ಪ್ರಥಮ ಪ್ರವಾಸಂ ದಂತಭಗ್ನಂ
Team Udayavani, Jan 8, 2019, 12:30 AM IST
ನಾವು ಪ್ರವಾಸ ಹೋಗಲಿರುವ ಜಾಗದಲ್ಲೆಲ್ಲಾ ಓಡಾಡಿ ಅನುಭವವಿದ್ದ ಗೆಳೆಯ ಮಹೇಶ ನಮಗೆಲ್ಲಾ ಮಾರ್ಗದರ್ಶಕನಾದ. ದಾರಿಯುದ್ದಕ್ಕೂ ಆತ ಅನೇಕ ಕತೆಗಳನ್ನು ಹೇಳುತ್ತಾ ಸ್ಥಳ ಪುರಾಣವನ್ನು ಸಾರುತ್ತಾ ನಮಗೆ ಮನರಂಜನೆಯನ್ನು ಒದಗಿಸುತ್ತಿದ್ದ. ಅದಾಗಲೇ ಇಳಿಸಂಜೆ. ಸೂರ್ಯ ಹೊಂಗಿರಣಗಳನ್ನು ನಮ್ಮೆಡೆ ಬೀರುತ್ತಿದ್ದ. ತಂಗಾಳಿ ವಾತಾವರಣವನ್ನು ಹಿತಕರವಾಗಿಸಿತ್ತು. ಇಷ್ಟು ಹೊತ್ತು ಕಾಣುತ್ತಿದ್ದ ಕನಸಿನಲೋಕಕ್ಕೆ ಇನ್ನೇನು ಕಾಲಿರಿಸಲಿದ್ದೆವು. ಅಷ್ಟರಲ್ಲಿ…
ಬೆಳಿಗ್ಗೆ ಬೇಗನೆ ಎದ್ದು, ಹಾಲು ಹೊಳಪಿನ ಪೂರ್ಣಚಂದಿರನ ಮೊಗದ ದರ್ಶನದೊಂದಿಗೆ ಮುಂಜಾನೆಯ ಹಕ್ಕಿಗಳ ಚಿಲಿಪಿಲಿ ಗಾನವನ್ನು ಆಸ್ವಾದಿಸುತ್ತಾ ದೌಡಾಯಿಸಿದ್ದು ಮೈಸೂರಿನ ರೈಲು ನಿಲ್ದಾಣದತ್ತ. ಬೆಳಿಗ್ಗೆ ಮೂಡಣದಿ ಕೆಂಪು ಸೂರ್ಯ ಉದಯವಾಗುವುದಕ್ಕೆ ಇನ್ನೂ ತುಂಬಾ ಸಮಯವಿತ್ತು. ಅಷ್ಟು ಬೆಳಿಗ್ಗೆಯೇ ನಮ್ಮ ಸವಾರಿ ಹೊರಟಿದ್ದು ಪ್ರವಾಸಕ್ಕೆಂದು. ನಮ್ಮ ಸಂತಸಕ್ಕೆಲ್ಲಾ ಕಾರಣವಾಗಿದ್ದು ಎಕ್ಸಾಮ್ ಮುಗಿದಿದ್ದು. ಎಕ್ಸಾಮ್ ಮುಗಿಯಿತೆಂದು ಪಬ್, ಡಿಸ್ಕೋಥೆಕ್ಗಳಲ್ಲಿ ಕಾಲು ಕುಣಿಸಿ ದಣಿವಿನಿಂದ ನಿದ್ದೆ ಹೋಗುವುದಕ್ಕೆ ಬದಲಾಗಿ ಪ್ರಕೃತಿ ಮಡಿಲಲ್ಲಿ ಹಾಯಾಗಿ ನಿದ್ರಿಸೋದೇ ಲೇಸು ಎಂದು ನಾವಷ್ಟೂ ಮಂದಿ ಸ್ನೇಹಿತರು ನಿರ್ಧರಿಸಿಬಿಟ್ಟಿದ್ದೆವು. ನಮ್ಮ ಮುಂದಿನ ನಿಲ್ದಾಣ ಚಾಮರಾಜನಗರದ ಅರಣ್ಯ ಪ್ರದೇಶ.
