ಹಸಿರು ಕಾಲುವೆಯ ಹೊಣೆ ಯಾರದು?


Team Udayavani, Jun 18, 2018, 4:02 PM IST

hasiru.jpg

ನೀರಾವರಿ ನೆಲೆಯಲ್ಲಿ ಮರ ಬೆಳೆಸಿದರೆ ನದಿ ಮೂಲದ ಕಾಡಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಉಷ್ಣತೆಯ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಕೃಷಿ, ಜನಜೀವನದಲ್ಲಿ  ಬದಲಾವಣೆಯಾಗುತ್ತದೆ. ಇಂದು ಹೆಚ್ಚಿನ ಮರಗಳಿಲ್ಲದ ಪರಿಣಾಮ ಏಕಬೆಳೆಯ ಕ್ಷೇತ್ರದಲ್ಲಿ ರೋಗ ಬಾಧೆ ಉಲ್ಬಣಿಸಿದೆ. ಕೀಟ ನಿಯಂತ್ರಣಕ್ಕೆ  ಪಕ್ಷಿ ಸಂಕುಲವಿಲ್ಲ. ಕೀಟನಾಶಕ ಕಂಪನಿಗಳು ಹೊಲ, ಗದ್ದೆಗಳನ್ನು ಆಳುತ್ತಿವೆ. ತೀವ್ರ ವಿಷ ಸಿಂಪರಣೆಯಿಂದ ಜಲ ಮಾಲಿನ್ಯ ಮಿತಿ ಮೀರಿದೆ. ಕೃಷಿಕನ ಮಿತ್ರರಾಗಿದ್ದ ಹಾವು, ಕಪ್ಪೆಗಳಿಗೂ ಸಂಚಕಾರ ಒದಗಿದೆ. ರೈತರು ಮರದ ಬೆಲೆ ತಿಳಿಯದಷ್ಟು ದಡ್ಡರಲ್ಲ.  ಉತ್ತಮ ನಿರ್ಧಾರ ಮಾಡಿ ಎಕರೆಗೆ ಹತ್ತಾರು ಮರಗಳನ್ನು ಸ್ವಂತ ಭೂಮಿಯಲ್ಲಿ ಬೆಳೆಸಿದರೆ ಬದಲಾವಣೆ ಸಾಧ್ಯವಿದೆ. ನೀರಿಲ್ಲದೇ ಕಬ್ಬು, ಭತ್ತ ಕೈಕೊಟ್ಟಾಗ ಮರಗಳು ಆಸರೆಯಾಗಿ  ಕೈ ಹಿಡಿಯುತ್ತವೆ.

