ಐಎಎಸ್‌ ತಪಸ್ಸು


Team Udayavani, Jul 30, 2019, 3:02 AM IST

iasa-tapa

ಐಎಎಸ್‌, ಈ ದೇಶದ ಲಕ್ಷಾಂತರ ಯುವಕ- ಯುವತಿಯರ ಹೃದಯದ ಮಿಡಿತ, ಕನಸಿನ ಲೋಕ. ತಿಂಗಳಿಗೆ ಆರಂಕಿ ಸಂಬಳ ತರುವ ಸಾಕಷ್ಟು ಉದ್ಯೋಗಗಳಿದ್ದರೂ ಐಎಎಸ್‌ನಂಥ ಹುದ್ದೆಗಳ ಖದರಿಗೆ ಮಾರು ಹೋಗದವರು ಕಡಿಮೆ. ಹಾಗಾದರೆ, ಐಎಎಸ್‌ ಪರೀಕ್ಷೆಗೆ ಹೇಗೆ ಸಜ್ಜಾಗಬೇಕು?- ಇಲ್ಲೊಂದು ಕಂಪ್ಲೀಟ್‌ ಮಾಹಿತಿ…

ಅಪ್ಪ ಆಟೋ ಡ್ರೈವರ್‌. ಅಮ್ಮಂದು ಕೂಲಿ ಕೆಲಸ. ಮನೆ ತುಂಬ ಮಕ್ಕಳು. ಬಡತನವೇ ಹೊದ್ದುಕೊಂಡಿರುವ ಕುಟುಂಬ. ಆಗಷ್ಟೇ ಡಿಗ್ರಿ ಪೂರೈಸಿದ್ದ ಅನ್ಸಾರ್‌ ಶೇಕ್‌, ಒಂದು ದಿನ ಓಡೋಡಿ ಬಂದು “ಅಮ್ಮಾ ನಾನು ಪಾಸಾಗ್ಬಿಟ್ಟೆ’ ಎಂದು ಬಿಕ್ಕಳಿಸಿದಾಗ, ಆತ ಡಿಗ್ರಿ ರಿಸಲ್ಟ್ ಹೇಳುತ್ತಿದ್ದಾನೆ ಎಂದೇ ಎಲ್ಲರೂ ಅಂದುಕೊಂಡಿದ್ದರು. ಅವನು ಪಾಸ್‌ ಮಾಡಿದ್ದು ಬರೀ ಪದವಿ ಆಗಿರಲಿಲ್ಲ; ಈ ದೇಶದ ಅತ್ಯಂತ ಪ್ರತಿಷ್ಠಿತ ಹಾಗೂ ಕಠಿಣ ಪರೀಕ್ಷೆಯಾದ ಐಎಎಸ್‌ ಆಗಿತ್ತು!

ಆಗಿನ್ನೂ ಅವನಿಗೆ 21 ವರ್ಷ, ಅಂದರೆ, ಎಲ್ಲರೂ ಡಿಗ್ರಿ ಪಾಸಾಗುವ ವಯಸ್ಸು. ಅನ್ಸಾರ್‌ ಶೇಕ್‌ ಈಗ, ದೇಶದ ಅತ್ಯಂತ ಕಿರಿಯ ಐಎಎಸ್‌ ಅಧಿಕಾರಿ. “ನನ್ನದು ಮರಾಠವಾಡ ಪ್ರದೇಶದ ಕುಗ್ರಾಮ. ಆರ್ಥಿಕವಾಗಿ ತುಂಬ ಹಿಂದುಳಿದಿರುವ ಕುಟುಂಬ. ಅಪ್ಪನ ಮೂವರು ಹೆಂಡತಿಯರಲ್ಲಿ ನನ್ನ ಅಮ್ಮ ಎರಡನೆಯವಳು. ನನ್ನೂರಿನಂಥ ಹತ್ತಾರು ಹಳ್ಳಿಗಳ ಕಡುಬಡವರಿಗೆ ಒಂದಿಷ್ಟು ನಿರಾಳತೆಯನ್ನು ತಂದುಕೊಟ್ಟ ದಿನ ನನಗೆ ನೆಮ್ಮದಿ’- ಹಾಗೆಂದು ಅನ್ಸಾರ್‌ ಹೇಳುತ್ತಿದ್ದರೆ, ಇಡೀ ಶೆಡ್‌ಗಾಂವ್‌ ಗ್ರಾಮವೇ ಆನಂದಬಾಷ್ಪ ಮಿಡಿಯುತ್ತಿತ್ತು.

