ಕಾಲ್ ಮಾಡಿದೋರ ಬಗ್ಗೆ ಕಾಳಜಿ ಇರಲಿ…
Team Udayavani, Dec 17, 2018, 6:00 AM IST
ಮೊಬೈಲ್ ಕರೆಗಳ ವಿಚಾರದಲ್ಲಿ ಒಂದಷ್ಟು ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಾವು ಬಿಡುವಾಗಿದ್ದಾಗ ಕರೆ ಬಂದರೆ ಸ್ವೀಕರಿಸುವ, ಕೆಲಸದ ಒತ್ತಡದಲ್ಲಿದ್ದರೆ, ಆನಂತರ ವಾಪಸ್ ಕರೆ ಮಾಡುವ ಸೌಜನ್ಯ ರೂಢಿಸಿಕೊಳ್ಳೋಣ. ಕೆಲಸದ ಒತ್ತಡದಲ್ಲಿದ್ದೂ ಫೋನ್ ಪಿಕ್ ಮಾಡಲು ಅವಕಾಶವಿದ್ದರೆ, ಕರೆ ಸ್ವೀಕರಿಸಿ, ಏನಾದರೂ ಅರ್ಜೆಂಟ್ ವಿಷಯ ಇದೆಯೇ? ನಾನು ಆಮೇಲೆ ಕರೆ ಮಾಡುತ್ತೇನೆ, ಅಥವಾ ನೀವೇ ಇನ್ನು ಒಂದು ಗಂಟೆ ಬಿಟ್ಟು ಕರೆ ಮಾಡಿ… ಎಂದು ಹೇಳಬಹುದು.
ಮೊಬೈಲ್ ಫೋನು ಇಂದು ಬಹುತೇಕ ಜನರ ಅವಿಭಾಜ್ಯ ಅಂಗವಾಗಿದೆ. ಪ್ರಾಥಮಿಕವಾಗಿ ಕರೆ ಮಾಡಿ ಮಾತನಾಡಲು ಇದ್ದ ಮೊಬೈಲ್ ಫೋನು ಈಗ ಕರೆಗಿಂತ ಹೆಚ್ಚಾಗಿ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಈ ದಿನಗಳಲ್ಲಿ ಯಾರಾದರೂ ಕರೆ ಮಾಡಿದರೆ ಸ್ವೀಕರಿಸಿ ಅವರಿಗೆ ಉತ್ತರ ನೀಡುವುದಕ್ಕೂ ನಮಗೆ ಸಮಯ ಸಾಲದಂತಾಗಿದೆ. ಮೊಬೈಲ್ ನಲ್ಲಿ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ, ಅವರು ಬ್ಯುಸಿಯಿದ್ದಾಗ ಪರವಾಗಿಲ್ಲ, ಬಿಡುವಾದ ನಂತರವಾದರೂ ವಾಪಸ್ ಕರೆ ಮಾಡುವುದಿಲ್ಲ ಎಂಬ ದೂರುಗಳನ್ನು ಕೇಳುತ್ತಲೇ ಇರುತ್ತೇವೆ.
ದೂರವಾಣಿ ಅಥವಾ ಮೊಬೈಲ್ ಗಳಲ್ಲಿ ಕರೆ ಸ್ವೀಕರಿಸುವುದು, ಕರೆ ಮಾಡಿದವರಿಗೆ ಸ್ಪಂದಿಸುವುದು ನಮ್ಮ ವ್ಯಕ್ತಿತ್ವವನ್ನು ಸೂಚಿಸುತ್ತದೆ. ಇದರ ಆಧಾರದ ಮೇಲೆಯೇ ಆ ವ್ಯಕ್ತಿ ಎಷ್ಟು ಜವಾಬ್ದಾರಿಯುತ ಎಂಬುದೂ ಅರ್ಥವಾಗುತ್ತದೆ. ಒಬ್ಬ ಶಾಸಕ, ಜನಪ್ರತಿನಿಧಿ, ರಾಜಕಾರಣಿ ಕ್ಷೇತ್ರದ ಜನರ, ಪಕ್ಷದ ಕಾರ್ಯಕರ್ತರು ಮುಖಂಡರ ಕರೆಗಳನ್ನು ಸ್ವೀಕರಿಸಿ ಮಾತನಾಡುತ್ತಾನೆಯೇ ಇಲ್ಲವೇ ಎಂಬುದರ ಆಧಾರದ ಮೇಲೆಯೇ ಜನರು ಆತನ ಸ್ಪಂದಿಸುವ ಗುಣವನ್ನು ಅಳೆಯುತ್ತಾರೆ. ಕೆಲಸ ಮಾಡಿಕೊಡುತ್ತಾರೋ ಬಿಡುತ್ತಾರೋ ನಂತರದ ಮಾತು. ಕರೆ ಮಾಡಿದಾಗ ಫೋನ್ ಎತ್ತಿ ನಮ್ಮ ಜೊತೆ ಮಾತನಾಡುತ್ತಾರೆ. ಕೆಲಸದ ಒತ್ತಡದಲ್ಲಿದ್ದರೆ ಅನಂತರ ವಾಪಸ್ ಕರೆ ಮಾಡಿ ವಿಚಾರಿಸುತ್ತಾರೆ ಎಂಬುದನ್ನು ಎಷ್ಟೋ ಜನರಿಂದ ಕೇಳಿದ್ದೇವೆ.
