ನಮ್ ಒಗ್ಗರಣೆ ಸರ್…
Team Udayavani, Aug 29, 2017, 6:00 AM IST
ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ…
ಆಗಿನ್ನೂ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ದಿನಗಳು, ಆ ಬಾಲ್ಯದ ದಿನಗಳನ್ನು ಹೇಗೆ ಮರೆಯಲಾದೀತು ಹೇಳಿ? ಸದಾ ಹಚ್ಚ ಹಸಿರಿನಿಂದ ಕೂಡಿದ್ದ ದಿನಗಳವು. ನಮ್ಮೂರಿನ ಕನ್ನಡ ಶಾಲೆಯಲ್ಲಿ ಓದುತ್ತಿದ್ದಾಗ ನಮ್ಮ ಶಿಕ್ಷಕರೊಬ್ಬರ ಹೆಸರು- “ಒಗ್ಗರಣೆ ಸರ್’!
“ಇದೇನಪ್ಪಾ, ಒಗ್ಗರಣೆ ಸರ್!’ ಎಂದುಕೊಂಡಿರಾ? ಅವರಿಗೆ ಆ ಹೆಸರು ಬಂದಿದ್ದಕ್ಕೂ ಕಾರಣವಿದೆ. ಅವರು ನಮ್ಮೆಲ್ಲರ ನೆಚ್ಚಿನ ಗುರುಗಳು. ಪ್ರತಿವರ್ಷವೂ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ವತಿಯಿಂದ ಮಕ್ಕಳ ಗಣತಿ ಮಾಡಲಾಗುತ್ತಿತ್ತು. ಪ್ರತಿ ಶಿಕ್ಷಕರಿಗೂ ಗ್ರಾಮದ ಒಂದೊಂದು ಓಣಿಯನ್ನು ಜನಗಣತಿ ಮಾಡಲು ಹಂಚಲಾಗಿತ್ತು. ಹೀಗೆಯೇ ಶಿವಣ್ಣ ಮಾಸ್ತರರಿಗೂ ಜವಾಬ್ದಾರಿ ನೀಡಿದ್ದರು. ಅವರು ತಮ್ಮ ಜೊತೆ ಸಹಾಯಕ್ಕೆಂದು ಇಬ್ಬರು ಶಿಷ್ಯರನ್ನು ಕರೆದುಕೊಂಡು ಹೋಗಿದ್ದರು.
ಹೀಗೆ ಜನಗಣತಿ ಮಾಡುತ್ತಾ ಮೇಲಿನ ಓಣಿಯ ಗೌಡರ ಮನೆ ತಲುಪಿದಾಗ ಉಪಾಹಾರದ ಸಮಯವಾಗಿತ್ತು. ಗೌಡರ ಮನೆಯಲ್ಲಿ ಗಣತಿ ಮಾಹಿತಿ ಪಡೆದ ಶಿವಣ್ಣ ಮಾಸ್ತರರು, ಅಲ್ಲಿಂದ ಮೇಲೆ ಏಳಲು ತಯಾರೇ ಇಲ್ಲ! ಗೌಡರ ಜೊತೆ ಹರಟುತ್ತಾ ಕುಳಿತು ಬಿಡುವುದೇ? ಭೋಜನಪ್ರಿಯರಾಗಿದ್ದ ಮಾಸ್ತರರು, ಗೌಡರ ಮನೆಯಲ್ಲಿ ಘಮ್ಮೆಂದು ಬರುತ್ತಿದ್ದ ಒಗ್ಗರಣೆಯ ಪರಿಮಳಕ್ಕೆ ಮನಸೋತು, ಮೂಗರಳಿಸುತ್ತಾ ಅಲ್ಲೇ ಕುಳಿತುಬಿಟ್ಟಿದ್ದಾರೆ. ಮಾಸ್ತರರ ಬಗ್ಗೆ ಗೊತ್ತಿದ್ದ ಶಿಷ್ಯರು ಒಳಗೊಳಗೇ ಮುಸಿ ಮುಸಿ ನಕ್ಕಿದ್ದಾರೆ. ಬಹುಶಃ ಇದನ್ನರಿತ ಗೌಡರು, ಮಾಸ್ತರರಿಗೆ ದಣಿದು ಹಸಿವಾಗಿರಬಹುದೆಂದು ಭಾವಿಸಿ, ಆಗ ತಾನೇ ತಯಾರಾಗಿದ್ದ ಒಗ್ಗರಣೆಯಿಂದ ಚುರುಮುರಿ ಮಾಡಿಸಿ ಚಹಾದೊಂದಿಗೆ ನೀಡಿದ್ದಾರೆ. ಅವರ ಜೊತೆಗಿದ್ದ ಶಿಷ್ಯರೂ ಅದನ್ನು ಚಪ್ಪರಿಸಿ ಅದನ್ನು ಬಾರಿಸಿದ್ದಾರೆ.