21 ವರ್ಷ ವಯಸ್ಸು, ಐಎಎಸ್‌ ಪರೀಕ್ಷೆ ಬರೆಯಲು ಕನಿಷ್ಠ ವಯೋಮಿತಿ ಆಗಿದ್ದರೂ ಅದು ಸಾಮಾನ್ಯವಾಗಿ ಎಲ್ಲರೂ ಡಿಗ್ರಿ ಪೂರೈಸಿಕೊಳ್ಳುವ ಪ್ರಾಯ. ನಮ್ಮ ಅನೇಕ ಹುಡುಗರು ಅಲ್ಲಿಯೂ ಯಾವುದಾದರೊಂದು ಪೇಪರ್‌ ಪಾಸಾಗದೆ ಇನ್ನೂ ಒಂದಷ್ಟು ವರ್ಷ ಒದ್ದಾಡುವುದಿದೆ. ಅಂತಹದರಲ್ಲಿ ಅನ್ಸಾರ್‌ ಐಎಎಸ್‌ ಪರೀಕ್ಷೆಯನ್ನೇ ಮಣಿಸಿಬಿಟ್ಟಿದ್ದ. ಐಎಎಸ್‌ ಈ ದೇಶದ ಲಕ್ಷಾಂತರ ಯುವಕ- ಯುವತಿಯರ ಹೃದಯದ ಮಿಡಿತ, ಕನಸಿನ ಲೋಕ. ಯುವಕರೇಕೆ, ಇನ್ನೂ ಸ್ಕೂಲುಗಳಲ್ಲಿರುವ ಪುಟ್ಟ ಮಕ್ಕಳಲ್ಲೇ “ಮುಂದೇನಾಗ್ತಿರಾ?’ ಎಂದು ಕೇಳಿದರೆ “ಐಎಎಸ್‌ಆಫೀಸರ್‌’ ಎಂದು ಖಡಕ್ಕಾಗಿ ಉತ್ತರಿಸುವವರ ಸಂಖ್ಯೆಯೇ ಬಹಳ.

ಅಷ್ಟರ ಮಟ್ಟಿಗೆ ಅದೊಂದು ಬಲುದೊಡ್ಡ ಆಕರ್ಷಣೆ. ತಿಂಗಳಿಗೆ ಆರಂಕಿ ಸಂಬಳ ತರುವ ಸಾಕಷ್ಟು ಉದ್ಯೋಗಗಳಿದ್ದರೂ ಐಎಎಸ್‌ನಂಥ ಹುದ್ದೆಗಳ ಖದರಿಗೆ ಮಾರು ಹೋಗದವರು ಕಡಿಮೆ.ಪ್ರತಿವರ್ಷ ಐಎಎಸ್‌ ಪರೀಕ್ಷೆಗಳಿಗೆ ಅರ್ಜಿ ಹಾಕುವವರ ಸಂಖ್ಯೆ ಏನಿಲ್ಲವೆಂದರೂ ಹತ್ತು ಲಕ್ಷ ಮೀರುತ್ತದೆ. ಅವರಲ್ಲಿ ಅಂತಿಮ ರ್‍ಯಾಂಕ್‌ ಪಟ್ಟಿಯಲ್ಲಿ ಕಾಣಿಸಿಕೊಳ್ಳುವವರು 1000 ಮಂದಿ. ಇಷ್ಟಾದ ಮೇಲೆ ಐಎಎಸ್‌, ಐಪಿಎಸ್‌ ಹುದ್ದೆಗಳಿಗೆ ಆಯ್ಕೆಯಾಗುವವರು ಹೆಚ್ಚೆಂದರೆ, 150-200 ಮಂದಿ. ಇವರ ಪೈಕಿ ಮೊದಲ ರ್‍ಯಾಂಕ್‌ ಪಡೆದುಕೊಳ್ಳುವ ಯುವಕ/ ಯುವತಿ ಎಂತಹ ಛಲದಂಕಮಲ್ಲ­ರಾಗಿರಬಹುದೆಂದು ಊಹಿಸಿನೋಡಿ.