ನಾನು ಅನೇಕರನ್ನು ನೋಡಿದ್ದೇನೆ. ಕರೆಗಳು ಬಂದಾಗ ಅದು ತನಗೇ ಅಲ್ಲವೆಂಬಂತೆ ನಿರ್ಭಾವುಕರಾಗಿ ಅದನ್ನು ನೋಡಿ ಕರೆ ಸ್ವೀಕರಿಸದೇ ನಿರ್ಲಕ್ಷಿಸುತ್ತಾರೆ. ಎಲ್ಲ ಕರೆಗಳಿಗೂ ಹೀಗೆ ಮಾಡುತ್ತಾರೆ. ಆ ಕಡೆ ಕರೆ ಮಾಡಿದವರು ಏತಕ್ಕೆ ಮಾಡಿದ್ದಾರೋ, ಏನು ಮುಖ್ಯ ವಿಷಯ ಇದೆಯೋ ಎಂಬ ಸಣ್ಣ ಕಾಳಜಿಯನ್ನೂ ವಹಿಸುವುದಿಲ್ಲ. ಮೀಟಿಂಗ್ನಲ್ಲಿದ್ದಾಗಲೋ, ವಾಹನವನ್ನು ಚಾಲನೆ ಮಾಡುತ್ತಿದ್ದಾಗಲೋ ಕರೆ ಸ್ವೀಕರಿಸಲಾಗುವುದಿಲ್ಲ ಸರಿ. ಆದರೆ ಬಿಡುವಾದಾಗ ಮಿಸ್ಡ್ ಕಾಲ್ಗಳನ್ನು ನೋಡಿ ವಾಪಸ್ ಕರೆ ಮಾಡಿ, ಕರೆ ಮಾಡಿದ್ದ ವಿಷಯವೇನು ಎಂದು ವಿಚಾರಿಸಬಹುದಲ್ಲ?
ಹಾಗಾಗಿ, ನಾವು ಮೊಬೈಲ್ ಕರೆಗಳ ವಿಚಾರದಲ್ಲಿ ಒಂದಷ್ಟು ಶಿಸ್ತನ್ನು ರೂಢಿಸಿಕೊಳ್ಳುವುದು ಒಳಿತು. ನಾವು ಬಿಡುವಾಗಿದ್ದಾಗ ಕರೆ ಬಂದರೆ ಸ್ವೀಕರಿಸುವ, ಕೆಲಸದ ಒತ್ತಡದಲ್ಲಿದ್ದರೆ, ಆನಂತರ ವಾಪಸ್ ಕರೆ ಮಾಡುವ ಸೌಜನ್ಯ ರೂಢಿಸಿಕೊಳ್ಳೋಣ. ಕೆಲಸದ ಒತ್ತಡದಲ್ಲಿದ್ದೂ ಫೋನ್ ಪಿಕ್ ಮಾಡಲು ಅವಕಾಶವಿದ್ದರೆ, ಕರೆ ಸ್ವೀಕರಿಸಿ, ಏನಾದರೂ ಅರ್ಜೆಂಟ್ ವಿಷಯ ಇದೆಯೇ? ನಾನು ಆಮೇಲೆ ಕರೆ ಮಾಡುತ್ತೇನೆ, ಅಥವಾ ನೀವೇ ಇನ್ನು ಒಂದು ಗಂಟೆ ಬಿಟ್ಟು ಕರೆ ಮಾಡಿ… ಎಂದು ಹೇಳಬಹುದು. ಅಥವಾ ಮೊಬೈಲ್ಗಳಲ್ಲಿ ಕರೆ ಬಂದಾಗ, ಈಗ ಬ್ಯುಸಿಯಾಗಿದ್ದೇನೆ ಅನಂತರ ಕರೆ ಮಾಡಿ ಎಂಬಂತಹ ಮೆಸೇಜ್ಗಳನ್ನು ಕಳಿಸುವ ಆಪ್ಷನ್ಗಳಿರುತ್ತವೆ. ಕರೆ ಬಂದಾಗಲೇ ಮೆಸೇಜ್ ಕಳಿಸುವ ಆಯ್ಕೆ ಕೂಡ ಇರುತ್ತದೆ. ಅದನ್ನು ಒತ್ತಿದರೂ ಆಯಿತು. ತಕ್ಷಣ ಕರೆ ಮಾಡಿದಾತನಿಗೆ ಮೆಸೇಜ್ ರವಾನೆಯಾಗುತ್ತದೆ.
