ಮರಳು ಮಾತಿನ ಬಾವಿಗೆ ಹಗಲೇ ಬೀಳಬೇಡಿ…
Team Udayavani, Apr 1, 2019, 6:00 AM IST
ದೀರ್ಘಾವಧಿ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸುವ ಮೊದಲು 10-15 ವರ್ಷಗಳ ಕಾಲ, ಹಣ ತೊಡಗಿಸುವ ಸಾಮರ್ಥಯ ನಿಗಮಗಿದೆಯೋ ಚೆಕ್ ಮಾಡಿಕೊಳ್ಳಿ. 15 ವರ್ಷಗಳ ಕಾಲ ನಿಮಗೆ ನೌಕರಿಯ ಭದ್ರತೆ ಇದೆಯಾ ಎಂದು ಮೊದಲೇ ಖಚಿತ ಪಡಿಸಿಕೊಳ್ಳಿ….
ಸರ್ಕಾರಿ ನೌಕರಿಯಲ್ಲಿ ಇರುತ್ತಾರಲ್ಲ: ಅವರಿಗೆ ಭವಿಷ್ಯದ ಕುರಿತು ಚಿಂತೆ ಇರುವುದಿಲ್ಲ. 60 ವರ್ಷ ಆಗುತ್ತಿದ್ದಂತೆಯೇ ನಿವೃತ್ತಿಯಾಗುತ್ತದೆ. ಆನಂತರ ಬದುಕುವುದು ಹೇಗೆ ಎಂಬ ಚಿಂತೆ ಸರ್ಕಾರಿ ನೌಕರರನ್ನು ಬಾಧಿಸುವುದಿಲ್ಲ. ಏಕೆಂದರೆ, ಸರ್ಕಾರಿ ಸೇವೆಯಲ್ಲಿ ಇರುವವರಿಗೆ, ಹಣ ಉಳಿಸುವ ಹಲವು ಸ್ಕೀಮ್ಗಳ ಪರಿಚಯವಿರುತ್ತದೆ. ಮುಖ್ಯವಾಗಿ, ಒಬ್ಬ ವ್ಯಕ್ತಿ ನೌಕರಿಗೆ ಸೇರಿದ ದಿನದಂದ, ಆತನಿಗೆ ನಿವೃತ್ತಿಯ ಆಯಸ್ಸು ಆಗುವವರೆಗೂ ಪ್ರತಿ ತಿಂಗಳೂ ಸಂಬಳ ಬರುತ್ತಿರುತ್ತದೆ. ಪ್ರತಿಯೊಬ್ಬ ನೌಕರನೂ ಬ್ಯಾಂಕ್ನಲ್ಲಿ ಮಾತ್ರವಲ್ಲದೆ ಎಲ್.ಐ.ಸಿ, ಚಿಟ್ಫಂಡ್, ಕೆ.ಜಿ.ಐ.ಡಿ, ಪೋಸ್ಟ್ ಆಫೀಸ್ನ ಉಳಿತಾಯ ಯೋಜನೆಯಲ್ಲಿ ಹಣ ತೊಡಗಿಸಿರುತ್ತಾನೆ. ಇಷ್ಟಲ್ಲದೆ, ಪ್ರತಿ ನೌಕರಿನೂ ಕೆಲಸ ಮಾಡುತ್ತಿರುತ್ತಾನಲ್ಲ ( ಉದಾಹರಣೆಗೆ- ಬೆಸ್ಕಾಂ, ಜಲಮಂಡಳಿ, ರೆವಿನ್ಯೂ ಇಲಾಖೆ ಇತ್ಯಾದಿ..) ಆ ಇಲಾಖೆಗಳಲ್ಲಿ ಕೋ-ಆಪರೇಟಿವ್ ಬ್ಯಾಂಕ್ ಇರುತ್ತದೆ. ಉಳಿತಾಯದ ಹಣವನ್ನು ಅಲ್ಲಿಯೂ ಕೂಡಿಡುವ ಸೌಲಭ್ಯವಿದೆ.
