ಕಾರು V/s ಮುಂಗಾರು
Team Udayavani, Aug 17, 2020, 7:01 PM IST
ಭಾರತದಲ್ಲಿ ಮಳೆ ಅಂದ್ರೆ ಎಲ್ಲ. ಅದು ಜೀವ, ಪ್ರಾಣ, ಬದುಕು… ಹೀಗೆ… ಆದರೆ, ಅದೇ ಮಳೆ ಪ್ರಾಣ ಭಯ ತರುವುದೂ ಸುಳ್ಳಲ್ಲ. ಅದರಲ್ಲೂ ಅನೇಕ ರಸ್ತೆಗಳು ಮಳೆಗಾಲ ಬಂತು ಅಂದ್ರೆ ಸಾಕು, ಕೆರೆ ಕೋಡಿಗಳಾಗಿ ಬಿಡುತ್ತವೆ. ಇಂಥ ಹೊತ್ತಲ್ಲಿ ನಮ್ಮ, ನಿಮ್ಮ ವಾಹನಗಳನ್ನು ಸಂಭಾಳಿಸಿಕೊಳ್ಳುವುದು ತುಂಬಾ ಕಷ್ಟದ ವಿಚಾರದ ಮಾತು.
ಸದ್ಯ ಮುಂಗಾರು ಮಳೆ ಧೋ ಎಂದು ಸುರಿಯುತ್ತಿದೆ. ದೆಹಲಿ, ಮುಂಬೈ, ಬೆಂಗಳೂರಿನಂಥ ನಗರಗಳಲ್ಲಿ ಮನೆಗಳು, ರಸ್ತೆಗಳಲ್ಲಿ ನೀರು ನಿಂತು ಪಡಿಪಾಟಲು ಸೃಷ್ಟಿಸುತ್ತಿದೆ. ಇಂಥ ಹೊತ್ತಲ್ಲಿ ವಾಹನಗಳನ್ನು ರಕ್ಷಿಸಿಕೊಳ್ಳುವ ಕುರಿತಂತೆ ಕೆಲವೊಂದು ಟಿಪ್ಸ್ ಇಲ್ಲಿವೆ..
1.ಮರದ ಕೆಳಗೆ ನಿಲ್ಲಿಸಬೇಡಿ : ನೆರಳಿದೆ, ಬಿಸಿಲಲ್ಲಿ ಕಾರು ಒಣಗೋದು ತಪ್ಪುತ್ತೆ ಎಂಬ ಕಾರಣಕ್ಕೆ ಮರದ ಕೆಳಗೆ ಕಾರು, ಬೈಕುಗಳನ್ನು ನಿಲ್ಲಿಸಬೇಡಿ. ಒಂದು ವೇಳೆ ಭಾರೀ ಗಾಳಿಯೊಂದಿಗೆ ಮಳೆ ಬಂದು ಮರ ಬಿದ್ದರೆ ನಿಮ್ಮ ಕಾರಿಗೆ ಡ್ಯಾಮೇಜ್ ಖಂಡಿತ
- ಕಾರಿನ ಕವರ್ ಹಾಕಿಡಿ : ಇದು ಎಂದಿಗೂ ಸೇಫ್. ನಿಮ್ಮ ಕಾರನ್ನು ನಿಲ್ಲಿಸಲು ನಿಮ್ಮದೇ ಆದ ಗ್ಯಾರೇಜ್ ಇಲ್ಲವೆಂದಾದರೆ, ಬಯಲು ಪ್ರದೇಶದಲ್ಲಿ ನಿಲ್ಲಿಸುತ್ತೀರಿ ಎಂದಾದರೆ, ಅದಕ್ಕೆ ಒಂದು ಕವರ್ ಹಾಕಿಡಿ. ಇದರಿಂದ ಮಳೆಯಲ್ಲಿ ಸುಮ್ಮನೆನೆನೆಯೋದು ತಪ್ಪುತ್ತದೆ. ಕಾರಿನ ಕೆಳಭಾಗದಲ್ಲಿ ಕೆಸರು ಅಂಟುವ ಸಮಸ್ಯೆಯಿಂದಲೂ ಬಚಾವ್ ಆಗಬಹುದು.
- ಇನ್ಷೊರೆನ್ಸ್ ನೋಡಿಕೊಳ್ಳಿ : ಬ್ಯುಸಿ ಬದುಕಿನಲ್ಲಿ ಕೆಲವೊಮ್ಮೆ ನಿಮ್ಮ ಕಾರು ಮತ್ತು ಬೈಕಿನ ಇನ್ಷೊರೆನ್ಸ್ ಅವಧಿ ಮುಗಿದು ಹೋಗಿರುವುದೇ ಗೊತ್ತಿರುವುದಿಲ್ಲ. ಇದನ್ನು ಆಗಾಗ ಚೆಕ್ ಮಾಡಿಕೊಂಡಿರಿ. ಒಂದು ವೇಳೆ ಮಳೆ ಸಂಬಂಧಿತ ಘಟನೆಗಳಲ್ಲಿ ನಿಮ್ಮ ವಾಹನಕ್ಕೇನಾದರೂ ಆದರೆ, ಅದನ್ನು ಸರಿಮಾಡಿಸಲು ಇನ್ಷೊರೆನ್ಸ್ ಬೇಕೇಬೇಕು. ಇಲ್ಲದಿದ್ದರೆ, ನಿಮ್ಮ ಕೈಯಾರೆ ಭಾರೀ ಪ್ರಮಾಣದ ಹಣ ತೆರಬೇಕಾಗಿ ಬರಬಹುದು.
