ನಾನು ಗೆದ್ದ ಅಗ್ನಿ ಪರೀಕ್ಷೆ
ಎಕ್ಸಾಮ್ ಬಂದಿತ್ತು, ಬರೆಯಲು ಕೈ ಇರಲಿಲ್ಲ...
Team Udayavani, May 14, 2019, 6:00 AM IST
ಇದು ಭದ್ರಾವತಿಯ ಒಂದು ಶಾಲೆಯ ಇಬ್ಬರು ವಿದ್ಯಾರ್ಥಿನಿಯರ ಕತೆ. ಎಸ್ಸೆಸ್ಸೆಲ್ಸಿಯ ಹುಡುಗಿ, ದುರಂತದಲ್ಲಿ ಕೈಗಳನ್ನು ಕಳಕೊಳ್ಳುತ್ತಾಳೆ. ಇನ್ನೇನು ಪರೀಕ್ಷೆ ಬಂತು ಅನ್ನೋವಾಗ, ಆಕೆಯ ಕೈ ಹಿಡಿಯುವುದು 9ನೇ ತರಗತಿಯ ಹುಡುಗಿ. ಆಕೆಯ ಕಷ್ಟಕ್ಕೆ ಹೆಗಲಾಗಿ, ಸೆð„ಬ್ ಆಗಿ ಬರೆದಾಗ, ಬಂದ ಅಂಕ 600! ಈ ಇಬ್ಬರ ಜಂಟಿ ಸಾಹಸವನ್ನು ಕತೆಗಾರ್ತಿ ದೀಪ್ತಿ ಭದ್ರಾವತಿ, ಆಪ್ತವಾಗಿ ಚಿತ್ರಿಸಿದ್ದಾರೆ…
– ನಂದಿನಿ, ಎಸ್ಸೆಸ್ಸೆಲ್ಸಿ ಟಾಪರ್
ಅವತ್ತು ನವೆಂಬರ್ 19, 2019. ನಮ್ಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳೆಲ್ಲ ಖುಷಿಯಿಂದ ತೇಲುತ್ತಿದ್ದೆವು. ಯಾಕಂದ್ರೆ ಅವತ್ತು ಕ್ಲಾಸ್ ಟ್ರಿಪ್ ಇತ್ತು. ಬೆಳಗ್ಗೆ 6.30ರ ಹೊತ್ತಿಗೆ ಭದ್ರಾವತಿಯಿಂದ ಪ್ರವಾಸ ಹೊರಟಿದ್ದೆವು. ಅದೇನು ಖುಷಿ ಅಂತೀರಾ? ಪಂಜರದ ಹಕ್ಕಿಗಳನ್ನು ಆಕಾಶದಲ್ಲಿ ಹಾರಾಡಲು ಬಿಟಾØಗೆ ಆಗಿತ್ತು. ಊರು ಬಿಟ್ಟು ಸುಮಾರು ಒಂದು ಗಂಟೆ ಕಳೆದಿತ್ತೇನೋ ಅಷ್ಟೇ… ನಾವು ಕುಳಿತಿದ್ದ ಬಸ್ಸು ಎರಡು ಬಾರಿ ಇದ್ದಕ್ಕಿದ್ದಂತೆ ವಾಲಿದಂತಾಯಿತು. ಮೂರನೇ ಬಾರಿಯೂ ಹಾಗೆಯೇ ಆಗುತ್ತೆ ಅಂದುಕೊಂಡೆವು; ಆದರೆ, ಹಾಗಾಗಲಿಲ್ಲ. ಅದು ಉರುಳಿಯೇ ಬಿಟ್ಟಿತು. ಆ ನಂತರ ಏನಾಯಿತೆಂದು ಯಾರಿಗೂ ಗೊತ್ತೇ ಇಲ್ಲ.
