ರಾಗಿ ಭಾಗ್ಯ ರಾಗಿ ಬೆಳೆದು ಯೋಗ್ಯರಾಗಿ
Team Udayavani, Jun 26, 2017, 3:45 AM IST
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ರೆವುಡಾ ಗ್ರಾಮದ ತುಳಜಮ್ಮ ರುದ್ರಪ್ಪ ಗೌಡ್ರ ಗುಲಾಬಿ ಕೃಷಿಯಲ್ಲಿ ಆದಾಯ ಗಳಿಸುತ್ತಿದ್ದಾರೆ. ಇದು ಸಾಮಾನ್ಯವಾದ ವಿಷಯ. ಆದರೆ ಕೃಷಿಯೊಂದಿಗೆ ರಾಗಿಯ ಮೌಲ್ಯವರ್ದನೆಯಲ್ಲಿ ತೊಡಗಿಯೂ ಇವರು ಗೆದ್ದಿದ್ದಾರೆ. ಬರದಲ್ಲಿಯೂ ಕೈ ಬರಿದಾಗದೆ ಬದುಕು ಕಟ್ಟಿಕೊಂಡಿದ್ದಾರೆ.ಯ
ತುಳಜಮ್ಮದು ಆರು ಎಕರೆ ಭೂಮಿ. ಪತಿ ರುದ್ರಪ್ಪ ಗೌಡರು ಜೊತೆಗಿದ್ದಾರೆ. ಕೃಷಿ, ಮನೆಯ ವಹಿವಾಟಿನಲ್ಲಿ ಪತಿ ಪತ್ನಿಯರಿಬ್ಬರದೂ ಸಮಾನ ನಿರ್ಣಯ. ಮಗ ಚೇತನ್ ಕೂಡ ಹೊಸ ಆಲೋಚನೆಗಳನ್ನು ಮುಂದಿಡುತ್ತಿರುತ್ತಾನೆ. ಸರಳ ಹೊಂದಾಣಿಕೆಯ ಕಾರ್ಯಶೈಲಿಯಿಂದ ಇವರ ಕೃಷಿಭಿನ್ನವಾಗಿದೆ. ಸೋಲುಗಳಿಗೆ ಅಂಜದೆ ಮುನ್ನಡೆಯುತ್ತಿದೆ.
ಬೆಳೆ ಹೊಂದಾಣಿಕೆಯ ಜಾಣ್ಮೆ ಇವರಲ್ಲಿದೆ. ಒಂದುವರೆ ಎಕರೆಯಲ್ಲಿ ಮಾವು ಬೆಳೆಸಿದ್ದಾರೆ. ಬಾದಾಮಿ, ಮಲ್ಲಿಕಾ, ಸಿಂಧೂರ ತಳಿಯ ಮರಗಳು ಇಳುವರಿ ನೀಡುತ್ತಿದ್ದು, ಕೊಯ್ಲಿಗೆ ಖೇಣಿ ನೀಡುತ್ತಾರೆ. ಒಂದೂವರೆ ಎಕರೆಯಲ್ಲಿ ಅಡಿಕೆ ತೋಟವಿದೆ. ಆರು ವರ್ಷದ ಗಿಡಗಳು ಕಳೆದ ವರ್ಷ ಹತ್ತು ಕೆಜಿ ಇಳುವರಿ ನೀಡಿತ್ತು. ನೀರಿನ ಅಭಾವ ಅಡಿಕೆ ಗಿಡಗಳ ಸಹಜ ಬಣ್ಣ ಮಾಸುವಂತೆ ಮಾಡುತ್ತಿದೆ. ಮರಗಳು ಹೊತ್ತು ನಿಂತಿದ್ದ ಹಿಂಗಾರ ಒಣಗುತ್ತಿರುವುದನ್ನು ನೋಡಿ ಸಂಕಟ ಪಡುತ್ತಿದ್ದಾರೆ. ಎರಡು ಇಂಚು ನೀರು ಬಸಿಯುತ್ತಿದ್ದ ಕೊಳವೆ ಬಾವಿ ನೀರು ಹೊರಸೂಸುತ್ತಿಲ್ಲ. ಹದಿನೈದು ಕಿ.ಮೀ ದೂರದ ಸೂಳೆಕೆರೆಯಿಂದ ಬಾಡಿಗೆ ಟ್ಯಾಂಕರ್ ಮೂಲಕ ನೀರು ತರಿಸಿ, ತೋಟಗಳಿಗೆ ಹನಿ ಲೆಕ್ಕದಲ್ಲಿ ಉಣಿಸುತ್ತಿದ್ದಾರೆ. ಜೋಳ, ರಾಗಿ, ತೊಗರಿ, ಮೆಣಸು, ತರಕಾರಿ ಕೃಷಿಯನ್ನು ಅಳವಡಿಸಿಕೊಂಡಿದ್ದಾರೆ.