ಸರ್ಕಾರಿ ನೌಕರರಿಗೆ, ಪ್ರತಿ ವರ್ಷವೂ ತುಟ್ಟಿ ಭತ್ಯೆ ಸಹಿತ ಅತ್ಯುತ್ತಮ ಸಂಬಳ ಸಿಗುವುದರಿಂದ ಅವರ ಉಳಿತಾಯದ ಗಂಟೂ ದೊಡ್ಡದೇ ಇರುತ್ತದೆ. ಹಾಗಾಗಿ, ನಿವೃತ್ತಿಯ ಸಮಯದಲ್ಲಿ ಒಟ್ಟಿಗೆ 15ರಿಂದ 20 ಲಕ್ಷ ಹಣ ಸಿಗುವ ಸಾಧ್ಯತೆಗಳು ಖಂಡಿತ ಇವೆ. ನೌಕರರ ವರ್ಗದ ಒಟ್ಟು ಜನಸಂಖ್ಯೆಯಲ್ಲಿ ಶೇ.40ರಷ್ಟು ಮಂದಿ ಸರ್ಕಾರಿ ನೌಕರರಾಗಿದ್ದಾರೆ. ಉಳಿದ ಶೇ.60ರಷ್ಟು ಜನ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದಾರೆ.
ಹೆಚ್ಚಿನ ಖಾಸಗಿ ಕಂಪನಿಗಳು ಯಾವುದಾದರೊಂದು ಬ್ಯಾಂಕಿನೊಂದಿಗೆ ವ್ಯಾವಹಾರಿಕ ನಂಟು ಹೊಂದಿರುತ್ತವೆ. ಕಂಪನಿಯ ಹಣಕಾಸು ಹೂಡಿಕೆ, ವಹಿವಾಟು ಹೆಚ್ಚಾಗಿ ಆ ಬ್ಯಾಂಕ್ನ ಮೂಲಕವೇ ನಡೆಯುತ್ತಿರುತ್ತದೆ. ಕಂಪನಿ ನೌಕರರ ಬ್ಯಾಂಕ್ ಖಾತೆ ಕೂಡ ಹೆಚ್ಚಾಗಿ ಆ ಬ್ಯಾಂಕ್ಗಳಲ್ಲಿಯೇ ಇರುತ್ತದೆ. ಅವೇನಾದರೂ ರಾಷ್ಟ್ರೀಕೃತ ಬ್ಯಾಂಕ್ಗಳಾದರೆ ಚಿಂತೆ ಇಲ್ಲ. ಬದಲಿಗೆ ಪ್ರೈವೇಟ್ ಬ್ಯಾಂಕ್ಗಳಾದರೆ ಹಣ ಹೂಡುವ ಮೊದಲು ಹತ್ತು ಬಾರಿ ಯೋಚಿಸುವುದು ಒಳ್ಳೆಯದು.
ಪ್ರೈವೇಟ್ ಕಂಪನಿಯೊಂದರಲ್ಲಿ ಕೆಲಸ ಮಾಡುವ ನೌಕರನೊಬ್ಬ, ಪ್ರೈವೇಟ್ ಸೆಕ್ಟರ್ ಬ್ಯಾಂಕ್ ಒಂದರಲ್ಲಿ ಅಕೌಂಟ್ ಹೊಂದಿದ್ದಾನೆ ಎಂದುಕೊಳ್ಳಿ. ಆತನ ಖಾತೆಯಲ್ಲಿ ಹೆಚ್ಚು ಹಣವಿದ್ದರೆ ಅಥವಾ ಸಂಬಳದ ರೂಪದಲ್ಲಿ 30-40 ಸಾವಿರದಷ್ಟು ಹಣ ಪ್ರತಿ ತಿಂಗಳೂ ಜಮಾ ಆಗುತ್ತಿದ್ದರೆ, ಅದನ್ನು ಆ ಬ್ಯಾಂಕಿನ ಆಡಳಿತ ಮಂಡಳಿ ಸೂಕ್ಷ್ಮವಾಗಿ ಗಮನಿಸುತ್ತದೆ. ಆನಂತರದಲ್ಲಿ ಒಂದು ದಿನ ಬ್ಯಾಂಕಿನ ಕಸ್ಟಮರ್ ಕೇರ್ ವಿಭಾಗದವರು ಅಥವಾ ಉಳಿತಾಯ ವಿಭಾಗದ ಅಧಿಕಾರಿಗಳಿಂದ ಕಾಲ್ ಬರುತ್ತದೆ. “ಬ್ಯಾಂಕ್ಗೆ ಬಂದಾಗ, ನಮ್ಮನ್ನೊಮ್ಮೆ ಭೇಟಿಯಾಗಿ ಸಾರ್. ಹೊಸದೊಂದು ಸೇವಿಂಗ್ಸ್ ಸ್ಕೀಮ್ ಇದೆ. ಆ ಬಗ್ಗೆ ಹೇಳೆ¤àವೆ’ ಎಂದು ಸೌಜನ್ಯದಿಂದಲೇ ಹೇಳುತ್ತಾರೆ.
