ಶಭಾಷ್ ಸುಭಾಷ್ : ಬರಡು ನೆಲದಲ್ಲಿ ಬಂಗಾರದ ಬೆಳೆ
Team Udayavani, May 30, 2017, 1:32 AM IST
ಬರಡು ಭೂಮಿಯಲ್ಲಿ ಬಂಗಾರದ ಬೆಳೆ ತೆಗೆದು ಪ್ರತಿವರ್ಷ ಲಕ್ಷ ಲಕ್ಷ ಹಣ ಗಳಿಸುವ ಮೂಲಕ ಇನ್ನಿತರ ರೈತರಿಗೆ ಮಾದರಿಯಾದವರು ಬಸವನಬಾಗೇವಾಡಿ ಪಟ್ಟಣದ ನಿವಾಸಿ ಸುಭಾಸ ಶಿವಪ್ಪ ಪೂಜಾರಿ. ಇವರಿಗೆ ಬರದ ಬಿಸಿ ತಟ್ಟೇ ಇಲ್ಲ. ಕಾರಣ, ಎರಡು ಎಕರೆಯ ತುಂಬಾ ಸಮ್ಮಿಶ್ರ ಬೆಳೆ ಇದೆ. ಬಾಳೆ, ನಿಂಬೆ, ಹೀರೆ, ಸೌತೆ ಹೀಗೆ ಒಂದಾ, ಎರಡಾ ಇವರಿಗೆ ಆದಾಯ ಮೂಲಗಳು?
1 ಎಕರೆ 20 ಗುಂಟೆಯಲ್ಲಿ ಬಾಳೆ, ಲಿಂಬೆ ಗಿಡಗಳ ಮಧ್ಯ ಭಾಗದಲ್ಲಿ ಹೀರೆ, ಸೌತೆ, ಬದನೆ, ಟೊಮೆಟೊ, ಈರುಳ್ಳಿ ಸೇರಿದಂತೆ ವಿವಿಧ ತರಕಾರಿ ಬೆಳೆಯುತ್ತಿದ್ದಾರೆ. ಇದರಿಂದ ವರ್ಷದ ಆದಾಯ 4ಲಕ್ಷ ದಾಟುತ್ತದೆ. ಕೆಲವರು ನಿಂಬೆ ನಾಟಿ ಮಾಡಿ ಮೂರು ವರ್ಷ ಕಾಯುತ್ತಾರೆ. ಆದರೆ ಸುಭಾಸ ಕಾಯೋದು ಏಕೆ ಅಂತ ಬಾಳೆ ನಾಟಿ ಮಾಡಿದರು. ಹೀಗಾಗಿ ವರ್ಷದಲ್ಲೇ ಬಂಪರ್ ಬೆಳೆ ತೆಗೆದಿದ್ದಾರೆ.
ಬೆಳೆಯೋದು ಹೀಗೆ
10 + 10 ಅಡಿಗೆ 1ರಂತೆ ಬಾಳೆ ಗಿಡವನ್ನು, 20+20 ಅಡಿಗೆ 1 ರಂತೆ ಲಿಂಬೆ ಗಿಡಗಳನ್ನು ನಾಟಿ ಮಾಡಿದ್ದಾರೆ. ಇದರ ಮಧ್ಯದಲ್ಲಿ ವಿವಿಧ ತರಕಾರಿಗಳನ್ನು ಬೆಳೆಯುತ್ತಿದ್ದಾರೆ. ಇದರ ಜೊತೆಯಲ್ಲೇ ತಮ್ಮ 2 ಎಕರೆ ಭೂಮಿಯ ಸುತ್ತಲೂ 15+15 ಅಡಿಗೆ ಒಂದು ತೆಂಗಿನ ಮರವನ್ನು ಬೆಳೆಸಿದ್ದಾರೆ. ಇದರ ಮಧ್ಯ ಭಾಗದಲ್ಲಿ ಪೇರಲೆ, ಚಿಕ್ಕು, ಪಪ್ಪಾಯಿ ಹೀಗೆ ಇನ್ನಿತರ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ್ದಾರೆ. 1 ಎಕರೆ 20 ಗುಂಟೆಯಲ್ಲಿ 650 ಬಾಳೆ, 170ನಿಂಬೆ ಗಿಡಗಳಿವೆ. ಜಮೀನಿನ ಸುತ್ತಲೂ 160 ತೆಂಗಿನ ಮರಗಳಿವೆ.
ಮೊದಲು ಈ ಭೂಮಿ ಬರಿ ಕಲ್ಲು ಬಂಡೆಯಾಗಿತ್ತು. ಒಂದು ವರ್ಷದ ಕಾಲ ಹದ ಮಾಡಿ, ಕಲ್ಲುಗಳನ್ನು ಬೇರೆ ಕಡೆ ಹಾಕಿ, ಇದಕ್ಕೆ ಕೆರೆಯ ಕಪ್ಪು ಮಣ್ಣನ್ನು ಹಾಕಿದರು. ಆಮೇಲೆ ಬಾಳೆ, ಲಿಂಬೆ, ತೆಂಗು ಗಿಡಗಳನ್ನು ನೆಡಲು ಮುಂದಾದವರು. ‘ಮೊದಲು ಬಾಳೆ, ಲಿಂಬೆ, ತೆಂಗನ್ನು ನಾಟಿ ಮಾಡಲು 50 ರಿಂದ 60 ಸಾವಿರ ಖರ್ಚಾಗಿದೆ. ಒಂದು ಕೊಳವೆ ಬಾವಿಯಿಂದ ಹನಿ ನೀರಾವರಿ ಮಾಡಿದ್ದೇನೆ. ಇದರಿಂದ ಬಿರು ಬೇಸಿಗೆಯಲ್ಲಿ ಕೂಡಾ ನೀರಿನ ಸಮಸ್ಯೆ ಉದ್ಬವಿಸುವುದಿಲ್ಲ’ ಎನ್ನುತ್ತಾರೆ ಸುಭಾಸ್.
ಬೆಳೆಗಳಿಗೆ ರಾಸಾಯನಿಕ ಗೊಬ್ಬರ ಬಳಕೆ ಸಂಪೂರ್ಣ ನಿಷೇಧ. ಪ್ರತಿವರ್ಷ ದನದ (ತಿಪ್ಪೆ) ಗೊಬ್ಬರ ಮತ್ತು ಮೇಕೆ ಗೊಬ್ಬರ ಹಾಕುತ್ತಾರೆ. ಬೆಳೆದ ತರಕಾರಿಯನ್ನು ಬಸವನ ಬಾಗೇವಾಡಿಯಲ್ಲಿ ನಡೆಯುವ ಸೋಮವಾರ – ಗುರುವಾರದ ಸಂತೆಯಲ್ಲಿ ಹಾಕುತ್ತಾರೆ. ವಾರಕ್ಕೆ 4-5ಸಾವಿರ ಆದಾಯ ಗ್ಯಾರಂಟಿ. ಇದರಿಂದ ಆಳುಗಳ ಖರ್ಚುಗಳನ್ನು ನಿಭಾಯಿಸುತ್ತಿದ್ದಾರೆ.
– ಪ್ರಕಾಶ.ಜಿ. ಬೆಣ್ಣೂರ