ಬದುಕು ಬಂಗಾರ ಮಾಡಿಕೊಳ್ಳುತ್ತೇನೆ, ನೀನಿಲ್ಲದೆಯೂ!
Team Udayavani, Jan 9, 2018, 1:01 PM IST
ಈಗ ನನ್ನೊಂದಿಗೆ ನಿನ್ನ ಅಸ್ತಿತ್ವದ ಯಾವುದೇ ಕುರುಹಿಲ್ಲ, ಮನದಲ್ಲಿ ನಿನ್ನ ನೆನಪಿನ ಪಳೆಯುಳಿಕೆಗಳಿಲ್ಲ. ಆದರೆ, ಈ ಬದುಕನ್ನು ಪ್ರೀತಿಸಲು ಹೇಳಿ ಕೊಟ್ಟ ಅಪ್ಪನಿದ್ದಾನೆ. ಮಗುವಿನಂಥ ಮನಸಿನ ಅಮ್ಮ ಇದ್ದಾಳೆ. ಎಡವಿ ಬಿದ್ದಾಗ ಮೊದಲು ನಕ್ಕು, ನಂತರ ಮೇಲೆತ್ತುವ ಸ್ನೇಹಿತರ ಬಳಗ ಈಗಲೂ ಜೊತೆಗಿದೆ.
ನಿನ್ನ ಪ್ರೀತಿಯ ಸೋನೆಯಲಿ ಮಿಂದು, ಅತಿವೃಷ್ಟಿಯಲ್ಲಿ ಮುಳುಗಿದ್ದ ಹೃದಯದಲ್ಲೀಗ ಹನಿ ಪ್ರೀತಿಗೂ ಬರಗಾಲ. ನಿನ್ನ ಮಾತುಗಳ ಸುರಿಮಳೆಯಲ್ಲಿ ಮಿಂದೆದ್ದ ಕಿವಿಗಳಿಗೆ ಧ್ಯಾನದಂಥ ದಿವ್ಯ ಮೌನ. ಕೈ ಬೆರಳುಗಳ ನಡುವೆ ಬೆಸೆಯುತ್ತಿದ್ದ ನಿನ್ನ ಬೆರಳುಗಳಿರದೇ ಕೈಗಳಿಗೂ ಈಗ ಒಂಟಿತನ. ನಿನ್ನ ಅಸಂಖ್ಯ ನೋಟಗಳಿಗೆ ಜೊತೆಯಾಗುತ್ತಿದ್ದ ನನ್ನ ಕಣ್ಣುಗಳಲ್ಲಿ ಕಂಬನಿಯ ಮಂಜು.
ಬದುಕ ನಾವೆಯ ನಿನ್ನ ನಂಬುಗೆಯ ಸಾವಿರ ಕನಸುಗಳ ಹಾಯಿಯಲಿ ನೇಯ್ದ ಬದುಕು ಬಿರುಗಾಳಿಗೆ ದಿಕ್ಕೆಟ್ಟ ನೌಕೆ. ಪ್ರೀತಿಯೆಂಬ ಮಾಯೆಯ ಪೊರೆ ಆವರಿಸಿದ ಬದುಕಲೀಗ ಅಮಾವಾಸ್ಯೆಯ ಕಾರ್ಗತ್ತಲು. ಕಣ್ಣು ಹಾಯಿಸಿದಲ್ಲೆಲ್ಲಾ ನೀನು ಬಿಟ್ಟು ಹೋದ ಕೆಟ್ಟ ನೆನಪುಗಳು, ದಿಕ್ಕೆಟ್ಟು ಕೂತ ಭವಿಷ್ಯ, ಒಡೆದ ಕನ್ನಡಿಯಂತಾದ ಹೃದಯ, ಆ ಚೂರುಗಳಲ್ಲೂ ಕೇವಲ ನಿನ್ನದೇ ಪ್ರತಿಬಿಂಬ.