ಸ್ನೇಹಿತರ ವೇಟಿಂಗ್ ಲಿಸ್ಟ್
ರೈಲ್ವೇ ಟಿಕೆಟ್ನಲ್ಲೇನು ವೇಟಿಂಗ್ಲಿಸ್ಟ್ ಇರಲಿಲ್ಲ. ಆದರೆ ಕೆಲ ಸ್ನೇಹಿತರು ಇನ್ನೂ ಬರಬೇಕಿದ್ದರಿಂದ ಅವರಿಗಾಗಿ ಸ್ಟೇಷನ್ನಿನಲ್ಲೇ ಕಾಯುತ್ತಾ ಕುಳಿತೆವು. ಅದೇ ಮೊದಲ ಬಾರಿ ನಾವೆಲ್ಲರೂ ಪ್ರವಾಸ ಕೈಗೊಂಡಿದ್ದರಿಂದ ನಾವೆಲ್ಲರೂ ಹಕ್ಕಿ ಮೊದಲ ಬಾರಿ ಬಾನಿನಲ್ಲಿ ಹಾರಾಟ ನಡೆಸಿದ ಖುಷಿಯಲ್ಲಿ ತೇಲಾಡುತ್ತಿದ್ದೆವು. ನಮ್ಮ ಕಣ್ಣುಗಳಲ್ಲಿ ಅದಾಗಲೇ ಚಾಮರಾಜನಗರ ಅರಣ್ಯ ಪ್ರದೇಶ ಕುಣಿಯುತ್ತಿತ್ತು. ಅಷ್ಟರಲ್ಲಿ ಮಳೆ ಹನಿಯಲು ಶುರುವಾಯಿತು. ನಮ್ಮ ಸಂತಸ ಇಮ್ಮಡಿಯಾಯಿತು. ಹಿತವಾದ ಗಾಳಿ ಮಳೆಯಲ್ಲಿ ಕಾಡು ಇನ್ನಷ್ಟು ಸುಂದರವಾಗಿ ಕಾಣುತ್ತೆ ಅನ್ನೋದು ನಮ್ಮ ಯೋಚನೆ.
ಚೆನ್ನೈ ಎಕ್ಸ್ಪ್ರೆಸ್ ನೆನಪು
ರೈಲು ಬಂದು ಪ್ಲಾಟ್ಫಾರ್ಮಿನಲ್ಲಿ ನಿಂತಿತು. ಆದರೂ ಸ್ನೇಹಿತರ ಪತ್ತೆಯಿಲ್ಲ. ಅವರು ಖಂಡಿತ ಬಂದೇ ತೀರುವರೆಂದು ಮನಸ್ಸು ಹೇಳುತ್ತಿತ್ತು. ಹೀಗಾಗಿ ಬಂದಿದ್ದವರೆಲ್ಲರೂ ರೈಲು ಹತ್ತಿ ಸರಂಜಾಮುಗಳನ್ನು ಇಡಬೇಕಾದ ಜಾಗದಲ್ಲಿರಿಸಿ ಕಿಟಕಿ ಮತ್ತು ಬಾಗಿಲಲ್ಲಿ ಮುಖ ತೂರಿಸಿ ಯಾವ ಕಡೆಯಿಂದ ಬಂದಾರೆಂದು ಕಾದೆವು. ಬರುವವರಿಗಾಗಿ ಕರವಸ್ತ್ರ ಇಟ್ಟು ಸೀಟನ್ನೂ ಕಾದಿರಿಸಿದೆವು. ಅದಕ್ಕಾಗಿ ಸಹಪ್ರಯಾಣಿಕರಿಂದ ಬೈಸಿಕೊಂಡಿದ್ದೂ ಆಯ್ತು. ಚೆನ್ನೈ ಎಕ್ಸ್ಪ್ರೆಸ್ ಸಿನಿಮಾದಲ್ಲಿ ರೈಲು ಹೊರಡುತ್ತಿದ್ದಂತೆಯೇ ಒಬ್ಬೊಬ್ಬರಾಗಿ ಬೋಗಿ ಹತ್ತಿಕೊಳ್ಳುವ ದೃಶ್ಯ ಬರುತ್ತದೆ. ನಮ್ಮ ಜೊತೆಯೂ ಹಾಗೆಯೇ ಆಯ್ತು. ರೈಲು ಹೊರಡಲನುವಾಗುತ್ತಿದ್ದಂತೆಯೇ ಬರಬೇಕಾಗಿದ್ದ ಗೆಳೆಯರು ದಡಬಡನೆ ಹತ್ತಿಕೊಂಡರು.
ಸೀಕ್ರೆಟ್ ಸರದಾರನ ಅವಾಂತರ
ನಮ್ಮೆಲ್ಲರ ಪ್ರೀತಿಯ ಗೆಳೆಯ ಮಹೇಶ. ಅವನನ್ನೇ ನಾವು “ಸೀಕ್ರೆಟ್ ಸರದಾರ’ ಎಂದು ಕರೆಯುವುದು. ನಿಮಿಷ ನಿಮಿಷಕ್ಕೂ ನಮ್ಮನ್ನು ಅಚ್ಚರಿಗೊಳಿಸದಿದ್ದರೆ ಅವನಿಗೆ ಸಮಾಧಾನವಿಲ್ಲ. ವಿಷಯವಲ್ಲದ ವಿಷ¿åಗಳಿಗೆ ಸುಖಾಸುಮ್ಮನೆ ಕುತೂಹಲ ಕೆರಳಿಸುತ್ತಲೇ ಇರುವುದು ಅವನ ಹವ್ಯಾಸ. ಅವನು ಮಾಡುವ ಪ್ರತಿಯೊಂದು ವಾದಕ್ಕೂ ಒಂದು ಮಹಾ ಕಾರಣವಿರುತ್ತದೆ(ಅವನ ಪ್ರಕಾರ). ಆ ಕಾರಣ ಏನೆಂದು ಮಾತ್ರ ಯಾವತ್ತೂ ಬಾಯಿಬಿಡಲಾರ. ಹೀಗಾಗಿಯೇ ಅವನಿಗೆ “ಸೀಕ್ರೆಟ್ ಸರದಾರ’ ಎಂಬ ಬಿರುದು ಕಾಯಮ್ಮಾಗಿತ್ತು. ರೈಲು ಪ್ರಯಾಣದುದ್ದಕ್ಕೂ ನಾವು ಹೋಗುತ್ತಿರುವ ಅರಣ್ಯ ಪ್ರದೇಶದ ಬಗ್ಗೆ ಕುತೂಹಲ ಕೆರಳಿಸುತ್ತಲೇ ಹೋದ.
