ಗ್ರಾಹಕರು ಮಾಡಿಕೊಳ್ಳುವ ಅನಾಹುತಗಳಿಗೆ ಯಾರು ಹೊಣೆ?


Team Udayavani, Sep 18, 2017, 2:08 PM IST

18-anka-6.jpg

ಈ ದೇಶದ ನಾಗರಿಕನ ರಕ್ಷಣೆಗಿರುವ ಸಾವಿರ ಕಾನೂನುಗಳನ್ನು ಕುರಿತು ಹೇಳಬಹುದು. ಹಲವು ಕಾನೂನುಗಳಿಂದ ಅನ್ಯಾಯಕ್ಕೊಳಗಾದವರು ಪರಿಹಾರ ಗಿಟ್ಟಿಸಿರಬಹುದು. ಗ್ರಾಹಕ ನೆಲೆಯಲ್ಲಿ ನೋಡುವುದಾದರೆ, ತಯಾರಕರು ಕಾನೂನಿನ ಭಯ, ನಿರ್ಬಂಧದಿಂದ ಕೆಲವು ಗ್ರಾಹಕ ಸ್ನೇಹಿ ಹೆಜ್ಜೆಗಳನ್ನು ಇರಿಸಿರಬಹುದು. ಆದರೆ, ಕಾನೂನುಗಳ ಹೊರತಾಗಿ ನಾವು ನಮ್ಮ ಅರಿವಿನ ಮಟ್ಟವನ್ನು ಹೆಚ್ಚಿಸಿಕೊಳ್ಳದಿದ್ದರೆ ಬದುಕು ಸಂಕಷ್ಟವೇ. ಕಾನೂನುಗಳ ಆಚೆಗಿನ ಪರಮ ಸತ್ಯಗಳನ್ನು ಹೇಳುವ ಒಂದು ಪ್ರಯತ್ನ ಇಲ್ಲಿದೆ.

ಕಡಿಮೆ ಬೆಲೆಯ ಅತ್ಯುತ್ತಮ ಖರೀದಿ?
ಖರೀದಿಸಬೇಕಾಗಿರುವುದು ಲಿಪ್‌ಸ್ಟಿಕ್‌. ಅತ್ಯುತ್ತಮ ಗುಣಮಟ್ಟದ, ಬ್ರಾಂಡೆಡ್‌ ಉತ್ಪನ್ನಕ್ಕೆ 100 ರೂ. ಬೆಲೆ ಇದೆ. ಒಮ್ಮೆಗೇ ಅಷ್ಟು ದುಡ್ಡು ಹಾಕುವುದಕ್ಕಿಂತ ಮಾರುಕಟ್ಟೆಯಲ್ಲಿ ಹದಿನೈದೇ ರೂಪಾಯಿಗೆ ಸಿಗುವ ಲಿಪ್‌ಸ್ಟಿಕ್‌ ಕೂಡ ತುಟಿಗಳಿಗೆ ಬಣ್ಣಬಣ್ಣದ ರಂಗು ತುಂಬಬಲ್ಲದು. ಒಂದಕ್ಕೆ ಆರೇಳು ಪಟ್ಟು ಹಣ ತೆತ್ತು ಸಮಾನ ಫ‌ಲಿತಾಂಶದ “ಬ್ರಾಂಡೆಡ್‌’ ಕೊಳ್ಳುವುದು ಮೂರ್ಖತನವಲ್ಲವೇ? ಹೀಗೆ ಯೋಚಿಸಿ ಕಡಿಮೆ ಬೆಲೆಯ ಲಿಪ್‌ಸ್ಟಿಕ್‌ ಖರೀದಿಸುವುದರಿಂದ ಮೊದಲ ನೋಟಕ್ಕೆ ಬರೋಬ್ಬರಿ 85 ರೂ. ಉಳಿದಿದೆ ಎನ್ನಿಸಬಹುದು. ವಾಸ್ತವವೇ ಬೇರೆ. ಒಮ್ಮೆ ಬಳಕೆಯಾದ ಇಂತಹ ಲಿಪ್‌ಸ್ಟಿಕ್‌ ಬಳಸಿರದಿದ್ದರೂ, ಗಟ್ಟಿಯಾಗಿ ಮುಚ್ಚಳ ಹಾಕಿದ್ದೇನೆಂದುಕೊಂಡರೂ ಎರಡು ತಿಂಗಳೊಳಗೆ ಲಿಪ್‌ಸ್ಟಿಕ್‌ ಗಟ್ಟಿಯಾಗಿ ಇನ್ನು ನಾನು ತುಟಿಗೆ ಬರಲಾರೆ ಎಂದುಬಿಡುತ್ತದೆ! ಪರೋಕ್ಷವಾಗಿಯಂತೂ ಇನ್ನೊಂದು ಅಪಾಯವಿದೆ. ಕಡಿಮೆ ಬೆಲೆಯ ಈ ವಸ್ತುವಿನಲ್ಲಿರುವ ರಾಸಾಯನಿಕಗಳು ಚರ್ಮಕ್ಕೆ ಉಂಟುಮಾಡಬಹುದಾದ ಅಪಾಯಗಳು ಒಂದೇಟಿಗೆ ಗೊತ್ತಾಗುವುದೂ ಇಲ್ಲ. ಅದರ ಬದಲು ಗುಣಮಟ್ಟದ ಆಯ್ಕೆಗೆ ಮೊರೆ ಹೋಗಿದ್ದರೆ ಒಂದು ವರ್ಷ ಕಳೆದರೂ ಲಿಪ್‌ಸ್ಟಿಕ್‌ ಹಾಳಾಗುತ್ತಿರಲಿಲ್ಲ. ಜೊತೆಗೆ ತುಟಿ ಕೂಡ ಸೇಫ್! ಪ್ರಶ್ನೆ ಒಂದು ಲಿಪ್‌ಸ್ಟಿಕ್‌ನದು ಅಲ್ಲವೇ ಅಲ್ಲ. ನಮ್ಮ ಖರೀದಿಗಳಲ್ಲಿ ಸಸ್ತಾ ಎಂಬ ವಾದಕ್ಕೆ ಎಳ್ಳುನೀರು ಬಿಡುವುದು ನಮ್ಮ ದೇಶದ ಆರೋಗ್ಯಕ್ಕೂ  ಒಳ್ಳೆಯದು. ನಾವು ಕೊಡುವ ಪ್ರತಿ ರೂಪಾಯಿಗೆ ಮೌಲ್ಯ ಬರಬೇಕು ಎಂತಾದರೆ ಅದರಿಂದ ಖರೀದಿಸಿದ ವಸ್ತುವಿನ ಸಂಪೂರ್ಣ ಪ್ರಯೋಜನವನ್ನು ಪಡೆದಿರಬೇಕು. ಈ ನಿಟ್ಟಿನಲ್ಲಿ ನಾವು ಮಾನಸಿಕವಾಗಿಯೇ ಗುಣಮಟ್ಟದ ವಸ್ತುಗಳಿಗೆ ಮಾತ್ರ ನಮ್ಮಿಂದ  ಖರೀದಿ  ಭಾಗ್ಯ ಎಂಬ ದೃಢ ನಿರ್ಧಾರಕ್ಕೆ ಬರಬೇಕು.