ಎಚ್ಚರ ಬಂದು, ಕಣ್ಣುಬಿಟ್ಟಾಗ, ಅಕ್ಕಪಕ್ಕ ಬಿಳಿ ಬಟ್ಟೆ ತೊಟ್ಟ ಮನುಷ್ಯರಷ್ಟೇ ಕಾಣಿಸುತ್ತಿದ್ದರು. ನನ್ನ ಆ ಸ್ಥಿತಿಯಲ್ಲಿ, ಅದು ಆಸ್ಪತ್ರೆ ಅಂತ ತಿಳಿಯಲು ಕೆಲ ಕಾಲ ಬೇಕಾಯಿತು. ಯಾಕೋ ಬಲಗಡೆ ತಿರುಗಿದೆ. ನನ್ನ ಕೈಯೇ ಕಾಣಿಸಲಿಲ್ಲ; ತುಂಡಾಗಿತ್ತು! ದುಃಖ ಮತ್ತು ಆತಂಕದಲ್ಲಿಯೇ ಎಡಗೈ ನೋಡಿಕೊಂಡೆ; ಮೇಲೆತ್ತಲೂ ಆಗದಂಥ ಅವಸ್ಥೆ. ಎಡಗೈ ಕೂಡ ಜಖಂ ಆಗಿತ್ತು. ಶಿವಮೊಗ್ಗದ ಆಸ್ಪತ್ರೆಯಲ್ಲಿ 12 ದಿನ ಕಳೆಯಬೇಕಾಯಿತು. ಒಂದೂವರೆ ತಿಂಗಳು ಮನೆಯಲ್ಲೇ ಇದ್ದೆ. ಆ ದಿನಗಳಲ್ಲಿ ನನ್ನ ಅಪ್ಪ- ಅಮ್ಮ, ಬಂಧು- ಬಳಗ ಎಲ್ಲರೂ ನನ್ನಲ್ಲಿ ಧೈರ್ಯ ತುಂಬುತ್ತಲೇ ಇದ್ದರು. ಅಂಗವೈಕಲ್ಯದ ನಡುವೆಯೂ ಸಾಧನೆ ಮಾಡಿದವರ ಕತೆ ಹೇಳಿ ಕಾನ್ಫಿಡೆನ್ಸ್ ಮೂಡಿಸಿದರು. ಅದೇನು ಪುಣ್ಯವೋ… ಖನ್ನತೆ ನನ್ನೊಳಗೆ ಕಾಲಿಡಲೇ ಇಲ್ಲ. ಎಡಗೈ ಶಸ್ತ್ರ ಚಿಕಿತ್ಸೆ ಸರಿಯಾಗದ ಕಾರಣದಿಂದ, ಹೆಚ್ಚಿನ ಚಿಕಿತ್ಸೆಗೆಂದು ಕೊಯಮತ್ತೂರಿಗೂ ಹೋಗಿಬಂದೆ. ಅಲ್ಲಿ ಮತ್ತೆ ಹದಿನೈದು ದಿನ ಜಾರಿಬಿಟ್ಟವು. ಅಷ್ಟರಲ್ಲಿ ಪರೀಕ್ಷೆ ದಿನಗಳು ಹತ್ತಿರ ಬಂದಾಗಿತ್ತು.
