ಫ್ರೆಂಡ್ಸ್ಗೆ ಬೇಜಾರಾಗುತ್ತೆ ಅಂತ ಸಿನಿಮಾ ಕ್ಯಾನ್ಸಲ್!
Team Udayavani, Feb 26, 2019, 12:30 AM IST
ಗ್ರೂಪ್ ನೇಮ್: ಹ್ಯಾಪಿ ರಿಪಬ್ಲಿಕ್ ಡೇ
ಗ್ರೂಪ್ ಅಡ್ಮಿನ್: ಶ್ರೀನಿಧಿ, ನಮ್ರತಾ, ನಟರಾಜ್, ಶ್ರೀಕೇತ್, ಸುಧೀಕ್ಸ್, ಮಂದಾರ, ಸಂಪತ್, ವಿನಯ್
ದೇಶಭಕ್ತಿ, ಸಾಹಿತ್ಯ, ಸಿನಿಮಾ, ಕಲೆಯಲ್ಲಿ ಆಸಕ್ತಿಯುಳ್ಳ ನಾವೊಂದಿಷ್ಟು ಗೆಳೆಯರು ವಾಟ್ಸಾಪ್ ಗ್ರೂಪ್ ಕಟ್ಟಿಕೊಂಡಿದ್ದೇವೆ. ರಾಷ್ಟ್ರೀಯ ಹಬ್ಬ, ರಾಷ್ಟ್ರನಾಯಕರ ಜನ್ಮದಿನಗಳಂದು ಗ್ರೂಪ್ನ ಹೆಸರನ್ನು ಬದಲಿಸಿ, ಆ ದಿನದ ಮಹತ್ವವನ್ನು ಗ್ರೂಪ್ನಲ್ಲಿ ಶೇರ್ ಮಾಡಿ, ನಮ್ಮದೇ ರೀತಿಯಲ್ಲಿ ಹಬ್ಬ ಆಚರಿಸುತ್ತೇವೆ. ಸಿನಿಮಾ, ಪುಸ್ತಕ, ನಾಟಕ, ರಾಜಕೀಯ ಹೀಗೆ ಹತ್ತು ಹಲವು ವಿಷಯಗಳ ಚರ್ಚೆಯೂ ನಡೆಯುತ್ತದೆ. ಅಡ್ಮಿನ್ಗಳಲ್ಲಿ ಒಬ್ಬರಾದ ಸಂಪತಣ್ಣ, ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾಗಿ, ಯಾವ ಸಿನಿಮಾ ನೋಡಬಹುದು, ಯಾವುದು ಚೆನ್ನಾಗಿಲ್ಲ, ಯಾವ ಸಿನಿಮಾವನ್ನು ನೋಡಲೇಬೇಕು ಎಂಬ ಮಾಹಿತಿ ಪ್ರತಿ ವಾರವೂ ನಮಗೆ ಸಿಗುತ್ತದೆ. ಇತ್ತೀಚೆಗೆ ಒಂದು ಆ್ಯಕ್ಷನ್ ಸಿನಿಮಾ ಬಿಡುಗಡೆಯಾಯ್ತು. ಕಲಾತ್ಮಕ ಸಿನಿಮಾಗಳನ್ನು ಇಷ್ಟಪಡುವ ಬಹುತೇಕ ಸದಸ್ಯರಿಗೆ ಆ ಸಿನಿಮಾದ ಟ್ರೇಲರ್ ಕೂಡಾ ಇಷ್ಟವಾಗಿರಲಿಲ್ಲ. ಆ್ಯಕ್ಷನ್ ಸಿನಿಮಾಗಳನ್ನು ಇಷ್ಟಪಡುವ ಶ್ರೀಕೇತ್ ಅವರು, ಆ ಸಿನಿಮಾ ನೋಡೋಕೆ ಹೋಗ್ತಿದೀನಿ ಕಣೊ ಅಂತೊಂದು ಮೆಸೇಜ್ ಹರಿಬಿಟ್ಟರು. ಆ ಮೆಸೇಜ್ ಗ್ರೂಪ್ನಲ್ಲಿ ಸಂಚಲನವನ್ನೇ ಸೃಷ್ಟಿಸಿಬಿಟ್ಟಿತು.
