ಫೇಕ್‌ ಇಟ್‌ ಈಸಿ!

ಈ ವೇಷ ನೋಡಬೇಡ ಅಮ್ಮಯ್ಯ ನೀ ಮೋಸ ಹೋಗದಿರು ದಮ್ಮಯ್ಯ...

Team Udayavani, Oct 27, 2020, 5:50 PM IST

josh-tdy-1

ಆಕಾಶಕ್ಕೆ ತೂತು ಬಿದ್ದಂತೆ ಒಂದೇ ಸಮನೆ ಸುರಿಯುತ್ತಿರುವ ಮಳೆ, ಮನ-ಮನೆಗಳಲ್ಲಿ ಉಸಿರುಗಟ್ಟಿಸುತ್ತಿರುವ ಕೊರೋನಾ ಎಂಬ ಅದೃಶ್ಯ ವೈರಿ, ಹಗಲು ರಾತ್ರಿ ಬ್ರೇಕಿಂಗ್‌ ನ್ಯೂಸ್‌ ಬಿತ್ತರಿಸುತ್ತಾ ನಮ್ಮ ತಲೆಯನ್ನೇ ಬ್ರೇಕ್‌ ಮಾಡುವ ಸುದ್ದಿವಾಹಿನಿಗಳು, ಆತ್ಮೀಯರ ಅನಿರೀಕ್ಷಿತ ಅಗಲುವಿಕೆ, ಅನಿಶ್ಚಿತವಾದ ನಾಳೆಗಳು- ಯಾಕೋ ಈ ವರ್ಷ ಮುಗಿದರೆ ಸಾಕಪ್ಪಾ ಎನ್ನುವಂತಾಗಿದೆ.

ಅಷ್ಟರಲ್ಲಿ ಸಾಮಾಜಿಕ ಜಾಲತಾಣವಾದ ಫೇಸ್‌ ಬುಕ್‌ನಲ್ಲಿ ಮತ್ತೂಂದು ಸಾವಿನ ಸುದ್ದಿ. ಸಾವು ಯಾರದ್ದೇ ಆದರೂ ನೋವಿನ ವಿಷಯವೇ. ಮುರಿದ ಬದುಕನ್ನು ಕಟ್ಟಬಹುದು; ಮುಗಿದದ್ದನ್ನು, ಮರಳಿ ಪಡೆಯಲು ಸಾಧ್ಯವೇ? ಈ ಸಾವಿನ ಸುದ್ದಿ ಮತ್ತಷ್ಟು ತಲ್ಲಣವನ್ನುಂಟು ಮಾಡಿದ್ದು ನಿಜ. ಏಕೆಂದರೆ ಸುದ್ದಿಯ ಪ್ರಕಾರ ಆಕೆ ನಮ್ಮ ವೃತ್ತಿಬಾಂಧವಳು. ಅಂದರೆ ಡೆಂಟಿಸ್ಟ್!

ದಂತವೈದ್ಯೆಯಾಗಿ ವೃತ್ತಿ ಕೈಗೊಂಡು ಈ ಕೋವಿಡ್ ಸಮಯದಲ್ಲೂ ಕೆಲಸ ಮಾಡಿದ್ದ ಆಕೆಗೆ ಸೋಂಕು ತಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆ ಸಂದರ್ಭದಲ್ಲಿ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ (ಓವರ್‌ಡೋಸ್‌) ಆಕೆ ಮೃತಪಟ್ಟರು. ಮಾತ್ರವಲ್ಲ, ಅವರ ತಂದೆ ಕೂಡಾ ವೈದ್ಯರಾಗಿದ್ದರು! ಹೀಗೊಂದು ಸುದ್ದಿಯ ಜತೆ ಮುಗ್ಧ ಮುಖದ ಚೆಂದದ ಹುಡುಗಿಯ ಚಿತ್ರ ಕೂಡಾ ಅದರಲ್ಲಿತ್ತು. ಛೇ, ಇದೆಂಥಾ ಅನ್ಯಾಯ ಎಂದು ಮರುಗುತ್ತಲೇ ನಮ್ಮ ದಂತವೈದ್ಯರ ಗುಂಪಿನಲ್ಲಿ ಈ ಬಗ್ಗೆ ಚರ್ಚೆ ನಡೆಯಿತು. ಯಾರಿಗೂ ಆಕೆಯ ಪರಿಚಯ ಇರಲಿಲ್ಲ; ಬಹಳ ಜನ ದಂತವೈದ್ಯರು ಇರುವುದರಿಂದ ಎಲ್ಲರೂ ಗೊತ್ತಿರಲು ಸಾಧ್ಯವೂ ಇಲ್ಲ. ಎಲ್ಲಿಯವರೋ ಏನೋ ಪಾಪ, ಬಹಳ ರಿಸ್ಕ್ ತೆಗೆದುಕೊಂಡರು ಎಂಬ ಅಭಿಪ್ರಾಯವೂ ಬಂತು.