ಈ ಹಂತದಲ್ಲಿ ಇನ್ನೊಂದು ಪ್ರತಿವಾದವೂ ಇದೆ. ಗುಣಮಟ್ಟದ ವಸ್ತುವಿಗೆ ತೆರಬೇಕಾಗಿರುವ ಬೆಲೆ ಕೊಳ್ಳುವವನ ಸಾಮರ್ಥ್ಯವನ್ನು ಮೀರಿದ್ದರೆ ಆತ ಅನಿವಾರ್ಯವಾಗಿ ಕಡಿಮೆ ಬೆಲೆಯದಕ್ಕೇ ಅಂಟಿಕೊಳ್ಳುತ್ತಾನೆ. ಮಾರುಕಟ್ಟೆಯಲ್ಲಿ ಅಂತಹ ಆಯ್ಕೆಗಳೂ ಬೇಕಾಗುತ್ತವೆ. ಒಟ್ಟಾರೆಯಾಗಿ ಹಣದ ಹರಿವು ನಿರಂತರವಾಗಿದ್ದರೆ ಅದು ದೇಶದ ಆರ್ಥಿಕ ಸ್ಥಿತಿಗತಿಗೆ  ಕ್ಷೇಮ. ಅಷ್ಟಿದ್ದರೆ ಸಾಕು! ಮತ್ತೂಮ್ಮೆ ದಿಕ್ಕು ತಪ್ಪಿಸುವ ಪ್ರಯತ್ನವೇ ಇದು. ರೀಸೈಕಲ್ಡ್‌ ಪ್ಲಾಸ್ಟಿಕ್‌ನಿಂದ ಮಾಡಿದ ಬಕೆಟ್‌ ಸಾಕಷ್ಟು ಕಡಿಮೆ ಬೆಲೆಗೇ ಲಭಿಸುತ್ತದೆ. ಆದರೆ ಅದು ಮೂರು ತಿಂಗಳೊಳಗೆ ಹಾಳಾಗುತ್ತದೆ. ಅದೇ ಉತ್ತಮ ದರ್ಜೆಯ ಬಕೆಟ್‌ ಇದರ ನಾಲ್ಕು ಪಟ್ಟು ಬೆಲೆಯದಾದರೂ ಮೇಲಿನ 10 ಬಕೆಟ್‌ನ ಆಯುಷ್ಯದಷ್ಟು ಬಾಳುತ್ತದೆ. ಖರೀದಿಸುವವರಿಗಾಗುವ ವೆಚ್ಚದ ಮಾತು ಬದಿಗಿರಿಸಿ, 10 ರೀಸೈಕಲ್ಡ್‌  ಬಕೆಟ್‌ ತಯಾರಿಕೆ ಸಮಯದಲ್ಲಾಗುವ ಪರಿಸರ ಮಾಲಿನ್ಯ ಹಾಗೂ ಹಾಳಾದ ಬಕೆಟ್‌ ಉಂಟುಮಾಡುವ ತ್ಯಾಜ್ಯದ ಸಮಸ್ಯೆಯನ್ನು ತೂಕ ಹಾಕಿದರೆ ಗುಣಮಟ್ಟದ ಖರೀದಿಯ ಮಹತ್ವ ಅರಿವಾಗುತ್ತದೆ.  ಮರದ ಹೊಟ್ಟಿನ  ಚಹಾ ಪುಡಿಯನ್ನು ಕೊಳ್ಳುವವನಿಗೆ ಬ್ರಾಂಡ್‌ ಟೀ ಪುಡಿಗೆ ಊರಲ್ಲಿಲ್ಲದ ಬೆಲೆ ಎನಿಸಬಹುದು. ಕಳಪೆ ದರ್ಜೆಯ ಟೀ ಪುಡಿಯಿಂದ ತಯಾರಾದ ಟೀ ಸೇವನೆಯ ನಂತರ ಆರೋಗ್ಯ ಕೆಡಿಸಿಕೊಂಡು  ತಂದಿದ್ದಕ್ಕೆ ವೈದ್ಯರಿಗೆ ಪಾವತಿಸಿದ ಹಣ ನಮಗೆ ನೆನಪಾಗುವುದೇ ಇಲ್ಲ!

