ಕರೆಯೊಂದ ಮಾಡಿಬಿಡಲೇ ಎದೆಯಿಂದ ಈಗಲೇ…
Team Udayavani, Jul 16, 2019, 5:12 AM IST
ಡಿಯರ್ ಅನ್ವೀ….
ನೀ ಬರ್ತಿಯಾ ಅಂತ ಕಾದು ಕಾದು ಸಾಕಾಯ್ತು. ಈಗ ಕಾಲೆಳೆಯುತ್ತಾ ಎತ್ತಲೋ ಹೊರಟೆ. ಸಣ್ಣಗೆ ಮಳೆ ಹುಯ್ತಾಯಿದೆ. ಬರ್ತೀನಿ ಅಂತ ಹೇಳಿ ಹೀಗೆ ಕಾಯ್ಸೋದು ಸರಿನಾ ಹೇಳು ? ಈ ಪ್ರಶ್ನೆ ಕೇಳ್ಳೋಕೂ ನೀ ಸಿಗಲಿಲ್ಲ. ನೀ ಸಿಕ್ಕಿದ್ರೆ ನನ್ನೊಳಗೆ ಈ ಪ್ರಶ್ನೆನೇ ಹುಟಾ¤ ಇರಲಿಲ್ಲ. ಬಿಡು, ನೀವು ಹುಡ್ಗಿರೇ ಹೀಗೆ … ತುಂಟ ಹುಡುಗನ್ನ ಒಬ್ಬಂಟಿ ಮಾಡಿಬಿಡ್ತೀರಿ. ನೀ ಅಲ್ಲೆಲ್ಲೋ ಕಿಟಕಿ ಹತ್ತಿರ ಮಳೆಯನ್ನೇ ನೋಡುತ್ತಾ , ತಣ್ಣಗೆ ಕೊರೆಯೋ ಸರಳನ್ನ ಎರಡೂ ಕೈಯಲ್ಲಿ ಹಿಡ್ಕೊಂಡು.
“ಅಯ್ಯೋ ಪಾಪ..ಪಾಪಿ ಹುಡ್ಗಾ.. ಇನ್ನೂ ಕಾಯ್ತಾ ಇದ್ದೀನೇನೋ ?’ ಅಂತ ಬೆಚ್ಚಗೆ ಯೋಚಿಸೋ ಹೊತ್ತಲ್ಲೇ , ನಾನು ಮಳೆಯಲ್ಲಿ ನಡುಗುತ್ತಾ, ನಿನ್ನ ನೆನೆಯುತ್ತಾ , ದಿಕ್ಕು ತೋಚದೆ ನಡೆಯುತ್ತಿದ್ದೇನೆ. ನನ್ನತ್ತ ಹೊರಡೋಕೆ ನಿಂಗೆ ನೂರಾರು ಅಡೆತಡೆಗಳು .
ಸಾವಿರ ಪ್ರಶ್ನೆಗಳು, ಅವೆಲ್ಲವನ್ನೂ ನೀ ದಾಟಿ ಬರೋದು ಕಷ್ಟ ಕಷ್ಟ. ನಾನು ಸಾವಿರ ಗಾವುದ ದೂರದ ಸನ್ನಿಧಿ. ಅದೆಲ್ಲವೂ ನನಗೆ ಅರ್ಥವಾಗುತ್ತದೆ. ನಿನ್ನ ಗೈರು ಹಾಜರಿಗೆ ನಾನು ಕೋಪಗೊಳ್ಳುವುದಿಲ್ಲ. ಕಾಯಿಸಿ ಸತಾಯಿಸಿದೆ ಅಂತ ಸಿಟ್ಟಾಗುವುದಿಲ್ಲ…
ನೆನಪಿಂದ ರೂಪಿಸಿರುವ ನವಿರಾದ ಸೇತುವೆ….
ನಿನಗಾಗಿಯೇ ಅಣಿಮಾಡುತ ನಾನಂತೂ ಕಾಯುವೆ !
