ಟಿವಿಗಿಂತ ನನ್ನ ಹೃದಯವೇ ಹೆಚ್ಚು ಹಾಳಾಗಿದೆ …
Team Udayavani, Aug 27, 2019, 5:00 AM IST
ಹಾಯ್ ಅಭಿಜ್ಞಾ,
ಇಡೀ ಊರಲ್ಲಿ ಟಿವಿ ರಿಪೇರಿ ಎಲೆಕ್ಟ್ರಿಷಿಯನ್ ಅಂತ ಇರುವುದು ನಾನೊಬ್ಬನೇ. ಅದಕ್ಕಿಂತ ಹೆಚ್ಚಾಗಿ, ಕಡಿಮೆ ದರದಲ್ಲಿ ಬೇಗ ರಿಪೇರಿ ಮಾಡಿ ಕೊಡ್ತಾನೆ. ಒಳ್ಳೆಯ ಹುಡುಗ ಅಂತ ಒಂದಿಷ್ಟು ಒಳ್ಳೆಯ ಹೆಸರು ಕೂಡ ಇದೆ. ಇಂತಿಪ್ಪ ಹಿನ್ನೆಲೆಯ ನನಗೆ, ಒಂದು ದಿನ ನಿನ್ನ ಫೋನು ಬಂತು. “ಸರ್, ನಮ್ಮನೇಲಿ ಟಿವಿ ಹಾಳಾಗಿದೆ. ಸ್ವಲ್ಪ ಬಂದು ರಿಪೇರಿ ಮಾಡಿ ಕೊಡ್ತೀರಾ’ ಎಂದು ಶುರು ಮಾಡಿದ ನೀನು, ಪಟಪಟನೆ ಒಂದೇ ಉಸುರಿನಲ್ಲಿ ಎಲ್ಲಾ ವಿಚಾರ ಹೇಳಿ, ಮನೆಯ ಅಡ್ರೆಸ್ ಕೂಡ ತಿಳಿಸಿಬಿಟ್ಟಿದ್ದೆ. ನಾನು, ಅದಾಗಿ ಹತ್ತು ನಿಮಿಷದಲ್ಲೇ ನಿಮ್ಮ ಮನೆಯೆದುರು ನಿಂತಿದ್ದೆ. ಜ್ಞಾಪಕ ಇದೆಯಾ?
ಅದೇ ಮೊದಲ ಸಲ ನಾನು ನಿನ್ನ ನೋಡಿದ್ದು. ನೀನವತ್ತು, ಕೆಂಪನೆಯ, ಉದ್ದ ಲಂಗದ ಮೇಲೊಂದು ನಸು ಹಳದಿ ಬಣ್ಣದ ಟಾಪ್ ಧರಿಸಿದ್ದೆ. ಕೂದಲನ್ನು ಮುಂದಕ್ಕೆ ಸ್ವಲ್ಪವೇ ಇಳಿಬಿಟ್ಟು, ಹಿಂದೆ ತುರುಬನ್ನು ಕಟ್ಟಿದ್ದೆ . ಏಕೋ ಗೊತ್ತಿಲ್ಲ. ನಿನ್ನ ಆ ಡ್ರೆಸ್ನ ಅಂದವನ್ನು ನೋಡಿಯೇ ಬಹಳ ಖುಷಿಯಾಗಿತ್ತು. ಅದರ ಮೇಲೆ ನಿನ್ನ ಮುಖದ ಮೇಲಿರುವ ಚಂದನೆಯ ನಗು ಹೃದಯದಲ್ಲಿ ಅಲೆಗಳೆಬ್ಬಿಸಿತ್ತು !