ನಿತ್ಯ ಗಳಿಕೆಗೆ ಹೂವಿನ ಆದಾಯ
ಐದು ವರ್ಷಗಳ ಹಿಂದೆ ಮನೆ ಎದುರಿನ ಕಾಲೆಕರೆಯಲ್ಲಿ 200 ಡಚ್ ತಳಿಯ ಗುಲಾಬಿ ಗಿಡಗಳನ್ನು ನಾಟಿ ಮಾಡಿದ್ದರು. ನಾಟಿ ಪೂರ್ವ ಟ್ರಾಕ್ಟರ್ ಸಹಾಯದಿಂದ ಎರಡು ಬಾರಿ ಭೂಮಿಯನ್ನು ಉಳುಮೆ ಮಾಡಿದ್ದಾರೆ. ಯತೇಚ್ಚ ಕೊಟ್ಟಿಗೆ ಗೊಬ್ಬರ ಹಾಕಿದ್ದಾರೆ. ಚಿಕ್ಕದಾಗಿರುವ ಕಸಿ ಗಿಡಗಳನ್ನು ಒಂದು ಅಡಿ ಘನಗಾತ್ರದ ಗುಣಿ ತೆಗೆದು, ಒಂದು ಬುಟ್ಟಿಯಷ್ಟು ಕಾಂಪೋಸ್ಟ್ ಗೊಬ್ಬರ, ಮೇಲ್ಮಣ್ಣನ್ನು ಗುಣಿಗೆ ಸುರಿದು ಗಿಡದಿಂದ ಗಿಡ ಹಾಗೂ ಸಾಲಿನಿಂದ ಸಾಲಿಗೆ ಆರು ಅಡಿ ಅಂತರದಲ್ಲಿ ಗಿಡ ನಾಟಿ ಮಾಡಿದ್ದಾರೆ.
ಗಿಡ ನಾಟಿ ಮಾಡಿದ ಒಂದು ತಿಂಗಳಲ್ಲಿಯೇ ಮೊಗ್ಗು ಬಿಡಲು ಆರಂಭಿಸಿದ್ದವು. ಮೊಗ್ಗುಗಳನ್ನು ಆರು ತಿಂಗಳವರೆಗೆ ಚಿವುಟಿ ಹಾಕಿದ್ದಾರೆ. ಆರು ತಿಂಗಳ ನಂತರ ಪ್ರತಿ ಗಿಡಗಳಲ್ಲಿ ಒಂದೆರಡು ಹೂವಿನ ಇಳುವರಿ ಆರಂಭವಾಯಿತು. ಗಿಡ ನೆಟ್ಟು ವರ್ಷ ಪೂರ್ತಿ ಗೊಳ್ಳುವ ವೇಳೆಗೆ ಯತೇಚ್ಚವಾಯಿತು. ಹೂವಿನ ಕೃಷಿಯನ್ನು ಅರ್ಧ ಎಕರೆಗೆ ಏರಿಸಿದರು. ಪುನಃ 200 ಗಿಡಗಳನ್ನು ತಂದು ನಾಟಿ ಮಾಡಿದರು. ಇವರ ಮನೆಯೆದುರಲ್ಲೀಗ ಡಚ್ ತಳಿಯ 400 ಗುಲಾಬಿ ಗಿಡಗಳಿವೆ.