ಬಾಟಲಿಯಲ್ಲಿ ತುಂಬಿಸಿಟ್ಟ ಒಂದು ಲೀಟರ್‌ ಕುಡಿಯುವ ನೀರಿನ ಬೆಲೆ ಇಪ್ಪತ್ತು ರೂಪಾಯಿ. ಮನೆ ಬಳಕೆಯ  ಟ್ಯಾಂಕರ್‌ ನೀರಿಗೆ ಸಾವಿರ ರೂಪಾಯಿ. ನೂರಾರು ಎಕರೆ ಕಬ್ಬು, ಭತ್ತ, ಅಡಿಕೆ, ತೆಂಗು,  ಬಾಳೆಗಳು ನೀರಿಲ್ಲದೇ ಹಾನಿಯಾದಾಗ ನೀರಿನ ಹನಿಯ ಲೆಕ್ಕ ಲಕ್ಷ….ಕೋಟಿಯಾಗಿ ಕಾಣಿಸುತ್ತದೆ. ಆದರೆ ಯಾವತ್ತೂ ಟೊಮೆಟೊ, ದಾಳಿಂಬೆ, ಮಾವು, ಹೂವು,  ಸಜ್ಜೆ ಸಂತೆಗಳಲ್ಲಿ ನೀರಿನ ನಿಖರ ಬೆಲೆ ಕಾಣಿಸುವುದಿಲ್ಲ. ಮಹಾನಗರ ಬೆಂಗಳೂರಿಗೆ ತಿಂಗಳಿಗೆ, ಒಂದೂವರೆ ಟಿಎಮ್‌ಸಿ ಕಾವೇರಿ ನೀರು ಕುಡಿಯಲು ಬೇಕು. ಈ ಪ್ರಮಾಣದ ನೀರಿನಿಂದ  4,500 ಎಕರೆಯಲ್ಲಿ ಭತ್ತ, ಕಬ್ಬು ಬೆಳೆ ಸಾಧ್ಯವೆಂದರೆ ಮಂಡ್ಯದ ರೈತರಿಗೆ ಸರಳಕ್ಕೆ ಅರ್ಥವಾಗುತ್ತದೆ. ಇದೇ ನೀರಿನಿಂದ 11,000 ಎಕರೆಯಲ್ಲಿ ಕಡಲೆ ಬೆಳೆಯಬಹುದೆಂದರೆ ಚಿತ್ರದುರ್ಗಕ್ಕೆ ಸಮೀಪವಿರುವ ಬರದ ನಾಡು ಚಳ್ಳಕೆರೆಯವರಿಗೆ ಹನಿ ನೀರಿನ ಪ್ರಾಮುಖ್ಯತೆ ಅರ್ಥವಾಗಿ ಅಚ್ಚರಿ ಹುಟ್ಟಿಸುತ್ತದೆ. ಟಿಎಮ್‌ಸಿಯನ್ನು  ಹತ್ತು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕರ್‌ಗಳಲ್ಲಿ ಭರ್ತಿ ಮಾಡಿದರೆ ಬರೋಬ್ಬರಿ 28, 33, 000 ಟ್ಯಾಂಕರ್‌ ನೀರು. ಜಲ ಜಗತ್ತು ವಾಹನ ದಟ್ಟನೆಯಲ್ಲಿ ಓಡಾಡುವವರಿಗೆ  ವಿವರಿಸಿದರೆ ಮಾತ್ರ  ಅರ್ಥವಾಗುತ್ತದೆ. ಮಳೆ ಕಾಡಿನಲ್ಲಿ, ನದಿ ಮೂಲದಲ್ಲಿ ಹನಿಯ ಬೆಲೆ ಸರಳ ಲೆಕ್ಕಕ್ಕೆ ಸಿಗುವುದಿಲ್ಲ. ಮರದ ಬೇರು, ಹುಲ್ಲು ಹಾಸು, ಹ್ಯೂಮಸ್‌ ಹೊದಿಕೆ, ಗೆದ್ದಲ ಗೂಡು, ಕಲ್ಲು ಬಂಡೆ, ಮರಳ ದಿಬ್ಬ ಎಲ್ಲದರ ಕೊಡುಗೆ ಏಣಿಸಿದರೆ ಚಿನ್ನಕ್ಕಿಂತ ಅನ್ನದ ಬೆಲೆಯೇ ದುಬಾರಿಯಲ್ಲವೇ ಅನಿಸುತ್ತದೆ. 