ಅವತ್ತು ಟಿವಿ ರಿಪೇರಿ ಮಾಡುತ್ತಿರುವಾಗ ನೀನು ಪಟಪಟನೆ ಅದು ಯಾಕೆ ಹಾಗೆ ? ಇದ್ಯಾಕೆ ಹೀಗೆ ಅಂತೆಲ್ಲಾ ಪ್ರಶ್ನೆಗಳನ್ನು ಕೇಳುತ್ತಾ ಅರಳು ಹುರಿದಂತೆ ಮಾತನಾಡುತ್ತಿದ್ದರೆ, ಒಳಗೊಳಗೇ ಮತ್ತಷ್ಟು ಖುಷಿಯಾಗಿ ಬೇಕೆಂದೇ ಕೆಲಸವನ್ನು ನಿಧಾನ ಮಾಡುತ್ತಿದ್ದೆ. ಒಂದೆರಡು ಹಾಳಾಗಿದ್ದ ಸರ್ಕಿಟ್ಗಳನ್ನು ಮತ್ತೆ ಹಾಕಿ ಟಿವಿ ಸರಿ ಮಾಡಿಯಾಗಿತ್ತು. ನಿಜ ಹೇಳ ಬೇಕೆಂದರೆ, ಅದರ ಒಳಗಿನ ಒಂದು ವಯರ್ ಸವೆದು ಲೂಸ್ ಕಾಂಟ್ಯಾಕ್ಟ್ ಸ್ಥಿತಿಯಲ್ಲಿರುವುದು ನನ್ನ ಗಮನಕ್ಕೆ ಬಂದಿದ್ದರೂ, ಮತ್ತೂಮ್ಮೆ ಕರೆಯಲಿ ನೀನು ಎನ್ನುವ ಒಂದೇ ಕಾರಣಕ್ಕೆ ಅದನ್ನು ಹಾಗೆ ಬಿಟ್ಟಿದ್ದೆ.
ಆವತ್ತು ಮನೆ ಬಿಡುವಾಗ ಹೇಳಿಯೇ ಬಂದಿದ್ದೆ. “ಮುಂದೆ ಸ್ವಲ್ಪ ಪ್ರಾಬ್ಲಿಂ ಬಂದರೂ ಬರಬಹುದು. ಒಂದೆರಡು ಪಾರ್ಟ್ಸ್ ಹೋಗಿದೆ. ಸದ್ಯ ತೊಂದರೆ ಇಲ್ಲ .ತೊಂದರೆ ಆದಾಗ ಹೇಳಿ, ತಕ್ಷಣ ಬರುತ್ತೀನಿ’ ಅಂತ. ಅಂದುಕೊಂಡ ಹಾಗೆ, ಸರಿಯಾಗಿ ಹದಿನೇಳು ದಿನಗಳ ಬಳಿಕ ನಿನ್ನ ಫೋನು ಬಂದಿತ್ತು. ಮೊಬೈಲ್ನಲ್ಲಿ “ಅಭಿಜ್ಞಾ’ ಎಂದು ತೋರಿಸಿದಾಗ ನನಗೆ ಉಲ್ಲಾಸ ಉತ್ಪಾಹ. ತೋರಿಸಿದೊಡನೆ ನೀನು, “ಸರ್’ ಎನ್ನುತ್ತಿದ್ದಂತೆ ನಾನು “ಹಾ ಗೊತ್ತಾಯ್ತು ಈಗಲೇ ಬರ್ತಿನಿ’ ಎಂದವನೆ ಫೋನು ಇಟ್ಟಿದ್ದೆ.