ಪ್ರತಿ ವರ್ಷ ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಗಿಡಗಳನ್ನು ಕತ್ತರಿಸಿ, ನೀರು ಹಾಯಿಸುತ್ತಾರೆ. ಬುಡಗಳಿಗೆ 200 ಗ್ರಾಂ ನಷ್ಟು ಡಿ.ಎ.ಪಿ ಗೊಬ್ಬರ ಹಾಕುತ್ತಾರೆ. ವರ್ಷಕ್ಕೊಮ್ಮೆ ಮಾತ್ರ ರಾಸಾಯನಿಕದ ಬಳಕೆ. ಮೂರು ತಿಂಗಳಿಗೊಮ್ಮೆ ಕೊಟ್ಟಿಗೆ ಗೊಬ್ಬರ ಉಣಿಸುತ್ತಾರೆ. ಎರಡು ದಿನಕ್ಕೊಮ್ಮೆ ಒಂದು ಗಂಟೆ ನೀರಿನ ಹನಿ ಪೂರೈಕೆ. ಇಪ್ಪತ್ತು ದಿನಗಳಿಗೊಮ್ಮೆ ಔಷಧಿ ಸಿಂಪರಣೆ ಕರ್ತವ್ಯ ಎನ್ನುವಂತೆ ಮಾಡುತ್ತಾರೆ.
ಪ್ರತಿನಿತ್ಯ ಇಳುವರಿ. ದಿನಕ್ಕೆ ಪ್ರತಿ ಗಿಡಗಳಿಂದ 2-3 ಹೂವು ಸಿಗುತ್ತದೆ. ಗಿಡದ ಒಂದು ಭಾಗದಲ್ಲಿ ಕೊಯ್ಲು ಮಾಡಿದಂತೆ ಇನ್ನೊಂದು ಭಾಗದಲ್ಲಿನ ಮೊಗ್ಗು ಅರಳುವ ಹಂತದಲ್ಲಿರುತ್ತದೆ. ನಿತ್ಯ 200-250 ಹೂವು ಕೊಯ್ಲಿಗೆ ಸಿಗುತ್ತದೆ. ತಿಂಗಳಲ್ಲಿ 5000-6000 ಹೂ ಗಳನ್ನು ಸಂತೆಬೆನ್ನೂರು ಮಾರುಕಟ್ಟೆಗೆ ಕಳುಹಿಸುತ್ತಾರೆ. ಪ್ರತಿ ಹೂವಿಗೆ ಒಂದು ರೂಪಾಯಿಯಂತೆ ದರ ಸಿಗುತ್ತದೆ. ಕಷ್ಟಪಟ್ಟು ಬೆಳೆಸಿದ ಆಕರ್ಷಣೀಯ ಹೂವುಗಳು ವ್ಯಾಪಾರಸ್ಥರಿಂದ ಗ್ರಾಹಕರ ಕೈ ಸೇರಬೇಕೆಂದರೆ ಐದು ರೂ. ತೆರಬೇಕು. ನಾಲ್ಕು ರೂಪಾಯಿ ವ್ಯಾಪಾರಸ್ಥರಿಗೆ ಕುಳಿತಲ್ಲಿಯೇ ಆದಾಯ. ಹೀಗಿರುವಾಗ ಒಂದು ಹೂವಿಗೆ ಎರಡು ರೂ.ನಂತೆ ದರ ನೀಡಿ ಎಂದರೂ ಒಪ್ಪುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಅಡಿಕೆ ತೋಟಕ್ಕಾಗಿ ನಾಲ್ಕು ಲಕ್ಷ ರೂ ಖರ್ಚು ಮಾಡಿದ್ದಾರೆ. ಆರು ವರ್ಷದಲ್ಲಿ ಆದಾಯದ ಮುಖ ನೋಡಿಲ್ಲ. ಅರ್ಧ ಎಕರೆಯಲ್ಲಿನ ಗುಲಾಬಿ ಕೃಷಿ, ಅಡಿಕೆಗೆಂದು ಖರ್ಚು ಮಾಡಿದ ಎಲ್ಲಾ ಮೊತ್ತ ಗಿಟ್ಟುವಂತೆ ಮಾಡಿದೆ.