ಬದ್ಧತೆಯ ಅಗ್ನಿಪರೀಕ್ಷೆ: “ಎಲ್ಲ ಕಾಂಪಿಟೀಟಿವ್‌ ಎಕ್ಸಾಂ ಗಳನ್ನೂ ಬರೀತಿ ದ್ದೀನಿ. ಐಎಎಸ್‌ ನನ್ನ ಅಂತಿಮ ಗುರಿ’ ಎನ್ನುವವರಿಗೆ ಅದು ದಕ್ಕುವ ಹಣ್ಣಲ್ಲ. ಅದೊಂದನ್ನೇ ಗಮ್ಯವಾಗಿ­ಟ್ಟುಕೊಂಡು ಮುನ್ನಡೆ­ಯುವವರ ಮುಡಿಗಷ್ಟೇ ಏರುವ ಯಶಸ್ಸಿನ ಕಿರೀಟ. ಅಂಥದ್ದೊಂದು ಬದ್ಧತೆ ಸಿವಿಲ್‌ ಸರ್ವಿಸ್‌ ಪರೀಕ್ಷೆಗಳ ಮೂಲಮಂತ್ರ.

ಯಾರು ಬರೆಯಬಹುದು?: 21 ವರ್ಷ ವಯಸ್ಸಿನವರು ಅಂದರೆ ಪದವಿಯ ಅಂತಿಮ ವರ್ಷದಲ್ಲಿರುವವರು ಐಎಎಸ್‌ ಪರೀಕ್ಷೆ ಬರೆಯಲು ಅರ್ಹರು. ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಬಿಎಸ್‌ಡಬ್ಲೂ, ಇಂಜಿನಿಯರಿಂಗ್‌, ಮೆಡಿಕಲ್‌- ಯಾವ ಡಿಗ್ರಿ ಓದಿದವರೂ ಐಎಎಸ್‌ ಬರೆಯಬಹುದು. ಹಾಗೆಂದು ಡಿಗ್ರಿ ಮುಗಿಯುತ್ತಿದ್ದಂತೆ ಒಂದು ಅಟೆಂಪ್ಟ್ ಮಾಡಿಬಿಡೋಣ ಎನ್ನುವುದು ಜಾಣತನವಲ್ಲ. ಏಕೆಂದರೆ, ಐಎಎಸ್‌ನಲ್ಲಿ ಪ್ರತಿ ಪ್ರಯತ್ನವೂ ಅಮೂಲ್ಯ. ಸಾಮಾನ್ಯ ವರ್ಗದ ಅಭ್ಯರ್ಥಿಗಳು ತಮ್ಮ 32ನೇ ವಯಸ್ಸಿನವರೆಗೆ 6 ಬಾರಿ ಮಾತ್ರ ಪರೀಕ್ಷೆ ಬರೆಯಬಹುದು. ಹಿಂದುಳಿದ ವರ್ಗಕ್ಕೆ ಸೇರಿದವರು 35 ವರ್ಷದವರೆಗೆ 9 ಬಾರಿ ಬರೆಯಬಹುದು. ಎಸ್‌ಸಿ/ ಎಸ್‌ಟಿ ಸಮುದಾಯದ ಅಭ್ಯರ್ಥಿಗಳು 37 ವರ್ಷದವರೆಗೆ ಮಾತ್ರ ಐಎಎಸ್‌ ಬರೆಯಬಹುದು, ಪ್ರಯತ್ನದ ಮಿತಿ ಇಲ್ಲ.