ಮರುದಿನ ಕ್ಲಾಸ್ಗೆ ಬಂದಾಗ ತರಗತಿಯ ತುಂಬಾ ಅದೇ ಸುದ್ದಿ. ಅವರೊಂದಿಗೆ ಹೋಗಿದ್ದ ಶಿಷ್ಯರು ನಡೆದಿದ್ದನ್ನು ಎಲ್ಲರಿಗೂ ಒಂದಿಷ್ಟು ಮಸಾಲೆ ಬೆರೆಸಿ ಹೇಳಿ, ಹೇಳಿ ಮಾಸ್ತರರಿಗೆ “ಒಗ್ಗರಣೆ ಸರ್’ ಎಂಬ ಬಿರುದಾಂಕಿತವನ್ನು ದಯಪಾಲಿಸಿಬಿಟ್ಟರು. ಅದು ಎಷ್ಟರ ಮಟ್ಟಿಗೆ ಪ್ರಚಲಿತವಾಗಿಬಿಟ್ಟಿತೆಂದರೆ, ಶಾಲೆಗೆ ಹೋಗುವ ಅಣ್ಣ- ಅಕ್ಕರಿಗೂ, ಮುಂದೆ ಬರುವ ತಮ್ಮ- ತಂಗಿಯರಿಗೂ ಅವರು “ಒಗ್ಗರಣೆ ಸರ್’ ಆಗಿಬಿಟ್ಟಿದ್ದರು! ವಿದ್ಯಾರ್ಥಿಗಳಿಗೆ ಅವರ ನಿಜನಾಮ ಮರೆತೇ ಹೋಯ್ತು.
ನಮ್ಮ ಶಿವಣ್ಣ ಮಾಸ್ತರರೇ ಹಾಗೆ. ಕುಡಿ ಮೀಸೆ ತಿರುವುತ್ತಾ, ಕೈಯಲ್ಲೊಂದು ನೀರಿನ ಬಾಟಲ್ ಹಿಡಿದು ತರಗತಿ ಪ್ರವೇಶಿಸಿದರೆ ಇಡೀ ಕ್ಲಾಸ್ ಸೈಲೆಂಟ್! “ತೊಳೆ ತೊಳೆ ಹಲಸಿನ ತೊಳೆ, “ಟಣ್ ಟಣ್ ಟಡಲ್ ಕಡಲ್’ ಇವು ಅವರು ವಿದ್ಯಾರ್ಥಿಗಳಿಗೆ ಹೊಡೆಯುವಾಗ ಬಳಸುತ್ತಿದ್ದ ಪಾರಿಭಾಷಿಕ ಪದಗಳು. ಶಾಲೆಗೆ ಬರದೇ ಇರುವ ವಿದ್ಯಾರ್ಥಿಗಳನ್ನು ಎತ್ತಾಕಿಕೊಂಡು ಬರಲು ನಮ್ಮಲ್ಲೇ ಒಂದು ಕ್ಷಿಪ್ರ ಕಾರ್ಯಾಚರಣೆಯ ಪಡೆಯನ್ನು ನೇಮಿಸಿದ್ದರು. ಯಾರು ದೀರ್ಘ ಗೈರಾಗಿರುತ್ತಾರೋ ಅಂಥ ಸಹಪಾಠಿಗಳ ಮನೆಗೆ ಹೋಗಿ ನಾವೇ ಹೊತ್ತುಕೊಂಡು ಬರುತ್ತಿದ್ದೆವು. ನಮ್ಮ ಶಿವಣ್ಣ ಸರ್ಗೆ ವಿದ್ಯಾರ್ಥಿಗಳ ಹಾಜರಾತಿ ಮುಖ್ಯವಾಗಿತ್ತು.
ಸಹೃದಯದ, ಹಾಸ್ಯಮಿಶ್ರಿತ ಗಡಸಿನ ವ್ಯಕ್ತಿತ್ವ ಅವರದು. ನಾವು ಮಾಡಿದ ಕೀಟಲೆಗಳಿಗೆ ಕ್ಷಮೆ ಕೋರುತ್ತಾ, ಅವರು ಈಗ ಎಲ್ಲೇ ಇದ್ದರೂ ಸುಖವಾಗಿರಲಿ ಎಂದು ಅವರ ಶಿಷ್ಯಕೋಟಿ ಬೇಡಿಕೊಳ್ಳುತ್ತದೆ.
– ಕುಮಾರಸ್ವಾಮಿ ವಿರಕ್ತಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