ಇದು ಕರೆ ಸ್ವೀಕರಿಸುವವರ ವಿಷಯವಾದರೆ, ಕರೆ ಮಾಡುವವರಿಗೂ ಕೆಲವು ಅಶಿಸ್ತುಗಳಿರುತ್ತವೆ. ಆ ಕಡೆ ಕರೆ ಸ್ವೀಕರಿಸುವವರು ಯಾವ ಪರಿಸ್ಥಿತಿಯಲ್ಲಿರುತ್ತಾರೆ ಎಂಬ ಬಗ್ಗೆ ಚಿಂತಿಸುವುದೇ ಇಲ್ಲ. ಇವರು ಕರೆ ಮಾಡಿದ ವ್ಯಕ್ತಿ ಕೆಲಸದಲ್ಲಿ ಅತ್ಯಂತ ಬ್ಯುಸಿಯಾಗಿರುತ್ತಾನೆ. ಈ ಕಡೆ ಇರುವವರು ಅತ್ಯಂತ ಆರಾಮವಾಗಿ ಕುಳಿತಿರುತ್ತಾರೆ. ತಮ್ಮಂತೆ ಆತನೂ ಆರಾಮಾಗಿ ಕುಳಿತಿರುತ್ತಾನೆ ಎಂಬ ಭಾವದಿಂದ, ” ಏನಯ್ನಾ ಸಮಾಚಾರ? ಊಟ ಆಯ್ತಾ? ತಿಂಡಿ ಆಯ್ತಾ?’ ಅಂತ ಶುರುಮಾಡಿ, ತಮ್ಮ ಪ್ರವರಗಳನ್ನು ಒದರಲು ಶುರುಮಾಡುತ್ತಾರೆ. ಆ ಕಡೆಯಿರುವವ ಕೆಲಸದ ಅವಸರದಲ್ಲಿರುತ್ತಾನೆ. ತನ್ನ ಪರಿಸ್ಥಿತಿ ಅರ್ಥ ಮಾಡಿಕೊಳ್ಳದೇ ಸುಮ್ಮನೆ ಮಾತನಾಡುತ್ತಿದ್ದಾನಲ್ಲ ಎಂದು ಉರಿದು ಹೋಗುತ್ತದೆ. ಕರೆ ಕಟ್ ಮಾಡಿದರೆ ಬೇಜಾರು ಮಾಡಿಕೊಳ್ಳುತ್ತಾರೆ ಎಂಬ ಸಂದಿಗ್ಧತೆ ಉಂಟಾಗುತ್ತದೆ. ಹಾಗಾಗಿ ಯಾರಿಗೇ ಆಗಲಿ, ಕರೆ ಮಾಡಿದಾಗ ಈಗ ಫ್ರೀ ಇದ್ದೀರಾ? ಐದು ನಿಮಿಷ ಮಾತನಾಡಬಹುದೇ? ಅಂತ ಹೇಳಿ ಮುಂದುವರಿಯಿರಿ. ಅನವಶ್ಯಕವಾಗಿ ಕರೆ ಮಾಡಲು ಹೋಗಬೇಡಿ. ಇದರಿಂದ ನಿಮ್ಮ ಮತ್ತು ಅವರ ಸಮಯ ಹಾಳು.