ನೀರಾವರಿ ತಜ್ಞರು, ರಾಜಕಾರಣಿಗಳು, ಕೃಷಿಕರು, ಕಾಡಿನ ಲೆಕ್ಕವನ್ನೂ ಸ್ವಲ್ಪ ಕಲಿಯಬೇಕಾಗಿದೆ. ಮರವಿಲ್ಲದಿದ್ದರೆ, ಮಳೆ ಬರದಿದ್ದರೆ ನದಿಗಳು ಹರಿಯುವುದಿಲ್ಲ, ಅಣೆಕಟ್ಟೆ ಭರ್ತಿಯಾಗದಿದ್ದರೆ ಯೋಜನೆಯ ಫ‌ಲ ಸಿಗುವುದಿಲ್ಲ. ಪರಿಸರ ಸ್ನೇಹಿ ನಿರ್ಮಾಣದ ಪ್ರಾಥಮಿಕ ಪಾಠ ಆಲಿಸಬೇಕಾಗುತ್ತದೆ. ದುಃಖದ ಸಂಗತಿಯೆಂದರೆ ಪೈಪು, ಕಾಲುವೆಗಳಲ್ಲಿ ಒಯ್ಯುವ ದ್ರವ ರೂಪದ ಉತ್ಪನ್ನ ಎಂದಷ್ಟೇ ಬಹುತೇಕ ಇಂಜಿನಿಯರ್‌ಗಳು  ನೀರನ್ನು  ಕಂಡಿದ್ದಾರೆ. ನೀರು ಗುರುತ್ವಾಕರ್ಷಣ ಶಕ್ತಿಯಿಂದ ಕೆಳಮುಖವಾಗಿ  ಹರಿಯುತ್ತದೆಂದು ಅರಿತವರಿಗೆ ಆವಿಯಾಗಿ ಮಾಯವಾಗುವ ನೀರ ನೆಲೆ ಗಮನಿಸಿಲ್ಲ. ಪ್ರತಿ ಸೆಕೆಂಡಿಗೆ ಹರಿಯುವ ಪ್ರಮಾಣವಾಗಿ ನೀರಿನ ಲೆಕ್ಕ  ಇವರಿಗೆಲ್ಲ ಸಿಕ್ಕಿದೆ. ಮರದ ವಿಚಾರಗಳು ಮರೆತು ಹೋಗಿವೆ. ಕೃಷಿ, ಜನಜೀವನ ಅಭಿವೃದ್ಧಿಯ ಮೂಲವೆಂದು ನೀರಾವರಿ ಯೋಜನೆಗಳು ಬಣ್ಣಿಸಲ್ಪಟ್ಟಿವೆ. ಕಾಡು ಕಡಿದು ಅಣೆಕಟ್ಟು ನಿರ್ಮಿಸಿ ಜಲಾಶಯ ಮಾಡಿದ್ದೇವೆ. ಗುಡ್ಡ ಬೆಟ್ಟಗಳನ್ನು ಅಗೆದು ಕಾಲುವೆ ಜಾಲ ರೂಪಿಸಿದ್ದೇವೆ. ಕಣಿವೆಯಲ್ಲಿ ಹರಿಯುವ ನೀರು ಎತ್ತರದ ಕಾಲುವೆಗೆ ಬಂದು ನೂರಾರು ಕಿಲೋ ಮೀಟರ್‌ ದೂರದ ಭೂಮಿ ಹಸಿರಾಗಿದೆ.  ನದಿ ಮೂಲದಲ್ಲಿ ನಿಸರ್ಗ ಕಾಡು ಬೆಳೆಸಿರುವುದಕ್ಕೂ, ಇದೇ ನೀರನ್ನು ಕಾಂಕ್ರೀಟ್‌ ಕಾಲುವೆಯಲ್ಲಿ ಸಾಗಿಸುವ ಪ್ರಯತ್ನಗಳಲ್ಲಿ  ಮರದ ಮಾನ್ಯತೆ ಹರಾಜಾದ ವಿಪರ್ಯಾಸಕ್ಕೆ ಯೋಜನೆಗಳು ಸಾಕ್ಷಿಯಾಗಿವೆ. ಮರಗಳ ನೆರಳಲ್ಲಿ ಪ್ರವಹಿಸಬೇಕಾದ ಕಾಡಿನ ಉತ್ಪನ್ನ, ಕಾಲುವೆಯಲ್ಲಿ ಪ್ಯಾಕ್‌ ಆಗಿದೆ.