ಇವತ್ತು ಇಡೀ ಮಾರುಕಟ್ಟೆಯಲ್ಲಿ ಚೀಪ್‌ ಅಂಡ್‌ ಬೆಸ್ಟ್‌ ಎಂಬ ಪ್ರತಿಪಾದನೆ ಇಲ್ಲವೇ ಇಲ್ಲ. ಇದರರ್ಥ ದುಬಾರಿಯದೆಲ್ಲವೂ ಅತ್ಯುತ್ತಮ ಎಂತಲೂ ಅಲ್ಲ. ಯಾವುದೇ ಖರೀದಿ ಮಾಡುವವ ಬೆಲೆಯ ಒಂದೇ ಆಯಾಮದಲ್ಲಿ ಖರೀದಿಯ ಬ್ರಾಂಡ್‌ಗಳನ್ನು  ನಿರ್ಧರಿಸಲಾಗುವುದಿಲ್ಲ ಎಂಬುದು ಹೆಚ್ಚು ವಾಸ್ತವ. ಬೆಸ್ಟ್‌ ಪ್ರ„ಸ್‌ಗೆ ಬೆಸ್ಟ್‌ ಕ್ವಾಲಿಟಿ ಎಂಬುದನ್ನೇ ಇಂದು ನೆಚ್ಚಿಕೊಳ್ಳಬೇಕು.

ಮಾರಾಟಗಾರರನದು ಬೇರೆಯದೇ ಅಆಇಈ!
ಪುಸ್ತಕದ ಅಂಗಡಿಯೊಂದರಲ್ಲಿ ಖರೀದಿಗೆ ಪುಸ್ತಕದ ಖಾಕಿ ಬೈಂಡ್‌ ಅನ್ನೋ, ನೇಮ್‌ ಸ್ಟಿಕ್ಕರ್‌ಅನ್ನೋ ಉಚಿತವಾಗಿ ಕೊಡದಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತದೆ. ಅರೆ, ಬೇರೆ ಅಂಗಡಿಗಳಲ್ಲಿ ನಾವು ಮಾಡಿದ ಖರೀದಿ ಬಿಲ್‌ ಮೇಲೆ ಚಿಲ್ಲರೆ ರೂಪಾಯಿ ಬಿಡುತ್ತಾರೆ.  ಬೈಂಡ್‌, ಸ್ಟಿಕ್ಕರ್‌ಗೆ ಬಿಲ್‌ ಮಾಡುವುದಿಲ್ಲ. ಅಂಗಡಿ ನಡೆಸುವುದರ ಕುರಿತಾಗಿಯೇ ಒಂದು ಲಾಜಿಕ್‌ ಇದೆ. ಸಾಮಾನ್ಯವಾಗಿ ಗ್ರಾಹಕರು ಒಂದು ದಿನಸಿ ಅಂಗಡಿಗೆ ಬಂದರೆ ಐದು ಐಟಂಗಳ ಬೆಲೆಯನ್ನು ಕೇಳೇ ಕೇಳುತ್ತಾರೆ. ಅಕ್ಕಿ, ಎಣ್ಣೆ, ತೊಗರಿ ಬೇಳೆ, ಸಕ್ಕರೆ ಹಾಗೂ ಶೇಂಗಾ. ಇವುಗಳನ್ನಷ್ಟನ್ನೇ ಹೋಲಿಕೆಯಲ್ಲಿ ತುಸು ಕಡಿಮೆ ಬೆಲೆಯಲ್ಲಿ ಅಂಗಡಿಯಾತ ಮಾರುವಂತಿದ್ದರೆ ಅವರು ಖುಷ್‌, ಉಳಿದುದನ್ನು ಅವರು ಎಷ್ಟಕ್ಕೇ ಮಾರಲಿ, ನಾವು ಕೇಳುವುದಿಲ್ಲ!