ಮುಂದೆ ಅವರನ್ನು ಭೇಟಿಯಾದಾಗ, ಆ ಹೊಸ ಯೋಜನೆಯ ಕುರಿತು ವಿವರ ನೀಡುತ್ತಾರೆ. ಅದರಲ್ಲೂ ಹಲವು ವರೈಟಿಗಳಿವೆ. ಉದಾಹರಣೆಗೆ- ಪೆನÒನ್ ಸ್ಕೀಮ್ ಅಂದುಕೊಳ್ಳಿ ಅಥವಾ ದೀರ್ಘಾವಧಿಯ ಉಳಿತಾಯ ಯೋಜನೆ ಅಂದುಕೊಳ್ಳಿ. ಈ ಸಂಬಂಧವಾಗಿ, ಪ್ರೈವೇಟ್ ಬ್ಯಾಂಕಿನ ಸಿಬ್ಬಂದಿ ಹೇಳುವ ವಿವರಣೆ ಹೀಗಿರುತ್ತದೆ.
“ಸರ್, ಇದೊಂದು ಲಾಂಗ್ ಟರ್ಮ್ ಸೇವಿಂಗ್ಸ್ ಸ್ಕೀಮ್. ಇದರ ಮೆಚೂÂರಿಟಿ ಪೀರಿಯಡ್ ಮುಗಿದಾಗ ಪ್ರತಿ ತಿಂಗಳೂ ದೊಡ್ಡ ಅಮೌಂಟ್ ಬಡ್ಡಿಯ ರೂಪದಲ್ಲೇ ನಿಮಗೆ ಸಿಗುತ್ತದೆ. ಆ ಹಣದಲ್ಲೇ ನೀವು ನೆಮ್ಮದಿಯಿಂದ ಬಾಳಬಹುದು. ನೀವು ಮಾಡಬೇಕಿರುವುದು ಇಷ್ಟೇ. ಪ್ರತಿ ವರ್ಷವೂ 1.25 ಲಕ್ಷ ರು.ಗಳನ್ನು ಕಟ್ಟಬೇಕು. ಹೀಗೆ ಹತ್ತು ವರ್ಷ ಕಟ್ಟಬೇಕು. ಹತ್ತು ವರ್ಷ ಮುಗಿದಾಗ ನೀವು ಪಾವತಿಸಿದ ಒಟ್ಟು ಹಣದ ಮೊತ್ತ 12.50 ಲಕ್ಷ ರೂ. ಆಗಿರುತ್ತದೆ. ಈ ಸ್ಕೀಮ್ ಮುಕ್ತಾಯದ ಅವಧಿ 15 ವರ್ಷ. ಅಂದರೆ ಹಣ ಪಾವತಿಸುವ ಅವಧಿ ಮುಗಿದ ಮೇಲೆ ಐದು ವರ್ಷ ಕಾಯಬೇಕು. ಹಾಗೆ ಮಾಡಿದರೆ, 15ನೇ ವರ್ಷದಿಂದ ಕಡಿಮೆ ಅಂದರೂ 25,000 ರು. ನೀವು ಹೂಡಿರುವ ಹಣಕ್ಕೆ ಬಡ್ಡಿಯ ರೂಪದಲ್ಲಿ ಸಿಗುತ್ತದೆ.
ಉದಾಹರಣೆಗೆ, ನಿಮಗೀಗ 50 ವರ್ಷ ಅಂದುಕೊಳ್ಳಿ. ಈ ಸ್ಕೀಮ್ನಲ್ಲಿ ಹಣ ತೊಡಗಿಸಿದರೆ, ನಿಮಗೆ 65 ವರ್ಷ ಆದಾಗ, ಪ್ರತಿ ತಿಂಗಳೂ 25 ಸಾವಿರದಷ್ಟು ಹಣ ಬಡ್ಡಿಯ ರೂಪದಲ್ಲಿ ಸಿಗುತ್ತದೆ. ನಿವೃತ್ತಿ ಜೀವನವನ್ನು ಆ ಹಣದಲ್ಲಿ ಆರಾಮಾಗಿ ಕಳೆಯಬಹುದು.’ ಅನ್ನುತ್ತಾರೆ.