- ಟೈರ್ ಬಗ್ಗೆ ಹುಷಾರು : ನಿಮ್ಮ ಕಾರಿನ ಟೈರುಗಳನ್ನು ಹುಷಾರಾಗಿ ನೋಡಿಕೊಳ್ಳಿ. ನೀರು ನಿಂತಿರುವ ಜಾಗದಲ್ಲಿ ಕಾರನ್ನು ನಿಲ್ಲಿಸಬೇಡಿ. ಇದರಿಂದ ಟೈರಿನ ಒಳಗೆ ನೀರು ಹೋಗಿಬಿಟ್ಟರೆ ಅದು ಹಾಳಾಗುವ ಸಾಧ್ಯತೆ ಇರುತ್ತದೆ.
- ಪೆಟ್ರೋಲ್ ಟ್ಯಾಂಕ್ಗೆ ನೀರು ಹೋಗಬಾರದು : ಕಾರಿಗಿಂತ ಇದು ಬೈಕಿನ ವಿಚಾರದಲ್ಲಿ ಇಂಪಾರ್ಟೆಂಟ್ ಯಾವುದೇ ಕಾರಣಕ್ಕೂ ಪೆಟ್ರೋಲ್ ಟ್ಯಾಂಕ್ಗೆ ನೀರು ಹೋಗದಂತೆ ನೋಡಿಕೊಳ್ಳಿ. ಒಂದು ವೇಳೆ ನೀರು ಹೋದರೆ, ನಿಮ್ಮ ಗಾಡಿ ಕೈಕೊಡುವುದು ಗ್ಯಾರಂಟಿ.
- ಸಾಮಾಜಿಕ ಅಂತರ : ನಿಮ್ಮ ಮನೆ ಮುಂದೆ ಬೈಕು ನಿಲ್ಲಿಸುತ್ತೀರಿ, ಇದರ ಜತೆಗೆ ಬೇರೆಯವರೂ ಒತ್ತೂತ್ತಾಗಿ ನಿಲ್ಲಿಸುತ್ತಾರೆ ಎಂದರೆ ಹುಷಾರು. ಯಾವುದೇ ಕಾರಣಕ್ಕೂ ಹೀಗೆ ಒಟ್ಟೊಟ್ಟಾಗಿ ಬೈಕನ್ನು ನಿಲ್ಲಿಸಬೇಡಿ. ಬೈಕುಗಳನಡುವೆ ಅಂತರವಿರಲಿ. ಒಂದು ವೇಳೆ ಒಟ್ಟೊಟ್ಟಾಗಿ ನಿಲ್ಲಿಸಿ, ಒಂದು ಬೈಕು ಬಿದ್ದರೂ ಎಲ್ಲಾ ಬೈಕುಗಳೂ ಬೀಳುವ ಸಂಭವವಿರುತ್ತದೆ.
6 .ವೈಪರ್ ಬಗ್ಗೆ ಗಮನವಿರಲಿ : ಇದು ತೀರಾ ಮುಖ್ಯವಾದ ಸಂಗತಿ. ಮಳೆ ಎಂದಾಕ್ಷಣ ಮನೆಯಲ್ಲೇ ಇರಲು ಆಗುವುದಿಲ್ಲ. ಕೆಲಸಕ್ಕೆ ಅಥವಾ ಇನ್ನಾವುದೋ ವಿಚಾರಕ್ಕೆ, ಬೇರೆಲ್ಲಿಗೋ ಹೋಗಬೇಕಾಗಿರುತ್ತದೆ. ಇದಕ್ಕಾಗಿ ನಿಮ್ಮ ಕಾರಿನ ವೈಪರ್ ಪರೀಕ್ಷೆ ಮಾಡಿಕೊಳ್ಳಿ. ಒಂದು ವೇಳೆ ಇದು ಹಾಳಾಗಿ ಹೋಗಿದ್ದರೆ, ನೀವು ಮಳೆಯಲ್ಲಿ ಕಾರು ಚಲಾಯಿಸುವುದು ಅಸಾಧ್ಯವಾಗುತ್ತದೆ.
- ನೀರು ತುಂಬಿರುವೆಡೆ ಹೋಗಬೇಡಿ : ರಸ್ತೆಯಲ್ಲಿ ಹೋಗುವಾಗ, ನೀರು ತುಂಬಿರುವುದು ಕಾಣಿಸುತ್ತದೆ. ಪರ್ವಾಗಿಲ್ಲ, ಕಡಿಮೆ ಇರಬಹುದು ಎಂಬ ಊಹೆಯಿಂದ ಕಾರು ಅಥವಾ ಬೈಕು ಚಲಾಯಿಸಿಕೊಂಡು ಹೋಗ ಬೇಡಿ. ಅಲ್ಲಿ ನಿಮ್ಮ ಊಹೆಗೂ ಮೀರಿದ ಮಟ್ಟದಲ್ಲಿ ನೀರು ನಿಂತಿರಬಹುದು. ಒಂದು ವೇಳೆ ಇಂಥ ಕಡೆ ಹೋಗಿ ಮಧ್ಯದಲ್ಲಿ ಕಾರು ಸಿಕ್ಕಿಹಾಕಿಕೊಂಡರೆ ವಾಪಸ್ ಬರುವುದು ಕಷ್ಟ. ಏನೇ ಆಗಲಿ, ಈ ಮಳೆಗಾಲ ದಲ್ಲಿನಿಮ್ಮ ವಾಹನಗಳನ್ನು ಚೆನ್ನಾಗಿ ನೋಡಿಕೊಳ್ಳಿ. ಎಚ್ಚರಿಕೆ ಇದ್ದರೆ, ನೀವು ಮತ್ತು ನಿಮ್ಮ ವೆಹಿಕಲ್ ಎರಡೂ ಚೆನ್ನಾಗಿರುತ್ತವೆ.
-ಸೋಮಶೇಖರ ಸಿ.ಜೆ.