ಸಮಯಕ್ಕೆ ಸರಿಯಾಗಿ ಬಂದ ನೋಡಿ…
Team Udayavani, Jan 14, 2020, 4:47 AM IST
ಥುತ್, ಯಾವೋನಪ್ಪಾ ಇವನು. ಪೆಂಡಭೂತದಂಥ ಟಾಟಾ ಸಫಾರಿ ವಾಹನವನ್ನು ಇಲ್ಲಿ ತಂದು ನಿಲ್ಲಿಸಿದ್ದು ಅಂತ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಷನ್ ಬಳಿ ಬೈದುಕೊಳ್ಳುತ್ತಾ ನಿಂತಿದ್ದೆ. ನೂರಾರು ಸಾರಿ, ಅರ್ಧಗಂಟೆಗೂ ಹೆಚ್ಚು ಹೊತ್ತು ಶಪಿಸುತ್ತಿದ್ದೆನಾದರೂ, ನನ್ನ ಟೂವ್ಹೀಲರ್ ಎದುರಿಗೇ ನಿಂತಿದ್ದ ದೊಡ್ಡ ವಾಹನದ ಮಾಲೀಕ ಮಾತ್ರ ಬಂದು ತೆಗೆಯಲೇ ಇಲ್ಲ. ಸಾಮಾನ್ಯ ದಿನವಾಗಿದ್ದರೆ, ಅಂಥ ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವೇನೂ ಇರಲಿಲ್ಲ. ಯಾವಾಗ ಬರ್ತೋನೋ ಬರಲಿ ಅಂತ ಕಾಯಬಹುದಿತ್ತು. ಆವತ್ತಿನ ಪರಿಸ್ಥಿತಿ ಬೇರೆಯೇ ಆಗಿತ್ತು. ಮನೆಯಲ್ಲಿ ನನ್ನ ತಾಯಿಗೆ ಹುಷಾರಿಲ್ಲ. ಬೇಗ ಬರ್ತೀನಿ ಅಂತ ಬೇರೆ ಹೇಳಿದ್ದೇನೆ. ಅದೇ ರೀತಿ, ಆಫೀಸಲ್ಲಿ ರಜೆ ಹಾಕಿ, ಸಮಯವನ್ನು ಹೊಂದಿಸಿಕೊಂಡು ಬಂದು ನಿಂತರೆ, ನನ್ನ ವಾಹನದ ಮುಂದೆ, ಇನ್ನೊಂದು ದಢೂತಿ ವಾಹನ ಬಂದು ನಿಂತು ಬಿಡುವುದೇ? ಇದೇನು ಉದ್ದೇಶ ಪೂರ್ವಕವೋ ಏನೋ ಅನ್ನೋ ಅನುಮಾನ ಬೇರೆ ಶುರುವಾಯಿತು. ಏಕೆಂದರೆ, ಎದುರು ಸಾಲಲ್ಲಿ ಮನೆಗಳು ಇದ್ದವು. ಅವುಗಳ ಇನ್ನೊಂದು ಬದಿಯ ಫುಟ್ಪಾತ್ಮೇಲೆ ವಾಹನಗಳನ್ನು ನಿಲ್ಲಿಸುತ್ತಾರೆ. ಇದಕ್ಕೆ ಕೋಪ ಗೊಂಡ ಆ ಮನೆಗಳವರು, ಪಾಠ ಕಲಿಸಲು ಈ ರೀತಿ ವಾಹನ ನಿಲ್ಲಿಸಿರಬಹುದೇ ಅನ್ನೋ ಅನುಮಾ ಶುರುವಾಯಿತು. ಆದರೆ, ನನ್ನ ವಾಹನ ನಿಂತದ್ದು ಅವರ ಮನೆ ಮುಂದೆ ಅಲ್ಲಾ ಅನ್ನೋ ಸಮಾಧಾನವಾಯಿತು.