ಹೌದು ಅಭಿಜ್ಞಾ, ಅವತ್ತು ನೀನು ಮನೆಯಲ್ಲಿರಲಿಲ್ಲ. ಅಪ್ಪ ಅಮ್ಮ ಮಾತ್ರ ಇದ್ದರು. ಟಿವಿ ಬಿಚ್ಚಿ ಕುಳಿತವನಿಗೆ ರಿಪೇರಿ ಮಾಡಬೇಕು ಅಂತನ್ನಿಸಲಿಲ್ಲ. ಸುಮ್ಮನೆ ನಾಟಕವಾಡತೊಡಗಿದ್ದೆ. ಅಂತೂ ಕೊನೆಗೊಮ್ಮೆ ಧೈರ್ಯ ಮಾಡಿ ಮಗಳು ಇಲ್ಲವಾ ಅಂತ ನಿನ್ನ ಅಪ್ಪನ ಬಳಿ ಕೇಳಿದ್ದೆ. ಇಲ್ಲ ಕಾಲೇಜಿಗೆ ಹೋಗಿದ್ದಾಳೆ ಎನ್ನುವ ಉತ್ತರ ಬಂತು. ಅದೇಕೋ ಮತ್ತೆ ಕೆಲಸ ಮುಂದುವರೆಸುವ ಮನಸ್ಸಾಗಲಿಲ್ಲ. ಸ್ವಲ್ಪ ದೊಡ್ಡ ಪ್ರಾಬ್ಲಿಂ ಇದೆ. ನಾನು ಸಂಜೆ ಬಂದು ರಿಪೇರಿ ಮಾಡುತ್ತೀನಿ ಅಂತಂದು ಎದ್ದು ಬಂದೆ.
ಅಭಿಜ್ಞಾ, ಸತ್ಯ ಹೇಳ್ತೀನಿ. ಟಿವಿ ರಿಪೇರಿಗಾಗಿ ಕಾಲ್ ಮಾಡಿಯೇ ಮಾಡುತ್ತೀ ಅನ್ನುವ ಅದೊಂದೇ ಭರವಸೆಯಿಂದ ಮೊಬೈಲನ್ನು ಕೈಯಲ್ಲೇ ಹಿಡಿದುಕೊಂಡು ಪದೇ ಪದೇ ನೋಡುತ್ತಿದ್ದೇನೆ. ಟಿವಿ ಹಾಳಾಗಿದೆ, ಸ್ವಲ್ಪ ಬನ್ನಿ ಮರಾಯ್ರೆ ಅಂತ ಕೇಳಿಕೊಂಡು ಬಂದ ಬೇರೆ ಗ್ರಾಹಕರ ಕಾಲ್ಗಳನ್ನೆಲ್ಲಾ ಸ್ವೀಕರಿಸಿ, ನಾಳೆ ಬರುತ್ತೀನಿ ಎಂದು ಹೇಳುತ್ತಿದ್ದೇನೆ. ಯಾಕಂದ್ರೆ, ಅಲ್ಲಿಗೆ ಹೋದ ಮೇಲೆ ನಿನ್ನ ಕಾಲ್ ಬಂದ್ರೆ ನನಗೆ ರಿಪೇರಿ ಕೆಲಸದ ಮಧ್ಯೆ ಬಿಟ್ಟು ಬರಲಾಗುವುದಿಲ್ಲವಲ್ಲ. ಹಾಗಾಗಿ. ನಿಂಗೊತ್ತಾ ? ನಿಮ್ಮನೆ ಟಿವಿಗಿಂತ ನನ್ನ ಹೃದಯವೇ ಹೆಚ್ಚು ಹಾಳಾಗಿ ಹೋದಂತಿದೆ. ಅದನ್ನು ರಿಪೇರಿ ಮಾಡಲು ನಿನ್ನಿಂದ ಮಾತ್ರ ಸಾಧ್ಯವಾಗೋದು. ಪ್ಲೀಸ್, ಒಂದೇ ಒಂದು ಕಾಲ್ ಮಾಡು ಇವತ್ತೇ ಬರ್ತಿನಿ. ನಿಮ್ಮನೆ ಟಿವಿಯನ್ನು ಇವತ್ತೇ ರಿಪೇರಿ ಮಾಡಿ ಕೊಡ್ತೀನಿ.
ಇತೀ ಕಾಯುತ್ತಿರುವ
ಟಿವಿ ರಿಪೇರಿ ಹುಡುಗ
ನರೇಂದ್ರ ಎಸ್. ಗಂಗೊಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್