ಮನಿ ಕತೆ : ಪೆಟ್ಟಿಗೆ ತುಂಬಾ ದುಡ್ಡು
Team Udayavani, May 4, 2020, 2:05 PM IST
ರಾಮಣ್ಣ ಮತ್ತು ಶಾಮಣ್ಣ ಅಕ್ಕಪಕ್ಕದ ಮನೆಗಳಲ್ಲಿ ವಾಸವಿದ್ದರು. ಇಬ್ಬರೂ ರೈತರು. ರಾಮಣ್ಣ ಅಷ್ಟಿಷ್ಟು ವ್ಯಾಪಾರವನ್ನೂಮಾಡಿಕೊಂಡು ಕಾಸು ಮಾಡಿಕೊಂಡಿದ್ದ. ಆದರೆ, ಬೇಸಾಯವನ್ನೇ ನಂಬಿಕೊಂಡಿದ್ದ ಶಾಮಣ್ಣ, ರಾಮಣ್ಣನಷ್ಟು ಶ್ರೀಮಂತನಾಗಿರಲಿಲ್ಲ.
ತನ್ನ ಎಲ್ಲಾ ಸಮಸ್ಯೆಗಳಿಗೂ ದುಡ್ಡಿನ ಕೊರತೆಯೇ ಕಾರಣ. ರಾಮಣ್ಣನ ಬಳಿ ಹಣವಿದೆ, ಹೀಗಾಗಿ, ಅವನಿಗೆ ಬದುಕು ತುಂಬಾ ಸುಲಭ ಎಂದು ಅವನು ಪದೇಪದೆ ಹೇಳುತ್ತಿದ್ದ. ಒಂದು ಬಾರಿ ರಾಮಣ್ಣನಿಗೆ ಬೇಸಾಯದಲ್ಲಿ ಒಳ್ಳೆಯ ಇಳುವರಿಯೂ, ಶಾಮಣ್ಣನಿಗೆ ಕಡಿಮೆ ಇಳುವರಿಯೂ ಬಂದಿತು. ಆಗಲೂ ಶಾಮಣ್ಣ ಹಳೆಯ ಮಾತನ್ನೇ ರಿಪೀಟ್ ಮಾಡಿದ.
ಒಂದು ದಿನ ರಾಮಣ್ಣ ಪೆಟ್ಟಿಗೆ ತುಂಬಾ ಹಣ ತಂದು ಶಾಮಣ್ಣಗೆ ಕೊಟ್ಟನು. ರಾಮಣ್ಣನಿಗೆ ಧನ್ಯವಾದ ಅರ್ಪಿಸಿದ ಶಾಮಣ್ಣ, ಆ ಹಣವನ್ನು ತಿಜೋರಿಯಲ್ಲಿಟ್ಟ. ಆ ದಿನ ಆವನಿಗೆ ನಿದ್ದೆಯೇ ಬರಲಿಲ್ಲ. ಆ ಹಣವನ್ನು ಕಳ್ಳಕಾಕರು ಕದ್ದು ಬಿಟ್ಟಾರೆಂದು, ಮನೆ ಬಿಟ್ಟೇ ಹೋಗಲಿಲ್ಲ. ಈ ಹಣ ರಕ್ಷಣೆಯ ಕುರಿತು ಯೋಚನೆ ಹೆಚ್ಚಾಗಿ, ಊಟ- ತಿಂಡಿ ಮೇಲಿನ ಗಮನ ಕಡಿಮೆಯಾಯಿತು.
ಮಾರುಕಟ್ಟೆಗೆ ಕಳಿಸಬೇಕಿದ್ದ ಬೆಳೆ ಹಾಳಾಗಿ, ಆರೋಗ್ಯ ಹದಗೆಡುತ್ತಾ ಬಂತು. ವಿಷಯ ತಿಳಿದ ರಾಮಣ್ಣ, ಶಾಮಣ್ಣನ ಮನೆಗೆ ಬಂದು ಹೇಳಿದ; “ಅಣ್ಣಾ, ನಾವಾಗಿಯೇ ದುಡಿದ ದುಡ್ಡಿಗೆ ಬೆಲೆ ಇರುತ್ತದೆ. ಅಲ್ಲದೆ, ಆ ಹಣಕ್ಕೆ ಭವಿಷ್ಯವಿರುತ್ತದೆ. ಒಮ್ಮೆಲೇ ಸಿಕ್ಕ ಹಣದಿಂದ ಬದುಕು ಹಳ್ಳ ಹಿಡಿಯುತ್ತದೆ’ . ರಾಮಣ್ಣನ ಮಾತು ಕೇಳುತ್ತಲೇ, ಶಾಮಣ್ಣನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತನ್ನ ಬಳಿಯಿದ್ದ ಪೆಟ್ಟಿಗೆಯನ್ನು ರಾಮಣ್ಣನಿಗೆ ಹಿಂದಿರುಗಿಸಿದ.