ಏಕೆಂದರೆ ಹೆಚ್ಚಿನ ದಂತವೈದ್ಯರು, ಚಿಕಿತ್ಸಾ ಕೇಂದ್ರಗಳು ಪೂರ್ಣ ಪ್ರಮಾಣದಲ್ಲಿ ಕೆಲಸ ಇನ್ನೂ ಆರಂಭಿಸಿಲ್ಲ. ಕಾರಣ, ದಂತವೈದ್ಯರಿಗೆ ಸೋಂಕು ಹರಡುವ ಅಪಾಯ ಅತಿ ಹೆಚ್ಚು. ವ್ಯಕ್ತಿಯ ಬಾಯನ್ನು ಅತಿ ಸಮೀಪದಿಂದ ನೋಡುತ್ತಾ ಕೆಲಸ ಮಾಡುವ ದಂತವೈದ್ಯರಿಗೆ ಎಂಜಲು ಮತ್ತು ಚಿಕಿತ್ಸೆಗಳಿಗಾಗಿ ಬಳಸುವ ಸಾಧನಗಳು ಹೊರಚೆಲ್ಲುವ ಏರೋಸೋಲ್‌ಗ‌ಳಿಂದ (ವಾಯುದ್ರವ) ಸೋಂಕುನ ಹರಡುವ ಸಂಭವ ಅತಿ ಹೆಚ್ಚು.

ಒಟ್ಟಿನಲ್ಲಿ ಎಲ್ಲರೂ ತಂತಮ್ಮ ದೈನಂದಿನ ಕೆಲಸಗಳಲ್ಲಿ ನಿರತರಾದರೂ ಹೊರಗೆ ಕಟ್ಟಿದ್ದ ಮೋಡದಂತೆ ಮನಸ್ಸಿನೊಳಗೆ ದುಗುಡ. ಅವರ ಮನೆಯವರನ್ನು ಸಂಪರ್ಕಿಸಿ ವಿವರ ಪಡೆಯುವ ಪ್ರಯತ್ನವೂ ಜಾರಿಯಲ್ಲಿತ್ತು. ಕಡೆಗೆ ಗೊತ್ತಾದ ಸುದ್ದಿ; ಆ ಹೆಸರಿನ ವ್ಯಕ್ತಿ ಇಲ್ಲವೇ ಇಲ್ಲ. ಯಾರೋ ಫೇಕ್‌ ಅಕೌಂಟ್‌ ತೆಗೆದು ಈ ರೀತಿ ಸುದ್ದಿ ಹಬ್ಬಿಸಿದ್ದಾರೆ !! ಈ ರೀತಿ ಫೇಕ್‌ ಅಕೌಂಟ್‌ಗಳು ದಿನೇ ದಿನೇ ಹೆಚ್ಚುತ್ತಿರುವುದರ ಮತ್ತು ಅವುಗಳ ಪರಿಣಾಮ ಕುರಿತು ನಿಜಕ್ಕೂ ಬೇಸರ, ದುಃಖ, ಸಿಟ್ಟಿ ಜತೆ ಹೀಗೇಕೆ ಎಂದು ಮನಸ್ಸು ಯೋಚಿಸತೊಡಗಿತು.