ರಾಗಿಯ ಮೌಲ್ಯವರ್ದನೆ
ಪ್ರತಿ ವರ್ಷದ ಮುಂಗಾರಿನಲ್ಲಿ ಎರಡು ಎಕರೆ ಜಮೀನನ್ನು ರಾಗಿ ಬೆಳೆಗೆ ಮೀಸಲಿಡುತ್ತಾರೆ. ಕೊಟ್ಟಿಗೆ ಗೊಬ್ಬರವೊಂದನ್ನೇ ಬಳಸಿ ಬೆಳೆಯುವ ರಾಗಿಯಿಂದ ಎಕರೆಗೆ ಹತ್ತು ಕ್ವಿಂಟಾಲ್ ಇಳುವರಿ ಪಡೆಯುತ್ತಾರೆ. ಮೂರು ತಿಂಗಳ ಹಿಂದೆ ಮನೆ ಬಳಕೆಯ ವಸ್ತುಗಳ ಖರೀದಿಗೆಂದು ಚನ್ನಗಿರಿಯ ಸೂಪರ್ ಮಾರ್ಕೆಟ್ಗೆ ಹೋದಾಗ ರಾಗಿಯ ಉತ್ಪನ್ನಗಳು ಇವರ ಗಮನ ಸೆಳೆದಿದ್ದವು. ವಿವಿಧ ಗಾತ್ರದಲ್ಲಿ, ವಿವಿಧ ಲೇಬಲ್ಗಳನ್ನು ಅಂಟಿಸಿಕೊಂಡಿದ್ದ ರಾಗಿ ಉತ್ಪನ್ನಗಳನ್ನು ಗಮನಿಸುತ್ತಾ ಹೋದಾಗ ಇವರಿಗೆ ಗ್ರಾಮೀಣ ಭಾಗದಲ್ಲಿ ತಯಾರಿಸುವ ‘ವಡ್ರಾಗಿಟ್ಟು’ ಇಲ್ಲದಿರುವುದು ಗಮನಕ್ಕೆ ಬಂತು. ಅಲ್ಲಿನ ಮುಖ್ಯಸ್ಥರಲ್ಲಿ ಕೇಳಿಯೇ ಬಿಟ್ಟರು. “ವಡ್ರಾಗಿಟ್ಟಿಗೆ ಬಹಳ ಬೇಡಿಕೆ ಇದೆ. ಜನರು ಆಗಾಗ ಕೇಳುತ್ತಿರುತ್ತಾರೆ, ಆದರೆ ಸಿದ್ದಪಡಿಸಿಕೊಡುವವರು ಯಾರೂ ಇಲ್ಲವಾದ್ದರಿಂದ ನಮ್ಮಲ್ಲಿ ಲಭ್ಯವಿಲ್ಲ’ ಎಂದರು.