ಮೇಲ್ನೋಟಕ್ಕೆ ಈ ಮಾತುಗಳೆಲ್ಲ ನಿಜ ಅನ್ನಿಸುವುದು ಸಹಜ. ಈ ಸ್ಕೀಮಿನಲ್ಲಿ ಹಣ ತೊಡಗಿಸಿದರೆ, ಭಾರೀ ಲಾಭವಿದೆ ಅನ್ನಿಸುವುದೂ ನಿಜ. ಆದರೆ, ಮುಂದಿನ ಹತ್ತು ವರ್ಷಗಳ ಕಾಲ ಕಂಪನಿಯಲ್ಲಿ ನಿಮ್ಮ ನೌಕರಿ ಗ್ಯಾರಂಟಿ ಇರುತ್ತಾ? ನೀವು ಕೆಲಸ ಮಾಡುತ್ತಿರುವ ಕಂಪನಿ ಆರ್ಥಿಕವಾಗಿ ಸದೃಢವಾಗಿದೆಯಾ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಜೊತೆಗೆ, ಸಾಲ, ಆರೋಗ್ಯ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸ, ತೀರಾ ಅನಿರೀಕ್ಷಿತವಾಗಿ ಬಂದು ಬಿಡುವ ಖರ್ಚುಗಳ ಕಾಟ ಇಲ್ಲ ಎಂಬುದನ್ನೂ ಮತ್ತೆ ಮತ್ತೆ ಚೆಕ್ ಮಾಡಿಕೊಳ್ಳಿ. ಏಕೆಂದರೆ, ಖಾಸಗಿ ಕಂಪನಿಗಳು ಯಾವ ಸಂದರ್ಭದಲ್ಲಿ ನೌಕರರನ್ನು ಕೆಲಸದಿಂದ ತೆಗೆಯುತ್ತವೋ, ಯಾವಾಗ ಲಾಕೌಟ್ ಘೋಷಿಸುತ್ತವೋ ಹೇಳಲು ಬರುವುದಿಲ್ಲ. ಅಂಥ ಸಂದರ್ಭ ಜೊತೆಯಾಗಿಬಿಟ್ಟರೆ, ನೌಕರಿ ಕಳೆದುಕೊಂಡ ಮಧ್ಯವಯಸ್ಕ, ಪ್ರತಿ ವರ್ಷವೂ 1.25 ಲಕ್ಷ ರೂ. ಸಂಪಾದಿಸಿ ಬ್ಯಾಂಕ್ಗೆ, ದೀರ್ಘಾವಧಿಯ ಉಳಿತಾಯ ಯೋಜನೆಗೆ ಹಣ ತುಂಬುವುದು ಕಷ್ಟದ ಸಂಗತಿಯೇ. ಅಕಸ್ಮಾತ್, ನೀವೇನಾದರೂ 5 ವರ್ಷಗಳ ಕಾಲ ಹಣಕಟ್ಟಿ ಆನಂತರ, ಹಲವು ಸಮಸ್ಯೆಗಳಿಂದ ಹಣ ಕಟ್ಟಲಿಲ್ಲ ಅಂದುಕೊಳ್ಳಿ. ಆಗ ಕೂಡ, ನೀವು ಕಟ್ಟಿದ ಹಣ, ಆ ಸ್ಕೀಂನ ಮೆಚೂÂರಿಟಿ ಪೀರಿಯಡ್ ಮುಗಿದ ನಂತರವೇ ನಿಮ್ಮ ಕೈಸೇರುತ್ತದೆ. ಆ ಸಂದರ್ಭದಲ್ಲಿ ಬ್ಯಾಂಕ್ನ ನಿಯಮಾವಳಿಗಳೇನಾದರೂ ಬದಲಾಗಿ, ಬಡ್ಡಿ ನೀಡಿಕೆಯ ಪ್ರಮಾಣ ಕಡಿಮೆಯಾಗಿದ್ದರೆ, ಹೊಸ ನಿಯಮಕ್ಕೆ ಅನುಗುಣವಾಗಿಯೇ ಬಡ್ಡಿಯ ಮೊತ್ತ ನಿಮ್ಮ ಕೈ ಸೇರುತ್ತದೆ. ಅದಕ್ಕಿಂತ ಹೆಚ್ಚಾಗಿ, 65 ವರ್ಷಗಳಾದಾಗ ಎಂಥವರನ್ನೂ ಬಿ.ಪಿ. ಶುಗರ್ನಂಥ ಕಾಯಿಲೆಗಳು ಕಾಡುತ್ತಿರುತ್ತವೆ. ಆ ವಯಸ್ಸಿನಲ್ಲಿ ಜೇಬಿನ ತುಂಬಾ ಹಣವಿದ್ದರೂ ಮನಸ್ಸಿಗೆ ಬಂದಂತೆ ಏನೇನೋ ತಿನ್ನಲು ಆಗುವುದಿಲ್ಲ !