ಸಾರಿ ಹೇಳುವುದೇ ಕೆಲಸ :

ಸಾಮಾಜಿಕ ಮಧ್ಯಮ ಎಂದರೆ ಕಂಪ್ಯೂಟರ್‌, ಮೊಬೈಲ್‌ ಅಥವಾ ಇನ್ನಿತರ ಸಾಧನ ಬಳಸಿ ಅಂತರ್ಜಾಲದ ನೆರವಿನಿಂದ ಯಾವುದೇ ರೀತಿಯ ಸಂವಹನ ಅಥವಾ ವಿಷಯ ಹಂಚಿಕೆ ಮಾಡುವುದು. ಇದಕ್ಕಾಗಿಯೇ ಅನೇಕ ತಾಣಗಳು (ಫೇಸ್‌ಬುಕ್‌, ಇನ್‌ಸ್ಟಗ್ರಾಂ, ಟ್ವಿಟ್ಟರ್‌, ವಾಟ್ಸಾಪ್‌) ಬಳಕೆಯಲ್ಲಿವೆ. ಹೊಸ ಯೋಚನೆ, ಮಾಹಿತಿ, ಸುದ್ದಿಗಳನ್ನು ಅತ್ಯಂತ ವೇಗವಾಗಿ ಹಂಚಿಕೊಳ್ಳಲು ಇದರಿಂದ ಸಾಧ್ಯವಾಗಿದೆ. ಉದ್ಯೋಗಾವಕಾಶ, ಪರಸ್ಪರ ಸಂಪರ್ಕ, ಸಾಮಾಜಿಕ ಜಾಗೃತಿ, ಸಮಾನ ಮನಸ್ಕರ ಭೇಟಿ, ಆಯಾಕ್ಷೇತ್ರದ ಪರಿಣತರ ಅಭಿಪ್ರಾಯ ಇವೆಲ್ಲವೂ ತಕ್ಷಣವೇ ಇಲ್ಲಿ ದೊರಕುವುದರಿಂದ, ಈ ಸಾಮಾಜಿಕ ಮಾಧ್ಯಮಗಳು ಬಹಳ ಜನಪ್ರಿಯವಾಗಿವೆ.

ಜನಪ್ರಿಯತೆ ಹೆಚ್ಚಿದಂತೆ ಅಪಾಯವೂ ಹೆಚ್ಚಿದೆ. ಕಂಡದ್ದನ್ನು- ಉಂಡಿದ್ದನ್ನು ಮಾತ್ರವಲ್ಲ, ಮನದಲ್ಲಿ ಹಾದುಹೋಗಿದ್ದನ್ನೂ ಯಾವುದೇ ಸೆನ್ಸಾರ್‌ ಇಲ್ಲದೇ ಟೈಪಿಸುವುದೊಂದೇ ಕೆಲಸ. ಕ್ಷಣಾರ್ಧದಲ್ಲಿ ಪ್ರಪಂಚದ ತುಂಬೆಲ್ಲಾ ಅದೇ ಸುದ್ದಿ. ಈ ಇನ್‌ ಸ್ಟಂಟ್‌ ಯುಗದಲ್ಲಿ ಸಂಯಮ ಎಂಬುದಕ್ಕೆ ಬೆಲೆಯೇ ಇಲ್ಲ. ಜತೆಗೆ ಎಲ್ಲ ಸಂಗತಿಯನ್ನೂ ಬಹಿರಂಗಕ್ಕೆ ಇಟ್ಟರೆ ಏನಾಗಬಹುದು ಎಂಬ ವಿವೇಕವೂ ಇಲ್ಲ.

