ರೈತರ “ಜೇನು ಗೂಡು’
Team Udayavani, Jan 6, 2019, 12:16 PM IST
ಜೇನು ರೈತರ ಮಿತ್ರ. ನಂಬಿದವರ ಇಳುವರಿ ಜಾಸ್ತಿ ಮಾಡುತ್ತದೆ. ಕ್ರಿಮಿಕೀಟಗಳು ಬರದಂತೆ ತಡೆಯುತ್ತದೆ. ಜೊತೆಗೆ ಜೇನು ಮಾರಿದರೆ ಕೈತುಂಬ ಲಾಭವೂ ಸಿಗುತ್ತದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ಗಂಗಾವತಿಯ ಅನಿಲ್ಕುಮಾರ್ ಜೇನು ಕೃಷಿಕರ ಸಂಘವನ್ನೇ ಕಟ್ಟಿದ್ದಾರೆ. ರೈತರನ್ನು ಗುಡ್ಡೆ ಹಾಕಿಕೊಂಡು ಜೇನು ಸಂರಕ್ಷಣೆಗೆ ಮುಂದಾಗಿದ್ದಾರೆ.
ಗಂಗಾವತಿ ಭತ್ತದನಾಡು ಅಂತಾರೆ. ಆದರೆ, ಅನಿಲ್ ಕುಮಾರ್ ಮಾವಿನ ಕೃಷಿ ಮಾಡಿಕೊಂಡಿದ್ದಾರೆ. ಅನೇಕ ತಳಿಯ ಮಾವಿನ ಮರಗಳನ್ನು ಬೆಳಸುವುದರ ಜೊತೆಗೆ ಎರೆಹುಳು ಘಟಕ, ಜೀವಸಾರ ಘಟಕ ರಚಿಸಿಕೊಂಡು ಸಂಪೂರ್ಣ ಸಾವಯವ ತೋಟಗಾರಿಕೆ ಮಾಡಲು ಪಣತೊಟ್ಟು ನಿಂತಿದ್ದಾರೆ.
ಇದರ ಜೊತೆಗೆ ಏನಾದರೂ ಉಪಕಸುಬು ಮಾಡಬೇಕೆಂದು ಆಲೋಚಿಸುತ್ತಿದ್ದಾಗ ಇವರಿಗೆ ಹೊಳೆದದ್ದು ಜೇನುಕೃಷಿ. ಕೂಡಲೇ ಮೇಟಿಕುರ್ಕೆಯ ಶಾಂತವೀರಯ್ಯನರಿಂದ ತರಬೇತಿ ಪಡೆದು, 2 ಜೇನು ಪೆಟ್ಟಿಗೆಗಳನ್ನು ಪಡೆದು 2005 ರಲ್ಲಿ ತಮ್ಮ ಮಾವಿನ ತೋಟದಲ್ಲಿ ಜೇನು ಸಾಕಾಣಿಕೆ ಪ್ರಾರಂಭಿಸಿದರು. ನಿರಂತರ ಪರಿಶ್ರಮದಿಂದ ಜೇನು ಕೃಷಿಯಲ್ಲಿ ಯಶಸ್ಸುಕಂಡು, ತನ್ನಂತೆಯೇ ಇತರೆ ರೈತರೂ ಆಗಬೇಕೆಂದು ಹಂಬಲಿಸಿದರು. ಈ ಉದ್ದೇಶದಿಂದಲೇ ರಾಯಚೂರು ಕೃಷಿ ವಿವಿಯ ಡಾ. ಬದರಿ ಪ್ರಸಾದರ ನೆರವಿನಿಂದ ಸಂಜೀವಿನಿ ಜೇನು ಕೃಷಿಕರ ಸಂಘವನ್ನೂ ಕಟ್ಟಿದರು. ಆ ನಂತರದಲ್ಲಿ, ರೈತರಿಗೆ ಜೇನುಕೃಷಿ ಬಗ್ಗೆ ತರಬೇತಿ ಕೊಟ್ಟು, ಅವರನ್ನು ಸಂಪೂರ್ಣ ಜೇನು ಕೃಷಿಕರನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸಂಘದ ಕಾರ್ಯವೈಖರಿಗಳಿವು
ಸಂಘದ ಸದಸ್ಯರು ದಿನನಿತ್ಯ ಗೂಡುಗಳನ್ನು ತಯಾರಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗೂಡುಗಳನ್ನು ಅಭಿವೃದ್ಧಿಪಡಿಸಿ, ಅವುಗಳನ್ನು ವಿಭಜನೆಮಾಡಿ, ಹೆಚ್ಚಿನ ಸಂಖ್ಯೆಯ ಗೂಡುಗಳನ್ನು ಉತ್ಪನ್ನಮಾಡಿಕೊಂಡು ಯಾದಗಿರಿ, ಗುಲ್ಬರ್ಗಾ, ಬೀದರ್, ಬಳ್ಳಾರಿ, ರಾಯಚೂರು ಸೇರಿದಂತೆ ಹಲವಾರು ಜಿಲ್ಲೆಗಳಿಗೆ ಸರಬರಾಜು ಮಾಡುತ್ತಾರೆ. ಹೆಚ್ಚುವರಿಯಾಗಿ ಜೇನು ಪರಿಕರಗಳನ್ನು ತಯಾರಿಸುತ್ತಾರೆ. 2017ರಲ್ಲಿ ಸುಮಾರು 350-400 ಗೂಡುಗಳನ್ನು ಮಾರಾಟ ಮಾಡಿದ್ದಾರೆ. ಪ್ರತಿ ಜೇನು ಪೆಟ್ಟಿಯಿಂದ ರೈತರು ವರ್ಷಕ್ಕೆ 4 ರಿಂದ 5 ಸಾವಿರದ ವರೆಗೆ ಆದಾಯ ಗಳಿಸುತ್ತಿದ್ದಾರೆ. ರೈತನ ಹೊಲದಲ್ಲಿ ಹೂವುಗಳ ಕೊರತೆಯಿದ್ದರೆ ಸಹಕಾರ ಭಾವದಿಂದ ಹೂವುಗಳಿರುವ ರೈತನ ಹೊಲದಲ್ಲಿ ಜೇನುಪೆಟ್ಟಿಗೆಗಳನ್ನು ಇಟ್ಟು ಜೇನು ತಯಾರಿಸುತ್ತಾರೆ.
ಇದೆಲ್ಲವನ್ನೂ ರೈತರು ಪ್ರತ್ಯೇಕವಾಗಿ ತಮ್ಮ ತಮ್ಮ ತೋಟಗಳಲ್ಲಿ ಮಾಡುತ್ತಿದ್ದಾರೆ. ಕೆಲವೊಂದಿಷ್ಟು ರೈತರು ಪ್ರಾಕೃತಿಕವಾಗಿಯೇ ಜೇನು ಹಾಗೂ ಹೆಜ್ಜೆàನನ್ನು ಹಿಡಿಯುವ ಪರಿಣತಿ ಹೊಂದಿದ್ದಾರೆ. ಸಂಘದ ಉಪಾಧ್ಯಕ್ಷರಾಗಿರುವ ಪಂಪಾಪತಿ ಅವರು ಈ ನೈಸರ್ಗಿಕವಾಗಿ ಜೇನು ಹಿಡಿಯುವಲ್ಲಿ ಎತ್ತಿದ ಕೈ.