ರೈಲಿಂದ ಬಸ್ಸು
ರೈಲಿನಿಂದಿಳಿದು ಸ್ನೇಹಿತನ ಮನೆಯಲ್ಲಿ ಊಟೋಪಚಾರ ಮುಗಿಸಿಕೊಂಡು ಉತ್ಸಾಹದಿಂದ ಕಾಡಿನತ್ತ ನಡೆದೆವು. ಈ ಹಿಂದೆ ಆ ಜಾಗದಲ್ಲೆಲ್ಲಾ ಓಡಾಡಿ ಅನುಭವವಿದ್ದ ಗೆಳೆಯ ಮಹೇಶ ನಮಗೆಲ್ಲಾ ಮಾರ್ಗದರ್ಶಕನಾದ. ಆತ ಅನೇಕ ಕತೆಗಳನ್ನು ಹೇಳುತ್ತಾ ಸ್ಥಳಪುರಾಣವನ್ನು ಸಾರುತ್ತಾ ನಮಗೆ ಮನರಂಜನೆಯನ್ನು ಒದಗಿಸುತ್ತಿದ್ದ. ಅದಾಗಲೇ ಇಳಿಸಂಜೆ. ಸೂರ್ಯ ಹೊಂಗಿರಣಗಳನ್ನು ನಮ್ಮೆಡೆ ಬೀರುತ್ತಿದ್ದ. ಲೋಕಲ್ ಬಸ್ ಹಿಡಿದವು. ತಂಗಾಳಿ ವಾತಾವರಣವನ್ನು ಹಿತಕರವಾಗಿಸಿತ್ತು. ಇಷ್ಟು ಹೊತ್ತು ಕಾಣುತ್ತಿದ್ದ ಕನಸಿನಲೋಕಕ್ಕೆ ಇನ್ನೇನು ಕಾಲಿರಿಸಲಿದ್ದೆವು. ಅಷ್ಟರಲ್ಲಿ ಏನಾಗಬಾರದಿತ್ತೋ ಅದಾಯಿತು.
ಭಗ್ನಗೊಂಡ ಕನಸು
ನಾವು ಕಾಡಿಗೆ ಹೋಗುತ್ತಿರುವುದನ್ನು ನಮ್ಮ ಮಾತುಕತೆಯಿಂದ ತಿಳಿದುಕೊಂಡ ಅರಣ್ಯರಕ್ಷಕನೊಬ್ಬ ನಮ್ಮನ್ನು ತಡೆದ. ಕಾಡುಕೋಣದಂತೆ ಕೆಂಗಣ್ಣು ಬೀರಿ ಮುಂದಿನ ಸ್ಟಾಪ್ನಲ್ಲಿ ನಮ್ಮನ್ನು ಬಸ್ಸಿನಿಂದ ಕೆಳಗಿಳಿಸಿದ. ಕಾಡನ್ನು ಪ್ರವೇಶಿಸಬೇಕಾದರೆ ಅನುಮತಿ ಬೇಕು ಎಂದು ಇಲ್ಲದಿದ್ದರೆ ಪೊಲೀಸ್ ಕೇಸಾಗುತ್ತದೆ ಎಚ್ಚರಿಸಿದ. ನಾವೆಲ್ಲರೂ “ಕಾಡನ್ನು ಆರಾಮಾಗಿ ಪ್ರವೇಶಿಸಬಹುದು. ಪರ್ಮಿಟ್ ಏನೂ ಬೇಕಾಗಿಲ್ಲ’ ಎಂದು ಪುಂಗಿ ಬಿಟ್ಟಿದ್ದ ಗೆಳೆಯನನ್ನು ಮನಸೋಇಚ್ಛೆ ಶಪಿಸಿದೆವು. ಅದಕ್ಕಿಂತ ಹೆಚ್ಚಿಗೆ ಏನನ್ನೂ ಮಾಡಲು ಸಾಧ್ಯ? ಬಂದ ದಾರಿಗೆ ಸುಂಕವಿಲ್ಲ ಎಂದು ಮೈಸೂರಿಗೆ ಹಿಂದಿರುಗಿದೆವು.
– ಮೋಹನ ಬಿ.ಎಂ.