ಕೃಷ್ಣರಾಜಸಾಗರ, ತುಂಗಭದ್ರಾ, ಆಲಮಟ್ಟಿ, ನಾರಾಯಣಪುರ, ಮಲಪ್ರಭಾ, ಘಟಪ್ರಭಾ, ಕಬಿನಿ, ಹಾರಂಗಿ, ಹೇಮಾವತಿ… ಹೀಗೆ ಎಲ್ಲ ಯೋಜನೆಗಳಿಗೂ ಲಕ್ಷಾಂತರ ಹೆಕ್ಟೇರ್‌ ಕಾಡು ಕರಗಿದೆ. ಹಿರಿಯ ಪರಿಸರ ತಜ್ಞ ಯಲ್ಲಪ್ಪ ರೆಡ್ಡಿ ನೇತೃತ್ವದಲ್ಲಿ ಕ್ರಿ. ಶ. 2001 ರಲ್ಲಿ ಸರಕಾರಕ್ಕೆ ಸಲ್ಲಿಕೆಯಾದ ಇಕೋ ಕಮಿಟಿ ಸಲ್ಲಿಸಿರುವ ಅಂತಿಮ ವರದಿಯಲ್ಲಿ ನೀರಾವರಿ ನೆಲೆಯಲ್ಲಿ ಮರ ಬೆಳೆಸುವ ಮಹತ್ವವನ್ನು ವಿವರಿಸಲಾಗಿದೆ. ರಾಜ್ಯದಲ್ಲಿ 11,000 ಚದರ ಕಿಲೋ ಮೀಟರ್‌ ಪ್ರದೇಶದಲ್ಲಿ ಕಾಲುವೆ, ಜಲಾಶಯದಂಚಿನಲ್ಲಿ ಸಸಿ ಬೆಳೆಸಬಹುದು. ಬೃಹತ್‌, ಮಧ್ಯಮ ಹಾಗೂ ಕಿರು ನೀರಾವರಿ ಯೋಜನೆಗಳಿಗೆ ವಶಪಡಿಸಿಕೊಂಡ ಪ್ರದೇಶಗಳ ಸಮರ್ಪಕ ಬಳಕೆಯ ಕುರಿತ ವಿವರಣೆಯೂ ವರದಿಯಲ್ಲಿದೆ. ಒಂದು ಕಿಲೋ ಮೀಟರ್‌ ಉದ್ದದ ಕಾಲುವೆಯಂಚಿನಲ್ಲಿ ಸಸಿಯಿಂದ ಸಸಿಗೆ ಹತ್ತು ಮೀಟರ್‌ ಅಂತರದಲ್ಲಿ 200 ಸಸಿ ಬೆಳೆಸಬಹುದು. ಹಸಿರೆಲೆ ಗೊಬ್ಬರ, ಮೇವು, ಹಣ್ಣು, ಜೈವಿಕ ಇಂಧನ, ಉರುವಲು, ನಾಟಾ, ಔಷಧ, ಕಿರು ಅರಣ್ಯ ಉತ್ಪನ್ನ, ಹೀಗೆ ವಿವಿಧ ಲಾಭಗಳು ಇದರಿಂದ ದೊರೆಯುತ್ತವೆ. ಪಕ್ಷಿ ಸಂಕುಲಗಳ ಆವಾಸವಾಗಿ, ಕೀಟ ನಿಯಂತ್ರಣದ ಅಸ್ತ್ರವಾಗಿ ಸಸ್ಯ ಸಂಕುಲ ನೆರವಾಗುತ್ತವೆ. ನೆರಳು, ಬಿಸಿಗಾಳಿ ತಡೆ, ತೇವಾಂಶ ರಕ್ಷಣೆ, ಸೂಕ್ಷ್ಮ ಜೀವಪರಿಸರದ ಪೋಷಣೆ ಸೇರಿದಂತೆ ಹಲವು ಅನೂಹ್ಯ ಲಾಭಗಳಿವೆ. ಬಿದಿರು, ಬೇಲ, ಬೇವು, ಹೊಂಗೆ, ಹುಣಸೆ, ಆಲ, ಮಾವು, ಬಕುಲ, ಕರಿಜಾಲಿ, ಕಮರ, ನೇರಳೆ ಮುಂತಾಗಿ ಪರಿಸರಕ್ಕೆ ಯೋಗ್ಯ ವೃಕ್ಷಗಳನ್ನು  ಆಯ್ದು ಬೆಳೆಸಬಹುದಾಗಿದೆ. ಅಂದಾಜು 1000 ಕೋಟಿ ರೂಪಾಯಿ ಇದಕ್ಕೆ ತಗಲಬಹುದೆಂದು 17 ವರ್ಷಗಳ ಹಿಂದೆ ಯೋಜಿಸಲಾಗಿತ್ತು. ಆದರೆ ವರದಿ ಸ್ವೀಕರಿಸಿದ ಸರಕಾರ ಈವರೆಗೂ  ಮರ ಬೆಳೆಸುವ ಮಾತಾಡಿಲ್ಲ. 