ಅಂಗಡಿಯವರು ವ್ಯಾಪಾರ ಮಾಡುವುದು ಅವರ ಬದುಕನ್ನು ನೇರ್ಪುಗೊಳಿಸಲೇ ವಿನಃ ಸಮಾಜಸೇವೆಗಲ್ಲ. ಅವರದ್ದೂ ಕಾನೂನು ಪ್ರಕಾರದ ವ್ಯವಹಾರವೇ. ಅಲ್ಲಿ ಅವರು ಹೂಡಿದ ಬಂಡವಾಳಕ್ಕೆ ಲಾಭ ಬರಲೇಬೇಕು. ಅಂಥವರು ಜನರ ಮನೋಭಾವದ ಜೊತೆ ಆಟ ಆಡುವುದು ತಪ್ಪಲ್ಲ. ಎಲ್ಲಿಯತನಕ ಗ್ರಾಹಕ ತನ್ನ ಮಟ್ಟವನ್ನು ವಿಸ್ತರಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ಕಣ್ಣಾ ಮುಚ್ಚಾಲೆ ನಡೆಯುತ್ತದೆ. ಗ್ರಾಹಕ ಅರಿವನ್ನು ವೃದ್ಧಿಸಿಕೊಳ್ಳುವುದು ಮಾತ್ರ ಪರಿಹಾರ. ಮತ್ತೆ ನೋಟ್‌ ಬುಕ್‌, ಶಾಲಾ ವಸ್ತು ಖರೀದಿ ವಿಷಯಕ್ಕೆ ಬನ್ನಿ. ಅಂಗಡಿಯಾತ ತನಗೆ ನಷ್ಟ ಮಾಡಿಕೊಂಡು ಉಚಿತವಾಗಿ ಬೈಂಡ್‌, ಸ್ಟಿಕ್ಕರ್‌ ಕೊಡಲು ಸಾಧ್ಯವೇ ಇಲ್ಲ. ಆತ ಖರೀದಿಸುವವರೊಂದಿಗೆ, ಎಂಆರ್‌ಪಿಯೊಂದಿಗೆ ಆಟವಾಡುತ್ತಲೇ ಹೋಗುತ್ತಾನೆ. ಜನ ಆ ಮೋಡಿಗೆ ಸಿಲುಕುತ್ತಾರೆ. ಆ ಅಂಗಡಿಯವರು ಬಿಟ್ಟುಕೊಡುತ್ತಾರೆ ಎಂಬ ಮಾತನ್ನು ಲೆಕ್ಕಾಚಾರ ತಿಳಿಯದ ಜನರಷ್ಟೇ ಹೇಳುತ್ತಾರೆ. ದುರಂತವೆಂದರೆ, ನಮ್ಮಲ್ಲಿನ ಶೇ. 95ರಷ್ಟು ಜನ ಲೆಕ್ಕಪತ್ರ ಇಡುವ ವ್ಯವಸ್ಥೆಯಲ್ಲಿ ಇಲ್ಲ ಎಂಬುದು. 

ಗ್ರಾಹಕರಲ್ಲಿ ಅಧ್ಯಯನಗಳೇ ಹೇಳುವ ಪ್ರಕಾರ, ಹಳೆಯದು ಬೇಗ ಮರೆತುಹೋಗುತ್ತದೆ! ಇದನ್ನು ಮಾರಾಟ ಪ್ರಪಂಚ ಹೆಚ್ಚು ಜಾಣ್ಮೆಯಿಂದ ಬಳಸಿಕೊಳ್ಳುತ್ತದೆ. ಅದಕ್ಕೂ ಮುಖ್ಯವಾಗಿ, ವ್ಯಾಪಾರಕ್ಕಿಟ್ಟ ವಸ್ತುಗಳ ಕುರಿತಾಗಿ ಅಂಗಡಿಯವರಿಗೆ ಅತಿ ಹೆಚ್ಚಿನ ಮಾಹಿತಿ ಇರಬೇಕು, ಇರುತ್ತದೆ ಎಂದು ನಾವು ಅಂದುಕೊಂಡುಬಿಡುತ್ತೇವೆ. ಹಾಗಾಗಿ ನಮ್ಮ ಬಹುಪಾಲು ಖರೀದಿಗಳನ್ನು ಪ್ರಭಾವಿಸುವವರು ಅಂಗಡಿಯವರು.

ಸಾರ್‌, ಈ ಪ್ರಾಡಕ್ಟ್ ಚೆನ್ನಾಗಿದೆ. ಇದು ಹೆಚ್ಚು ಸೇಲ್‌ ಆಗುತ್ತದೆ ಎಂಬ ಮಾತುಗಳನ್ನು ನಾವು ಸುಲಭವಾಗಿ ನಂಬುತ್ತೇವೆ. ನಂಬುವುದು ಅಪರಾಧವಲ್ಲ. ಆದರೆ ಅದೇ ವೇಳೆ, ಇಂದಿನ ತಂತ್ರಜಾನದ ಕಾಲದಲ್ಲಿ ಇಂತಹ ಮಾತುಗಳ ಬಗ್ಗೆ ಎರಡನೇ ಅಭಿಪ್ರಾಯ ಪಡೆಯುವುದು ಕಡ್ಡಾಯವಾಗಬೇಕು. ನಮ್ಮಲ್ಲಿ ಈ ವಸ್ತು ಸ್ಟಾಕ್‌ ಇಲ್ಲ ಎನ್ನುವ ಬದಲು ಸೋಮವಾರ ಬರುತ್ತೆ ಎಂದರೂ ಸರಿ. ಅದರ ಬದಲು, ಸದ್ಯ ಆ ಪ್ರಾಡಕ್ಟ್ ಸಪ್ಲೆ ಇಲ್ಲ ಎಂದರೆ ನಾವು ಬೇರೆಯದಕ್ಕೆ ಬದಲಾಗುತ್ತೇವೆ. ಬದಲಾಯಿಸುವ, ಬದಲಾದರೂ ಅದು ಅನಿವಾರ್ಯ ಎನ್ನಿಸುವಂತೆ ಮಾಡುವ ಕ್ರಮ ಗ್ರಾಹಕನ ಮನಸ್ಸಿಗೂ ನೆಮ್ಮದಿ ಕೊಡುತ್ತದಲ್ಲ!  ಆದರೆ ಕುರುಡಾಗಿ ಒಂದು ಅಭಿಪ್ರಾಯವನ್ನು ನಂಬುವುದು ಯಾವಾಗಲೂ ಅಪರಾಧವೇ.

ಇನ್ನೊಂದು ಮಾದರಿಯ ಬಗ್ಗೆ ಹೆಚ್ಚು ಎಚ್ಚರ ಅಗತ್ಯ. “ಗೊತ್ತು ಬಿಡಿ ಸಾರ್‌, ಆ ಪ್ರಾಡಕ್ಟ್ ಕಥೆ ಹೀಗಾಗಿದೆ. ಆ ಅಂಗಡಿಯಲ್ಲಿ ಸಿಕ್ಕುತ್ತಾ, ಬಹುಶಃ ಅವರಲ್ಲಿ ಸ್ಟಾಕ್‌ ಉಳಿದಿತ್ತೇನೋ. ಈ ಬಾರಿ ಹುಣಿಸೆ ಹಣ್ಣಿನ ಬೆಳೆ ಉತ್ತರ ಕರ್ನಾಟಕದಲ್ಲಿ ತುಂಬಾ ಕಡಿಮೆ ಸಾರ್‌, ಹಾಗಾಗಿ ದುಬಾರಿ. ಈ ವರ್ಷ ಈ ಮಾಲೇ ಫೈನಲ್‌. ಇನ್ನಷ್ಟು ಒಳ್ಳೆ ಮಾಲು ಸಿಗೋದು ಡೌಟು. ಇಲ್ಲಿನ ಪ್ರಶ್ನೆ,  ಅಂಗಡಿಯವರು ಹೀಗೆಲ್ಲಾ ಹೇಳಿ ವಂಚಿಸುತ್ತಾರೆ ಎಂಬುದು ಅಲ್ಲವೇ ಅಲ್ಲ. ಸಿಡುಕು ಮೋರೆಯ, ನಮ್ಮಲ್ಲಿ ಇಲ್ಲ ಕಣ್ರೀ ಎಂದು ಮುಖಕ್ಕೆ ಹೊಡೆದಂತೆ ಹೇಳುವ ಅಂಗಡಿಯಾತ ನಮಗೆ ಸುತರಾಂ ಇಷ್ಟವಾಗುವುದಿಲ್ಲ. ಇದೇ ವೇಳೆ, ನಾವು ಒಂದು ಸ್ಪಷ್ಟ ಅಭಿಪ್ರಾಯಕ್ಕೆ ಬರುವ ಮುನ್ನ ವಿಷಯದ ವಿವಿಧ ಮಗ್ಗುಲುಗಳನ್ನು ವಿಶ್ಲೇಷಿಸುವ ಸಾಮರ್ಥ್ಯ ಪಡೆದುಕೊಳ್ಳಬೇಕು. ದಬಕ್ಕನೆ ಒಂದು ತೀರ್ಮಾನಕ್ಕೆ ಬರುವುದರಿಂದ ಕನಿಷ್ಠ ಕೊಳ್ಳುವವರಿಗಂತೂ ಲಾಭ ಆಗುವುದಿಲ್ಲ!

ನಮ್ಮ ಕಾಲ ಮೇಲೆ ನಮ್ಮದೇ ಕಲ್ಲು! 
ನಾವು ಕೆಲವೊಂದು ವಿಚಾರಕ್ಕೆ ಮಾನಸಿಕವಾಗಿ “ಫಿಕ್ಸ್‌’ ಆಗಿರುತ್ತೇವೆ. ನಗರದ ಹೊರ ಬಡಾವಣೆಯ ಅಂಗಡಿಯಲ್ಲಿ ಕೆಜಿಗೆ ಎರಡು ರೂ. ಜಾಸ್ತಿ ಹೇಳಿದರೂ ನಾವು ಸಮಾಧಾನದಿಂದ ಕೊಳ್ಳುತ್ತೇವೆ. ನಾವೇ ನಗರದೊಳಗೆ ಪೆಟ್ರೋಲ್‌ ಸುಟ್ಟು ಹೋದರೆ ಈ ಎರಡು ರೂ.ಗಿಂತ ಹೆಚ್ಚು ಖರ್ಚಾಗುವುದಿಲ್ಲವೇ ಎಂಬ ತರ್ಕ ನಮ್ಮೊಳಗೇ ಇರುವುದರಿಂದ ಕಿರಿಕಿರಿಯಾಗದೆ 2 ರೂ. ಹೆಚ್ಚು ಕೊಡಲಾಗುತ್ತದೆ. 

