ಕೃಷಿ ಡಾಕ್ಟರ್ ಸಮಸ್ಯೆಗೆ ಒಂದು ಪರಿಹಾರ
Team Udayavani, Mar 9, 2020, 5:02 AM IST
ನನ್ನ 6 ಎಕರೆಯ ಜಮೀನಿನಲ್ಲಿ ಒಂದು ಕೊಳವೆ ಬಾವಿ ಇದೆ. ಅದು ಸವುಳಾಗಿರುವುದರಿಂದ ಇಳುವರಿ ಕಡಿಮೆಯಾಗುತ್ತದೆ. ಪರಿಹಾರ ತಿಳಿಸಿ.
ನಿಮ್ಮ ಕೊಳವೆ ಬಾವಿ ನೀರು ಸವುಳ ಇದೆಯೇ ಇಲ್ಲವೇ? ಎಂದು ತಿಳಿಯಲು ನೀರಿನ ಪರೀಕ್ಷೆ ಮಾಡಿಸಿದರೆ ಸೂಕ್ತ. ಅದರ ಬಗ್ಗೆ ನೀವು ಮಾಹಿತಿ ನೀಡಿಲ್ಲ. ನೀರಿನ ಮಾದರಿಯನ್ನು ತೆಗೆದ ದಿನವೇ ಹತ್ತಿರದ ಕೃಷಿ ವಿಜ್ಞಾನ ಕೇಂದ್ರ ಅಥವಾ ಕೃಷಿ ಇಲಾಖೆಯಲ್ಲಿ ಪರೀಕ್ಷಿಸುವುದು ಸೂಕ್ತ. ಸವುಳ ನೀರು ಅಂದರೆ ನೀರಿನಲ್ಲಿ ಕರಗಿಸುವ ಲವಣ ಸಾಂದ್ರತೆ (ಡಿ.ಎಸ್/ಮೀ) 4ಕ್ಕಿಂತ ಹೆಚ್ಚು, ಸೋಡಿಯಂ ಹೀರುವಿಕೆಯ ಅನುಪಾತ 10ಕ್ಕಿಂತ ಕಡಿಮೆ ಹಾಗೂ ಉಳಿಕೆ ಸೋಡಿಯಂ ಕಾರ್ಬೋನೇಟ್ (ಮಿ./ಲೀ.) 2.5ಕ್ಕಿಂತ ಕಡಿಮೆ ಇರಬೇಕು. ಇನ್ನು, ಸವುಳು ನೀರು ಬಳಕೆ ಮಾಡಲು ಸಹಿಷ್ಣುತೆಯುಳ್ಳ (resistant) ಬೆಳೆಯುಳ್ಳ: ತಳಿಗಳನ್ನು ಆಯ್ದು ಕೊಳ್ಳುವುದು, ಉದಾಹರಣೆಗೆ ಹತ್ತಿ, ಬಾರ್ಲಿ, ಕುಸುಬೆ, ಗೋದಿ, ಸಾಸಿವೆ, ಕಾಯಿಪಲ್ಲೆ ಬೆಳೆಗಳಾದ ಶುಗರ್ ಬೀಟ್, ಬೀನ್ಸ್, ಗಜ್ಜರಿ, ಟೊಮೊಟೊ, ಕುಂಬಳ ಬೆಳೆಗಳನ್ನು ಬೆಳೆಯಬಹುದು. ಇನ್ನು ಹುಲ್ಲುಗಳಲ್ಲಿ ಬರ್ಮೂಡಾ ಗ್ರಾಸ್, ರೋಡ್ಸ್ ಗ್ರಾಸ್, ವೀಟ್ ಗ್ರಾಸ್, ಹಣ್ಣುಗಳ ಬೆಳೆಗಳಾದ ಖರ್ಜೂರ, ಪೇರು, ಅಂಜೂರ, ಕಲ್ಲಂಗಡಿ ಬೆಳೆಗಳನ್ನು ಬೆಳೆಯಬಹುದು. ಸುಧಾರಿತ ಬಿತ್ತನೆ ವಿಧಾನವಾದ ಸಾಲುಗಳ ಇಳುಕುಲಿಗಳ ಮಧ್ಯದಲ್ಲಿ ಬೀಜ ಊರಬೇಕು. ಬಿತ್ತನೆಗೆ ಹೆಚ್ಚಿನ ಪ್ರಮಾಣದ ಬೀಜವನ್ನು ಉಪಯೋಗಿಸಬೇಕು. ಕಾಲುವೆ ನೀರಿನ ಅನುಕೂಲ ಇದ್ದಲ್ಲಿ ಎರಡನ್ನೂ ವ್ಯವಸ್ಥಿತವಾಗಿ ಬಳಸಬೇಕು. ಮಣ್ಣಿಗೆ ಸಾಕಷ್ಟು ಸಾವಯವ ವಸ್ತುಗಳನ್ನು (ಕೊಟ್ಟಿಗೆ ಗೊಬ್ಬರ, ಕಾಂಪೋಸ್ಟ್, ಎರೆಹುಳ ಗೊಬ್ಬರ, ಇತ್ಯಾದಿ) ಸೇರಿಸುವುದರಿಂದ ಸವಳು ನೀರಿನಿಂದ ಆಗುವ ಕೆಟ್ಟ ಪರಿಣಾಮ ಕಡಿಮೆ ಮಾಡಬಹುದು. ಇವುಗಳ ಜೊತೆಗೆ ಬೆಳೆಗಳಿಗೆ ಶಿಫಾರಸ್ಸು ಪ್ರಮಾಣದ ಶೇ.10ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಮತ್ತು ರಂಜಕ ಒದಗಿಸಬೇಕು. ಸವುಳು ನೀರನ್ನು ಉಪಯೋಗಿಸುವಾಗ ಮಣ್ಣಿಗೆ ರಂಜಕವನ್ನು ಸೇರಿಸುವುದು ಅವಶ್ಯಕ.
– ಬಸವರಾಜ ಪಾಟೀಲ್, ಲಿಂಗುಸುಗೂರು