ಪರಿಸರ ಸಮಸ್ಯೆಗಳನ್ನು ಗುರುತಿಸುವ ವಿಚಾರದಲ್ಲಿ ನಮ್ಮ ರಾಜ್ಯ ಯಾವತ್ತೂ ಮುಂದಿದೆ. ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ. ಆರ್‌. ಸತೀಶ್ಚಂದ್ರನ್‌ ಅವರ ನೇತೃತ್ವದಲ್ಲಿ ಕ್ರಿ. ಶ.  1985ರಲ್ಲಿ ಒಂದು ಆಯೋಗ ರಚನೆಯಾಗಿತ್ತು. ರಾಜ್ಯದಲ್ಲಿ ನೀರಾವರಿ, ಕೃಷಿ ಸೌಲಭ್ಯಗಳನ್ನು ಸಾಕಷ್ಟು ಒದಗಿಸಿದರೂ ಇಳುವರಿಯಲ್ಲಿ ಹೆಚ್ಚಳವಾಗದಿರಲು ಕಾರಣ ಹುಡುಕುವುದು ಮುಖ್ಯ ಉದ್ದೇಶವಾಗಿತ್ತು.  ಅತಿ ಹೆಚ್ಚು ರಾಸಾಯನಿಕ ಬಳಕೆ, ಕ್ರಿಮಿನಾಶಕ, ಕಳೆನಾಶಕದಿಂದ ಜೈವಿಕ ವ್ಯವಸ್ಥೆ  ಹಾಳಾಗಿದೆ. 

ಭೂಮಿಯ ಮಣ್ಣು, ನೀರು ಸಂರಕ್ಷಣೆಯ ಶಕ್ತಿ ಕುಂಠಿತವಾಗಿದೆ. ಭತ್ತ, ಕಬ್ಬಿನಂಥ ಏಕ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಕೀಟನಾಶಕಗಳಿಂದ ಕೀಟ, ಪಕ್ಷಿ ಸಂಕುಲಗಳ ಮೇಲೆ ಮಾರಕ ಪರಿಣಾಮವಾಗಿದೆಯೆಂದು ಆಯೋಗ ಹೇಳಿತ್ತು. ರೈತರು ತಮ್ಮ ಆದಾಯದ ಶೇಕಡಾ 30-35 ಭಾಗವನ್ನು ಗೊಬ್ಬರ, ಕೀಟನಾಶಕ ಖರೀದಿಗೆ ಖರ್ಚುಮಾಡುತ್ತಿದ್ದಾರೆ.  ಭೂಮಿಯಲ್ಲಿ ನೀರು ಹಿಡಿದುಕೊಳ್ಳಲು ಮರ ಬೆಳೆಸಬೇಕು.  ರಾಜ್ಯದ ಮುಕ್ಕಾಲು  ಭಾಗ ಶುಷ್ಕ ಹಾಗೂ ಅರೆ ಶುಷ್ಕ ಭೂಮಿಯಾಗಿದ್ದು ಇಲ್ಲಿ ಉಷ್ಣತೆ ಏರುತ್ತಿದೆ. ಬಯಲು ಸೀಮೆಯಲ್ಲಿ ವೃಕ್ಷ ಸಂಪತ್ತು ಹೆಚ್ಚಿಸಿ ಕೃಷಿ ಪರಿಸರದಲ್ಲಿ ಬದಲಾವಣೆಯಾದರೆ ಉತ್ಪಾದನೆ ಹೆಚ್ಚುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ನೀರು ಆವಿಯಾಗುವುದು ಕಡಿಮೆಯಾಗುತ್ತದೆ. ಒಂದು ಲಕ್ಷ ಹೆಕ್ಟೇರಿಗೆ ನೀರುಣಿಸುವ ಈಗಿರುವ ಯೋಜನೆಯಿಂದ ಎರಡು ಲಕ್ಷ ಹೆಕ್ಟೇರ್‌ಗೆ ನೀರು ನೀಡಬಹುದೆಂದು ವಿವರಿಸಿತ್ತು. ವರದಿ ಏನಾಯ್ತು ? ಹೇಳುವವರಿಲ್ಲ, ಕೇಳುವವರಿಲ್ಲ. 

