ. ಸೆಗಣಿ ನೆಲ ಸಾರಸೋ ಕೆಲಸ ಸೈತ ಇಲ್ಲಂತ. ಸಿಮೆಂಟ್ ನೆಲ’.
“ಹೌದೇನರೀ ಇಂದಿರಾಬಾಯೀ… ಅವ್ವಾ ತಾಯೀ, ಏನ ಪುಣ್ಯಾ ಮಾಡ್ಯಾರವಾ ಬೆಂಗಳೂರು ಹೆಣಮಕ್ಕಳೂ…’ ಏಕಾದಶಿ ಭಜನೆಗೆ ಬಂದಿದ್ದ ಅಜ್ಜಿಯ ಗೆಳತಿಯರ ಗ್ಯಾಂಗು ಏಕಸಮಾನವಾಗಿ ಬಾಯಿಯ ಮೇಲೆ ಬೆರಳಿಡುತ್ತಿತ್ತು. “ಹೂಂರೆವಾ. ಮುಂಜಾನೆ ಆತಂದರ ಗಂಡಸೂರು ದುಡೀಲಿಕ್ಕ ಹೊರಗ ದೂರದೂರ ಯಾವ್ಯಾವೋ ಫ್ಯಾಕ್ಟರೀಗೆ ಹೋಗಿ ಬಿಡತಾರಂತ. ಮುಂಜಾನೆದ್ದು ಚಿಕ್ಕಿ ಸೀರಿ ಉಟಗೊಂಡು ತಯಾರಾಗಿ, ಒಂದ ಅನ್ನಾ ಮಾಡಿ ಹಾಕಿ, ಗಂಡಂದರನ ಅಟ್ಟಿದರಂದರ ಸಂಜೀ ತನಕ ಹೆಣಮಕ್ಳದ ರಾಜ್ಯಾ.
ಹಿತ್ತಲದಾಗ ಮಾವಿನಗಿಡದ ಬುಡಕ ಆನಕೊಂಡು ಕೂತು, ರೇಡಿಯೋ ಹಚಗೊಂಡು, ಕಾದಂಬರಿ ಓದಿದ್ದೇ ಓದಿದ್ದು. ಸಂಜೀಕ ಗಂಡ ಬರೋದರಾಗ ಹೆಳ್ಳು, ಮಾರಿ ಮಾಡಕೊಂಡು ಮಗ್ಗೀ ಮಾಲೀ ಹಾಕ್ಕೊಂಡು, ಉಡುಪಿ ಹೊಟೇಲಿಗೆ ದ್ವಾಶೀ ತಿನಲಿಕ್ ಹೋಗತಾರಂತ ಇಬ್ಬರೂ. ವಾರಾ ವಾರಾ ಸಿನೇಮಾ ಬ್ಯಾರೇ’, ಕೇಳುತ್ತಿದ್ದ ಅಜ್ಜಿಯ ಗೆಳತಿ ಲತಕ್ಕ ಬಾಯಿಯ ಮೇಲೆ ಸೆರಗಿಟ್ಟು ಬಿಕ್ಕಿದ್ದೂ ಆಗಿತ್ತು.
ಲತಕ್ಕನಿಗೆ ಮನೆತುಂಬ ಜನ, ಆಳುಕಾಳು… ಎಲ್ಲ ಕೆಲಸ ಮಾಡುವಷ್ಟರಲ್ಲಿ ಲತಕ್ಕನ ಹಸಿವೇ ಇಂಗಿ ಹೋಗಿರುತ್ತಿತ್ತು. ಇನ್ನು ಶೃಂಗಾರದ ನೆನಪೆಲ್ಲಿ ಆಗಬೇಕು ಆಕೆಗೆ? ನಾಲ್ಕು ಮಕ್ಕಳ ನಂತರ ಬತ್ತಿದ ಮುಖ, ಸೀಳಿದ ಹಸ್ತಪಾದಗಳು ಗಂಡನಲ್ಲಿ ಯಾವ ಆಸಕ್ತಿಯನ್ನೂ ಹುಟ್ಟಿಸುವ ಹಾಗಿರದ ಕಾರಣ, ಪ್ರಣಯಪ್ರಸಂಗಗಳಂತೂ ಆಕೆಗೆ ಮರೆತೇ ಹೋಗಿದ್ದವು. ಅಂತಹುದರಲ್ಲಿ ಚಿಕ್ಕಿ ಸೀರೀ, ಮಗ್ಗೀ ಮಾಲೀ, ಗಂಡನ ತೋಳು ಹಿಡಿದು ಮಸಾಲೆ ದೋಸೆ ತಿನ್ನಲು ಹೋಗುವ ಸುಖ ನೆನೆಸಿ, ಆಕೆಗೆ ಕಣ್ಣೀರು ಬಂದದ್ದು ಸಹಜವೇ ಆಗಿತ್ತು. “ಅಯ್ಯೋ ಕಡಿಗಿ, ಮುಟ್ಟು ಸೈತ ಕೂಡೋ ಕಿರಿಕಿರಿ ಇಲ್ಲಂತರೆವಾ ಬೆಂಗಳೂರಾಗ.
