ಕಳೆದ ದಿನಗಳ ಆಡಿಟ್ಟು!
Team Udayavani, Dec 26, 2017, 6:15 AM IST
ಹೊಸ ವರುಷವೆನ್ನುವುದು, ಸಂಕ್ರಮಣ ಕಾಲ. ಹಳೆಯದನ್ನು ಒಮ್ಮೆ ಹಿಂದಿರುಗಿ ನೋಡಬೇಕು, ಸಿಂಹದಂತೆ! ಮುಂದಿನ ದಿನಗಳ ಬಗೆಗೆ ಒಂದು ಪ್ಲ್ರಾನ್ ಹಾಕಿಕೊಳ್ಳಬೇಕಾದ ಸಮಯವಿದು. ಕ್ಯಾಲೆಂಡರ್ ಬದಲಾಯಿಸಿದ ಮಾತ್ರಕ್ಕೆ ಬರುವ ದಿನಗಳು ಕಳೆ ಕಟ್ಟುವುದಿಲ್ಲ. ಜೋಶ್ನಲ್ಲಿ ಕುಡಿದು ಕುಪ್ಪಳಿಸಿದ ಮಾತ್ರಕ್ಕೆ ಬರುವ ವರ್ಷವೆಲ್ಲ ಖುಷಿ ಆಗಿರುವುದಿಲ್ಲ.
ತಿಪ್ಪೆಗೆ ಹಾಕಿದರೂ ಲೆಕ್ಕ ಇರಬೇಕು ಅಂತಾರೆ ಹಿರಿಯರು. ಕೇವಲ ತರಕಾರಿ ತರಲು ಹೋದ ನಾವು ಮನೆಗೆ ಬಂದ ತಕ್ಷಣ ಯಾವುದಕ್ಕೆಷ್ಟು ಖರ್ಚಾಯ್ತು ಅಂತ ಒಂದು ಲೆಕ್ಕಾಚಾರಕ್ಕೆ ತೊಡಗುತ್ತೇವೆ. ಅದು ಒಳ್ಳೆಯದು ಕೂಡ. ಹಣಕ್ಕೆ, ಕೊಡು - ಕೊಟ್ಟ ವಸ್ತುಗಳಿಗೆ, ಕೆಲವು ಸಹಾಯಗಳಿಗೆ ಒಂದು ಲೆಕ್ಕ ಅಂತ ಇಡ್ತೀವಿ. ಅದರಲ್ಲಿ ಸದಾ ಒಂದು ವ್ಯವಸ್ಥೆಯನ್ನು ಒಗ್ಗಿಸಿಕೊಂಡು ಬದುಕಲು ಇಷ್ಟಪಡ್ತೀವಿ. ಅದು ಒಳ್ಳೆಯದು. ಆದರೆ, ಕಳೆದುಹೋದ ದಿನಗಳ ಬಗ್ಗೆ?
ಹೌದು, ಕಳೆದುಹೋದ ಮತ್ತು ಬರಲಿರುವ ದಿನಗಳ ಬಗೆಗೆ ನಮ್ಮಲ್ಲಿ ನಿಜಕ್ಕೂ ಒಂದು ಲೆಕ್ಕಚಾರವಿದೆಯಾ? ರಾತ್ರಿ ಕಳೆದು ಹೇಗೋ ಒಂದು ಬೆಳಕು ಕಂಡರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದೇವಾ? ಕೇವಲ ತರಕಾರಿ ಕೊಂಡು ತಂದು ಮನೆಯಲ್ಲಿ ಲೆಕ್ಕ ಬರೆಯುವ ನಾವು ಅನಾಮತ್ತು 20, 30, 40 ವರ್ಷಗಳನ್ನು ಕಳೆದು ಬಂದಿದ್ದರೂ ಒಮ್ಮೆಯಾದರೂ ಲೆಕ್ಕಾಚಾರಕ್ಕೆ ಇಳಿದಿದ್ದೇವಾ? ಕಳೆದ ದಿನಗಳನ್ನು ಹಿಂದಿರುಗಿ ನೋಡಿಕೊಂಡಿದ್ದೇವಾ? ಬರಲಿರುವ ದಿನಗಳಿಗೆ ಒಂದು ಪ್ಲಾನ್ ಅನ್ನು ರೂಪಿಸಿದ್ದೇವಾ? ಬಹುಶಃ ಇದಕ್ಕೆ ಬಹುತೇಕರ ಉತ್ತರ, “ಇಲ್ಲ’!
