ರಂಗವಲ್ಲಿ ಮಾಸಿದೆ ಕನಸು, ದೀಪ ಒಡೆದಿದೆ
Team Udayavani, Mar 12, 2019, 12:30 AM IST
ನಿನಗಾಗಿ ಎಷ್ಟೋ ಪ್ರೇಮ ಪತ್ರಗಳನ್ನು ಬರೆದಿದ್ದೆ. ಅದರೆ, ಯಾವುದನ್ನೂ ನಿನಗೆ ಕೊಡಲಾಗಲಿಲ್ಲ. ಅವುಗಳೆಲ್ಲ ನಿನ್ನ ಕೈ ಸೇರಿದ್ದರೆ ಇವತ್ತು ಈ ಪತ್ರವನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಓ ನನ್ನ ಪ್ರೀತಿಯ ಗೆಳೆಯ
ಇದನ್ನು ಪ್ರೇಮಪತ್ರ ಅನ್ನೋಕೆ ಕಾಲ ಮೀರಿ ಹೋಗಿದೆ. ಸ್ನೇಹ ಪತ್ರ ಎಂದು ಕರೆಯಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ. ಇದೆಲ್ಲಾ ಶುರುವಾಗಿದ್ದು ಯಾವಾಗಿಂದ ಹೇಳು? ಮೊದಲ ಬಾರಿಗೆ ನೀನು ಎದುರು ಮನೆಗೆ ಬಾಡಿಗೆಗೆ ಬಂದ ದಿನದಿಂದ ಅಲ್ಲವಾ? ಅವತ್ತೇ ನಾನು ನಿನ್ನ ಮೊದಲು ನೋಡಿದ್ದು.
ಅವತ್ತು ನಾನು ಕನಕಾಂಬರ ಬಣ್ಣದ ಚೂಡಿದಾರದ ಮೇಲೆ ಹಾಲು ಬಿಳುಪಿನ ಟವೆಲ್ ಹೊದ್ದು ಮನೆಯಿಂದ ಹೊರ ಬಂದಿದ್ದೆ. ಮನೆಯೆದುರು ರಂಗೋಲಿ ಬಿಡಿಸಲು ಬಂದವಳ ಎದೆಯಂಗಳದಲ್ಲಿ ನೀನು ಪ್ರೀತಿಯ ಮೊದಲ ಚುಕ್ಕೆಯನ್ನಿಟ್ಟಿದ್ದೆ. ಅದ್ಯಾಕೋ ಗೊತ್ತಿಲ್ಲ, ಮೊದಲ ನೋಟದಲ್ಲೇ ನೀನು ನನ್ನನ್ನು ಸೆಳೆದು ಬಿಟ್ಟೆ.
ಆಮೇಲಿನಿಂದ ದಿನವೂ ನಿನ್ನ ದಿನಚರಿಯನ್ನು ಫಾಲೋ ಮಾಡುವುದೇ ನನ್ನ ಕೆಲಸವಾಯಿತು. ನೀನು ಎದುರು ಮನೆ ಮಾಳಿಗೆಯ ಮೇಲೆ ಬ್ರಷ್ ಮಾಡಲು ಬರುವ ಸಮಯಕ್ಕೆ ಸರಿಯಾಗಿ ನಾನು ಕೈಯಲ್ಲಿ ರಂಗೋಲಿ ಡಬ್ಬಿ ಹಿಡಿದು ಅಂಗಳಕ್ಕೆ ಬರುತ್ತಿದ್ದೆ. ನೀನು ಹಲ್ಲುಜ್ಜಿ ಮುಗಿಸುವ ತನಕವೂ ಒಂದೊಂದೇ ಚುಕ್ಕೆ ಇಡುತ್ತಾ ಅಂಗಳದಲ್ಲೇ ಇರುತ್ತಿದ್ದೆ. ನೀನು ಏಳುವುದು ಲೇಟಾದರೆ, ಅಂಗಳಕ್ಕೆ ಚುಕ್ಕಿ ಬೀಳುವುದೂ ತಡವಾಗುತ್ತಿತ್ತು.