ಏನನ್ನು ಓದಬೇಕು?: ಮೊದಲನೆಯ ಹಂತದ ಪರೀಕ್ಷೆಗೆ ರಾಷ್ಟ್ರೀಯ- ಅಂತಾರಾಷ್ಟ್ರೀಯ ಮಹತ್ವದ ಪ್ರಚಲಿತ ವಿದ್ಯಮಾನ, ಭಾರತ ಹಾಗೂ ಸ್ವಾತಂತ್ರ ಹೋರಾಟದ ಇತಿಹಾಸ, ಭಾರತೀಯ ಮತ್ತು ಜಾಗತಿಕ ಭೂಗೋಳಶಾಸ್ತ್ರ, ಭಾರತದ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ, ಸಂವಿಧಾನ, ಪಂಚಾಯತ್‌ರಾಜ್‌, ಆರ್ಥಿಕತೆ, ಬಡತನ, ಪರಿಸರ, ಜೀವ ವೈವಿಧ್ಯತೆ, ಹವಾಮಾನ ಬದಲಾವಣೆ, ಸಾಮಾನ್ಯ ಜ್ಞಾನ ಮುಂತಾದ ವಿಷಯಗಳ ಬಗ್ಗೆ ಓದಿಕೊಳ್ಳ­ಬೇಕು. ಹಾಗೆಯೇ, ವಿಷಯಗ್ರಹಿಕೆ, ಸಂವಹನ ಕಲೆ, ತಾರ್ಕಿಕ ಮತ್ತು ವಿಶ್ಲೇಷಣಾ ಸಾಮರ್ಥ್ಯ, ನಿರ್ಧಾರ ಕೈಗೊಳ್ಳುವಿಕೆ, ಸಮಸ್ಯೆ ಪರಿಹಾರ, ಸಾಮಾನ್ಯ ಬೌದ್ಧಿಕ ಸಾಮರ್ಥ್ಯ, ಪ್ರಾಥಮಿಕ ಗಣಿತಜ್ಞಾನ, ದತ್ತಾಂಶ ವಿಶ್ಲೇಷಣೆ ಮುಂತಾದ ವಿಷಯಗಳ ತಿಳಿವಳಿಕೆಯೂ ಇರಬೇಕು.

ಮುಖ್ಯ ಪರೀಕ್ಷೆಯಲ್ಲಿ ಇಂಗ್ಲಿಷ್‌ ಮತ್ತು ಯಾವುದಾದರೂ ಭಾರತೀಯ ಭಾಷೆ (ಉದಾ: ಕನ್ನಡ) ಕುರಿತ ಪ್ರತ್ಯೇಕ ಪತ್ರಿಕೆಗಳಿರುತ್ತವೆ. ಮೂರನೆಯ ಪತ್ರಿಕೆ ಪ್ರಬಂಧ ಬರವಣಿಗೆ. ಮುಂದಿನ ನಾಲ್ಕು ಪತ್ರಿಕೆಗಳು ಸಾಮಾನ್ಯ ಅಧ್ಯಯನದ ಬಗ್ಗೆ ಇರುತ್ತವೆ. ಪೂರ್ವಭಾವಿ ಪರೀಕ್ಷೆಗೆ ಹೇಳಿದ ವಿಷಯಗಳೇ ಇಲ್ಲಿ ಹೆಚ್ಚು ಆಳ ಮತ್ತು ವಿಸ್ತಾರವಾಗಿ ಇರುತ್ತವೆ. ಕೊನೆಯ ಎರಡು ಪತ್ರಿಕೆಗಳು ನಮ್ಮ ಐಚ್ಛಿಕ ವಿಷಯದ ಬಗ್ಗೆ ಇರುತ್ತವೆ. ಯುಪಿಎಸ್ಸಿ ಸೂಚಿಸುವ 26 ವಿಷಯಗಳ ಪೈಕಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇವುಗಳಲ್ಲಿ ನಾವು ಪದವಿಯಲ್ಲಿ ಓದಿದ ಯಾವುದಾದರೊಂದು ವಿಷಯ ಇದ್ದೇ ಇರುತ್ತದೆ.

ತಯಾರಿ ಹೇಗಿರಬೇಕು?: ಐಎಎಸ್‌ ಪರೀಕ್ಷೆಗೆ ಗಂಭೀರವಾಗಿ ತಯಾರಿ ಮಾಡುವವರೆಲ್ಲ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಓದುವುದರಿಂದ ಆರಂಭಿಸುವುದು ಸಾಮಾನ್ಯ. ಐಎಎಸ್‌ ಪರೀಕ್ಷೆಗೆ ಓದಬೇಕಾಗಿರುವ ಎಲ್ಲ ವಿಷಯಗಳ ಪ್ರಾಥಮಿಕ ಜ್ಞಾನ ಈ ಪಠ್ಯಪುಸ್ತಕಗಳಲ್ಲಿ ಲಭ್ಯರುವುದರಿಂದ 6ನೇ ತರಗತಿಯಿಂದ 12ನೇ ತರಗತಿವರೆಗಿನ ಎಲ್ಲ ಪಠ್ಯಪುಸ್ತಕಗಳನ್ನೂ ಒಮ್ಮೆ ಓದಿಕೊಳ್ಳುವುದು ಸೂಕ್ತ. ಅದಾದ ಬಳಿಕ ಆಯಾ ವಿಷಯಗಳಿಗೆ ಸಂಬಂಧಿಸಿದ ವಿವಿಧ ಪುಸ್ತಕಗಳನ್ನು ಅಭ್ಯಾಸ ಮಾಡಬೇಕಾಗುತ್ತದೆ.