ನನಗೆ ಪರೀಕ್ಷೆ ಬರೆಯಲೇಬೇಕೆಂಬ ಹಠ. ಒಂದೇಸಮನೆ ಓದಲು ಶುರುಮಾಡಿದೆ. ಆ ದಿನದ ಪಾಠವನ್ನು ಅದೇ ದಿನ ಓದುವ ಅಭ್ಯಾಸ ಮೊದಲಿನಿಂದಲೂ ಇತ್ತು. ನನ್ನನ್ನು ಕೈಹಿಡಿದಿದ್ದು ಕೂಡ ಅದೇ. ಶೇ.70ರಷ್ಟು ಪಾಠಗಳನ್ನು ನಾನು ಮೊದಲೇ ಓದಿಕೊಂಡಿದ್ದೆ. ಆ ನಂತರದ ಪಾಠಗಳೆಲ್ಲ ತಪ್ಪಿಹೋಗಿದ್ದವು. ಆಗ ನನ್ನ ನೆರವಿಗೆ ಬಂದಿದ್ದು ಅಪ್ಪ, ಅಮ್ಮ, ಸ್ನೇಹಿತರು ಮತ್ತು ಶಿಕ್ಷಕ ವೃಂದ. ಅಮ್ಮ ನಿರ್ಮಲ ಅಂತೂ ನನ್ನನ್ನು ಬೆಳಗ್ಗೆ ತರಗತಿಗೆ ಬಿಟ್ಟು ಸಂಜೆ ನಾನು ಮರಳುವವರೆಗೆ ಅಲ್ಲಿಯೇ ಕೂತು ಕಾಯುತ್ತಿದ್ದರು. ನಿತ್ಯವೂ ಸ್ನೇಹಿತರು ನನಗೆ ನೋಟ್ಸ್ಗಳನ್ನು ಬರೆದುಕೊಟ್ಟು ಉಪಕಾರಿಯಾದರು. ಅದರಲ್ಲೂ ಶಿಕ್ಷಕರಂತೂ, ನನ್ನ ಓದಿನ ಶ್ರಮಕ್ಕೆ ಹೆಜ್ಜೆ ಹೆಜ್ಜೆಗೂ ನೆರವಾದರು. ಅವರ ಪ್ರತಿದಿನದ ಸ್ಪೆಷಲ್ ಕ್ಲಾಸ್ಗಳು, ಹಿಂದೆ ಬಿದ್ದಿದ್ದ ನನಗೆ, ಮುನ್ನುಗ್ಗಲು ಪ್ರೇರೇಪಿಸಿದವು. ಮೊನ್ನೆ ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದಾಗ, ಅವರಿಗೆಲ್ಲ ಥ್ಯಾಂಕ್ಸ್ ಹೇಳಿದ್ದೆ. ನನಗೆ 600 ಅಂಕ ಬಂದಿತ್ತು. ಈಗ ಪಿಯುಸಿ ವಿಜ್ಞಾನ ವಿಭಾಗಕ್ಕೆ ಸೇರಿಕೊಂಡಿದ್ದೇನೆ. ಎಡಗೈಯ್ಯಲ್ಲಿ ಬರೆಯುವ ಪ್ರಯತ್ನ ಮಾಡುತ್ತಿದ್ದೇನೆ. ದಿನವೂ ಒಂದು ಪೇಜ್ ಬರೆಯುತ್ತೇನೆ. ಮನಸ್ಸು ಮಾಡಿದರೆ ಯಾವುದೂ ಕಷ್ಟವಲ್ಲ.
ರಿಸಲ್ಟ್ ದಿನ, ಎದೆ ಢವಢವ
– ಇಳಾ, 9ನೇ ತರಗತಿ, ಸೆð„ಬ್
ನಮ್ಮ ಶಾಲೆಯ ನಂದಿನಿ ಅಕ್ಕನನ್ನು ನೋಡಿ, ನನ್ನ ಮುಖ ಸಪ್ಪಗಾಯಿತು. “ಕೈಗಳಿಲ್ಲ, ಹ್ಯಾಗೆ ಬರೀತಾಳಪ್ಪಾ?’ ಅಂತ ಅನ್ನಿಸ್ತು. ಅದೇ ವೇಳೆಗೆ, ಪ್ರಿನ್ಸಿಪಾಲರು, ಶಿಕ್ಷಕರು ಬಂದು ಕೇಳಿದ್ರು… “ನಂದಿನಿಗೆ ಸೆð„ಬ್ ಆಗಿ, ಎಕ್ಸಾಮ್ ಬರೀತಿಯೇನಮ್ಮಾ…’ ಅಂತ. ನಂಗೆ ಮೊದಲಿಗೆ ಸ್ವಲ್ಪ ಭಯ ಆಯ್ತು; ಅವಳ ರಿಸಲ್ಟ್ಗೆ ಏನಾದ್ರೂ ತೊಂದರೆಯಾದ್ರೆ ಅಂತ. ಆಗ ಟೀಚರ್, “ನೀನೇನು ಭಯ ಪಡಬೇಡ. ನಾವು ಸಹಾಯ ಮಾಡ್ತೀವಿ’ ಅಂದ್ರು. ಅದೇ ಹೊತ್ತಿಗೆ ನನಗೆ 9ನೇ ತರಗತಿಯ ಪರೀಕ್ಷೆ. ಅಯ್ಯೋ, ಈಗೇನ್ ಮಾಡೋದು ಅನ್ನೋ ಚಿಂತೆ. ಆದರೆ, ಮನೆಯಲ್ಲಿ ಅಪ್ಪ- ಅಮ್ಮನ ಮಾತುಗಳು ಧೈರ್ಯ ಕೊಟ್ಟವು.
