ಇದೋ ಬಂತು ಲವಂಗ ಬೀನ್ಸ್
Team Udayavani, Mar 25, 2019, 6:00 AM IST
ರೈತರಿಗೆ ಲವಂಗ ಬೀನ್ಸ್ ಕೃಷಿಯ ಪರಿಚಯ ಕಡಿಮೆ. ಏಕೆಂದರೆ, ಬಹಳಷ್ಟು ಜನಕ್ಕೆ ಇದರ ಬಗ್ಗೆ ತಿಳಿದಿಲ್ಲ. ಆದರೆ ಬೆಳ್ತಂಗಡಿಯ ಮಡಂತ್ಯಾರಿಯ ರವಿಶಂಕರ ಭಟ್ಟರ ಮನೆಯಲ್ಲಿ ಈ ಬೀನ್ಸ್ ಮನೆ ಮಾಡಿದೆ. ಮಾರುಕಟ್ಟೆಯ ದೃಷ್ಟಿಯಿಂದಲೂ ಇದನ್ನು ಬೆಳೆದು ನೋಡಬಹುದು. ಬಯಲು ಪ್ರದೇಶಗಳಲ್ಲಿ ಹೆಚ್ಚಿನ ಇಳುವರಿ ಬರುವುದರಿಂದ ಲಾಭಕರ ಕೃಷಿ ಇದು.
ಹುರುಳಿಕಾಯಿ ಅಥವಾ ಬೀನ್ಸ್ ಯಾರಿಗೆ ತಾನೇ ಇಷ್ಟವಿಲ್ಲ? ನೀಳವಾದ ಬೀನ್ಸ್ ಎಲ್ಲರಿಗೂ ಪರಿಚಿತ ತರಕಾರಿಯೆಂಬುದು ನಿಜ. ಆದರೆ, ಅಪರೂಪವಾದ ಒಂದು ಬೀನ್ಸ್ ಪ್ರಾಯಶಃ ಹೆಚ್ಚಿನವರು ಮಾರುಕಟ್ಟೆಯಲ್ಲಿ ನೋಡಿರಲಿಕ್ಕಿಲ್ಲ. ಇದರ ಆಕಾರ ಲವಂಗದ ಹಾಗೆಯೇ ಇರುತ್ತದೆ. ಗೊಂಚಲು ಗೊಂಚಲಾಗಿ ಕೈತುಂಬ ಕಾಯಿ ಕೊಡುವ ಅದರ ಬಳ್ಳಿ ಹಿತ್ತಲಲ್ಲಿದ್ದರೆ ತಿಂಗಳುಗಳ ಕಾಲ ನಿತ್ಯವೂ ಕಾಯಿ ನೀಡಿ ಕಾಯಿಪಲ್ಲೆಯ ಕೊರತೆಯನ್ನು ನೀಗಿಸುತ್ತದೆ. ಹಸಿರಾಗಿ ಆಕರ್ಷಕವಾಗಿರುವ ಈ ಕಾಯಿ ಎರಡು ಇಂಚು ಉದ್ದವಾಗಿದೆ.
ಕ್ಲೋವ್ ಬೀನ್ಸ್ ಎಂಬ ಹೆಸರಿರುವ ಈ ವಿಶಿಷ್ಟ ಹುರುಳಿಕಾಯಿಯ ತಳಿಯನ್ನು ಕೇರಳದಿಂದ ತಂದು ರೈತರಿಗೆ ಪರಿಚಯಿಸುತ್ತಿರುವ ರೈತ ಅಮಾxಲು ರವಿಶಂಕರ ಭಟ್ಟರು. ಇವರು ಬೆಳ್ತಂಗಡಿ ತಾಲೂಕಿನ ಮಡಂತ್ಯಾರಿನವರು. ಹಲವು ಬಗೆಯ ಹೊಸ ಹೊಸ ಗಿಡಗಳನ್ನು ಬೆಳೆಸಿರುವ ಅವರು, ಇದರ ಕೃಷಿಯನ್ನು ಮಳೆಗಾಲ ಮತ್ತು ಬೇಸಿಗೆ ಕಾಲದಲ್ಲಿ ಯಾವುದೇ ತೊಂದರೆಯಿಲ್ಲದೆ ಮಾಡಬಹುದು ಎಂದು ಹೇಳುತ್ತಾರೆ. ಗೋಬರ್ ಬಗ್ಗಡ ಮತ್ತು ಕಟ್ಟಿಗೆ ಉರಿಸಿದ ಬೂದಿಯ ಮಿಶ್ರಣವನ್ನು ವಾರಕ್ಕೊಂದು ಸಲ ಬುಡಕ್ಕೆ ಹಾಕುತ್ತ ಬಂದರೆ, ಬಳ್ಳಿ ಹೊಸ ಮೊಗ್ಗುಗಳನ್ನು ಬಿಟ್ಟು ಯಥೇತ್ಛ ಕಾಯಿಗಳನ್ನು ಕೊಡುತ್ತಲೇ ಇರುತ್ತದಂತೆ.
