ಚಿಂತೆಯ ಕೂಪಕ್ಕೆ ಮನಸನ್ನು ದೂಡಬೇಡಿ
Team Udayavani, Dec 29, 2020, 9:00 PM IST
“ಎಪ್ಪತ್ತೈದು ವರ್ಷವಲ್ಲವಾ ನಿಮಗೆ..? ಈ ವಯಸ್ಸಲ್ಲೂ ಇಷ್ಟು ಕ್ರಿಯಾಶೀಲರಾಗಿ ಹೇಗೆ ಇರ್ತೀರಿ ಸರ್?’ ಎಂದಾಗ ಮುಗುಳ್ನಕ್ಕರು ಅವರು. ತಮ್ಮ ಬೂಟುಗಳ ಲೇಸ್ ಸರಿಪಡಿಸಿಕೊಳ್ಳುತ್ತ-ಊಟ ತಿಂಡಿ ತೀರ್ಥ ಸಾಕಷ್ಟು ಕಡಿಮೆ, ಆದರೆ ಸಮಯಕ್ಕೆ ಸರಿಯಾಗಿ ಮಾಡ್ತೇನೆ. ನಿದ್ದೆ ಹೆಚ್ಚಿಲ್ಲ ಕಡಿಮೆಯಿಲ್ಲ. ಆಲಸ್ಯದಿಂದ ದೂರ. ಆದರೆ ಇದೆಲ್ಲಕ್ಕಿಂತ ಮುಖ್ಯವಾದದ್ದು ಏನು ಗೊತ್ತ..?
ನೀವು ಕೇಳಿದಿರಲ್ಲ “ಈ ವಯಸ್ಸಲ್ಲಿ’ ಅಂತ, ಆ ಧಾಟಿಯ ಮಾತುಗಳನ್ನು ಅವಾಯ್ಡ್ ಮಾಡ್ತೇನೆ. ನಮಗ್ಯಾರಿಗೂ ಇಷ್ಟೇ ವಯಸ್ಸು ಅಂತಿಲ್ಲ. “ನನಗಿನ್ನೂ ಇಪ್ಪತ್ತೈದು ಕಣ್ರೋ ಅಂತ ಕುಣಿದುಕುಪ್ಪಳಿಸುವಾತ ಬೆಳಗಾಗುವಷ್ಟರಲ್ಲಿ ಅಪಘಾತಕ್ಕೀಡಾಗಬಹುದು. “ಅಯ್ಯೋ, ನನಗೆ ಅರವತ್ತಾಯ್ತು,ಮುಗಿತು ಬಿಡಿ ಜೀವನ’ ಎಂದುಕೊಳ್ಳುವವನಆಯಸ್ಸು ಪೂರ್ತಿ ನೂರು ವರ್ಷ ಇದ್ದು ಆತದೀರ್ಘಾಯುಷಿಯಾಗಿ, ಅದೇ ಕಾರಣಕ್ಕೆ ಗಿನ್ನಿಸ್ ದಾಖಲೆ ಬರೆಯಬಹುದು. ಇಂತಿಷ್ಟೇ ವಯಸ್ಸು ಎಂದುಕಂಡುಕೊಳ್ಳುವ ಯಂತ್ರವನ್ನಿನ್ನೂ ಮನುಷ್ಯಸಂಶೋಧಿಸಿಲ್ಲವಾದ್ದರಿಂದ, “ಈ ವಯಸ್ಸಲ್ಲಿ’ ಎನ್ನುವ ಮಾತೇ ನಿರರ್ಥಕ. ಪದೇ ಪದೆ “ವಯಸ್ಸಾಯ್ತು ನಂಗೆ’ ಎಂದು ಕೊಳ್ಳುವುದು ಮಾತ್ರ ಅಪಾಯಕಾರಿಯೇ, ದಿನಕ್ಕೆ ಹತ್ತು ಸಲ ಹಾಗೆಂದುಕೊಂಡರೆ, ನಮಗೆ ಗೊತ್ತಿಲ್ಲದ ಹಾಗೆ ನಮ್ಮ ಮನಸ್ಸನ್ನು ನಾವುಕನ್ವಿನ್ಸ್ ಮಾಡಿಬಿಟ್ಟಿರುತ್ತೇವೆ. ಒಮ್ಮೆ ನಾವು ವಯೋವೃದ್ಧರು ಎಂದು ಮನಸುಒಪ್ಪಿಕೊಂಡಿತೋ, ದೇಹವೂ ಅದಕ್ಕೆ ತಲೆಯಾಡಿಸಿತು ಅಂತಲೇ ಅರ್ಥ. ಅಲ್ಲಿಗೆ, ನಮಗಾಗಿರದೇ ಇರುವಂಥ ವಯಸ್ಸನ್ನು ನಮ್ಮಮೇಲೆ ನಾವೇ ಎಳೆದುಕೊಂಡು ನಮ್ಮಆತ್ಮವಿಶ್ವಾಸವನ್ನು ನಾವೇ ಕಳೆದುಕೊಳ್ಳುವ ಪ್ರಯತ್ನ ಮಾಡಿದಂತೆ ಅಲ್ಲವೇ? ಎಂದವರೇ ಕುರ್ಚಿಯಿಂದೆದ್ದು ನಿಂತಲ್ಲೇ ಒಂದೆರಡು ಬಾರಿ ಕುಪ್ಪಳಿಸಿ, ಲಗುಬಗೆಯಿಂದ ಹೊರಟುನಿಂತರು!
ಇದೇನು ಸರ್ ಇಷ್ಟು ಅವಸರದಲ್ಲಿ ಅನ್ನುವಂತೆ ಅವರನ್ನು ನೋಡಿದರೆ- ಇದುನನ್ನ ಸಾಯಂಕಾಲದ ಜಾಗಿಂಗ್ ಟೈಮ್ ಎನ್ನುತ್ತ ನಡೆದೇಬಿಟ್ಟರು. ನಾನು ಅವಾಕ್ಕಾಗಿ ಅವರನ್ನೇ ನೋಡುತ್ತ ನಿಂತಿದ್ದೆ.
– ಗುರುರಾಜ ಕೊಡ್ಕಣಿ