ಖಾದಿಯಿಂದ ಖುಷಿಯ ಬದುಕು
Team Udayavani, Jan 4, 2021, 7:30 PM IST
ಖಾದಿ ಬಟ್ಟೆಗೆ ವಿಶಿಷ್ಟ ಮನ್ನಣೆ, ಪ್ರಾಮುಖ್ಯತೆ, ಮತ್ತು ಬೇಡಿಕೆ ತುಂಬಾ ಹಿಂದಿನಿಂದಲೂ ಇದೆ. ಖಾದಿ ಅಥವಾ ಖಡ್ಡರ ಎಂದು ಕರೆಯಲ್ಪಡುವಈ ಉಡುಪು ಚರಕ ಮತ್ತು ಕೈಮಗ್ಗದಿಂದ ತಯಾರಾಗುತ್ತದೆ. ಖಾದಿ ಬಟ್ಟೆಯನ್ನು ತಯಾರಿಸುವ ಕೇಂದ್ರಗಳಲ್ಲಿ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿರುವ ಭಾರತೀಯ ಸಂಸ್ಕೃತಿ ಖಾದಿ ಕೇಂದ್ರವೂ ಒಂದು. ಇಲ್ಲಿನ ಚನ್ನಗೀರಪ್ಪ ಜೇವಳಗಿ ಅವರ ನೇತೃತ್ವದಲ್ಲಿ 12 ವರ್ಷಗಳಿಂದ ಈ ಉದ್ಯಮವು ಕಾರ್ಯನಿರ್ವಹಿಸುತ್ತಿದೆ.
ಖಾದಿ ತಯಾರಿಕೆ : ಬೇಸಿಗೆಯಲ್ಲಿ ತಣ್ಣಗೆ ಹಾಗೂ ಚಳಿಗಾಲದಲ್ಲಿ ಬೆಚ್ಚಗೆ ಇರಿಸುವ ಖಾದಿ ಬಟ್ಟೆಯನ್ನುಗುಣಮಟ್ಟದ ಹತ್ತಿಯಿಂದ ತಯಾರಿಸಲಾಗುತ್ತದೆ. ಖಾದಿ ಬಟ್ಟೆಯತಯಾರಿಕೆಯಲ್ಲಿ ಬೇಕಾದ ಕಚ್ಚಾ ವಸ್ತುನೋಲವನ್ನು ಮಹಾರಾಷ್ಟ್ರದಿಂದ ಆಮದು ಮಾಡಿ ಕೊಳ್ಳಲಾಗುತ್ತದೆ. ಭಾರತೀಯ ಸಂಸ್ಕೃತಿ ಖಾದಿ ಕೇಂದ್ರದಲ್ಲಿ ದಿನಕ್ಕೆ 60ರಿಂದ 70ಉಡುಪುಗಳು ತಯಾರಾಗುತ್ತವೆ. ಅದರಲ್ಲಿ ಕರವಸ್ತ್ರ, ಶರ್ಟ್, ಟವೆಲ್, ಬ್ಯಾಗ್ಗಳು, ಜಮಖಾನ ಮತ್ತು ವಿವಿಧ ಬಣ್ಣಗಳ ಮಾಸ್ಕ್ ಸೇರಿವೆ.
ಬೆಂಬಲ ಬೆಲೆ: ಗ್ರಾಹಕರಿಗೆ ಅನುಕೂಲವಾಗುವ ರೀತಿಯಲ್ಲಿ ಖಾದಿವಸ್ತ್ರಗಳಿಗೆ ಬೆಲೆ ನಿಗದಿಪಡಿಸಲಾಗಿದೆ. ಕರವಸ್ತ್ರ 20 ರೂ. ಜಮಖಾನ 350 ರಿಂದ 400 ರೂ.,ಶರ್ಟ್ಗಳನ್ನು 300 ರಿಂದ 400 ರೂ.ನಂತೆ ಮಾರಾಟ ಮಾಡುತ್ತಾರೆ.
ಹೆಣ್ಮಕ್ಳು ಸ್ಟ್ರಾಂಗ್ ಗುರೂ… :
ಭಾರತೀಯ ಸಂಸ್ಕೃತಿ ಹತ್ತಿ ಕೈಮಗ್ಗ ಉತ್ಪನ್ನ ಕೇಂದ್ರದಲ್ಲಿ 72 ಜನ ಕೆಲಸಗಾರರಿದ್ದಾರೆ. ಅದರಲ್ಲಿ 46 ಜನ ಮಹಿಳೆಯರು. ಇವರೆಲ್ಲ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಂಡಿದ್ದಾರೆ ಎಂಬುದು ವಿಶೇಷ. ಇದೀಗ ಮಹಿಳಾ ಹತ್ತಿ ಕೈಮಗ್ಗ ಹಾಗೂ ನೇಕಾರರ ಸಂಘವನ್ನೂ ಸ್ಥಾಪನೆ ಮಾಡಲಾಗಿದೆ.
ಕೋವಿಡ್ನಿಂದ ಕುಗ್ಗಿದ ವ್ಯಾಪಾರ :
ಕೋವಿಡ್ ಕಾರಣದಿಂದ ಖಾದಿ ವಸ್ತ್ರಗಳ ಮಾರಾಟಕ್ಕೂ ಹೊಡೆತ ಬಿದ್ದಿತ್ತು.ಈಗ ಮತ್ತೆ ವ್ಯಾಪಾರವು ಸಹಜ ಸ್ಥಿತಿಯಲ್ಲಿದೆ. ಗಾಂಧಿ ಜಯಂತಿ,ಸ್ವಾತಂತ್ರ್ಯದಿನಾಚರಣೆಯ ಸಂದರ್ಭದಲ್ಲಿ ಖಾದಿ ಮಳಿಗೆಗಳನ್ನೂ ತೆರೆಯಲಾಗುತ್ತದೆ. ಆಗ ಒಳ್ಳೆಯ ವ್ಯಾಪಾರವಾಗುತ್ತದೆ ಎನ್ನುತ್ತಾರೆ ಖಾದಿ ಬಟ್ಟೆಗಳ ವ್ಯಾಪಾರಿ ಈರಪ್ಪ ನುಚ್ಚಿ.
– ಪಲ್ಲವಿ ಸಂಜೀವ ಘಟ್ಟೆನ್ನವರ, ಬಾಗಲಕೋಟೆ