ರಾಮಾಚಾರಿ ಪತ್ರ ಬರೆದ
Team Udayavani, Jul 24, 2018, 6:00 AM IST
ನಾಗರಹಾವು ಸಿನಿಮಾ ಬಿಡುಗಡೆಯಾದಾಗ, ಅದರ ಹೀರೋ ರಾಮಾಚಾರಿಯಲ್ಲಿಯೇ ತಮ್ಮ ವ್ಯಕ್ತಿತ್ವ ಹುಡುಕಿದವರಿಗೆ ಲೆಕ್ಕವಿಲ್ಲ. ರಾಮಾಚಾರಿ ಪಾತ್ರಧಾರಿ ವಿಷ್ಣುವರ್ಧನ್ ಅವರಂತೆಯೇ ನಡೆಯುವುದು, ಮಾತಾಡುವುದು, ಕ್ರಾಪ್ ತೆಗೆಯುವುದು ಆಗ ಫ್ಯಾಷನ್ ಆಗಿತ್ತು! ಇಂಥ ಸಂದರ್ಭದಲ್ಲಿಯೇ ಅಭಿಮಾನಿಯೊಬ್ಬರು ವಿಷ್ಣುವರ್ಧನ್ಗೆ ಒಂದು ಪತ್ರ ಬರೆದರು. ಆಮೇಲೆ ಏನೇನಾಯ್ತು ಎಂಬುದನ್ನು ತಿಳಿಯಲು ತಪ್ಪದೇ ಈ ಲೇಖನ ಓದಿ…
1977ರ ಜುಲೈ ತಿಂಗಳು. ವಿದ್ಯಾಭ್ಯಾಸಕ್ಕೆ ಬ್ರೇಕ್ ಹಾಕಿ, ಅನಿವಾರ್ಯತೆಗೆ ತಲೆಬಾಗಿ, ಅಪ್ಪನಿಗೆ ಹೋಟೆಲ್ ಉದ್ಯಮದಲ್ಲಿ ಹೆಗಲು ಕೊಟ್ಟಿದ್ದೆ. ಬಿಸಿರಕ್ತ. ಜೀವಶಾಸ್ತ್ರ, ರಸಾಯನಶಾಸ್ತ್ರಗಳಿಗಿಂತಲೂ ಸಿನಿಮಾ ಶಾಸ್ತ್ರವೇ ಅಪ್ಯಾಯಮಾನವೆನಿಸಿತ್ತು. ಚಲನಚಿತ್ರಗಳ ಕುರಿತು ಟೀಕೆ, ವಿಮರ್ಶೆ, ಕಿರುಲೇಖನವನ್ನು ಬರೆಯುತ್ತಿದ್ದೆ.
1972ರಲ್ಲಿ ತೆರೆಕಂಡ ನಾಗರಹಾವು ನೋಡಿದ ನಂತರ ಅದರಲ್ಲಿ “ಬುಸ್’ ಎಂದ ಚಿಗುರು ಮೀಸೆಯ ಸುಂದರ ರಾಮಚಾರಿ ವಿಷ್ಣುವರ್ಧನ್ರ ಮೋಡಿಗೊಳಗಾಗಿದ್ದೆ. ಉಗ್ರ ಅಭಿಮಾನಿಯಾಗಿಬಿಟ್ಟಿದ್ದೆ.
ಇದೇ ಸಮಯದಲ್ಲಿ, ಆಗ ಅತಿಹೆಚ್ಚು ಪ್ರಸಾರ ಹೊಂದಿದ್ದ ಕನ್ನಡ ಸಿನಿ ಮಾಸಿಕ “ಚಿತ್ರದೀಪ’ ಪತ್ರಿಕೆ ತಾರೆಗೊಂದು ಪತ್ರ ಎಂಬ ಅಂಕಣವನ್ನು ಆರಂಭಿಸಿ ನಮ್ಮ ನೆಚ್ಚಿನ ತಾರೆಗೆ ಪತ್ರ ಬರೆಯಲು ಸೂಕ್ತ ವೇದಿಕೆ ಒದಗಿಸಿತ್ತು. ಇನ್ನು ತಡವೇಕೆ? ಒಂದು ಕೈ ನೋಡಿಯೇ ಬಿಡೋಣವೆಂದು, ನನ್ನ ಮೆಚ್ಚಿನ ಗುಳ್ಳನಿಗೆ ಒಂದು ಪತ್ರ ಬರೆದು ಪತ್ರಿಕೆಗೆ ಕಳಿಸಿದೆ. ವೈವಿಧ್ಯತೆ ಇರಲೆಂದು ಹಳ್ಳಿ ಭಾಷೆಯಲ್ಲಿ ಬರೆದಿದ್ದೆ. ಅದರ ಒಂದೈದು ಸಾಲು ಹೀಗಿತ್ತು-
ಕೃಷ್ಣಪ್ಪಾ,
ನಿನ್ಕೂಟ ಮಾತಾಡ್ಬೇಕೂಂತ ಭೋ ದಿವ್ಸಗಳಿಂದ ಆಸೆ. ಅದ್ಕೆ ಈಗ ಕಾಲ ಕೂಡಿ ಬಂದೈತೆ. ಇಂಗೆಲ್ಲ ಏಕವಚನದಾಗೆ ಬರ್ದೆ ಅಂತ ಕೋಪಿಸ್ಕೋಬ್ಯಾಡ. ನಾವಿಬ್ರೂ ಆತ್ಮೀಯರು ಅಂದಮ್ಯಾಗೆ ಬೋವಚನ ಯಾಕೆ? ಹೆಂಗಿದ್ರೂ ನಾನು ಹಳ್ಳಿಯೋನು…….. ಹರಪನಹಳ್ಳಿಯೋನು……..