ಯಾಕಂದ್ರೆ, ಹಿಂದಿನ ವಾರ ಕನ್ನಡದ ಕಲಾತ್ಮಕ ಸಿನಿಮಾವೊಂದು ಬಿಡುಗಡೆಯಾಗಿತ್ತು. ಹಲವರು ಆ ಸಿನಿಮಾವನ್ನು ಮೆಚ್ಚಿಕೊಂಡಿದ್ದರೂ, ವಾರ ಕಳೆಯುವಷ್ಟರಲ್ಲಿ ಶೋಗಳ ಸಂಖ್ಯೆ ಕಡಿಮೆಯಾಗಿತ್ತು. ಸಹಜವಾಗಿಯೇ ಇದು ಸಂಪತಣ್ಣನಿಗೆ ಬೇಸರ ತಂದಿತ್ತು. ಹಾಗಾಗಿ ಅವರು, ನೀನು ನೋಡ್ಬೇಕು ಅಂತಿರೋ ಮೂವಿ ಚೆನ್ನಾಗಿಲ್ಲ. ಅದಕ್ಕಿಂತ ಈ ಸಿನಿಮಾವನ್ನಾದ್ರೂ ನೋಡು ಅಂತ ಶ್ರೀಕೇತ್ಗೆ ಸಲಹೆ ನೀಡಿದರು. ಆಗ ಅವರಿಬ್ಬರ ಮಧ್ಯೆ ಸಣ್ಣ ಚರ್ಚೆ ನಡೆಯಿತು. ಉಳಿದ ಸದಸ್ಯರೂ ಅದಕ್ಕೆ ಕೈ ಜೋಡಿಸಿದರು. ಒಂದು ಸಿನಿಮಾ ಅಂದ್ರೆ ಹೇಗಿರಬೇಕು, ಯಾವ ರೀತಿಯ ಸಿನಿಮಾವನ್ನು ಜನ ಇಷ್ಟಪಡ್ತಾರೆ, ಒಳ್ಳೆಯ ಸಿನಿಮಾಗಳು ಯಾಕೆ ಸೋಲ್ತಿವೆ, ನೋಡುಗ ಬದಲಾಗಬೇಕೋ, ನಿರ್ದೇಶಕನೋ… ಅಂತೆಲ್ಲಾ ವಿಷಯಗಳು ಚರ್ಚೆಗೆ ಬಂದವು. ಹೆಚ್ಚಿನವರು ಸೃಜನಾತ್ಮಕ ಸಿನಿಮಾದ ಪರ ಇದ್ದಿದ್ದರಿಂದ, ಎಲ್ಲರೂ ಶ್ರೀಕೇತ್ನ ಸಿನಿಮಾ ಆಯ್ಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದಂತಿತ್ತು. ಕೊನೆಗೂ ಅವರು, “ಲೋ, ನೀವು ಹೇಳ್ತಿರೋದು ನೋಡಿದ್ರೆ, ನನ್ನಿಂದಾನೇ ಒಳ್ಳೆಯ ಸಿನಿಮಾಗಳು ಸೋಲ್ತಿವೆ ಅನ್ನೋ ಹಾಗಿದೆ. ಆಯ್ತು ಬಿಡ್ರಪ್ಪಾ. ನಾನು ಆ ಮೂವಿ ನೋಡೋದೆ ಇಲ್ಲ’ ಎಂದುಬಿಟ್ಟರು! ಕೆಟ್ಟ ಸಿನಿಮಾಕ್ಕೆ ಒಂದು ಟಿಕೆಟ್ ತಪ್ಪಿಸಿದ ಖುಷಿಯಲ್ಲಿ ಉಳಿದವರು ಬೀಗಿದರು.
ನತಾಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shikaripur; ಸಂಭ್ರಮದ ಹುಚ್ಚರಾಯಸ್ವಾಮಿ ಬ್ರಹ್ಮ ರಥೋತ್ಸವ:ಯಡಿಯೂರಪ್ಪ ಕುಟುಂಬ ಭಾಗಿ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Dr Rajkumar: ಇಂದು ರಾಜ್ 96ನೇ ಹುಟ್ಟು ಹಬ್ಬ; ಅರ್ಥಪೂರ್ಣ ಆಚರಣೆಗೆ ಅಭಿಮಾನಿಗಳ ಸಿದ್ಧತೆ
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