ಇಲ್ಲಿ ಇನ್ನೊಂದು ವಿಷಯ ಪ್ರಸ್ತಾಪಿಸಬೇಕು. ಇಬ್ಬರು ಗೆಳೆಯರು ಆರಾಮಾಗಿ ಹರಟುತ್ತಿರುತ್ತೀರಿ. ಹರಟೆ ಹೊಡೆಯಬೇಡಿ ಎಂದು ಹೇಳುತ್ತಿಲ್ಲ. ಸಮಯವಿದ್ದರೆ ಎಷ್ಟಾದರೂ ಹರಟಿ. ಬೆಳಿಗ್ಗೆ ಏನು ತಿಂಡಿ? ಇಡ್ಲಿ ಎಷ್ಟು ತಿಂದೆ? ಎಂದು ಶುರುವಾದ ಹರಟೆ, ಮೋದಿ, ರಾಹುಲ್ಗಾಂಧಿಯಿಂದ ಹೊರಟು, ವಿರಾಟ್ ಕೊಹ್ಲಿ, ದೀಪಿಕಾ, ದಿಶಾ ಪಟಾಣಿ, ಶ್ರದ್ಧಾ ಕಪೂರ್ ಮೂಲಕ ಹಾದು ಫೇಸ್ಬುಕ್, ವಾಟ್ಸಪ್ ಇತ್ಯಾದಿಗಳತ್ತ ಹೊರಟು ಸಾಗುತ್ತಲೇ ಇರುತ್ತದೆ. ಅಂತಹ ಸಮಯದಲ್ಲಿ ಯಾರಾದರೂ ಪದೇ ಪದೇ ಕಾಲ್ ಮಾಡುತ್ತಿದ್ದರೆ, ಕಾಲ್ ವೇಟಿಂಗ್ ತೋರಿಸುತ್ತದೆ. ಆಗ ಗೆಳೆಯನಿಗೆ ಹೇಳಿ ಕರೆ ತುಂಡರಿಸಿ, ಪದೇ ಪದೇ ಕಾಲ್ ಮಾಡುತ್ತಿದ್ದವರನ್ನು ವಿಚಾರಿಸಿ. ಮುಖ್ಯವಾಗಿದ್ದರೆ ಮಾತಾಡಿ. ಅಮುಖ್ಯವಾಗಿದ್ದರೆ, ಅನಂತರ ಮಾತನಾಡುತ್ತೇನೆ ಎಂದು ಹೇಳಿ.
ಹೀಗೊಮ್ಮೆ ಚೆಕ್ ಮಾಡಿ…
ಟಿಪ್ಸ್: ನಿಮ್ಮ ಮೊಬೈಲ್ನಲ್ಲಿ ಕಾಲ್ ವೇಟಿಂಗ್ ಆಪ್ಷನ್ ಆನ್ ಆಗಿದೆಯೇ ಎಂದು ಪರಿಶೀಲಿಸಿಕೊಳ್ಳಿ. ಅದು ಆನ್ ಆಗಿರದಿದ್ದರೆ ಇನ್ನೊಂದು ಕರೆಯಲ್ಲಿದ್ದಾಗ, ಬೇರೊಬ್ಬರು ಕರೆ ಮಾಡಿದರೆ ಗೊತ್ತಾಗುವುದಿಲ್ಲ. ಆಗವರು ನನ್ನ ಕರೆ ಬಂದರೂ ನೀವು ನಂತರ ಕರೆ ಮಾಡಲಿಲ್ಲ ಎಂದು ಆಕ್ಷೇಪಿಸುತ್ತಾರೆ. ಕಾಲ್ ವೇಟಿಂಗ್ ಆನ್ ಮಾಡುವುದು ಹೀಗೆ. ಸೆಟ್ಟಿಂಗ್ಗೆ ಹೋಗಿ, ವೈರ್ಲೆಸ್ ಅಂಡ್ ನೆಟ್ವರ್ಕ್ ಆಯ್ಕೆ ಒತ್ತಿ, ಅನಂತರ ಕಾಲ್ ಸೆಟ್ಟಿಂಗ್ಗೆ ಹೋಗಿ ಅದನ್ನು ಒತ್ತಿ, ನಂತರ ಅದರಲ್ಲಿ ಅಡಿಷನಲ್ ಸೆಟ್ಟಿಂಗ್ ಹೋಗಿ ಅದನ್ನು ಒತ್ತಿ, ಅಲ್ಲಿ ಕಾಲ್ ವೇಟಿಂಗ್ ಆನ್ ಅಗಿದೆಯಾ ಚೆಕ್ ಮಾಡಿ. ಆನ್ ಆಗಿರದಿದ್ದರೆ ಆನ್ ಮಾಡಿಕೊಳ್ಳಿ.
– ಕೆ.ಎಸ್. ಬನಶಂಕರ ಆರಾಧ್ಯ