ರಾಜ್ಯದ ಮುಕ್ಕಾಲು ಭಾಗದಲ್ಲಿ ವರ್ಷದ 200-210 ದಿನಗಳ ಕಾಲ ಉಷ್ಣತೆ 35 ಡಿಗ್ರಿ ಸೆಲಿÒಯಸ್‌ ಇದೆ. ಬೇಸಿಗೆಯ ಕೊನೆಯಲ್ಲಿ 44-45 ಡಿಗ್ರಿಗೆ ಏರುತ್ತದೆ. ಕೇವಲ 60-65 ಮಳೆ ದಿನಗಳು ಈ ಪ್ರದೇಶದ ಜನರ ಬದುಕನ್ನು ಸ್ವಲ್ಪ ತಣ್ಣಗೆ ಉಳಿಸುತ್ತವೆ. ಅಣೆಕಟ್ಟೆಯಲ್ಲಿ ನೀರು ಭರ್ತಿಯಾಗಿ ನೂರಾರು ಕಿಲೋ ಮೀಟರ್‌ ಕಾಲುವೆಯಲ್ಲಿ ಕೃಷಿ ಭೂಮಿ ತಲುಪಿದರೆ ರೈತರ ಬದುಕಿನಲ್ಲಿ ದೊಡ್ಡ ಸಂಚಲನ ಶುರುವಾಗುತ್ತದೆ. ನೀರಾವರಿ ವಿಸ್ತರಣೆಯಿಂದ ಮಳೆಯನ್ನೇ ನಂಬಿದ ಲಾಗಾಯ್ತಿನ ಬೇಸಾಯಕ್ಕೆ ಬದಲಾಗಿ ಇದೀಗ ಕಾಲುವೆ ನೀರಿನಲ್ಲಿ ಕೃಷಿಯ ಮುಖ ನೋಡುತ್ತಿದ್ದೇವೆ . ಸಮೂಹಸನ್ನಿಯಂತೆ ಅಧಿಕ ನೀರು ಬಳಸುವ ಭತ್ತ, ಕಬ್ಬಿನಂಥ ಏಕಜಾತಿ ಬೆಳೆಗಳು ವಿಸ್ತರಣೆಯಾಗಿವೆ. ಇವಕ್ಕೆ ನೀರುಣಿಸಲು ನಿರ್ಮಿಸಿದ ಕಾಲುವೆಗಳಿಂದ  ಅಪಾರ ಪ್ರಮಾಣದ ನೀರು ಆವಿಯಾಗುತ್ತದೆ.  

