ಕಸದಿಂದ ರಸ
Team Udayavani, Jun 10, 2019, 6:00 AM IST
ಪೂಜೆಗೆ ಬಳಸಿದ ಹೂ, ಸನ್ಮಾನ ಮಾಡಿದ ಹಾರ ಎಲ್ಲವೂ ಎಲ್ಲಿಗೆ ಹೋಗುತ್ತದೆ? ಕಸಕ್ಕೆ. ಇದು ನದಿ, ಕೆರೆಯನ್ನು ಸೇರಿದರೆ ಆಗುವ ಅಪಾಯ ಗೊತ್ತಾ? ಅಪಾಯ ಏಕೆಂದರೆ, ಬಹುತೇಕ ಹೂವು ಬೆಳೆಗಾರರು ಔಷಧ ಸಿಂಪಡಿಸಿಯೇ ಇಳುವರಿ ಹೆಚ್ಚಿಸಿಕೊಳ್ಳುವುದು. ಹೀಗಾಗಿ, ಈ ಹೂ ನೀರು ಸೇರಿದರೆ ಏನಾಗಬಹುದು? ಒಬ್ಬರ ದೇವರ ಭಕ್ತಿ ಮತ್ತೂಬ್ಬರಿಗೆ ವಿಷವಾದೀತು ಅಲ್ಲವೇ? ಗಂಗಾ ನದಿ ತಟದಲ್ಲಿ ಆಗಿದ್ದು ಹೀಗೆ.
ಟನ್ ಗಟ್ಟಲೆ ಹೂವುಗಳನ್ನು ತಂದು ಸುರಿದು ಮಲಿನವಾದಾಗ ಶುರುವಾದದ್ದೇ ಹೆಲ್ಪಸ್ ಗ್ರೀನ್ ಸ್ಟಾರ್ಟಪ್. ಉತ್ತರ ಪ್ರದೇಶದ ದೇವಾಲಯಗಳಲ್ಲಿ ದಿನಕ್ಕೆ 7.5 ಟನ್ನಷ್ಟು ಹೂ ಕಸವಾಗುತ್ತಿತ್ತು. ಅಂಕಿತ್ ಅಗರವಾಲ್, ಕರಣ್ ರಸ್ತೋಗಿ ಮತ್ತವರ ತಂಡ ಸೇರಿ ಮಲಿನ ಗಂಗೆಯನ್ನು ಶುಚಿ ಗೊಳಿಸುವ ನೆಪದಲ್ಲಿ ಕೊಳೆತ ಹೂವುಗಳನ್ನು ಹೊರತೆಗೆದರು. ಮುಂದೇನು? ಎನ್ನುವ ಹೊತ್ತಿಗೆ ರೀಸೈಕಲ್ ಮಾಡುವ ಯೋಜನೆ ಶುರುವಾಯಿತು. ಹೀಗೆ ನೀರಿನಿಂದ ಹೊರ ತೆಗೆದ ಹೂವುಗಳಿಂದಲೇ ಗಂಧದ ಕಡ್ಡಿ, ಹೂ ಗೊಂಚಲುಗಳನ್ನು ಮಾಡತೊಡಗಿದರು. ಈಗ ಬಹು ದೊಡ್ಡ ಉದ್ಯಮವಾಗಿದೆ. ಇಂದು ಪ್ರತಿ ದಿನ 8.4 ಟನ್ ಹೂವನ್ನು ಸಂಗ್ರಹಿಸುತ್ತಿದೆ.
ಈ ಸ್ಟ್ರಾರ್ಟಪ್ ನಿಂದ ಸುಮಾರು 170 ಕುಟುಂಬಗಳಿಗೆ ನೆರವಾಗಿದೆಯಂತೆ. ಹೆಲ್ಪ ಅಸ್ ಗ್ರೀನ್ನಿಂದ ತಯಾರಾಗುವ ಯಾವುದೇ ಉತ್ಪನ್ನಗಳಿಗೆ ರಾಸಾಯನಿಕ ಬಳಕೆ ಮಾಡುವುದಿಲ್ಲ. ಬದಲಾಗಿ ಪರಿಸರ ಸ್ನೇಹಿಯಾಗಿದೆಯಂತೆ. ಈಗ ಹೆಲ್ಪ ಅಸ್ ಗ್ರೀನ್ ಇಡೀ ದೇಶ ಪೂರ್ತಿ ಹಸಿರಾಗುವ ಉದ್ದೇಶ ಹೊಂದಿದೆ.