ಕೇರಳದ ಯುವಕನೋರ್ವ ಆನ್‌ಲೈನ್‌ ವ್ಯಾಪಾರ ತಾಣವಾದ ಫ್ಲಿಪ್‌ಕಾರ್ಟ್‌ಗೆ ಬರೋಬ್ಬರಿ 20 ಲಕ್ಷ ರೂ. ವಂಚನೆ ಮಾಡಿದ ಸುದ್ದಿ ಮನಸ್ಸಿನಲ್ಲಿ ಕಸಿವಿಸಿಗೆ ಕಾರಣವಾಗುವಂಥದು. ಇಂದು  ನಷ್ಟಕ್ಕೊಳಗಾಗಿದ್ದು ಒಂದು ಆನ್‌ಲೈನ್‌ ವೆಬ್‌ ವ್ಯಾಪಾರಿ ತಾಣವಾಗಿದ್ದರೂ ದೀರ್ಘ‌ಕಾಲೀನವಾಗಿ ಇದು ಗ್ರಾಹಕರಿಗೇ ನಷ್ಟವನ್ನುಂಟು ಮಾಡುವ ಬೆಳವಣಿಗೆ.  ಜಾಗತೀಕರಣದ ಪರಿಣಾಮವಾಗಿ ಕೊಳ್ಳುಬಾಕ ಸಂಸ್ಕೃತಿ ಅವತರಿಸಿತೋ, ಭಾರತೀಯರ ಕೊಳ್ಳುವ ಶಕ್ತಿಯಲ್ಲಿ ವಿಸ್ತರಣೆಯಾಯಿತೋ, ಮಾರುಕಟ್ಟೆಯಲ್ಲಿ ಹಣದ ಹರಿವು ಅಧಿಕಗೊಂಡಿತೋ ಎಂಬುದರ ಬಗ್ಗೆ ವಾದಗಳಿರಬಹುದು. ಆದರೆ ಇದೇ ವೇಳೆ ನಿರೀಕ್ಷೆಗಳಿಗಿಂತಲೂ ವೇಗದಲ್ಲಿ ಗ್ರಾಹಕ ಹಕ್ಕು, ಹಿತರಕ್ಷಣೆಯ ಅಂಶ ಪ್ರಬಲವಾಗಿ ಅನುಸರಣೆಯಾಯಿತು. ಖುದ್ದು ಸರ್ಕಾರ ಬಳಕೆದಾರರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದರೂ, ಆಗದ ಬದಲಾವಣೆ ಈ ಜಾಗತೀಕರಣದ ವಾತಾವರಣದಲ್ಲಿ ಕಂಡುಬಂದಿತು. ದೇಶಗಳಲ್ಲಿರುವ ಗ್ರಾಹಕ ಜಾಗೃತಿಯ ಅಂಶಗಳನ್ನು ಭಾರತದ ನೆಲದಲ್ಲಿ ಕಂಪನಿಗಳು ಅಳವಡಿಸಿಕೊಂಡವು. ನಾಗರಿಕ ಸನ್ನದು ಎಂಬ, ಭಾರತೀಯರು ಕೇಳದ ಮಾದರಿ ಕಿವಿಗೆ ಬಿತ್ತು. ಉಚಿತ ಸಹಾಯವಾಣಿಗಳು, ಒಂಬುಡ್ಸ್‌ಮನ್‌ಗಳು, ನೋಡಲ್‌ ಅಧಿಕಾರಿಗಳು, ಅಪಲೇಟ್‌ ಅಥಾರಿಟಿಗಳು, ಪಿಜಿ (Public Grievance) ಪೋರ್ಟಲ್‌ಗ‌ಳು…. ಕೊನೆಪಕ್ಷ ನಷ್ಟಕ್ಕೊಳಗಾದ ಗ್ರಾಹಕನಿಗೆ ಹೋರಾಡಲು ಹಲವು ‘ಹತಾರಗಳು’ ಲಭ್ಯ ಎಂಬಂತಾಯಿತು.

