ಮದುವೆನಾ ಎರಡು ವರ್ಷ ಮುಂದಕ್ಕೆ ಹಾಕ್ಸಿದ್ದೀನಿ..
Team Udayavani, May 28, 2019, 9:54 AM IST
ಅವತ್ತು ಆ ಪ್ರವಾಸಕ್ಕೆ ನಾನು ಹೋಗಿರದಿದ್ದರೆ, ಬಹುಶಃ ಈ ಆಸೆಗಳೆಲ್ಲ ಈಡೇರುತ್ತಿರಲಿಲ್ಲವೇನೋ! ಹೌದು, ಏಳೆಂಟು ವರ್ಷಗಳೇ ಕಳೆದು ಹೋಗಿದೆಯಲ್ಲ, ಆ ಘಟನೆ ನಡೆದು? ಆದರೂ, ನಿನ್ನೆ ಮೊನ್ನೆ ನಡೆದಿದ್ದೇನೋ ಎಂಬಂತೆ ಕಣ್ಣಿಗೆ ಕಟ್ಟಿವೆ ಆ ನೆನಪುಗಳು.
ಮನೋಹರ ಜಲಪಾತ ನೋಡುತ್ತ ಮೈ ಮರೆತಿದ್ದ ನಾನು ಇದ್ದಕ್ಕಿದ್ದಂತೆ ನೀರಿನ ಸೆಳೆತಕ್ಕೆ ಸಿಲುಕಿದ್ದರೆ. ಗೊತ್ತಿಲ್ಲದೆಯೇ ಕಾಲುಗಳು ಮುಂದೆ ಸಾಗಿದ್ದವು. ಜೊತೆಗಿದ್ದವರೆಲ್ಲರೂ ಮುಂದೆ ಹೋಗಿದ್ದರು. ದೊಡ್ಡ ಬಂಡೆಯನ್ನು ಗಮನಿಸದೆ ಕಾಲಿಟ್ಟ ತಪ್ಪಿಗೆ, ಪಾಚಿಗೆ ಸಿಕ್ಕು ಕಾಲು ಜಾರಿ ನೀರಿಗೆ ಬಿದ್ದಿದ್ದೆ. ಪ್ರಾಣವೇ ಹೋಯಿತೇನೋ ಎಂಬ ಆ ಕ್ಷಣದಲ್ಲಿ ಹಸ್ತವೊಂದು ನನ್ನೆಡೆಗೆ ಬಂದಿತ್ತು. ಕೈ ಹಿಡಿದ ಕೂಡಲೇ, ನನ್ನನ್ನು ನೀರಿನಿಂದ ಮೇಲೆತ್ತಿಬಿಟ್ಟಿತು ಆ ಕೈ.
ತಲೆಯೆತ್ತಿ ನೋಡಿದರೆ ನೀನು! ಹಿಂದಿನ ಜನ್ಮದಲ್ಲಿ ಸಿಂಡ್ರೆಲ್ಲಾಳ
ರಾಜಕುಮಾರನಾಗಿದ್ದನಾ ಇವನು ಅನ್ನುವಷ್ಟು ಸುಂದರ ಹುಡುಗ
ನೀನು! ಕನಸಿರಬೇಕು ಅಂತ ನಿನ್ನನ್ನು ನೋಡುತ್ತಿದ್ದವಳನ್ನು ವಾಸ್ತವಕ್ಕೆ
ತಂದಿದ್ದು, “ಹಲೋ, ಆರ್ ಯು ಓಕೆ?’ ಎಂಬ ನಿನ್ನ ಮಾತು.
ಗಾಬರಿಯಾಗಿ ಓಡುತ್ತಾ, ಜೊತೆಗಿದ್ದವರ ಗುಂಪನ್ನು ಸೇರಿಕೊಂಡೆ. ಅವತ್ತು ನೋಡಿದ ಮುಖ ಹಾಗೆಯೇ ಈ ಹೃದಯದ ಒಳಗೆ ಅಚ್ಚೊತ್ತಿ ಕುಳಿತಿತ್ತು. ಹೆಸರು, ಊರು, ಏನೂ ಗೊತ್ತಿಲ್ಲದೆ ಮನದ ಮೂಲೆಯಲ್ಲಿ ಒಸರುತ್ತಿದ್ದ ಪ್ರೀತಿಯ ಭಾವಗಳು ಮನದ ತುಂಬೆಲ್ಲ ಹರಡುವ ಹುನ್ನಾರ ನಡೆಸಿದ್ದವು. ಆದರೆ, ಪರಿಚಯವಿಲ್ಲದ ನಿನ್ನನ್ನು ಹೇಗೆ ಹುಡುಕಲಿ ಹೇಳು?