ಇದೆಲ್ಲಾ ಪ್ರೈವೇಟ್ ಬ್ಯಾಂಕ್ನ ಸಿಬ್ಬಂದಿಗಳಿಗೆ ಗೊತ್ತಿರುವುದಿಲ್ಲವಾ? ಗೊತ್ತಿದ್ದರೂ ಅವರೇಕೆ ಹೀಗೆ ಸುಳ್ಳೇ ಸುಳ್ಳು ಆಸೆ ಹುಟ್ಟಿಸುತ್ತಾರೆ ಎಂಬ ಪ್ರಶ್ನೆಗೆ ಉತ್ತರವಿಷ್ಟೆ. ಪ್ರತಿಯೊಂದು ಪ್ರೈವೇಟ್ ಬ್ಯಾಂಕ್ ಕೂಡ, ವರ್ಷದ ಕೊನೆಗೆ ಇಂತಿಷ್ಟು ಹಣವನ್ನು ಉಳಿತಾಯ ಯೋಜನೆಯ ರೂಪದಲ್ಲಿ ಸಂಗ್ರಹಿಸಬೇಕು ಎಂಬ ಗುರಿ ಹೊಂದಿರುತ್ತದೆ. ಈ ಟಾರ್ಗೆಟ್ ತಲುಪಲು ದಾರಿ ಹುಡುಕಿ ಎಂದು ಸಿಬ್ಬಂದಿಯ ಮೇಲೆ ಆಡಳಿತ ಮಂಡಳಿಯ ಅಧಿಕಾರಿಗಳು ಒತ್ತಡ ಹಾಕಿರುತ್ತಾರೆ. ಪಾಪ, ಆ ಸಿಬ್ಬಂದಿ ಏನು ಮಾಡಲು ಸಾಧ್ಯ? ಅವರು, ನಯವಾದ ಮಾತುಗಳನ್ನಾಡಿ ಗ್ರಾಹಕರನ್ನು ಖೆಡ್ಡಾಕ್ಕೆ ಬೀಳಿಸಲು ನೋಡುತ್ತಾರೆ. ಮರಳು ಮಾತಿನ ಬಾವಿಗೆ ಬೀಳದಿರುವುದು ಜಾಣರ ಲಕ್ಷಣ.
ಪೋಸ್ಟ್ ಆಫೀಸಿನಲ್ಲಿ ಹಣ ಹೂಡಿ
ಹಾಗಾದರೆ, ಪ್ರೈವೇಟ್ ಕಂಪನಿಗಳಲ್ಲಿ ಕೆಲಸ ಮಾಡುವವರು ಉಳಿತಾಯ ಮಾಡುವುದಾದರೂ ಹೇಗೆ ಅಂದಿರಾ? ಎರಡನೇ ಯೋಚನೆ ಮಾಡದೆ, ಪೋಸ್ಟ್ ಆಫೀಸಿನ ಯೋಜನೆಗಳಲ್ಲಿ ಹಣ ತೊಡಗಿಸಿ. ಅಲ್ಲಿ ಒಂದೆರಡಲ್ಲ; ಎಂಟಕ್ಕೂ ಹೆಚ್ಚು ಬಗೆಯ ಉಳಿತಾಯ ಯೋಜನೆಗಳಿವೆ. ಮೂರು, ಐದು ಹಾಗೂ ಹತ್ತು ವರ್ಷದ ಉಳಿತಾಯ ಯೋಜನೆಯಲ್ಲಿ, ಮೆಚೂÂರಿಟಿ ಪಿರಿಯಡ್ ಮುಗಿದ ತಕ್ಷಣವೇ ಬಡ್ಡಿಯ ಸಮೇತ ಹಣ ಸಿಗುತ್ತದೆ. ಅಲ್ಲಿ ಸಿಗುವ ಬಡ್ಡಿಯ ಪ್ರಮಾಣ ಕಡಿಮೆ ಇರಬಹುದು. ಆದರೆ, ಯಾವುದೇ ರೀತಿಯಿಂದಲೂ ಮೋಸ ಆಗುವುದಿಲ್ಲ.