ಈರುಳ್ಳಿ ; ಲಾಭದ ಬಂಗಿ ಜಂಪ್
Team Udayavani, Mar 13, 2017, 11:36 AM IST
ಬಾಗಲಕೋಟೆ ಜಿಲ್ಲೆಯಲ್ಲಿ ಅದರಲ್ಲೂ ಮುಧೋಳ, ಬೀಳಗಿ, ಜಮಖಂಡಿ ತಾಲೂಕುಗಳಲ್ಲಿನ ರೈತರು ಕಬ್ಬಿನ ಬೆಳೆಗೆ ನೀಡುವಷ್ಟು ಮಹತ್ವವನ್ನು ಅನ್ಯ ಬೆಳೆಗೆ ಅಷ್ಟೊಂದು ಪ್ರಮಾಣದಲ್ಲಿ ಗಮನ ಹರಿಸುತ್ತಿಲ್ಲ. ಕಾರಣ ಕಬ್ಬಿನಲ್ಲಿ ಲಾಭ ದ್ವಿಗುಣ ಎಂಬ ನಂಬಿಕೆ, ಜೊತೆಗೆ ಇದರ ನಿರ್ವಹಣೆಯೂ ಕಡಿಮೆ ಅಂತ. ಆದರೆ ಜಗದಾಳದ ರೈತ ಸದಾಶಿವ ಬಂಗಿಯವರು ಈರುಳ್ಳಿಯ ಜೊತೆ ಕಬ್ಬನ್ನು ಬೆಳೆದು ಅಪಾರ ಲಾಭವನ್ನು ಮಾಡುತ್ತಿದ್ದಾರೆ. ಜೊತೆಗೆ ಈರುಳ್ಳಿಯನ್ನು ಕೆಡದಂತೆ ಇಟ್ಟು, ಉತ್ತಮ ಬೆಲೆ ಬಂದಾಗ ಮಾರಿಕೊಳ್ಳಬಹುದಾದ ಸಂರಕ್ಷಣಾ ಘಟಕವನ್ನು ನಿರ್ಮಾಣ ಮಾಡಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.
ಮೊದಲು ಭೂಮಿಯನ್ನು ಸಿದ್ಧಪಡಿಸಿಕೊಳ್ಳಬೇಕು. 1 ಎಕರೆ ಭೂಮಿಯಲ್ಲಿ 25 ಚಕ್ಕಡಿ ತಿಪ್ಪೆ ಗೊಬ್ಬರ, 2ಚೀಲ ಬೇವಿನ ಹಿಂಡಿ, 2 ಚೀಲ ಸಿಂಗಲ್ ಸುಪರ ಪಾಸಪೇಟ, 1 ಚೀಲ ಪೋಟ್ಯಾಷ್, ಅರ್ಧ ಚೀಲ ಅಮೋನಿಯಂ ಸಲ್ಪೇಟ, 2 ಚೀಲ ಸೆಟ್ರೆŒ„ಟ್, ಜಿಂಕ್, ಪೆರಸ್, ಮ್ಯಾಂಗನೀಸ್, ಬೋರಾನ್ ಎಲ್ಲ ಸೇರಿಸಿ 10 ಕೆಜಿ ಮಿಕ್ಸ್ ಮಾಡಿ, ನೆಲಕ್ಕೆ ಹಾಕಿದ್ದಾರೆ. ಸಾಲಿನಿಂದ ಸಾಲಿಗೆ 4 ವರೆ ಫೂಟ್ಗೆ ಏರು ಮಡಿ ನಿರ್ಮಾಣ ಮಾಡಿ, 1 ಏರುಮಡಿಗೆ 8 ಸಾಲಿನಿಂತೆ ಈರುಳ್ಳಿ ಸಸಿಗಳನ್ನು ನಾಟಿ ಮಾಡಲಾಗಿದೆ. ಈರುಳ್ಳಿ ಸಸಿಗಳನ್ನು ನಾವೇ ನಮ್ಮ ಸ್ವಂತ ನೆಲದಲ್ಲಿ ರೆಡಿ ಮಾಡಿಕೊಳ್ಳುತ್ತೇವೆ. ಅಲ್ಲದೇ ಅದರ ಜೊತೆ ಏರುಮಡಿಯ ನಡುವಿನ ಸಾಲಿನಲ್ಲಿ 2 ಅಡಿಗೆ 1ರಂತೆ 86:0:32 ತಳಿಯ ಕಬ್ಬಿನ ಬೀಜವನ್ನು ನಾಟಿ ಮಾಡಿದ್ದೇವೆ. ಈರುಳ್ಳಿ 3 ವರೆಯಿಂದ ನಾಲ್ಕು ತಿಂಗಳಲ್ಲಿ ಬೆಳೆ ಬರುವುದರಿಂದ ನಂತರ ಕಬ್ಬಿನಲ್ಲಿಯೂ ಉತ್ತಮ ಇಳುವರಿ ಪಡೆಯಬಹುದು.