ಈ ಹಂತದಲ್ಲಿ ಐಎಎಸ್‌ ಪರೀಕ್ಷೆಯ ವಿಸ್ತೃತ ಸಿಲೆಬಸ್‌ ಅನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಯುಪಿಎಸ್‌ಸಿಯ ವೆಬ್‌ಸೈಟ್‌ https://upsc.gov.inನಿಂದ ಸುಲಭವಾಗಿ ಡೌನ್‌ಲೋಡ್‌ ಮಾಡಿಕೊಳ್ಳ­ಬಹುದು. ಮೇಲೆ ತಿಳಿಸಿದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪ್ರತ್ಯೇಕ ಪುಸ್ತಕಗಳು ಹಾಗೂ ಎಲ್ಲ ವಿಷಯಗಳೂ ಇರುವ ಸಿದ್ಧ ಅಧ್ಯಯನ ಸಾಮಗ್ರಿಗಳು ಈಗ ಪುಸ್ತಕದಂಗಡಿಗಳಲ್ಲಿ ಹೇರಳವಾಗಿ ಲಭ್ಯ. ಆದರೆ, ಹತ್ತಾರು ಪುಸ್ತಕಗಳನ್ನು ತಂದು ಗುಡ್ಡೆ ಹಾಕಿ ಪ್ರಯೋಜನವಿಲ್ಲ. ಅದರಿಂದ ಗೊಂದಲವೇ ಹೆಚ್ಚು. ಪುಸ್ತಕ ಆಯ್ಕೆ ಮಾಡುವಾಗ ಗುಣಮಟ್ಟದ ಬಗ್ಗೆ ಎಚ್ಚರ ಅಗತ್ಯ.

ಇಂಗ್ಲಿಷ್‌ ಚೆನ್ನಾಗಿ ಬಲ್ಲವರಿಗೆ ಮಾತ್ರ ಐಎಎಸ್‌ ಒಲಿಯುತ್ತದೆ ಎಂಬೊಂದು ತಪ್ಪು ತಿಳಿವಳಿಕೆ ಬಹುಮಂದಿಯಲ್ಲಿದೆ. ಇಂಗ್ಲಿಷ್‌ ತಿಳಿವಳಿಕೆ ಇರುವುದರಿಂದ ಉತ್ತಮ ಪುಸ್ತಕಗಳನ್ನು ಓದಿ ಒಳ್ಳೆಯ ನೋಟ್ಸ್‌ ಮಾಡಿಕೊಳ್ಳಬಹುದು. ಆದರೆ, ಅದೇ ಮುಖ್ಯವಲ್ಲ. ಕನ್ನಡದಲ್ಲೇ ಮುಖ್ಯ ಪರೀಕ್ಷೆಯನ್ನು ಬರೆಯುವುದಕ್ಕೆ ಹಾಗೂ ಸಂದರ್ಶನ ಎದುರಿಸುವುದಕ್ಕೆ ಅವಕಾಶವಿದೆ. ಐಎಎಸ್‌ ಪಾಸಾಗಲು ದೆಹಲಿ, ಹೈದರಾಬಾದ್‌ನಂಥ ಮಹಾನಗರಗಳಲ್ಲಿ ಕೋಚಿಂಗ್‌ ಪಡೆಯುವುದು ಅನಿವಾರ್ಯ ಎಂದು ತಿಳಿದುಕೊಂಡಿರುವವರೂ ಬಹಳ.