ಆರಾಂ ಶೀರ ಸಾನಾ ಮಾಡಿ ಒಳಗ ಬಂದು, ಬೇಕಾದ್ದು ಮಾಡಿಕೊಂಡು ತಿಂತಾರಂತ. ಗಾದಿ ಮ್ಯಾಲೆ ಮಕ್ಕೋತಾರಂತ…’ ಇದಂತೂ ಹಿತ್ತಲಿನ ಗಿಡದಲ್ಲಿ ಬಂಗಾರ ಬೆಳೆಯುತ್ತಿದೆ ಎಂಬಷ್ಟು ಅಚ್ಚರಿಯ ಸಂಗತಿ ಎಲ್ಲರಿಗೂ. ಮೂರು ದಿನದ ಮೂಲೆ, ಬೋರಲು ಹಾಕಿದ ಚೊಂಬು, ಮಲಗುವ ಗೋಣಿತಟ್ಟು, “ಎಷ್ಟು ಸರೀ ನೀರು ಹಾಕಬೇಕು ನಿನಗೆ..?’ ಗೊಣಗುವ ಗಂಡಸರು. ಈಗಂತೂ ಎಲ್ಲರೂ ತಮ್ಮ ತಮ್ಮ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟರೆ ಬೆಂಗಳೂರಿಗೇ ಎಂದು ನಿರ್ಧರಿಸಿಬಿಟ್ಟಿದ್ದರು.
ಆದಾಗಿ ಇಪ್ಪತ್ತೈದು ವರ್ಷ. ಈಗ ಎಲ್ಲ ಊರುಗಳಲ್ಲಿ ಅನುಕೂಲಗಳಾಗಿವೆ. ಹೆಣ್ಣು ಮಕ್ಕಳು ಒರಳು ಕಲ್ಲು, ಬಟ್ಟೆ ಒಗೆಯೋ ಕಲ್ಲು ಬಿಟ್ಟು, ಯಾವುದೋ ಕಾಲವಾಗಿದೆ. ಎಲ್ಲರ ಮನೆಗಳಲ್ಲೂ ನಲ್ಲಿಗಳಲ್ಲಿ ನೀರು ಬಂದೇ ಬರುತ್ತದೆ. ಈಗಿನ ಕಾಲದಲ್ಲಿ ಬೆಂಗಳೂರು ಹೆಣ್ಣು ಮಕ್ಕಳಂತೆಯೇ ಎಲ್ಲ ಕಡೆಯೂ ಹೆಣ್ಣು ಮಕ್ಕಳು ಸುಖವಾಗಿಯೇ ಇದ್ದಾರೆ ಎಂದೇ ಅನಿಸುತ್ತಿತ್ತು. ಬಹುಶಃ ಈಗ ಬೆಂಗಳೂರಿನ ಹೆಣ್ಣು ಮಕ್ಕಳು ಪುಣ್ಯವಂತರು ಎನ್ನುವ ಭಾವ, ಬೇರೆ ಊರಿನ ಹೆಂಗಸರಿಗೆ ಇರಲಿಕ್ಕಿಲ್ಲ ಎಂದುಕೊಂಡಿದ್ದೆ.
