ಸಾಹಿತ್ಯದಿಂದ ಸಮಾಜಸೇವೆ
Team Udayavani, Oct 27, 2018, 12:31 PM IST
ಸಾಹಿತ್ಯ ಸೇವೆ ಕೆಲವರಿಗೆ ಹವ್ಯಾಸವಾದರೆ, ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡವರು ಹಲವರು. ಸಾಹಿತ್ಯ ಸೇವೆಯ ಮೂಲಕ ಸಮಾಜಸೇವೆ ಮಾಡುತ್ತಿರುವವರು ಕೆಲವರೆಂದೇ ಹೇಳಬಹುದು. ಅಂಥವರಲ್ಲಿ ನಾಗವೇಣಿಯವರೂ ಒಬ್ಬರು. ಪುಸ್ತಕ ಪ್ರಕಟಣೆಯ ಜೊತೆಗೊಂದು ಸಾಮಾಜಿಕ ಕಾಳಜಿಯ ಆಶಯ ಇಟ್ಟುಕೊಂಡವರವರು. ತಮ್ಮ ಪುಸ್ತಕಗಳ ಮಾರಾಟದಿಂದ ಬರುವ ಹಣವನ್ನು ಬೆಂಗಳೂರಿನ ಹನುಮಂತನಗರದ ಡಯಾಲಿಸಿಸ್ ಕೇಂದ್ರದಲ್ಲಿರುವ ಬಡ ರೋಗಿಗಳಿಗೆ ನೀಡುತ್ತಾ ಬಂದಿದ್ದಾರೆ.
ನಾಗವೇಣಿಯವರ “ಸಾಹಿತ್ಯದಿಂದ ಸಮಾಜ ಸೇವೆ’ಯ ಪರಿಕಲ್ಪನೆಗೆ ಓದುಗರಿಂದ ಉತ್ತಮ ಸ್ಪಂದನೆ ದೊರೆತಿದೆ. ಇಲ್ಲಿಯ ತನಕ ಪುಸ್ತಕ ಮಾರಾಟದಿಂದ ಬಂದ ಸುಮಾರು ಒಂದೂ ಕಾಲು ಲಕ್ಷ ರೂ. ಹಣವನ್ನು ರೋಗಿಗಳಿಗೆ ನೀಡಿದ್ದಾರೆ. ತಮ್ಮ ಸಾಹಿತ್ಯದಿಂದ ಸಮಾಜಸೇವೆಯ ಉದ್ದೇಶ, ಇತರ ಲೇಖಕಿಯರಿಗೂ ಸ್ಫೂರ್ತಿಯಾಗಲಿ ಎಂಬ ಆಶಯ ಅವರದು.