ನಾವೀಗ ವರ್ಷದಂಚಿನಲ್ಲಿದ್ದೇವೆ. ಕ್ಯಾಲೆಂಡರ್ ಬದಲಾಯಿಸುವ ಸಮಯ. ಹೊಸ ವರುಷವನ್ನು ಸಂಭ್ರಮಿಸಲು ಈಗಾಗಲೇ ನಿಮ್ಮಲ್ಲಿ ಅದ್ಧೂರಿ ಪ್ಲ್ರಾನ್ಗಳು ತಯಾರಿವೆ. ಪಾರ್ಟಿಗೆ ಅಲ್ಲಿಗೇ ಹೋಗ್ಬೇಕು, ಕಳೆದ ಸಲಕ್ಕಿಂತ ಜಾಸ್ತಿ ಕುಡೀಬೇಕು, ಪಾರ್ಟಿ ಫುಲ್ ಥ್ರಿಲ್ಲಾಗಿರಬೇಕು ಎಂಬುದರ ಬಗ್ಗೆ ಈಗಾಗಲೇ ತೀರ್ಮಾನಗಳಾಗಿರುತ್ತವೆ.
ಡಿ.31ರ ರಾತ್ರಿ ಕುಡಿತ ಹೆಚ್ಚಾದ ವ್ಯಕ್ತಿ ವರ್ಷದ ಮೊದಲ ದಿನವನ್ನು ಬರೀ ವಾಂತಿಯಲ್ಲೇ ಕಳೆದುಬಿಡುತ್ತಾನೆ. ಮೊದಲ ಕ್ಷಣ ಚಿಲ್ ಆಗಿ ಸ್ವಾಗತಿಸಿದ ಮಹಿಮೆ ಮೊದಲ ದಿನವೇ ಕೈಕೊಟ್ಟಿದ್ದು ಹೇಗೆ? ಯುಗಾದಿಯೋ, ಜನವರಿಯೋ, ಹೊಸ ವಸಂತವನ್ನು ಸ್ವಾಗತಿಸಲು ನಿಮಗೊಂದು ನೆವ ಬೇಕಿದೆ ಅಷ್ಟೇ! ವರ್ಷಗಳನ್ನು, ದಿನಗಳನ್ನು ತುಂಬಾ ಯೂಸ್ಫುಲ್ ಆಗಿ ಬಳಸಿಕೊಳ್ತೀನಿ ಅನ್ನುವವನು ಪ್ರತಿ ದಿನ, ಪ್ರತಿ ಕ್ಷಣವನ್ನು ಹೊಸದಾಗಿಯೇ ಭಾವಿಸುತ್ತಾನೆ.