ಹೆಚ್ಚಿದ ಜನಪ್ರಿಯತೆ! :  ಮನೆಯಲ್ಲೇ ಇದ್ದು ಪರಸ್ಪರ ಅಂತರವನ್ನಿಟ್ಟೇ ಮಾತನಾಡಬೇಕಾದ ಕೋವಿಡ್ ಕಾಲದಲ್ಲಿ ಕಾಲ ಕಳೆಯಲು, ಪರಸ್ಪರ ಸಂಪರ್ಕದಲ್ಲಿರಲು, ಹೊರಜಗತ್ತಿನ ಸುದ್ದಿ ತಿಳಿಯಲು- ಸುದ್ದಿ ಮಾಡಲು ಸಾಮಾಜಿಕ ಮಾಧ್ಯಮಗಳು ವರದಾನವೇ ಸರಿ. ಆದ್ದರಿಂದಲೇ ಇವುಗಳ ಜನಪ್ರಿಯತೆ ಈಗಹಿಂದೆಂದಿಗಿಂತಲೂ ಹೆಚ್ಚಿದೆ. ಸಂಶೋಧನೆಗಳ ಪ್ರಕಾರ, ಹದಿನೆಂಟರಿಂದ ಮೂವತ್ತು ವರ್ಷದವರು ವಾರಕ್ಕೆ ಎಂಬತ್ತು ಗಂಟೆಗಳ ಕಾಲ ತಮ್ಮ ಸಮಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ! ಹದಿಹರೆಯದವರಲ್ಲಿ ಈ ಫೇಕ್‌ ಅಕೌಂಟುಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ.

ಕ್ಷಣಿಕ ತೃಪ್ತಿಯಷ್ಟೇ ಲಾಭ :

ದುರಂತವೆಂದರೆ ಫೇಕ್‌ ಅಕೌಂಟ್‌ ಹೊಂದಿರುವ ವ್ಯಕ್ತಿಗೆ ಎಲ್ಲಿಲ್ಲದ ಪ್ರಚಾರ ಸಿಗಬಹುದು, ಕ್ಷಣಿಕವಾದ ತೃಪ್ತಿ ಆಗಬಹುದು, ಸರಿ; ಆದರೆ ಅವರ ಕೃತ್ಯದಿಂದಾಗಿ ಅದೆಷ್ಟೋ ಜನರ ಭಾವನೆ, ನಂಬಿಕೆ, ಬದುಕಿಗೇ ಹೊಡೆತ ಬೀಳುತ್ತಿರುವುದು, ಇಡೀ ಸಮಾಜದಲ್ಲಿ ಅಪನಂಬಿಕೆಯನ್ನು ಬೆಳೆಸುತ್ತಿರುವುದು. ಕಾಳ್ಗಿಚ್ಚಿನಂತೆ ಹರಡುವ ಸುದ್ದಿ ಅಲ್ಪಾಯುಷಿಯಾದರೂ ಆ ದಾರಿಯಲ್ಲಿ ಅದು ಸುಟ್ಟಿದ್ದು ಅದೆಷ್ಟೋ. ಹೀಗಾಗಿಯೇ ವಿಶ್ವಾಸ ದ್ರೋಹ, ವಂಚನೆ, ಸುಳ್ಳು ಸುದ್ದಿ ಹರಡುವಿಕೆಇವೆಲ್ಲವೂ ಅಮಾಯಕರನ್ನು ಬಲಿ ತೆಗೆದುಕೊಂಡಿವೆ. ಆರಾಧ್ಯಾ ಹೆಸರಿನ ಹುಡುಗಿಯ ಹೆಸರಿನಲ್ಲಿ ನಡೆದುಹೋದ ಘಟನೆಯ ಸತ್ಯಾಸತ್ಯತೆಗಳೇನೇ ಇರಲಿ, ಇನ್ನೊಮ್ಮೆ ಯಾವುದಾದರೂ ಸಾವಿನ ಸುದ್ದಿ ಬಂದಾಗ ಮೊದಲು ಮೂಡುವ ಭಾವನೆ ಶೋಕವಲ್ಲ, ಸಂಶಯ! ಈಗಾಗಲೇ ಕೊರೋನಾ ಎಂಬುದು ಮಾನವ ಸಂಪರ್ಕವನ್ನು ದೂರವಾಗಿಸಿದೆ. ಆದರೆ ಪುಣ್ಯಕ್ಕೆ ಮಾನವೀಯತೆ ಎಂಬುದು ಇನ್ನೂ ಸತ್ತಿಲ್ಲ. ಈ ಸಂಕಷ್ಟದ ಸಮಯದಲ್ಲಿ ಸಹನೆ, ಸಂಯಮ ಜತೆ ಜಾತಿ- ಮತ- ಧರ್ಮ- ಭಾಷೆ ಎಲ್ಲವನ್ನೂ ಮೀರಿದ ಮಾನವೀಯತೆ ಮಾತ್ರ ನಮ್ಮನ್ನು ಕಾಪಾಡಬಲ್ಲದು ಅಷ್ಟೇ !!