ಈರುಳ್ಳಿ ಸಸಿ ನಾಟಿ ಮಾಡಿದ 1 ತಿಂಗಳ ನಂತರ ಡ್ರಿಪ್ ಮೂಲಕ 0: 52 : 34 10 ಕೆ ಜಿ., ಬೋರಾನ(20) ಅರ್ಧ ಕೆಜಿ, 1ವರೆ ತಿಂಗಳಿಗೆ ಲ್ಯಾಮಡೆಕ್ಸ್ 1 ಲೀಟರ್ ನೀರಿಗೆ 1.5 ಎಂ.ಎಲ್ ಮತ್ತು ಬಯೋ(20) ಟಾನಿಕ್, ಮ್ಯಾಂಕೋಬಾನ್-ಸಿ ಪ್ರತಿ ಲೀಟರ್ಗೆ 2 ಗ್ರಾಂ ನೀಡಲಾಗಿದೆ. ಅಲ್ಲದೇ ಹವಾಮಾನಕ್ಕೆ ತಕ್ಕಂತೆ ಔಷಧ ಸಿಂಪಡಿಸಲಾಗಿದೆ ಎನ್ನುತ್ತಾರೆ ಸದಾಶಿವ ಬಂಗಿ.
1 ಎಕರೆಗೆ 15 ಟನ್ ಇಳುವರಿ ಬಂದಿದ್ದು, ಸದ್ಯ ಸ್ಥಳೀಯ ಮಾರುಕಟ್ಟೆಯಲ್ಲಿ ಈರುಳ್ಳಿಗೆ ರೂ. 15 ದರ ದೊರೆಯುತ್ತಿದೆ. ಅಲ್ಲದೇ ಮುಂದೆ ಕಬ್ಬು ಅಂದಾಜಯ 70 ಟನ್ ಇಳುವರಿ ಲಕ್ಷ ಲಕ್ಷ ಲಾಭ. ಅದಕ್ಕೆ ನಾವು ಖರ್ಚು ಮಾಡಿದ್ದು ಮಾತ್ರ ಎಲ್ಲ ಸೇರಿ 50 ಸಾವಿರ ಮಾತ್ರವಂತೆ.
ಸಂರಕ್ಷಣಾ ಘಟಕ
ಇವರು ಈರುಳ್ಳಿ ಸಂರಕ್ಷಣೆಗೆ ಹೊಸ ವಿಧಾನ ಕಂಡುಹಿಡಿದಿದ್ದಾರೆ. ಬೆಳೆದಂತಹ ಈರುಳ್ಳಿಯನ್ನು ಕೆಡದಂತೆ ಸಂಗ್ರಹಿಸಿ ಇಡಲು 22 ಅಡಿ ಹಾಗೂ 4.5 ಅಡಿ ಸುತ್ತಲು ಗಾಳಿಯಾಡುವಂತಹ ಒಂದು ಶೆಡ್ ಮಾಡಿಕೊಂಡು ಅದರಲ್ಲಿ ಕಂಪಾರ್ಟ್ಮೆಂಟ್ಗಳನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದ ನಾವು ಬೆಳೆದ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೆಲೆ ಇಲ್ಲದಿದ್ದರೆ ಅದನ್ನು 6 ತಿಂಗಳವರೆಗೆ ಈ ಸಂರಕ್ಷಣಾ ಘಟಕದಲ್ಲಿ ಇಟ್ಟು ಉತ್ತಮ ಬೆಲೆ ಬಂದಾಗ ಮಾರಾಟ ಮಾಡುತ್ತಾರೆ. ಅಲ್ಲದೇ ಈ ಸಂರಕ್ಷಣಾ ಘಟಕದಲ್ಲಿ ನಾಲ್ಕು ಕಡೆ ಉತ್ತಮವಾದ ಗಾಳಿ ಬರುವುದರಿಂದ ಈರುಳ್ಳಿ ಯಾವುದೇ ರೀತಿ ಕೆಡುವುದಿಲ್ಲವಂತೆ.
ಈರುಳ್ಳಿಯನ್ನು ನಾವೇ ಸ್ವತಃ ಸ್ಥಳಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುವುದರಿಂದ ಉತ್ತಮವಾದ ಬೆಲೆ ಸಿಗುತ್ತದೆ. ರೈತರು ಒಂದೇ ಬೆಳೆಯ ಕಡೆ ಹೆಚ್ಚಿನ ಗಮನ ಹರಿಸದೆ, ಮಾರುಕಟ್ಟೆಗೆ ಅನುಗುಣವಾಗಿ ಸಮಗ್ರ ಕೃಷಿಯತ್ತ ಗಮನಹರಿಸಿದಲ್ಲಿ ರೈತರ ಬಾಳು ಬಂಗಾರವಾಗುತ್ತದೆ. ಅದಕ್ಕೆ ನಾನೇ ಉದಾಹರಣೆ ಅಂತಾರೆ ಬಂಗಿ.
– ಕಿರಣ ಶ್ರೀಶೈಲ ಆಳಗಿ