ಲೆಕ್ಕವಿರದಷ್ಟು ಅರ್ಥಹೀನ ಆಸೆಗಳು, ಮುತ್ತಿಕ್ಕಿದ್ದ ಆ ಮುಂಗುರುಳ ಒಡೆತನದ ಹಣೆ, ಜೊತೆಯಾಗಿ ಹಿಂಬಾಲಿಸಿದ ನಿನ್ನ ಹೆಜ್ಜೆಗಳು, ರಾತ್ರಿಯಲಿ ಪಿಸುಗುಡುತ್ತಿದ್ದ ಮೆಸೇಜುಗಳು, ರಾತ್ರಿ-ಹಗಲ ಕೂಡಿಸುತ್ತಿದ್ದ ಕರೆಗಳು.. ಈಗ ನೋಡಿದರೆ ಎಲ್ಲವೂ ಅರ್ಥಹೀನ.
ಇನ್ನೊಬ್ಬರ ಕೈ ಹಿಡಿದು ನಡೆದ, ನಿನ್ನ ಬದುಕ ದಾರಿಯಲಿ ನಾನೊಂದು ಗುಜರಿ ಲಾಟೀನು, ಏಣಿಯಲಿ ನಿನ್ನ ಹೆಜ್ಜೆ ಗುರುತ ಮೂಡಿಸಿಕೊಂಡ ಮೆಟ್ಟಿಲು, ದುರಂತ ಪ್ರೇಮ ಕಥೆಯೊಂದರ ನಾಯಕ(?), ಪ್ರೀತಿಯ ಜಗದಲಿ ದಿನವೂ ನಿನ್ನ ಪ್ರೀತಿಗಾಗಿ ಬೊಗಸೆಯೊಡ್ಡಿ ನಿಂತ ಅಲೆಮಾರಿ ನಿರ್ಗತಿಕ.
ಈಗ ಎಲ್ಲವೂ ಮುಗಿದು ಹೋದ ಭೂತಕಾಲ, ವರ್ತಮಾನದಲ್ಲಿ ನೀನು ಸುಳಿವಿರದ ಚಂಡಮಾರುತ, ಕಾಲದ ಗರ್ಭದಲ್ಲಿ ಕಳೆದು ಹೋದ ಹಲವಾರು ದುರಂತ ಪ್ರೇಮ ಕಥೆಗಳಲ್ಲಿ ನನ್ನದೊಂದು ಪೇಲವ ಪ್ರೇಮಕಥನ, ಚಂದ್ರಮನ ಆಣೆಯಿಟ್ಟು ಬಿಟ್ಟು ಹೋದ ಪ್ರೇಮಿಗಳ ಸಾಲಲ್ಲಿ ನಿನ್ನದೊಂದು ಹೆಸರು.
ಈಗ ನನ್ನೊಂದಿಗೆ ನಿನ್ನ ಅಸ್ತಿತ್ವದ ಯಾವುದೇ ಕುರುಹಿಲ್ಲ, ಮನದಲ್ಲಿ ನಿನ್ನ ನೆನಪಿನ ಪಳೆಯುಳಿಕೆಗಳಿಲ್ಲ. ಆದರೆ, ಈ ಬದುಕನ್ನು ಪ್ರೀತಿಸಲು ಹೇಳಿ ಕೊಟ್ಟ ಅಪ್ಪನಿದ್ದಾನೆ. ಮಗುವಿನಂಥ ಮನಸಿನ ಅಮ್ಮ ಇದ್ದಾಳೆ. ಎಡವಿ ಬಿದ್ದಾಗ ಮೊದಲು ನಕ್ಕು, ನಂತರ ಮೇಲೆತ್ತುವ ಸ್ನೇಹಿತರ ಬಳಗ ಈಗಲೂ ಜೊತೆಗಿದೆ. ಹಿಂದೆ ಬರುವ ಹುಡುಗಿಯರಿಗೂ ಕಮ್ಮಿಯೇನಿಲ್ಲ.
ಹೀಗಿರುವಾಗ, ಹುಡುಗ ಹುಡುಕಿಕೊಂಡು ಬಂದಾನು, ಪಾಪ, ಅವನು ಈಗಲೂ ನನ್ನ ನೆನಪಲ್ಲೇ ದಿನ ಕಳೆಯುತ್ತಿರಬಹುದು ಎಂದು ಕನಸಲ್ಲೂ ಎಣಿಸಬೇಡ. ನೆನಪಿಟ್ಟುಕೋ, ಬದುಕು ಬಂಗಾರ ಮಾಡಿಕೊಳ್ಳುತ್ತೇನೆ ನೀನಿಲ್ಲದೆಯೂ.
ಗಣೇಶ ಆರ್.ಜಿ. ಶಿವಮೊಗ್ಗ