“ಅಗರ್ ಕಿಸಿ ಕೋ ಸಚ್ಚೇ ದಿಲ್ ಸೆ ಚಾಹೋ ತೋ ಪೂರಿ ಖಾಯ್ನಾತ್
ಉನ್ಹೆ ಮಿಲಾನೆ ಮೇ ಲಗ್ ಜಾತಿ ಹೇ’ ಎನ್ನುವಂತೆ ಅವತ್ತೂಂದಿನ
ಬಸ್ ನಿಲ್ದಾಣದಲ್ಲಿ ನೀನು ಕಂಡುಬಿಟ್ಟೆ. ಅಬ್ಟಾ, ಇವನು ನಮ್ಮ
ತಾಲೂಕಿನವನೇ ಅಂತ ಖುಷಿಯಾಯ್ತು. ನಾನೇ ನಿನ್ನ ಞಹತ್ತಿರ ಬಂದು ಪರಿಚಯ ಮಾಡಿಕೊಂಡೆ. ಅದೂ ಇದೂ ಮಾತನಾಡುತ್ತಾ, ಮುಂದಿನ ವರ್ಷ ನಾನು ಸೇರುವ ಡಿಗ್ರಿ ಕಾಲೇಜಿಗೇ ನೀನು ಸೇರುವುದಾಗಿ ಹೇಳಿದಾಗಂತೂ ಸ್ವರ್ಗಕ್ಕೆ ಒಂದೇ ಗೇಣು!
ಕಾಲೇಜಿನ ಮೈದಾನದ ಬಳಿಯ ಕಲ್ಲು ಬೆಂಚಿನ ಮೇಲೆ ನಿನ್ನೊಡನೆ
ಕುಳಿತುಕೊಳ್ಳುವ ಕನಸು ಕಂಡವಳಿಗೆ, ನೀನು ಅದೊಂದು ದಿನ ಗೆಳೆಯರೊಡನೆ ಹೇಳುತ್ತಿದ್ದ ಮಾತು ಕೇಳಿಸಿತ್ತು. “ಅತ್ತೆಯ ಮಗಳ ಜೊತೆಗೆ ಅದಾಗಲೇ ನಿಶ್ಚಿತಾರ್ಥ ಆಗಿಬಿಟ್ಟಿದೆ’ ಎನ್ನುತ್ತಿದ್ದಾರೆ ನೀನು! ಇನ್ನು ನಾವಿಬ್ಬರೂ ಗುಡ್ ಫ್ರೆಂಡ್ಸ್ ಅಷ್ಟೇ ಅಂತ ಮನಸ್ಸಿಗೆ ಬುದ್ಧಿ ಹೇಳಿದ್ದೆ. ಮೂರು ವರ್ಷಗಳ ಡಿಗ್ರಿ ಮುಗಿದರೂ ಮಾಸದ ನಿನ್ನ ನೆನಪುಗಳು ನನ್ನನ್ನು ಕಾಡುತ್ತಿದ್ದವು. ಅದೊಂದು ದಿನ ಮನೆಗೆ ಬಂದ ನೆಂಟರ ಜೊತೆಗೆ, ಅದೇ ಜಲಪಾತಕ್ಕೆ ಹೋಗೋಣ ಎಂದು ದುಂಬಾಲು ಬಿದ್ದೆ. ಕಾರಣ, ಅದೇ ಕಲ್ಲ ಮೇಲೆ ಮತ್ತೆ ಕಾಲು ಜಾರಲಿ, ನಿನ್ನ ನೆನಪುಗಳಿಂದ ಮುಕ್ತಿ ಸಿಗಲಿ ಎಂದು…
ಆದರೆ, ಆ ಬಂಡೆಯ ಮೇಲೆ ಹಾರ್ಟ್ ಶೇಪ್ನೊಳಗೆ ಬಂಧಿಯಾದ ಹೆಸರುಗಳನ್ನು ನೋಡಿ, ನನ್ನ ನಿರ್ಧಾರಬದಲಾಗಿತ್ತು. ಓಡೋಡಿ ಮನೆಗೆ ಬಂದವಳೇ, ಆಟೋಗ್ರಾಫ್ನಲ್ಲಿದ್ದ ನಿನ್ನ ನಂಬರ್ಗೆ ಕರೆ ಮಾಡಿದ್ದೆ. ಇಷ್ಟು ದಿನ ಹೇಳದೇ ಸತಾಯಿಸಿದ್ದಕ್ಕೆ ಒಂದು ಕ್ಷಮೆಯನ್ನೂ ಕೇಳಲಿಲ್ಲ ನೀನು. ಅದಕ್ಕೇ ಮದುವೆಯನ್ನು ಎರಡು ವರ್ಷ ಮುಂದೆ ಹಾಕಿದ್ದೇನೆ. ಈಗಲಾದರೂ
ಬಾಯಿಬಿಟ್ಟು ಹೇಳಬಾರದೆ, ಪ್ರೀತಿಸುತ್ತಿದ್ದೇನೆಂದು? ಈ ಪತ್ರ ಓದಿದೊಡನೆ ಹಳೆಯದೆಲ್ಲ ನೆನಪಾಗಿ, ಅದೇ ಗುಲ್ಮೊಹರ್ ಮರದ ಕೆಳಗೆ ಮತ್ತೂಮ್ಮೆ ಬಂದು ಪ್ರೀತಿನಿವೇದಿಸುವೆಯಾ?
ಇಂತಿ ನಿನ್ನ ಪ್ರೀತಿಯ..
ಅಂಜನಾ ಗಾಂವ್ಕರ್, ದಬ್ಬೆಸಾಲ…