ನಮ್ಮ ಯಾವತ್ತಿನ ಹಳದಿ ಕಣ್ಣಿನಿಂದ ನೋಡದಿದ್ದರೆ ಬಹುರಾಷ್ಟ್ರೀಯ ಕಂಪನಿಗಳ ಸೂಪರ್‌ ಮಾರ್ಕೆಟ್‌ಗಳ ಅವತಾರದಲ್ಲೂ ಹಲವು ಗ್ರಾಹಕ ಪರ ಅಂಶಗಳಿವೆ. ಅಂಗಡಿಯವರಲ್ಲಿ ಬಿಲ್‌ ಕೇಳಿದರೆ ವಿಲನ್‌ರಂತೆ ನೋಡುತ್ತಿರುವ ಈ ಕಾಲದಲ್ಲಿ ಬಿಲ್‌ ಕಡ್ಡಾಯ ಎಂಬ ಪರಿಸ್ಥಿತಿ ಸೂಪರ್‌  ಮಾರ್ಕೆಟ್‌ನಲ್ಲಿದೆ. ಬಿಲ್‌ ಕೈಗೆ ಬಂತು ಎಂಬುದೇ ಹತ್ತು ಹಲವು ಗ್ರಾಹಕ ಅಧಿಕಾರವನ್ನು ಹಸ್ತಾಂತರಿಸಿದಂತೆ. ಮಾಲನ್ನು ಪರಿಶೀಲಿಸಿ ತೆಗೆದುಕೊಳ್ಳುವ, ತೂಕವನ್ನು ನಾವೇ ಪಕ್ಕಾಗೊಳಿಸಿಕೊಳ್ಳುವ ವ್ಯವಸ್ಥೆಯಲ್ಲಿ ಮತ್ತು ಸ್ಪರ್ಧೆಯ ಕಾರಣಕ್ಕೆ ಆಫ‌ರ್‌ಗಳು, ಎಂಆರ್‌ಪಿಗಿಂತ ಕಡಿಮೆ ದರದಲ್ಲಿ ಪ್ಯಾಕ್ಡ್ ಐಟಂ ಕೊಡುವ ಮಟ್ಟಿಗೆ ಸೂಪರ್‌ ಮಾರ್ಕೆಟ್‌ ಆಕರ್ಷಣೀಯ. ಮುಂದೆ ಸಾಮಾನ್ಯ ಕಿರಾಣಿ ಅಂಗಡಿಗಳೇ ಇಲ್ಲದಂತೆ ಮಾಡಿ ಪದಾರ್ಥಗಳ ಬೆಲೆಯನ್ನು ನಿಯಂತ್ರಿಸುತ್ತವೆ ಎಂಬ ಶಂಕೆ ಸದ್ಯದ ಈ ದಿನಕ್ಕೆ ಅನಗತ್ಯ. 

ದಿನದಿಂದ ದಿನಕ್ಕೆ ಗ್ರಾಹಕ ಪರ ವಾತಾವರಣ ಮೂಡುತ್ತಿರುವ ಈ ದಿನದಲ್ಲಿ ಆನ್‌ಲೈನ್‌ ವ್ಯಾಪಾರಿ ತಾಣಗಳು ಈವರೆಗೆ ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುತ್ತಿರುವುದಂತೂ ಸುಳ್ಳಲ್ಲ. ಗ್ರಾಹಕರ ನಂಬಿಕೆ, ಸರ್ಟಿಫಿಕೇಟ್‌ಗಳಷ್ಟೇ ಅವುಗಳನ್ನು ಸ್ಪರ್ಧೆಯಲ್ಲಿ ಉಳಿಸುವಾಗ ಅವು ನಿರಂತರವಾಗಿ ಗ್ರಾಹಕ ಸೇವಾ ಗುಣಮಟ್ಟದಲ್ಲಿ ರಾಜಿಯಾಗುವಂತಿಲ್ಲ. ಕ್ಯಾಷ್‌ ಬ್ಯಾಕ್‌ ಆಫ‌ರ್‌, ರಿಟರ್ನ್ ಪಾಲಿಸಿಗಳು ಶೇ. 100ರ ಫ‌ಲಿತಾಂಶಕ್ಕಿಂತ ಕಡಿಮೆ ಇದ್ದರೆ ಸಮಸ್ಯೆಯಾಗುತ್ತದೆ. ತೆರಿಗೆ ಪದ್ಧತಿಯಲ್ಲಿ ಎಲ್ಲ ವ್ಯಾಪಾರಿ ವ್ಯವಸ್ಥೆಗಳು ಒಂದೇ ಆಟದ ಮೈದಾನದಲ್ಲಿರಬೇಕೇ ವಿನಃ ಆನ್‌ಲೈನ್‌ ವ್ಯಾಪಾರಿ ತಾಣಗಳಿಗೆ ಸರ್ಕಾರದ ನೀತಿಯಲ್ಲಿ ಹೆಚ್ಚಿನ ಅನುಕೂಲಗಳನ್ನು ಕಲ್ಪಿಸಿರಬಾರದು.  ಅಷ್ಟೇ ಹೊರತು, ಸ್ಪರ್ಧೆ ಹೆಚ್ಚಿದ್ದಷ್ಟೂ ವ್ಯಾಪಾರಿ ವ್ಯವಸ್ಥೆ ಸುಧಾರಿಸುತ್ತದೆ. ಖರೀದಿದಾರರಿಗೆ ಸೌಕರ್ಯ ಲಭಿಸುತ್ತದೆ.