ಸಾಲುಗಳಾಗಿ ಈ ಬೀನ್ಸ್ ಬಿತ್ತನೆ ಮಾಡುವ ಬದಲು ಸಣ್ಣ ಹೊಂಡಗಳನ್ನು ಮಾಡಿ, ಒಣ ಸಗಣಿಯ ಹುಡಿ ತುಂಬಿಸಿ ಅದರಲ್ಲಿ ಒಂದೊಂದು ಬೀಜ ಬಿತ್ತಿ ಗಿಡ ತಯಾರಿಸುವುದು ಒಳ್ಳೆಯದಂತೆ. ರಸಗೊಬ್ಬರ ಬೇಡ. ಮಣ್ಣಿನ ಸಹಜ ಸತ್ತಾ$Ìಂಶದಿಂದಲೇ ಬಳ್ಳಿ ಚೆನ್ನಾಗಿ ಬೆಳೆಯುತ್ತದೆ. ಬಳ್ಳಿಯನ್ನು ನೆಲದಲ್ಲಿ ಹರಿದಾಡಲು ಬಿಡುವ ಬದಲು ಆಧಾರವಾಗಿ ಒಂದು ಕೋಲು ನೀಡಿದರೆ ಹೆಚ್ಚು ಕಾಯಿಗಳು ಸಿಗುತ್ತವೆ ಎಂಬುದು ಭಟ್ಟರ ಅನುಭವದ ಮಾತು. ಬಿಸಿಲಿರುವ ಪ್ರದೇಶದಲ್ಲಿ ಕಾಯಿ ಹೆಚ್ಚು ಸಿಗುತ್ತದೆ. ನೆರಳಿಗೆ ಒಗ್ಗುವುದಿಲ್ಲ. ಆದರೆ, ಬೇಸಿಗೆಯಲ್ಲಿ ಬುಡ ನೆನೆಯುವಷ್ಟು ನೀರು ಉಣಿಸದಿದ್ದರೆ ಬೇರಿಗೆ ಗೆದ್ದಲಿನ ಹಾವಳಿ ಹೆಚ್ಚಾಗಿ ನಷ್ಟವುಂಟಾಗುವುದು ಖರೆ.
ಬಳ್ಳಿಗೆ ಒಂದು ತಿಂಗಳಾದಾಗಲೇ ಹೂ ಬಿಡಲು ಆರಂಭಿಸುತ್ತದೆ. ಒಂದೂವರೆ ತಿಂಗಳಲ್ಲಿ ಕಾಯಿ ಕೊಯ್ಲಿಗೆ ಆರಂಭ. ಕೀಟಗಳ ಹಾವಳಿ ಕಡಿಮೆ. ಬೇಕಿದ್ದರೆ ಗಂಜಲ ಮತ್ತು ಹುಳಿಮಜ್ಜಿಗೆ ಬೆರೆಸಿ ಸಿಂಪಡಿಸಬಹುದು. ಕೇವಲ ಒಂದು ಬಳ್ಳಿ ಇದ್ದರೂ ಒಂದು ವರ್ಷ ಕಾಲ ಕುಟುಂಬದ ನಿತ್ಯ ಬಳಕೆಯ ತರಕಾರಿಯನ್ನು ಪಡೆಯಬಹುದೆಂದು ಹೇಳುವ ಭಟ್ಟರು, ಪಲ್ಯ, ಸಾಂಬಾರು ಮೊದಲಾದ ಎಲ್ಲ ಬಗೆಯ ಖಾದ್ಯಗಳಿಗೆ ಎಳೆಯ ಕಾಯಿಗಳನ್ನು ಬಳಸಬಹುದು ಎನ್ನುತ್ತಾರೆ. ಲವಂಗವನ್ನು ಹೋಲುವ ವಿಶಿಷ್ಟ ಆಕಾರದಿಂದ ಮಾತ್ರ ಅದು ಗಮನ ಸೆಳೆಯುವುದಲ್ಲ. ರುಚಿಯಲ್ಲಿಯೂ ಮಿಗಿಲಾಗಿದೆ. ಎ ಮತ್ತು ಬಿ ಜೀವಸಣ್ತೀಗಳಿರುವ ಕಾರಣ ದೇಹಕ್ಕೆ ಸಾಕಷ್ಟು ಪೋಷಕಾಂಶಗಳನ್ನು ಕೊಡುತ್ತದೆ. ಬೀನ್ಸ್ ತಿಂದರೆ ಕೆಲವರಿಗೆ ಬರುವ ಗ್ಯಾಸ್ ಟ್ರಬಲ್ ಇದರಿಂದ ಬರುವುದಿಲ್ಲವೆಂದು ಅದರ ಗುಣಗಳ ಬಗೆಗೂ ಗಮನ ಸೆಳೆಯುತ್ತಾರೆ.
ಲವಂಗ ಬೀನ್ಸ್ ಕೃಷಿ ವ್ಯಾಪಕವಾಗಿ ನಡೆಯದ ಕಾರಣ ರೈತರಿಗೆ ಅದರ ಪರಿಚಯ ಕಡಿಮೆ. ಮಾರುಕಟ್ಟೆಯ ದೃಷ್ಟಿಯಿಂದಲೂ ಇದನ್ನು ಬೆಳೆದು ನೋಡಬಹುದು. ಬಯಲು ಪ್ರದೇಶಗಳಲ್ಲಿ ಈ ತರಕಾರಿ ಬೆಳೆದರೆ ಹೆಚ್ಚಿನ ಇಳುವರಿ ಬರಬಹುದು ಎನ್ನುತ್ತಾರೆ ರವಿಶಂಕರ ಭಟ್ಟರು.
– ಪ. ರಾಮಕೃಷ್ಣ ಶಾಸ್ತ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