ದಾಳಿಂಬೆ ಲಾಭ, ಲಾಭ ರೇ…
Team Udayavani, Feb 27, 2017, 2:07 PM IST
ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕು ಹಲವಾರು ವರ್ಷಗಳಿಂದ ಬರಗಾಲ ಪೀಡಿತ ಪ್ರದೇಶ ಎಂದೇ ಹಣೆಪಟ್ಟಿ ಪಡೆದಿದೆ. ಅಂತಹ ನೆಲದಲ್ಲಿ ದಾಳಿಂಬೆ ಬೆಳೆಯುವ ಮೂಲಕ ಮುಂಡರಗಿ ಪಟ್ಟಣದ ಶಿವನಗೌಡ ಪಾಟೀಲ ಯಶಸ್ವಿಯಾಗಿದ್ದಾರೆ. ವೃತ್ತಿಯಲ್ಲಿ ಗುತ್ತಿಗೆದಾರರು. ಕೃಷಿ ಮೇಲಿನ ಪ್ರೀತಿಯಿಂದ ಅದರಲ್ಲಿ ತೋಡಗಿಕೊಂಡರು. ತಮ್ಮ ಮೂರು ಎಕರೆ ಜಮೀನಿನಲ್ಲಿ ದಾಳಿಂಬೆ ಬೆಳೆಯುವ ಮೂಲಕ ಲಾಭ ಮಾಡುವುದು ಹೇಗೆ ಅನ್ನೋದನ್ನು ತೋರಿಸಿದರು.
ದಾಳಿಂಬೆ ನಾಟಿ
ಮಹಾರಾಷ್ಟ್ರದ ಜಲಗಾಂವ ಪ್ರದೇಶದಿಂದ ಜೈನ್ ಇಯಗ್ರೀಷನ್ ಎಂಬ ಕಂಪನಿಯ ಸಸಿಗಳನ್ನ ತಂದು ಬಿತ್ತನೆ ಮಾಡಿದ್ದಾರೆ. ಒಮ್ಮೆ ನೆಟ್ಟ ಸಸಿಗೆ ಸರಿಯಾಗಿ ಪೋಷಣೆ ಮಾಡಿದರೆ ಅದು ಸುಮಾರು ಹದಿನೈದು ವರ್ಷಗಳ ಕಾಲ ಪ್ರಗತಿಯಲ್ಲಿರುತ್ತದೆ. ಸಸಿಗಳನ್ನ ಪ್ರತಿ ಸಾಲಿನಿಂದ ಸಾಲಿಗೆ 14 ಸಸಿ ಮತ್ತು ಗಿಡದಿಂದ ಗಿಡಕ್ಕೆ 10 ರಿಂದ 8 ಸಸಿಗಳನ್ನು ನೆಟ್ಟಿದ್ದಾರೆ. ಅದಕ್ಕಿಂತ ಹೆಚ್ಚು ಕೊಡ ನೆಡಬಹುದು. ಒಂದು ವರ್ಷದವರೆಗೆ ಕಾರ್ಪ್-ಸ್ಕಾಪ್ ಮಾಡಿ ಚೆನ್ನಾಗಿ ಸಗಣಿ ಗೊಬ್ಬರ ಜೊತೆಗೆ ನೀರು ಬಿಡಬೇಕು. ಅದಾದ ಒಂದು ವರ್ಷದ ನಂತರ ಇದು ಫಸಲು ನೀಡಲು ಪ್ರಾರಂಭಿಸುತ್ತದೆ.
ಸಸಿಯ ಪೋಷಣೆ
ಪ್ರತಿ ವರ್ಷ ಗೊಬ್ಬರ ಮತ್ತು ನ್ಯೋಟ್ರೆನ್ಸಿ ಹಾಕಿ ನೀರು ಹರಿಸಬೇಕು. ಇದರಿಂದ ಭೂಮಿ ಸದೃಡವಾಗಿರುತ್ತದೆ. ಮೊದಲ ವರ್ಷ ವಾರದಲ್ಲಿ 2 ದಿಂದ 3 ಸಾರಿ ನೀರು ಬಿಡಬೇಕು. ಒಮ್ಮೆ ಇಳುವರಿ ಪಡೆದ ನಂತರ ಪ್ರತಿದಿನ ನೀರುಣಿಸಬೇಕು ಎನ್ನುವುದು ಪಾಟೀಲರ ಅನುಭವ. ಸಸಿಗಳಿಗೆ ಯಾವುದೇ ರೋಗ ಬರದಂತೆ ವಾರದಲ್ಲಿ ಕನಿಷ್ಠ 3 ಸಾರಿ ಕೀಟನಾಶಕ ಸಿಂಪರಣೆ ಮತ್ತು ಸಸಿಗಳ ಬಡ್ಡಿಗೆ ಗೊಬ್ಬರ ಹಾಕಬೇಕು. ಸಾಮನ್ಯವಾಗಿ ಟ್ರಿಪ್ಸ್-ಮೈಂಡ್ ಎಂಬ ರೋಗ ಬರುತ್ತದೆ. ಆದರೆ ಸಸಿಗಳನ್ನ ಚೆನ್ನಾಗಿ ಆರೈಕೆ ಮಾಡುವ ಮೂಲಕ ಅದನ್ನು ದೂರ ವಿರಿಸಬಹುದು.
ವಾರ್ಷಿಕ ಆದಾಯ
ಮೊದಲ ವರ್ಷ ಪ್ರತಿ ಗಿಡ 8 ರಿಂದ 10ಕೆಜಿ ಇಳುವರಿ ನೀಡುತ್ತದೆ. ವರ್ಷ ಕಳೆದ ನಂತರ ಪ್ರತಿ ಗಿಡಕ್ಕೆ 15 ರಿಂದ 20 ಕೆಜಿಯಷ್ಟು ಫಸಲು ಪಡೆಯಬಹುದು. 1 ಕೆಜಿ ದಾಳಿಂಬೆಗೆ 70 ರಿಂದ 80 ರೂ. ಅಂದರೆ 1 ಎಕರೆ ಜಮೀನಿನಲ್ಲಿ ಕನಿಷ್ಠ 1.25 ರಿಂದ 2 ಲಕ್ಷ ಆದಾಯಸಿಗುತ್ತಿದೆ ಎನ್ನುತ್ತಾರೆ ಪಾಟೀಲರು.
– ಲೋಕನಗೌಡ.ಎಸ್.ಡಿ