ಸರಿ, ಪಕ್ಕದಲ್ಲಿದ್ದ ವಾಹನ ಜರುಗಿಸಿ ನನ್ನ ವಾಹನ ತೆಗೆಯಬಹುದೇ ಅಂತ ಒದ್ದಾಡಿದ್ದೂ ಆಯ್ತು. ಯಾವುದೇ ಪ್ರಯೋಜನ ಆಗಲಿಲ್ಲ. ನನ್ನ ವಾಹನದ ಎರಡೂ ಪಕ್ಕದಲ್ಲಿ ಜಟ್ಟಿಗಳಂತೆ ಇದ್ದದ್ದು ಪಲ್ಸರ್ ಬೈಕುಗಳು. ಅವುಗಳನ್ನು ಜರುಗಿಸುವುದಿರಲಿ, ಕದಲಿಸುವುದಕ್ಕೂ ನನಗೆ ಶಕ್ತಿ ಇರಲಿಲ್ಲ. ಮುಂದೇನು ಮಾಡುವುದು, ಅಮ್ಮನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು, ಹೇಳಿದ ಸಮಯಕ್ಕಿಂತ 20 ನಿಮಿಷ ತಡವಾಗಿದೆ. ಮನೆಯಿಂದ ಫೋನ್ ಬಂತು. “ಇನ್ನೂ ಹೊರಟಿಲ್ವಾ? ಇಲ್ಲಿ ಒದ್ದಾಡ್ತಾ ಇದ್ದೀನಿ’ ಅಂದರು. ಅವರ ಮಾತು ಕೇಳಿ ಮಗದಷ್ಟು ಟೆನ್ಷನ್. ಇಲ್ಲಿನ ಪರಿಸ್ಥಿತಿಯನ್ನು ಅಮ್ಮನಿಗೆ ಹೇಳಿದರೆ ಆಕೆಗೆ ಮಗದಷ್ಟು ಟೆನ್ಷನ್ ಕೊಟ್ಟಂತಾಗುತ್ತದೆ ಅಂತ ಹೇಳಲಿಲ್ಲ. ಹೀಗೆ, ಅನಾಮತ್ತಾಗಿ ಅರ್ಧಗಂಟೆ ಕಳೆಯಿತು. ಟೆನ್ಷನ್ ಮತ್ತಷ್ಟು ಜಾಸ್ತಿಯಾಯಿತು. ಅಷ್ಟರಲ್ಲಿ ಒಬ್ಬ ವ್ಯಕ್ತಿ ಬಂದ. ಅದೃಷ್ಟವಶಾತ್, ಅವನ ಬೈಕ್ ಕೂಡ ನನ್ನ ಟೂವ್ಹೀಲರ್ನಿಂದ ಸ್ವಲ್ಪ ದೂರದಲ್ಲಿತ್ತು. ಬಂದವನೇ, ನನ್ನ ತಳಮಳದ ಮುಖ ಕಂಡವನೇ… ನೇರ ಹೋಗಿ ಅವನ ಬೈಕ್ ತೆಗೆದ, ಗಾಡಿ ಸ್ಟಾರ್ಟ್ ಮಾಡಿದವನು.. ಮತ್ತೆ ನನ್ನ ಮುಖ ನೋಡಿ..ಅದನ್ನು ಅಲ್ಲೇ ನಿಲ್ಲಿಸಿ ಬಂದ. ಯಮಧೂತನಂತೆ ನನ್ನ ಟೂವ್ಹೀಲರ್ ಪಕ್ಕ ನಿಂತಿದ್ದ ಒಂದು ಬೈಕ್ನ° ವಾಲಿಸಿ, ಸ್ಟಾಂಡ್ ಬಳಸಿ ಹಾಗೇ ಎಳೆದುಕೊಂಡ. ಚೂರು ಜಾಗ ಅಗಲಿತು.
ಮತ್ತಷ್ಟು ಎಳೆದು, ವಾಲಿಸಿದ ಹಾಗೇ ಮೆಲ್ಲಗೆ ನನ್ನ ಟೂವ್ಹೀಲರ್ ಎಳೆದುಕೊಂಡೆ. ಹಾಗೇ ನಿಲ್ಲಿಸಿ, ನನ್ನ ವಾಹನ ತೆಗೆಯಲು ಟಾಟಾ ಸಫಾರಿಯ ವಾಹನದ ಕನ್ನಡಿಯನ್ನು ಪಕ್ಕಕ್ಕೆ ಸರಿಸಿ ದಾರಿ ಮಾಡಿಕೊಟ್ಟ. ಥ್ಯಾಂಕ್ಯು ಸಾರ್ ಅಂದೆ. ಕೈ ಮಾಡಿ, ಸ್ಪೆಕ್ಸ್ ಏರಿಸಿಕೊಂಡು, ಹೆಸರೂ ಹೇಳದೆ, ಕಷ್ಟದಲ್ಲಿ ಇರೋರಿಗೆ ಸಹಾಯ ಮಾಡೋದು ನನ್ನ ಕರ್ತವ್ಯ ಅನ್ನೋ ರೀತಿ ಮುಖ ಚಹರೆ ತೋರಿಸಿ ಹೊರಟೇ ಹೋದ. ಕಷ್ಟಕ್ಕೆ ನೆರವಾದ ಆ ಅನಾಮಧೇಯ ವ್ಯಕ್ತಿಗೆ ನಮೋನಮಃ..
ಕೆ.ಜಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yugadi: ಯುಗದ ಆರಂಭದ ಮುನ್ನುಡಿ ಈ ಯುಗಾದಿ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?