ನಿತ್ಯವೂ ನಂದಿನಿ ಅಕ್ಕನೊಂದಿಗೆ ಚರ್ಚಿಸುತ್ತಿದ್ದೆ. ಆಕೆಯ ಪರವಾಗಿ 10ನೇ ತರಗತಿಯ ಪ್ರಿಪರೇಟರಿ ಪರೀಕ್ಷೆ ಬರೆಯುವಾಗ ಅಳುಕಿತ್ತಾದರೂ, ಆಮೇಲೆ ನನ್ನೊಳಗೆ ಒಂದು ಕಾನ್ಫಿಡೆನ್ಸ್ ಹುಟ್ಟಿತು. ಕನ್ನಡ, ಇಂಗ್ಲಿಷ್ಗಳನ್ನೇನೋ ಬರೆದುಬಿಡಬಹುದು. ಆದರೆ, ಗಣಿತ ಮತ್ತು ವಿಜ್ಞಾನ ವಿಷಯಗಳನ್ನು ಕೇಳಿ, ಬರೆಯುವುದು ಅಷ್ಟು ಸುಲಭವಾಗಿರಲಿಲ್ಲ. ಅದಕ್ಕಾಗಿ ನಾನು ಒಂದಿಷ್ಟು ತಯಾರಿ ಮಾಡಿಕೊಳ್ಳಲೇಬೇಕಿತ್ತು. ಅಮ್ಮ, ವಿಜ್ಞಾನದ ಮಾಡೆಲ್ಗಳನ್ನು ತೋರಿಸುತ್ತಾ, ವಿವರಣೆ ಕೊಟ್ಟಳು. ಅಪ್ಪ ಗಣಿತದ ಒಳಹೊಕ್ಕು, ಲೆಕ್ಕವನ್ನು ಸುಲಭವಾಗಿಸುವ ಕಲೆ ಹೇಳಿಕೊಟ್ಟರು. ಹೀಗೆ ಕಲಿಯುತ್ತಲೇ, ನನ್ನ ಪಾಠಗಳು ಹಿಂದುಳಿದು, “ಏನ್ ನನ್ನ ಓದಲ್ವಾ?’ ಎನ್ನುವಂತೆ, ನನ್ನನ್ನೇ ದಿಟ್ಟಿಸುತ್ತಿರುವ ಹಾಗೆ ಅನ್ನಿಸುತ್ತಿತ್ತು. ಎಲ್ಲವನ್ನೂ ನಿಭಾಯಿಸುತ್ತಲೇ, ನಂದಿನಿ ಅಕ್ಕನಿಗೆ ಪರೀಕ್ಷೆ ಬರೆದುಕೊಟ್ಟೆ.
ಎಸ್ಸೆಸ್ಸೆಲ್ಸಿ ರಿಸಲ್ಟ್ ಬಂದ ದಿನ ನನಗೆ ಪುಕ್ಕಲು; ಏನಾದ್ರೂ ಹೆಚ್ಚುಕಮ್ಮಿ ಆಗಿಬಿಟ್ಟಿದ್ರೆ ಅಂತ… ಕಡೆಗೆ, ಅಕ್ಕನಿಗೆ 600 ಮಾರ್ಕ್ ಬಂದಿದೆ ಅಂತ ಗೊತ್ತಾದಾಗ, ಆಕೆಯ ಶ್ರಮ- ಸಾಧನೆ ನೋಡಿ ಖುಷಿಪಟ್ಟೆ. ಅವಳ ಬಗ್ಗೆ ಇನ್ನಷ್ಟು ಹೆಮ್ಮೆ ಮೂಡಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್