ಈ ಪತ್ರ, 1977ರ ಆಗಸ್ಟ್ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ನನ್ನ ಸಂತಸಕ್ಕೆ ಪಾರವೇ ಇಲ್ಲ. ಏನೋ ಸಾಧಿಸಿದ ಗರಿಮೆ. ಹಿಂಬದಿಯ ಕಾಲರ್ ಮೇಲೇರಿತ್ತು.
ಸೆಪ್ಟೆಂಬರ್ ಮೊದಲ ವಾರದಲ್ಲಿ ನನ್ನ ಹೆಸರಿಗೊಂದು ಅಂಚೆಯ ಕವರ್ ಬಂದಿತ್ತು. ಒಡೆದು ನೋಡಿದಾಗ ನನ್ನ ಕಣ್ಣನ್ನು ನಾನೇ ನಂಬದಾದೆ. ವಿಷ್ಣುವರ್ಧನ್ರವರು ತಮ್ಮದೇ ಲೆಟರ್ಹೆಡ್ನಲ್ಲಿ ತಮ್ಮ ಸ್ವಹಸ್ತಾಕ್ಷರದಲ್ಲಿ ಬರೆದ ಪತ್ರ! ಜೊತೆಗೆ ಶುಭಾಶಯ ಕೋರಿದ ಒಂದು ಸುಂದರ ಭಾವಚಿತ್ರ. ನನಗೆ ಗಗನವು ಎಲ್ಲೋ ಭೂಮಿಯು ಎಲ್ಲೋ… ಎಂಬಂಥ ಅನುಭವ. ನಾನು ಕನಸು ಕಾಣುತ್ತಿಲ್ಲ ಎಂಬುದನ್ನು ಕಣ್ಣುಜ್ಜಿ ನೋಡಿ ಖಾತ್ರಿ ಪಡಿಸಿಕೊಂಡೆ. ನನ್ನಂಥ ಹುಲು ಅಭಿಮಾನಿಗೆ ಅವತ್ತಿನ ಯಂಗ್ ಸ್ಟಾರ್ ವಿಷ್ಣು ವರ್ಧನ್ ಪತ್ರ ಬರೆಯುವುದೇ? ಜೀವ ವೀಣೆ ನೀಡು ಮಿಡಿತದ ಸಂಗೀತದ ಅನಿರ್ವಚನೀಯ ಆನಂದ. ನಂತರ ತಿಳಿಯಿತು; ಪತ್ರಿಕೆಯವರಿಂದ ನನ್ನ ವಿಳಾಸ ಪಡೆದು ಪತ್ರ ಕಳಿಸಿದ್ದರಂತೆ ವಿಷ್ಣುವರ್ಧನ್. ಇಂತಹ ಆಪ್ತ ವಿಷಯಗಳಿಂದಲೇ ಸರಳತೆಯ ಸಾಕಾರ ಮೂರ್ತಿ, ಹಸನ್ಮುಖೀ, ಚಿನ್ನದಂಥಾ ಮಗ ವಿಷ್ಣು ಅಂದಿಗೂ ಇಂದಿಗೂ ನನ್ನಂಥ ಕೋಟ್ಯಂತರ ಅಭಿಮಾನಿಗಳ ಹೃದಯ ಸಾಮ್ರಾಜ್ಯದಲ್ಲಿ ನೆಲೆಸಿರುವುದು.
ಆ ಪತ್ರ ಇಂದಿಗೂ ನನ್ನ ಸಂಗ್ರಹದಲ್ಲಿ ಗರಿಗರಿಯಾಗಿದೆ. ಈ ಪತ್ರ ಬಂದ ದಿನದಿಂದಲೇ ನನ್ನ ಗೆಳೆಯರ ಬಳಗದಲ್ಲಿ ನಾನು ಹೀರೋ ಆಗಿದ್ದೆ. ವಿಷ್ಣುವರ್ಧನರ ಪತ್ರಮಿತ್ರ ಎಂಬ ಖ್ಯಾತಿಯೂ ನನ್ನದಾಗಿತ್ತು.
ಅಂದಿನ ಆ ಸವಿಸವಿ ನೆನಪು ಇಂದಿಗೂ ಆಗಾಗ ನನ್ನನ್ನು ಎಬ್ಬಿಸಿ ಮುದಗೊಳಿಸಿ ಹೃದಯದೊಳಗಿನ ಗುಬ್ಬಚ್ಚಿಯನ್ನು ಸವರುತ್ತದೆ.
ಕೆ. ಶ್ರೀನಿವಾಸರಾವ್