ನೀರಾವರಿ ಕಾಲುವೆಯ ಪಕ್ಕದಲ್ಲಿ ಮರ ಬೆಳೆಸುವುದಕ್ಕೂ, ನದಿ ಸಂರಕ್ಷಣೆಗೂ ಏನು ಸಂಬಂಧ ಎಂಬ ಪ್ರಶ್ನೆ ಏಳಬಹುದು. ನೈಸರ್ಗಿಕವಾಗಿ ಹರಿಯುವ ನೀರನ್ನು ಅಣೆಕಟ್ಟೆಯಲ್ಲಿ ನಿಲ್ಲಿಸಿ ಕಾಲುವೆ ಮೂಲಕ ಕೃಷಿಗೆ ಪಡೆಯುವ ಪ್ರಯತ್ನದಲ್ಲಿ ನೀರಿನ ಬೆಲೆ ಚಿನ್ನವಾಗಿದೆ. ಕೃಷಿಗೆ ನೀರು ನೀಡುವ ಕಾಡು, ಇಂದು ನಾಡಿನ ಜನಕ್ಕೆ ಉರುವಲು, ಉದ್ಯಮಗಳಿಗೆ ಕಚ್ಛಾವಸ್ತು ನೀಡುತ್ತಿದೆ. ನೈಸರ್ಗಿಕ ಕಾಡಿನ ಮೂಲಿಕೆಗಳನ್ನು ನಂಬಿ ನೂರಾರು ಆಯುರ್ವೇದ ಆಸ್ಪತ್ರೆಗಳು ಬದುಕಿವೆ. ನೀರಾವರಿ ನೆಲೆಯಲ್ಲಿ ಮರ ಬೆಳೆಸುವ ಕಾರ್ಯದಿಂದ ನದಿ ಮೂಲದ ಕಾಡಿನ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಉಷ್ಣತೆಯ ಹೆಚ್ಚಳದಿಂದ ಸಂಕಷ್ಟದಲ್ಲಿರುವ ಕೃಷಿ, ಜನಜೀವನದಲ್ಲಿ  ಬದಲಾವಣೆಯಾಗುತ್ತದೆ. ಮುಖ್ಯವಾಗಿ, ಕೃಷಿ ನೆಲೆಯಲ್ಲಿ ಮರವಿಲ್ಲದ ಪರಿಣಾಮ, ಏಕಬೆಳೆಯ ಕ್ಷೇತ್ರದಲ್ಲಿ ರೋಗ ಬಾಧೆ ಉಲ್ಬಣಿಸಿದೆ, ಕೀಟ ನಿಯಂತ್ರಣಕ್ಕೆ  ಪಕ್ಷಿ ಸಂಕುಲವಿಲ್ಲ. ಕೀಟನಾಶಕ ಕಂಪನಿಗಳೇ ಈಗ  ಹೊಲ ಗದ್ದೆಗಳನ್ನು ಆಳುತ್ತಿವೆ. ತೀವ್ರ ವಿಷ ಸಿಂಪರಣೆಯಿಂದ ಜಲ ಮಾಲಿನ್ಯ ಮಿತಿ ಮೀರಿದೆ. ಕೃಷಿಕನ ಮಿತ್ರನಾಗಿದ್ದ ಹಾವು ಕಪ್ಪೆಗಳಿಗೂ ಸಂಚಕಾರ ಒದಗಿದೆ. ಹೀಗಾಗಿ ಮರ ಬೆಳೆಸುವ ಮೂಲಕ ನೀರಾವರಿ ನೆಲೆಯಲ್ಲಿ ಪರಿಸರ ಬದಲಾವಣೆಯಾಗುತ್ತದೆ, ನದಿ ರಕ್ಷಣೆಗೆ ಮಹತ್ವದ ಕೊಡುಗೆಯಾಗುತ್ತದೆ. 

ಸಾಲಮನ್ನಾ, ರೈತರ ಪಾಲಿಗೆ ಮಹತ್ವದ್ದೆಂದು ಕೆಲವರು ಭಾವಿಸಿದ್ದಾರೆ. ರೈತರಿಗೆ ನೀರುಣಿಸುವ ಯೋಜನಾ ಕ್ಷೇತ್ರಗಳಲ್ಲಿ ಮರಗಳನ್ನು ಬೆಳೆಸುವುದೇ ಎಲ್ಲಕ್ಕಿಂತ ಮುಖ್ಯವೆಂಬುದು ಸರಕಾರಕ್ಕೆ ಮರೆತು ಹೋಗಿದೆ. ಹೀಗಾಗಿ, ವರದಿಗಳ ಮೇಲೆ ವರದಿ ಪಡೆಯುತ್ತ  ದಶಕಗಳಿಂದ ನಿದ್ದೆ ಸಾಗಿದೆ. ಆಡಳಿತದ ಮಾತು ಹಾಗಿರಲಿ, ನಮ್ಮ ರೈತರು ಮರದ ಬೆಲೆ ತಿಳಿಯದಷ್ಟು ದಡ್ಡರಲ್ಲ. ಎಕರೆಗೆ ಹತ್ತಾರು ಮರಗಳನ್ನು ಸ್ವಂತ ಭೂಮಿಯಲ್ಲಿ ಬೆಳೆಸಿದರೆ ಹಸಿರು ಕಾಲುವೆಯ ಕನಸು ಕೈಗೂಡಬಹುದು. ನೀರಿಲ್ಲದೇ ಕಬ್ಬು, ಭತ್ತ ಕೈಕೊಟ್ಟಾಗ ಮರಗಳು ಆಸರೆಯಾಗಿ  ಕೈಡಿಯಬಹುದು. 

ಮುಂದಿನ ಭಾಗ – ನದಿ ಜೀವನದ ಹೊಸ ಅಧ್ಯಾಯಗಳು

– ಶಿವಾನಂದ ಕಳವ

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.