ಆದರೆ, ಮೊನ್ನೆ ಚಿಕ್ಕಮ್ಮನ ಅಳಲು ಈ ಎಲ್ಲ ನಂಬಿಕೆಯನ್ನು ಬುಡಮೇಲು ಮಾಡಿತು. ಗುಲ್ಬರ್ಗದಲ್ಲಿ ಬ್ಯಾಂಕ್ ಕೆಲಸದಲ್ಲಿದ್ದ ಆಕೆಯ ಮಗನಿಗೆ ಹೆಣ್ಣೇ ಸಿಗುತ್ತಿಲ್ಲ. ಕಾರಣ, ಎಲ್ಲಾ ಹುಡುಗಿಯರಿಗೂ ಬೆಂಗಳೂರು ವರನೇ ಬೇಕು. ಇತ್ತೀಚೆಗೆ ಮದುವೆ ಸಮಾರಂಭದಲ್ಲಿ ಹುಡುಗಿಯರ ಗುಂಪನ್ನು ಕಿಚಾಯಿಸುತ್ತಾ, “ಯಾಕ್ರೇ ಬೆಂಗಳೂರು ಹುಡುಗನೇ ಬೇಕಾ ನಿಮಗೆಲ್ಲಾ?’ ಎಂದು ಕೇಳಿದೆ. “ಹೂಂ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದ ಹುಡುಗರು ಸಂಭಾವಿತರು. ಹೆಂಗಸರನ್ನು ತುಂಬಾ ಮರ್ಯಾದೆಯಿಂದ ನಡೆಸಿಕೊಳ್ಳುತ್ತಾರೆ.
ಹಿರಿಯರೂ ಅಷ್ಟೇ. ವಿಶಾಲ ಮನೋಭಾವ. ಕಿರಿಕಿರಿ ಮಾಡಲ್ಲ. ಎಲ್ಲ ಅನುಕೂಲ ಇರತ್ತೆ. ನಮ್ಮೂರಲ್ಲಿ ನಲ್ಲಿ ಇದ್ದರೂ ವಾರಕ್ಕೊಮ್ಮೆ ನೀರು. ಬೇಸಿಗೆ ಬಂದ್ರೆ ನೀರು ಹೊತ್ತು, ಹೊತ್ತು ಸೊಂಟ ಬೀಳತ್ತೆ. ಆಮೇಲೆ ತಣ್ಣನೆ ಹವೆ. ಅದಂತೂ ಎಲ್ಲೂ ಸಿಕ್ಕಲ್ಲ. ಆದ್ರೆ ಮಾಡು, ಇಲ್ಲಾ ಆಚೆ ತಿಂದ್ಕೋಂಡು ಹಾಯಾಗಿರು… ಅದಕ್ಕೇ ಬೆಂಗಳೂರು ಹುಡುಗನೇ ಬೇಕು ನಮಗೆ’ ಅಂದ್ರು. ನಸುನಕ್ಕು ಸುಮ್ಮನಾದೆ. ಸುಖ ಅನ್ನುವುದು ಅತ್ಯಂತ ವ್ಯಕ್ತಿನಿಷ್ಠ ವಿಷಯ.
ಅಂತಹುದರಲ್ಲಿ ಬೆಂಗಳೂರು ಆಗಿನಿಂದ ಈಗಿನವರೆಗೂ ಇಷ್ಟು ಜನ ಹುಡುಗಿಯರ ಕನಸಿನ ನಗರವಾಗಿದೆ ಎಂಬ ವಿಷಯ ನಿಜಕ್ಕೂ ಅಚ್ಚರಿಯ ಸಂಗತಿ. ಹೌದು, ಅಕ್ಕೀ ಅನ್ನ, ಚುಕ್ಕಿಯ ಸೀರೆ, ಹಿತವಾದ ದುಂಡು ಮಲ್ಲಿಗೆ ಮಾಲೆ, ತೋಟಗಳ ವಿಹಾರ, ಹೆಂಗಸರ ಕನಸನ್ನರಿತು ನಡೆಯುವ ಮೃದು ಸ್ವಭಾವದ ಗಂಡಸರು… ಹೌದು,ಬೆಂಗಳೂರಿನ ಹೆಣ್ಣು ಮಕ್ಕಳು ನಿಜಕ್ಕೂ ಪುಣ್ಯವಂತರೇ.
* ದೀಪಾ ಜೋಶಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ
Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ
ಸೂಪರ್ ಸ್ಟಾರ್ ಮೋಹನ್ ಲಾಲ್ ಭೇಟಿಯಾದ ರಿಷಬ್: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!