ಆರ್ಥಿಕವಾಗಿ ಹಿಂದುಳಿದಿರುವವರು ಸಾವಿರಾರು ರೂ. ಖರ್ಚು ಮಾಡಿ ಇಂಥ ತರಬೇತಿ ಪಡೆಯುವುದು ಹೇಗೆ ಎಂಬ ಆತಂಕವೂ ಇದೆ. ಆದರೆ, ಇವೆಲ್ಲ ನಿಜವಲ್ಲ. ಸ್ವಂತ ಅಧ್ಯಯನದಿಂದ ಯಶಸ್ಸು ಸಾಧಿಸಿದ ನೂರಾರು ಮಂದಿ ನಮ್ಮೊಂದಿಗಿದ್ದಾರೆ. ಅತ್ಯುತ್ತಮ ಅಧ್ಯಯನ ಸಾಮಗ್ರಿಗಳ­ಲ್ಲದೆ, ಸುಲಭವಾಗಿ ಕೈಗೆಟುಕುವ ಆನ್‌ಲೈನ್‌ ವೇದಿಕೆಗಳಿಂದ ಅನೇಕ ಬಡಹುಡುಗರ ಕನಸು ನನಸಾಗಿದೆ. ಸಾಧಿಸುವ ಛಲವಿದ್ದರೆ ಯಶಸ್ಸಿನ ಬಲ ತಾನಾಗಿಯೇ ಒಲಿದುಬರುತ್ತದೆ. ಕನಸು ಕಂಡರೆ ಸಾಲದು, ಅದಕ್ಕೆ ಕಸುವು ತುಂಬುವ ದೃಢ ನಿರ್ಧಾರವೂ ಬೇಕು.

ಹೇಗಿರುತ್ತದೆ, ಐಎಎಸ್‌ ಪರೀಕ್ಷೆ?: ಸ್ಕ್ರೀನಿಂಗ್‌ ಟೆಸ್ಟ್‌… ವಸ್ತುನಿಷ್ಠ ಮಾದರಿಯ ಎರಡು ಪತ್ರಿಕೆಗಳಿರುತ್ತವೆ. ತಲಾ ಎರಡು ಗಂಟೆ ಅವಧಿಯವು. ಇವುಗಳ ಅಂಕಗಳನ್ನು ರ್‍ಯಾಂಕಿಗೆ ಪರಿಗಣಿಸುವುದಿಲ್ಲವಾದರೂ ಮುಖ್ಯ ಪರೀಕ್ಷೆ ಬರೆಯಲು ಇದರಲ್ಲಿ ತೇರ್ಗಡೆಯಾಗಬೇಕು. ಮುಖ್ಯ ಪರೀಕ್ಷೆ ವಿಸ್ತೃತ ಉತ್ತರ ಮಾದರಿಯದ್ದು. ಇಲ್ಲಿ 9 ಪತ್ರಿಕೆಗಳನ್ನು ಉತ್ತರಿಸಬೇಕಾಗುತ್ತದೆ. ಇದರಲ್ಲಿ ಆಯ್ಕೆಯಾದ ಮೇಲೆ ಅತ್ಯಂತ ನಿರ್ಣಾಯಕವಾದ ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆ. ವಿವಿಧ ವಿಷಯಗಳ ಕುರಿತ ಅಭ್ಯರ್ಥಿಯ ಜ್ಞಾನ, ಸಾಮರ್ಥ್ಯ, ಪ್ರಾಮಾಣಿಕತೆ, ಬದ್ಧತೆ, ನಾಯಕತ್ವ, ದೂರದರ್ಶಿತ್ವ ಮುಂತಾದವುಗಳನ್ನು ತಜ್ಞರ ಸಮಿತಿಯೊಂದು ಒರೆಗಲ್ಲಿಗೆ ಹಚ್ಚುತ್ತದೆ. ಈ ಹಂತವನ್ನೂ ದಾಟಿ ಗೆಲ್ಲುವವನೇ ಐಎಎಸ್‌ ಶೂರ.

* ಸಿಬಂತಿ ಪದ್ಮನಾಭ ಕೆ.ವಿ.

ಟಾಪ್ ನ್ಯೂಸ್

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1aaaa

IPL; ಚೆನ್ನೈ ವಿರುದ್ಧ ಲಕ್ನೋಗೆ 8 ವಿಕೆಟ್ ಗಳ ಅಮೋಘ ಜಯ

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

Siddaramaiah ಸರಕಾರದಲ್ಲಿ ಹಿಂದೂಗಳ ರಕ್ತಕ್ಕೆ ಬೆಲೆ ಇಲ್ಲ: ಅಶೋಕ್‌

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

ಚೊಂಬಿನ ಮೂಲಕ ಮೋದಿ ಸ್ವಾಗತಕ್ಕೆ ಕಾಂಗ್ರೆಸ್‌ ಸಿದ್ಧತೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.