ವರ್ಷದ ಅಂತ್ಯ ಮತ್ತು ಆರಂಭದ ಈ ಕ್ಷಣದಲ್ಲಿ ನಿಜಕ್ಕೂ ಆಗಲೇಬೇಕಾದ ಕೆಲಸಗಳೇ ಬೇರೆ ಇವೆ. ಕಳೆದ ಬಾರಿ ಅಂದುಕೊಂಡಿದ್ದು ಯಾವುದು ಈಡೇರಿದೆ? 365 ದಿನಗಳಲ್ಲಿ ನಿಮ್ಮವು ಅಂತ ಇದ್ದಿದ್ದು ಎಷ್ಟು? ಅಪ್ಪ- ಅಮ್ಮ ಅವರನ್ನು ತೀರ್ಥಯಾತ್ರೆಗೆ ಕಳುಹಿಸಬೇಕು ಅಂದುಕೊಂಡಿದ್ದು ಸಾಧ್ಯವಾಯ್ತಾ? ನೀವು ಓದಿದ ಶಾಲೆಗೆ ಹೋಗಿ ಕಂಪ್ಯೂಟರ್ ಕೊಡಿಸಬೇಕು ಅಂದೊRಂಡಿದ್ದು ಈಡೇರಿತಾ? ಈ ವರ್ಷ ನೀವೆಷ್ಟು ಕಳಕೊಂಡಿರಿ? ಏನನ್ನು ಗೆದ್ದುಕೊಂಡಿರಿ? ಬರೀ ವ್ಯರ್ಥ ಮಾಡಿದ್ದೆಷ್ಟು? ನಕ್ಕಿದ್ದು, ಅತ್ತಿದ್ದು, ನೋವು ಕೊಟ್ಟಿದ್ದು, ಬೇರೆಯವರಿಗೆ ಖುಷಿ ಕೊಟ್ಟಿದ್ದು, ಇದು ಸರಿನಾ? ತಪ್ಪಾ?- ಇವೆಲ್ಲದರ ಮೌಲ್ಯಮಾಪನ ಆಗಬೇಕಿದೆ.
ಇದೊಂದು ಸಂಕ್ರಮಣ ಕಾಲ. ಹಳೆಯದನ್ನು ಒಮ್ಮೆ ಹಿಂದಿರುಗಿ ನೋಡಬೇಕು, ಸಿಂಹದಂತೆ! ಮುಂದಿನ ದಿನಗಳ ಬಗೆಗೆ ಒಂದು ಪ್ಲ್ರಾನ್ ಹಾಕಿಕೊಳ್ಳಬೇಕಾದ ಸಮಯವಿದು. ಕ್ಯಾಲೆಂಡರ್ ಬದಲಾಯಿಸಿದ ಮಾತ್ರಕ್ಕೆ ಬರುವ ದಿನಗಳು ಕಳೆ ಕಟ್ಟುವುದಿಲ್ಲ. ಜೋಶ್ನಲ್ಲಿ ಕುಡಿದು ಕುಪ್ಪಳಿಸಿದ ಮಾತ್ರಕ್ಕೆ ಬರುವ ವರ್ಷವೆಲ್ಲ ಖುಷಿ ಆಗಿರುವುದಿಲ್ಲ.
ಸುಮ್ಮನೆ ಒಮ್ಮೆ ಕುಳಿತು ನಿಮ್ಮನ್ನು ನೀವು ಅವಲೋಕಿಸಿಕೊಳ್ಳಿ. ಅಬ್ಬಬ್ಟಾ ಎಂದರೆ, ನಿಮ್ಮ ದಿನಗಳು ಅಂತ ಈ ಬದುಕಿನಲ್ಲಿ ಇನ್ನೆಷ್ಟಿವೆ? ಮಾಡಬೇಕಿರುವ ಕೆಲಸಗಳು ಎಷ್ಟಿವೆ? ಇವುಗಳ ನಿರ್ಧಾರಗಳಿಗೆ ಹೊಸ ವರ್ಷವನ್ನು ನೆವವಾಗಿ ತೆಗೆದುಕೊಳ್ಳಿ. ಅಪ್ಪ- ಅಮ್ಮನಿಗೆ ಒಂದು ಮನೆ ಕಟ್ಟಿಸಿಕೊಡ್ತಿನಿ, ಅನಾಥಾಶ್ರಮದ ನಾಲ್ಕು ಮಕ್ಕಳನ್ನು ದತ್ತು ತಗೆದುಕೊಳ್ತೀನಿ, ಸಿಗರೇಟ್ ಬಿಡ್ತೀನಿ, ಬೆಳಗ್ಗೆ ಐದಕ್ಕೆ ಎದ್ದು ವಾಕ್ ಹೋಗ್ತಿàನಿ, ಒಂದೊಳ್ಳೆ ಉದ್ಯೋಗ ಪಡೀತೀನಿ, ಸುತ್ತಮುತ್ತಲಿನ ಜನರನ್ನು ನನ್ನಿಂದ ಖುಷಿಪಡುವಂತೆ ಮಾಡುತ್ತೇನೆ, ನನ್ನ ಸಂಸಾರದೊಂದಿಗೆ ಇಷ್ಟು ಸಮಯ ಕಳೆಯಲೇಬೇಕು, ಕಳೆದಬಾರಿ ಆದ ತಪ್ಪುಗಳು ಮತ್ತೆ ತಲೆ ಎತ್ತದಂತೆ ನೋಡಿಕೊಳ್ತೀನಿ…- ಇಂಥವೇ ಸಣ್ಣ, ದೊಡ್ಡ ನಿರ್ಧಾರಗಳಿಗೆ ಬದ್ಧರಾಗಬೇಕು. ಆರಂಭ ಶೂರರೂ ಆಗಬಾರದು. ಮತ್ತೆ ಮುಂದಿನ ಈ ದಿನಕ್ಕೆ ಒಂದು ಮೌಲ್ಯಮಾಪನವಿರಬೇಕು. ಹುಟ್ಟಿದ್ದೇನೆ, ಹೇಗೋ ಬದುಕುತ್ತೇನೆ ಅಂತ ಹೊರಡುವುದಲ್ಲ- ಹೀಗೆ ಬದುಕಬೇಕು ಅಂತ ಹೊರಡಬೇಕು. ಆಗಲೇ ಬದುಕಿನ ನಿಜ ರುಚಿ ಹತ್ತುವುದು.
ಈ ಕೆಳಗಿನ ಪ್ರಶ್ನೆಗಳಿಗೆ ಕಡ್ಡಾಯವಾಗಿ ಉತ್ತರಿಸಿ…
– ಕಳೆದ ಬಾರಿ ಅಂದುಕೊಂಡಿದನ್ನು ಈಡೇರಿಸಿದ್ರಾ?
– 365 ದಿನಗಳಲ್ಲಿ ನಿಮ್ಮ ದಿನಗಳು ಅಂತಾಗಿದ್ದು ಎಷ್ಟು?
– ಅಪ್ಪ- ಅಮ್ಮ ಅವರನ್ನು ತೀರ್ಥಯಾತ್ರೆಗೆ ಕಳುಹಿಸಬೇಕು ಅಂದುಕೊಂಡಿದ್ದು ಆಯ್ತಾ?
– ನೀವು ಓದಿದ ಶಾಲೆಗೆ ಹೋಗಿ ಕಂಪ್ಯೂಟರ್ ಕೊಡಿಸಬೇಕು ಅಂದೊRಂಡಿದ್ದು ಈಡೇರಿತಾ?
– ಈ ವರ್ಷ ನಾನೆಷ್ಟು ಕಳೆದುಕೊಂಡೆ? ಏನನ್ನು ಗೆದ್ದುಕೊಂಡೆ? ಬರೀ ವ್ಯರ್ಥ ಮಾಡಿದ್ದೆಷ್ಟು?
– ನಕ್ಕಿದ್ದು, ಅತ್ತಿದ್ದು, ನೋವು ಕೊಟ್ಟಿದ್ದು, ಬೇರೆಯವರಿಗೆ ಖುಷಿ ಕೊಟ್ಟಿದ್ದು, ಇದು ಸರಿನಾ? ತಪ್ಪಾ?- ಇವೆಲ್ಲದರ ಮೌಲ್ಯಮಾಪನ ಮಾಡ್ಕೊಂಡ್ರಾ?
– ಸದಾಶಿವ್ ಸೊರಟೂರು