ಫೇಕ್‌ ಅಕೌಂಟ್‌  ತೆರೆಯಲು ಇರುವ ಕಾರಣಗಳು :

  • ಫೇಕ್‌ ಅಕೌಂಟ್‌ ತೆಗೆಯುವವರು ಬಹಿರಂಗದಲ್ಲಿ ಹೊರಪ್ರಪಂಚಕ್ಕೆ ತಾವು ಹೆದರುವುದಿಲ್ಲ ಎಂದು ತೋರಿಸಿಕೊಂಡರೂ ಅಂತರಂಗದಲ್ಲಿ ಪ್ರಚಾರಕ್ಕೆ ಹಾತೊರೆಯುತ್ತಾರೆ. ತಾವು ಮಾಡುವ ಕೆಲಸಗಳಿಂದ ಅಲ್ಲ, ಸುಲಭವಾಗಿ ಸಿಗಬಹುದಾದ -ಬಿಟ್ಟಿ ಪ್ರಚಾರದ ಹಂಬಲವಿರುತ್ತದೆ.
  • ತಮ್ಮ ನಿಜ ಸ್ವರೂಪವನ್ನು ಬಿಂಬಿಸಲು ಹಿಂಜರಿಕೆ ಇರುತ್ತದೆ. ಆತ್ಮವಿಶ್ವಾಸದ ಕೊರತೆಯಿಂದ ಬಳಲುತ್ತಾರೆ. ತಮ್ಮ ನೈಜ ವ್ಯಕ್ತಿತ್ವ ಅರಿವಾದರೆ ಇತರರು ತಮ್ಮ ಪ್ರೀತಿಪಾತ್ರರು ತಮ್ಮನ್ನು ತಿರಸ್ಕರಿಸುತ್ತಾರೆ ಎಂಬ ಭಯವಿರುತ್ತದೆ.
  • ಹದಿಹರೆಯದವರಲ್ಲಿ ಕೆಲವು ಬಾರಿ ಸುಮ್ಮನೇ ಕುತೂಹಲ ತಮಾಷೆಗೆಂದು ಆರಂಭವಾದದ್ದು ನಂತರ ಮಿತಿಯನ್ನು ಮೀರುತ್ತದೆ. ಯಾರಿಗೂ ಗೊತ್ತಿಲ್ಲದೇ, ತನ್ನ ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ಇತರರನ್ನು ಬೈಯ್ಯುವ / ಟೀಕಿಸುವ ಸ್ವಾತಂತ್ರ್ಯ ಮಜಾ ಕೊಡುತ್ತದೆ ಮತ್ತು ಅದೇ ಮುಂದುವರಿಯುತ್ತದೆ.
  • ವ್ಯಕ್ತಿತ್ವ ದೋಷದಿಂದ ಬಳಲುವ ವ್ಯಕ್ತಿಗಳು ತಮ್ಮ ಅಪಾಯಕಾರಿ ಚಟುವಟಿಕೆಗಳನ್ನು (ಬ್ಲಾಕ್‌ಮೇಲ್, ಚಾರಿತ್ರ್ಯ ವಧೆ, ವಂಚನೆ ಇತ್ಯಾದಿ) ಗುಟ್ಟಾಗಿ ಮಾಡಲು ಈ ಮಾರ್ಗ ಬಳಸುವ ಸಾಧ್ಯತೆ ಇದೆ.

 

 

-ಡಾ.ಕೆ.ಎಸ್‌.ಚೈತ್ರಾ

 

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.