ಕಾಸು ಹೆಚ್ಚಾದ್ರೆ ಕನಸೂ ಬೀಳಲ್ಲ…
Team Udayavani, Jun 17, 2019, 5:00 AM IST
ಶಾರದಾ ಚಿಟ್ ಫಂಡ್, ಪರ್ಲ್, ಗುರು ಟೀಕ್, ಮೂಕಾಂಬಿಕಾ, ವಿನಿವಿಂಕ್, ಅಗ್ರಿಗೋಲ್ಡ್, ರಿಚ್ಲ್ಯಾಂಡ್… ಇದೀಗ ಐ.ಎಂ.ಎ- ಇವೆಲ್ಲಾ, ಹೆಚ್ಚು ಬಡ್ಡಿಯ ಆಸೆ ತೋರಿಸಿ ಜನರನ್ನು ವಂಚಿಸಿದ ಕಂಪನಿಗಳು. ಸುಮ್ಮನೇ ಒಮ್ಮೆ ಗಮನಿಸಿ ನೋಡಿ: ಈ ಎಲ್ಲ ಕಂಪನಿಗಳಿಗೆ ಹಣ ಹೂಡಿದ್ದರಲ್ಲ; ಅವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬದವರು. ಆದರೆ ಅವರನ್ನು ‘ಬಡವರು’ ಎನ್ನಲು ಆಗುವುದಿಲ್ಲ.
ಕಾರಣವಿಷ್ಟೆ: ಪ್ರತಿಯೊಬ್ಬರೂ ಕಡಿಮೆಯಂದರೂ ಎರಡು-ಮೂರು ಲಕ್ಷ ರೂಗಳನ್ನು ಹೂಡಿಕೆ ಮಾಡಿದ್ದಾರೆ. ಲಕ್ಷ ರೂಪಾಯಿ ಇರುವವರು ಅದ್ಹೇಗೆ ಬಡವರಾಗುತ್ತಾರೆ? ಸಂಪಾದಿಸಿದ ಹಣ ಹೆಚ್ಚಾಗಲಿ ಎಂದು ಎಲ್ಲರೂ ಆಸೆ ಪಡುತ್ತಾರೆ. ಒಂದು ಮಾತು ನೆನಪಿರಲಿ: ಇವತ್ತಿ¤ನ ಹತ್ತು ಸಾವಿರ ರೂಪಾಯಿ, ಐದು ವರ್ಷಗಳ ನಂತರ, ಏನೇನೂ ಶ್ರಮ ಪಡದೆಯೂ 20 ಸಾವಿರವಾಗಿ ಬದಲಾಗಲಿ ಎಂಬುದು ಆಸೆ. 10 ಸಾವಿರವು ಐದೇ ವರ್ಷದಲ್ಲಿ 60 ಸಾವಿರ ಆಗಲಿ ಎಂದು ಬಯಸುವುದು ದುರಾಸೆ. ಈಗ ಹಣ ಕಳೆದುಕೊಂಡಿದಾರಲ್ಲ; ಅವರೆಲ್ಲ ದುರಾಸೆ ಎಂಬ ಆಸಾಮಿಗೆ ತಮ್ಮ ಮನಸಿನ ಕೀಲಿ ಕೈ ಒಪ್ಪಿಸಿದವರು!
ಅಧಿಕ ಬಡ್ಡಿಗೆ ಆಸೆಪಟ್ಟು ಹಣ ಕಳೆದುಕೊಂಡಿದ್ದಾರಲ್ಲ; ಅವರೆಲ್ಲಾ ಅದೇ ಹಣವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲೋ, ಪೋಸ್ಟ್ ಆಫೀಸಿನಲ್ಲೋ ಹೂಡಿಕೆ ಮಾಡಿದ್ದರೆ, ಈ ಹೂಡಿಕೆ ಹಣವೂ ಉಳಿಯುತ್ತಿತ್ತು, ಅಲ್ಪ ಮೊತ್ತದ ಬಡ್ಡಿಯೂ ಸಿಗುತ್ತಿತ್ತು. ಬ್ಯಾಂಕ್ನಲ್ಲಿ ಇಟ್ಟ ಹಣ ಹೆಚ್ಚಾಗೋದು ಕನಸಲ್ಲಿ ಮಾತ್ರ ಸಾಧ್ಯ ಎಂಬ ಯೋಚನೆಯಲ್ಲಿಯೇ ನಮ್ಮ ಜನ ಐಎಂಎ ಥರದ ಕಂಪನಿಗಳ ಮುಂದೆ ಕ್ಯೂ ನಿಂತರು. ಒಂದು ಲಕ್ಷವು ಒಂದೇ ವರ್ಷದಲ್ಲಿ ನಾಲ್ಕು ಲಕ್ಷ ಆದಂತೆ ಕನಸು ಕಂಡರು!
ಇನ್ನಾದರೂ ಎಲ್ಲರಿಗೂ ಅರ್ಥವಾಗಲಿ: ಕಾಸು ಹೆಚ್ಚಾದ್ರೆ ಕನಸು ಬೀಳಲ್ಲ! ಕಾಸು ಕಿತ್ಕೊಂಡವ ವಾಪಸ್ ಕೊಡಲ್ಲ…