‘ನಾನು ತಯಾರಿಸಿ ಕೊಡುತ್ತೇನೆ ಕೊಳ್ತೀರಾ?’ ಎನ್ನುವ ಪ್ರಶ್ನೆ ಇವರಿಂದ ಹೊರಬಿತ್ತು. ಸಂತೋಷದಿಂದಲೇ ಒಪ್ಪಿದರು. ಮಾದರಿಯಾಗಿ ಒಂದು ಕಿಲೋಗ್ರಾಂ ಅನ್ನು ತಯಾರಿಸಿಕೊಡಲು ಸೂಚಿಸಿದರು. ಸಿದ್ದಪಡಿಸಿ ನೀಡಿದ ಎರಡೇ ದಿನದಲ್ಲಿ ಇವರಿಗೆ ಸೂಪರ್ ಮಾರ್ಕೆಟ್ನಿಂದ ದೂರವಾಣಿ ಕರೆ ಬಂದಿತ್ತು. ಹತ್ತು ಕಿಲೋ ಗ್ರಾಂ ನಷ್ಟು ಹಿಟ್ಟು ತಯಾರಿಸಿಕೊಡುವಂತೆ ಬೇಡಿಕೆ ಇಟ್ಟಿದ್ದರು. ತಯಾರಿಸಿ ನೀಡಿದರು. ಕೆಜಿ ಟ್ಟಿಗೆ 110 ರೂಪಾಯಿ ದರ ಸಿಗುತ್ತಿದೆ. ಸೂಪರ್ ಮಾರ್ಕೆಟ್ ನವರು ಬೇಡಿಕೆ ನೀಡುವುದು ಇವರು ಪೂರೈಕೆ ಮಾಡುವುದು ಮುಂದುವರೆದಿದೆ.
ರಾಗಿಯ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುತ್ತಿರುವ ಇವರನ್ನು ಮಂಗಳೂರಿನ ವ್ಯಾಪಾರಸ್ಥರೊಬ್ಬರು ಸಂಪರ್ಕಿಸಿ ರಾಗಿ ಹಿಟ್ಟು ಪೂರೈಸುವಂತೆ ಮನ ಮಾಡಿಕೊಂಡಿದ್ದರು. ಅವರಿಗೆ 60,000 ರೂಪಾಯಿ ಮೌಲ್ಯದ ರಾಗಿ ಟ್ಟನ್ನು ಪೂರೈಸಿದ್ದಾರೆ. ಮಂಗಳೂರಿನಿಂದ ಖಾಯಂ ಪೂರೈಕೆಯ ಬೇಡಿಕೆ ಬಂದ ನ್ನೆಲೆಯಲ್ಲಿ ರಾಣೆಬೆನ್ನೂರು, ಹರಪನಹಳ್ಳಿ ಭಾಗದಿಂದ ರೈತರಿಂದ ರಾಗಿ ಖರೀದಿಸಿ ತಂದು ಮನೆಯಲ್ಲಿ ಸಂಗ್ರಸಿಕೊಂಡಿದ್ದಾರೆ. ಪ್ರತಿ ವಾರ 3-4 ಕ್ವಿಂಟಾಲ್ ಹಿಟ್ಟನ್ನು ಕಳುಹಿಸುತ್ತಿದ್ದಾರೆ.
ಒಂದು ಕ್ವಿಂಟಾಲ್ ರಾಗಿ ಮಾರಿದರೆ 3000 ರೂ. ದರ ಸಿಗುತ್ತದೆ. ಹಿಟ್ಟು ಮಾರಿದರೆ ಕೆಜಿಗೆ 46-50 ರೂ. ದರ ಗಿಟ್ಟಿಸಬಹುದು. ಒಂದು ಕ್ವಿಂಟಾಲ್ ರಾಗಿಯಿಂದ 55-60 ಕೆಜಿ ವಡ್ರಾಗಿಟ್ಟು ತಯಾರಿಸಬಹುದು. ಕಿಲೋ ವಡ್ರಾಗಿಟ್ಟಿಗೆ 110 ರೂ.. ಕ್ವಿಂಟಾಲ್ ರಾಗಿಯ ಮೌಲ್ಯವರ್ಧಿತ ಉತ್ಪನ್ನದಿಂದ 3500-4000 ರೂ. ಎನ್ನುವ ಲೆಕ್ಕಾಚಾರ ಇವರದು.
ಆದಾಯ ಇಲ್ಲ ಎಂದು ರೈತರು ಗೊಣಗುತ್ತಿರುವಾಗ ಇವರ ಕೃಷಿ ಹಾಗೂ ಮೌಲ್ಯವರ್ಧನೆಯ ನಡೆ ಬೆರಗು ಮೂಡಿಸುತ್ತದೆ.
– ಕೋಡಕಣಿ ಜೈವಂತ ಪಟಗಾರ