ಹಳ್ಳಿಗಳಲ್ಲಿ ರೈತರು ನೈಸರ್ಗಿಕವಾಗಿರುವ ಜೇನು ತಟ್ಟೆಗೆ ಬೆಂಕಿ ಹಚ್ಚಿ, ಹುಳುಗಳನ್ನು ಸಾಯಿಸಿ ತುಪ್ಪ ತೆಗೆಯುತ್ತಾರೆ. ಇದರಿಂದ ಜೇನು ಸಂತತಿ ನಾಶವಾಗುತ್ತದೆ. ಹಾಗಾಗಿ, ಇಂಥ ಪ್ರಸಂಗಗಳೇನಾದರೂ ಸಂಘದ ಸದಸ್ಯರ ಗಮನಕ್ಕೆ ಬಂದರೆ, ಕೂಡಲೇ ತಡೆಯುತ್ತಾರೆ. ಜೇನುಹುಳಗಳಿಂದ ನಡೆಯುವ ಪರಾಗಸ್ಪರ್ಷ ಕ್ರಿಯೆಯಿಂದ ಕೃಷಿಯಲ್ಲಿ ಶೇ.40 ರಷ್ಟು ಇಳುವರಿ ಹೆಚ್ಚವುದರ ಬಗ್ಗೆ, ಜೇನು ಕಣ್ಮರೆಯಾದರೆ, ದನಕರುಗಳಿಗೆ ಮೇವಿನ ಕೊರತೆ ಉಂಟಾಗುವು ದರ ಬಗ್ಗೆ ಹಾಗೂ ಕೆಲವು ಸಸ್ಯ ಪ್ರಬೇಧಗಳು, ಏಕದಳ ಧಾನ್ಯಗಳು, ಔಷಧಿ ಸಸ್ಯಗಳು, ತೋಟಗಾರಿಕೆ, ತರಕಾರಿ ಬೆಳೆಗಳು ನಾಶವಾಗುವ ಪರಿಣಾಮದ ಬಗ್ಗೆ ರೈತರಿಗೆ ತಿಳಿ ಹೇಳುತ್ತಾರೆ. ಸಂಘದಲ್ಲಿ ಶರಣಪ್ಪ ಭತ್ತದ, ದೇವೇಂದ್ರಗೌಡ ಕಡ್ಡಿಪುಡಿ, ಪ್ರಕಾಶ ಬಣಕಾರ, ಪರ್ವತಯ್ಯ ಸ್ವಾಮಿ, ಮಹೇಶ ಕಾರಟಗಿ, ಆನಂದರೆಡ್ಡಿ, ಶ್ರೀಧರ ಬೇಲೂರು ಸೇರಿದಂತೆ ಹಲವರಿದ್ದಾರೆ.
ಮಧುಮೇಳ
ಮೂರು ವರ್ಷಗಳಿಂದ ಸಂಘ, ಪ್ರತಿ ವರ್ಷ ಮಧುಮೇಳ ಹಮ್ಮಿಕೊಳ್ಳುತ್ತಿದೆ. ಕಳೆದ ನವೆಂಬರ್ನಲ್ಲಿ ಮೂರು ದಿನಗಳ ಕಾಲ ನಡೆಯಿತು. ರೈತರು ಹೆಚ್ಚು ಕಮ್ಮಿ ಎರಡೂವರೆ ಟನ್ ಜೇನು ತುಪ್ಪ ಮಾರಾಟ ಮಾಡಿದ್ದಾರೆ. ಜೇನಿನಿಂದ ತಯಾರಿಸಿದ ಉತ್ಪನ್ನಗಳನ್ನು ಮಾರಿದ್ದಾರೆ. ಸಂಘದ ಅಧ್ಯಕ್ಷ ನಿಂಗಪ್ಪ ಕುಂಬಾರ ಎನ್ನುವ ರೈತ, ಒಂದೂವರೆ ಕ್ವಿಂಟಾಲ್ ತುಪ್ಪ ಹಾಗೂ ಒಂದೂವರೆ ಲಕ್ಷ ರೂ. ನೆಲ್ಲಿ ಕ್ಯಾಂಡಿಯನ್ನು ಮಾರಾಟ ಮಾಡಿದ್ದೇನೆ ಎನ್ನುತ್ತಾರೆ. ಮೇಳದಲ್ಲಿ ಒಟ್ಟಾರೆ 12 ಲಕ್ಷ ರೂ. ವಹಿವಾಟು ನಡೆದಿದೆಯಂತೆ. ಎಲ್ಲದರ ಪರಿಣಾಮ ಸಂಘದಲ್ಲಿ ಮೊದಲು 25 ಸದಸ್ಯರ ಬಲ ಇತ್ತು ಈಗ ಹೊಸದಾಗಿ 200 ಕ್ಕೂ ಹೆಚ್ಚು ರೈತರು ಹೆಸರು ನೋಂದಾಯಿಸಿದ್ದಾರಂತೆ.
– ಬಸವರಾಜ ಎನ್.ಬೋದೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ
BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