ಕೇರಳದ ಯುವಕನೊಬ್ಬ ವಿವಿಧ ಇಮೇಲ್‌ ಐಡಿಗಳ ಮೂಲಕ ಆನ್‌ಲೈನ್‌ನಲ್ಲಿ ಹಲವು ಲಕ್ಷಗಳ ಮಾಲನ್ನು ಬೇಕೆಂದೇ ಖರೀದಿಸುತ್ತಾನೆ. ಮಾಲು ಪಡೆದ ನಂತರ ದೂರು ಸಲ್ಲಿಸಿ, ವಿವಿಧ ಕಾರಣಗಳಿಗಾಗಿ ಅವುಗಳನ್ನು ರಿಟರ್ನ್ ಪಾಲಿಸಿ ಪ್ರಕಾರ ಮರಳಿಸುವುದಾಗಿ ಹೇಳುತ್ತಾನೆ. ಅಸಲಿ ಮಾಲುಗಳನ್ನು ತೆಗೆದಿರಿಸಿ ನಕಲಿ ಐಟಂಗಳನ್ನು ಆ ಕಂಪನಿಗೆ ಮರಳಿಸುತ್ತಾನೆ. ಆ ಕಂಪನಿ ಸರಿಸುಮಾರು 20 ಲಕ್ಷ ರೂ. ನಷ್ಟ ಅನುಭವಿಸುತ್ತದೆ. ಭಿನ್ನಭಿನ್ನ ಮೇಲ್‌ ಐಡಿಗಳನ್ನು ಬಳಸಿ ಒಬ್ಟಾತನೇ ಈ ಖರೀದಿ ನಾಟಕ ಮಾಡಿ ಹಣ ಲಪಟಾಯಿಸಿದ್ದಾನೆ ಎಂಬುದನ್ನುತಿಳಿದು ವ್ಯಾಪಾರಿ ಕಂಪನಿಯವರು ಪೊಲೀಸರಿಗೆ ದೂರು ಸಲ್ಲಿಸುತ್ತಾರೆ.

ವಂಚಕರು ಹೆಚ್ಚಿದಂತೆ ಆನ್‌ಲೈನ್‌ ಕಂಪನಿಗಳು ಈವರೆಗಿನ ಗ್ರಾಹಕ ರಿಟರ್ನ್ ಪಾಲಿಸಿ, ಕ್ಯಾಷ್‌ ಬ್ಯಾಕ್‌ಗಳಿಗೆ ಅವು ಹತ್ತು ಹಲವಾರು ಕಡಿವಾಣಗಳನ್ನು ಹಾಕಬಹುದು. ತುಂಬಾ ಸುಲಭವಾಗಿ  ನಡೆಸಬಹುದಾಗಿದ್ದ ಈ ಪ್ರಕ್ರಿಯೆ ಹಲವು ಷರತ್ತುಗಳಿಂದ ಉಸಿರು ಕಟ್ಟಿಸುವಂತಾಗಬಹುದು. ನಾವು ಐಟಂ ಅನ್ನು ವಾಪಾಸು ಮಾಡಿದ ನಂತರವೂ ಸಂಪೂರ್ಣ ಪರಿಶೀಲನೆಯ ನಂತರವೇ ಹಣ ವಾಪಾಸು ಮಾಡುವ ತಂತ್ರಕ್ಕೆ ಅವು ನೆಚ್ಚಿಕೊಂಡರೆ,  ನಮಗೆ ಹಣವಾಗಲಿ, ಬದಲಿ ಮಾಲಾಗಲಿ ಕೈಸೇರಲು ತಿಂಗಳುಗಟ್ಟಲೆ ತಡವಾಗಬಹುದು. ಇಷ್ಟಕ್ಕೂ ಇಂತಹ ಹೀನಾಯ ಪರಿಸ್ಥಿತಿಯನ್ನು ತಂದುಕೊಂಡವ ಗ್ರಾಹಕನೇ ಅಲ್ಲವೇ?

ಸಮಾಜದಲ್ಲಿ ಹೆಚ್ಚು ಓದಿದವರು, ತಿಳುವಳಿಕಸ್ಥರು ಹಾಗೂ ಹಣವಂತರೇ ಇಂತಹ ಕೃತ್ಯಗಳಿಗೆ ಮುಂದಾಗುವುದು ದುರಂತ. ವ್ಯಾಪಾರಿ ವ್ಯವಸ್ಥೆಗಳು ಗ್ರಾಹಕರಿಗೆ ಮಾಡುವ ವಂಚನೆಗಳ ವಿರುದ್ಧ ಹೋರಾಡೋಣ. ಆದರೆ ಗ್ರಾಹಕರು ತಮಗೆ ತಾವೇ ಮಾಡಿಕೊಳ್ಳುವ ಅನಾಹುತಗಳಿಗೆ ಯಾರು ಹೊಣೆ??

ಮಾ.ವೆಂ.ಸ.ಪ್ರಸಾದ್‌, ದತ್ತಿ ನಿರ್ದೇಶಕರು, ಬಳಕೆದಾರರ ವೇದಿಕೆ, ಸಾಗರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

38

Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್‌

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.