ನಿನ್ನ ಬಗ್ಗೆ ಸಾವಿರ ದೂರುಗಳಿವೆ. ಆದರೆ, ಯಾವತ್ತೂ ನಿನ್ನ ಕಂಗಳಲ್ಲಿ ಮೋಸದ ಸೆಳಕು ಕಂಡಿಲ್ಲ. ಅಪ್ರಮಾಣಿಕತೆಯ ಸಿಬಿರು ನೋಡಿಲ್ಲ. ಒಂದೇ ಒಂದು ಉದಾಸೀನತೆಯ ಎಳೆ ಗೋಚರಿಸಿಲ್ಲ. ನಿನ್ನದೇ ಅನಿವಾರ್ಯತೆಗಳ ಜಾತ್ರೆಯಲ್ಲಿಯೂ.. ನಿನ್ನದು ನನ್ನೆಡೆಗಿನ ಯಾತ್ರೆಯೆಂಬುದ ನಾ ಬÇÉೆ ಹುಡುಗಿ. ಬಿಡು, ಈ ಜಗತ್ತಿದೆಯಲ್ಲ; ಅದು ಮಾರಾಮೋಸದ ನಾಟಕರಂಗ. ಗೆದ್ದರೆ ಕತ್ತಿಗೆ ಹಾರ; ಸೋತರೆ ಎದೆಗೆೆ ಹಾರ. ನಾವು ಯಾವತ್ತೂ ಈ ಜಗತ್ತಿನ ಬಗ್ಗೆ ಯೋಚಿಸಿದ್ದೇಯಿಲ್ಲ. ನಿನ್ನೊಳಗಿನ ಕನಸುಗಳಿಗೆಲ್ಲಾ ನನ್ನೊಳಗಷ್ಟೇ ಬಣ್ಣಗಳು ಸಿಗುತ್ತವೆ. ನನ್ನೊಳಗಿನ ಬಣ್ಣಗಳು ನಿನ್ನೊಳಗಿನ ಕನಸಿಗಳಿಗಷ್ಟೇ ಸಾಲುತ್ತವೆ.
ನೀ ಯಾಕೆ ನಂಗೆ ಇಷ್ಟೊಂದು ಇಷ್ಟವಾಗಿ, ಬದುಕಿನ ಬಣ್ಣವಾಗಿ, ಆತ್ಮಕ್ಕೆ ಅನಿವಾರ್ಯವಾಗಿ , ಕನಸುಗಳಿಗೆ ಇರುಳಾಗಿ ಕಾಡುತ್ತೀ? ನೀ ಈ ಬದುಕಿನ ಪೂರ್ತಿ ಸಿಗುತ್ತೀಯೋ , ಇಲ್ಲವೋ? ಯಾವುದೂ ಇತ್ಯರ್ಥವಾಗದ ಹೊತ್ತಲ್ಲಿ ನೀನೇ ಈ ಬದುಕಿನ ಅನಿವಾರ್ಯವೆಂದು ಮನಸು ತೀರ್ಪೊಂದನು ನೀಡಿ , ನನ್ನನ್ನು ನೂರಾರು ಗೊಂದಲಗಳಿಂದ ಪಾರುಮಾಡುತ್ತದೆ . ನೀನೆಂದರೆ ಸಾವು ಬದುಕಿನ ನಡುವಿನ ಸೇತುವೆ ಕಣೆ. ನೀ ಯಾವತ್ತೋ ಬರುತ್ತೇನೆಂದು ಹೇಳಿ ಹೋದರೆ. ಮನಸು ಇವತ್ತಿನಿಂದಲೇ ನೀ ಯಾವತ್ತೋ ಸಿಗುವ ಗಳಿಗೆಗಾಗಿ ಕಾಯುತ್ತಾ… ಕನವರಿಸುತ್ತಾ ಕುಳಿತಿರುತ್ತದೆ.
ಕರೆಯೊಂದ ಮಾಡಿಬಿಡಲೇ… ಎದೆಯಿಂದ ಈಗಲೇ..
ಪದವಿಲ್ಲದೇ..ಸ್ವರವಿಲ್ಲದೇ.. ನಾನಿನ್ನು ಕೂಗಲೇ !
ಅಲ್ಲೆಲ್ಲೋ ದೂರದಲಿ ನೀ ನಕ್ಕಾಗೆಲ್ಲಾ , ನನ್ನೆದೆಯೊಳಗೆ ಹೂ ಅರಳುತ್ತವೆ. ಆ ಹೂಗಳನ್ನೆಲ್ಲಾ ನೀ ಬರುವ ಹಾದಿಯಲ್ಲಿ ಚೆಲ್ಲಿ ನಿನಗಾಗಿ ಕಾಯುತ್ತಾ ನಿಲ್ಲುವೆ. ನೀ ಎಷ್ಟೇ ಮೆಲ್ಲಗೆ ಹೆಜ್ಜೆ ಇಟ್ಟು ಬಂದರೂ , ನನಗೆ ತಿಳಿದುಹೋಗುತ್ತದೆ. ಏಕೆಂದರೆ, ಅವೆಲ್ಲಾ ನನ್ನದೇ ಎದೆಯಾಳದ ನಿರೀಕ್ಷೆಯ ಹೂಗಳು ಕಣೆ.
ಲವ್ ಯೂ….
ನೀ ಬರುವ ಹಾದಿಯಲ್ಲಿ ನಿಂತ ಹುಡುಗ
– ಜೀವ ಮುಳ್ಳೂರು