ಸಾವಯವ ಟೆರೇಸ್ ಗಾರ್ಡನಿಂಗ್ ಕಲಿಯಬೇಕೆ?
Team Udayavani, Jan 28, 2017, 4:35 PM IST
ಮಹಾನಗರಗಳಲ್ಲಿ ಬದುಕುವ ಎಲ್ಲರಿಗೂ ತಾವು ತಿನ್ನುತ್ತಿರುವ ತರಕಾರಿಗಳ ಬಗೆಗೆ ಸಣ್ಣದೊಂದು ಅನುಮಾನ ಇದ್ದೇ ಇರುತ್ತದೆ. ಇದಕ್ಕೆ ಏನು ರಾಸಾಯನಿಕ ಹಾಕಿರಬಹುದು ಎಂಬ ಅನುಮಾನವಿದ್ದರೂ ಅದೇ ತರಕಾರಿಗಳನ್ನು ಬಳಸದೇ ಬೇರೆ ದಾರಿ ಇಲ್ಲ. ಹಾಗಂತ ತುಂಬಾ ಜನ ಅಂದುಕೊಂಡಿರುತ್ತಾರೆ. ಆದರೆ ಬೇರೆ ದಾರಿ ಇದೆ ಅಂತ ಹಿರಿಯ ಕೃಷಿ ವಿಜ್ಞಾನಿ ಡಾ. ಬಿ ನಾರಾಯಣ್ ವಿಶ್ವನಾಥ್ ತೋರಿಸಿಕೊಟ್ಟಿದ್ದಾರೆ. ಅವರು ತೋರಿಸಿರುವ ದಾರಿ ಸಾವಯವ ಟೆರೇಸ್ ಗಾರ್ಡನಿಂಗ್.
ಏನಿದು ಟೆರೇಸ್ ಗಾರ್ಡನಿಂಗ್?
ನೀವು “ಹೌ ಓಲ್ಡ್ ಆರ್ ಯೂ’ ಅನ್ನೋ ಮಲಯಾಳಂ ಸಿನಿಮಾ ನೋಡಿದ್ದರೆ ಅದರಲ್ಲಿ ನಾಯಕಿ ರಾಸಾಯನಿಕ ಬಳಸಿದ ತರಕಾರಿಗಳನ್ನು ಬಳಸಬಾರದು ಅಂತ ನಿರ್ಧರಿಸಿಕೊಂಡು ತನ್ನ ಮನೆಯ ಟೆರೇಸಲ್ಲಿ ತರಕಾರಿ ಬೆಳೆಯುತ್ತಾಳೆ. ತಮಗೆ ಬೇಕಾದಷ್ಟು ತರಕಾರಿಗಳನ್ನು ಬೆಳೆಯುವುದಲ್ಲದೇ ಎಲ್ಲರಿಗೂ ಆ ಐಡಿಯಾ ಹಂಚುತ್ತಾಳೆ. ತುಂಬಾ ಮೊದಲೇ ಆ ಐಡಿಯಾ ಹುಡುಕಿದವರು ನಮ್ಮ ವಿಜ್ಞಾನಿ ಬಿಎನ್ ವಿಶ್ವನಾಥ್ ಅವರು.
ಈ ಐಡಿಯಾ ಹುಟ್ಟಿಕೊಂಡಿದ್ದು ಹೇಗೆ ಅಂತ ಕೇಳಿದರೆ ಅದಕ್ಕೆ ಅವರು ಹೇಳುವುದು ಹೀಗೆ-
“ಬೆಂಗಳೂರು ಬೆಳೆದಂತೆ ಹಸಿರು ಕಡಿಮೆಯಾಗಿದೆ. ಅದರ ಜೊತೆಗೆ ಶುದ್ಧ ತರಕಾರಿಗಳು ಸಿಗುವುದೂ ಕಡಿಮೆಯಾಗಿದೆ. ರಾಸಾಯನಿಕ ತಿಂದು ಬದುಕಬೇಕಾದ ಪರಿಸ್ಥಿತಿ ಬಂದೊದಗಿದೆ. ಅದನ್ನು ತಪ್ಪಿಸಲೆಂದೇ ಈ ಟೆರೇಸ್ ಗಾರ್ಡನಿಂಗ್ ಅನ್ನು ಶುರು ಮಾಡಿದೆ.’
ನೀವೂ ಕಲಿಯಬಹುದು
ನಾರಾಯಣ್ ವಿಶ್ವನಾಥ್ ಅವರು ತಾವು ಟೆರೇಸ್ ಗಾರ್ಡನಿಂಗ್ ಮಾಡುವುದಷ್ಟೇ ಅಲ್ಲ. ಅನೇಕರಿಗೆ ಟೆರೇಸ್ ಗಾರ್ಡನಿಂಗ್ ತರಬೇತಿ ಕೊಟ್ಟಿದ್ದಾರೆ. ಇವರ ಬಳಿ ತರಬೇತಿ ಪಡೆದ ಹಲವಾರು ಮಂದಿ ತಮ್ಮ ಟೆರೇಸಲ್ಲಿ ಸಾವಯವ ಗಾರ್ಡನಿಂಗ್ ಮಾಡುತ್ತಿದ್ದಾರೆ. ಟೊಮೆಟೋ, ಬೀನ್ಸ್, ಮೆಣಸು ಹೀಗೆ ಅನೇಕ ತರಕಾರಿಗಳನ್ನು ಬೆಳೆಯುತ್ತಾರೆ. ಆ ಮೂಲಕ ತಮಗೆ ಬೇಕಾದ ತರಕಾರಿಗಳನ್ನು ತಾವೇ ಬೆಳೆಸಿಕೊಳ್ಳುತ್ತಾರೆ. ನಿಮಗೆ ಆಸಕ್ತಿ ಇದ್ದರೆ ನೀವೂ ಇವರ ಬಳಿ ತರಬೇತಿ ಪಡೆಯಬಹುದು. ಹೇಗೆ ಸಾವಯವ ಗಾರ್ಡನಿಂಗ್ ಮಾಡುವುದು ಎಂಬುದರ ಬಗ್ಗೆ ಇವರು ಒಂದು ದಿನದ ತರಬೇತಿ ಕಾರ್ಯಾಗಾರ ನಡೆಸುತ್ತಾರೆ. ಅವರು ಬರೆದ ಪುಸ್ತಕ, ಟೆರೇಸ್ ಗಾರ್ಡನಿಂಗ್ಗೆ ಗಿಡ ಮತ್ತಿತರ ಮೆಟೀರಿಯಲ್ಗಳನ್ನು ಒದಗಿಸುತ್ತಾರೆ. ಇವರ ಜೊತೆ ಟೆರೇಸ್ ಗಾರ್ಡನಿಂಗ್ ತಜ್ಞ ರಾಜೇಂದ್ರ ಕೂಡ ಇರುತ್ತಾರೆ. ಯಾವಾಗ ಕಾರ್ಯಾಗಾರ ನಡೆಸುತ್ತಾರೆ ಎಂಬೆಲ್ಲಾ ಮಾಹಿತಿಯನ್ನು ಅವರಿಗೆ ಫೋನ್ ಮಾಡಿ ತಿಳಿದುಕೊಳ್ಳಬಹುದು.
ಸಂಪರ್ಕ- 9448624528, 9845627217
ಫೀಸು- 1500 ರೂ.
ಫೇಸ್ಬುಕ್- https://www.facebook.com/viswanath.b.narayan