ಈ ಕಣ್ಣಾಮುಚ್ಚಾಲೆ ಆಟ ಇಬ್ಬರಿಗೂ ಗೊತ್ತಿತ್ತು. ಕೆಲವು ದಿನ ನೀನು ಬೇಕಂತಲೇ ಗಂಟೆ ಒಂಬತ್ತಾದರೂ ಎದ್ದು ಬರದೆ ನನ್ನನ್ನು ಕಾಯಿಸುತ್ತಿದ್ದೆ. ಆದರೆ. ನೀನೇ ಮೊದಲು ಹೇಳಬೇಕೆಂದು ನಾನು, ನಾನೇ ಹೆಜ್ಜೆ ಮುಂದಕ್ಕೆ ಇಡಬೇಕೆಂದು ನೀನು 3 ವರ್ಷ ಕಳೆದುಬಿಟ್ಟೆವು. ಇಬ್ಬರ ನಡುವೆ ಒಳ್ಳೆಯ ಗೆಳೆತನವಿತ್ತು. ಆದರೂ, ಆ ಸ್ನೇಹವನ್ನು ಪ್ರೇಮದ ಮನೆಗೆ ಸೇರಿಸಲು ಇಬ್ಬರಿಗೂ ಆಗಲಿಲ್ಲ. ಕಡೆಗೊಂದು ದಿನ ನೀನು ನನ್ನಿಂದ ದೂರಾಗುವ ಗಳಿಗೆ ಬಂತು. ನನ್ನ ಮನಸ್ಸು ನೀರಿಲ್ಲದ ಮೀನಿನಂತೆ ಒದ್ದಾಡಿಬಿಟ್ಟಿತು. ಅದೆಷ್ಟೋ ಸಲ ನಿನಗೆ ಪರೋಕ್ಷವಾಗಿ ಸುಳಿವು ಕೊಟ್ಟೆನಾದರೂ ನೀನು ಅರಿತೂ ಅರಿಯದಂತೆ ಜಾಣಮೌನಿಯಾದೆ.
ಹೇಳು ಗೆಳೆಯ, ನಿನಗೆ ನಾನಂದ್ರೆ ಇಷ್ಟವಿರಲಿಲ್ವಾ? ನಮ್ಮನೆಯ ರಂಗವಲ್ಲಿ ಡಬ್ಬಿ, ನೀನೆಂದು ಅಪ್ಪಿ ಹಿಡಿದು ಮಲಗಿದ ದಿಂಬು, ಕೈ ಕೈ ಹಿಡಿದು ಓಡಾಡಿದ ಆ ರಸ್ತೆ, ನೀನು ನನಗೇ ಸ್ವಂತವಾಗಲಿ ಅಂತ ಬೇಡಿಕೊಳ್ಳುವಾಗ ಬಿದ್ದ ದೇವಸ್ಥಾನದ ಗುಲಾಬಿ ಹೂವನ್ನು ಕೇಳಿ ನೋಡು, ನಮ್ಮಿಬ್ಬರ ಮಧ್ಯೆ ಇದ್ದದ್ದು ಸ್ನೇಹವೋ, ಪ್ರೀತಿಯೊ ಅಂತ. ನನ್ನ ಕಾಲಿಗೆ ಗೆಜ್ಜೆ ನೀನಾದರೆ, ನಿನ್ನ ಬಾಳಿನ ನಾದ ನಾನಾಗುವ ಆಸೆ. ನನ್ನ ಮುಡಿಯ ಹೂ ನೀನಾದರೆ, ನಿನ್ನ ಜೀವನದ ಪರಿಮಳ ನಾನಾಗುವ ಆಸೆ ಕಣೋ…
ಮತ್ತೂಮ್ಮೆ ನಿನ್ನನ್ನೇ ನೀನು ಕೇಳಿಕೋ. ಇದು ಸ್ನೇಹವಾ, ಪ್ರೀತಿಯಾ ಅಥವಾ ಜಸ್ಟ್ ಆಕರ್ಷಣೆಯಾ ಅಂತ. ನಿನಗೆ ನೀನೇ ಉತ್ತರ ಕಂಡು ಹಿಡಿದುಕೋ. ನಿನಗಾಗಿ ಎಷ್ಟೋ ಪ್ರೇಮ ಪತ್ರಗಳನ್ನು ಬರೆದಿದ್ದೆ. ಅದರೆ, ಯಾವುದನ್ನೂ ನಿನಗೆ ಕೊಡಲಾಗಲಿಲ್ಲ. ಅವುಗಳೆಲ್ಲ ನಿನ್ನ ಕೈ ಸೇರಿದ್ದರೆ ಇವತ್ತು ಈ ಪತ್ರವನ್ನು ಬರೆಯುವ ಪ್ರಮೇಯವೇ ಬರುತ್ತಿರಲಿಲ್ಲ.
ಇತ್ತೀಚೆಗೆ ನಾನಿಡುವ ರಂಗೋಲಿಯಲ್ಲಿ ಚುಕ್ಕಿಗಳು ಇವೇ ಹೊರತು, ಬಣ್ಣವಿಲ್ಲ. ಬದುಕಿನ ರಂಗೂ ಮಾಸಿ ಹೋಗಿದೆ. ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ ಅಂತ ಹೃದಯ ಕೂಗಿ ಕೂಗಿ ಹೇಳುತ್ತಿದೆ. ನಿನ್ನ ಪ್ರೀತಿಯಂತೂ ನನ್ನ ಹಣೆಯಲ್ಲಿ ಬರೆದಿಲ್ಲ. ಮತ್ತೇನು ಮಾಡಲಿ ಹೇಳು, ನಿನ್ನ ಸ್ನೇಹಿತಳಾಗೇ ಉಳಿದುಬಿಡುತ್ತೇನೆ.
ಅನ್ನಪೂರ್ಣ ವೈ.ಬಿ.ಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