ಇಲ್ಲಿ ಯಾರು ನನ್ನೋರು..?
ಮೂರು ನಿಮಿಷದ ಮನುಷ್ಯ
Team Udayavani, Jun 4, 2019, 6:00 AM IST
ಅವತ್ತು ಬೆಂಗಳೂರಿನಲ್ಲಿ ಒಂದು ಕಾಂಪಿಟೇಶನ್ ಇತ್ತು. ಒಬ್ಬನೇ ಹೊರಟಿದ್ದೆ. ನನ್ನ ದುರದೃಷ್ಟವೋ ಏನೋ, ಅಂದು ಬೆಳಗ್ಗೆ 6 ಗಂಟೆಗೆ ತಲುಪಬೇಕಿದ್ದ ಬಸ್ಸು, ಇಳಿರಾತ್ರಿ 3ಕ್ಕೇ ಮೆಜೆಸ್ಟಿಕ್ ಮುಟ್ಟಿತು. ಮೆಜೆಸ್ಟಿಕ್ನಲ್ಲಿ ಇಳಿದೆ. ಕೊರೆಯುವ ಚಳಿ ಬೇರೆ. ಅದೇ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದರಿಂದ, ಒಳಗೊಳಗೇ ಭಯವೂ ಇತ್ತು. ಹೊಸ ಜನ, ಯಾರು ಹೇಗೆ ಮೋಸ ಮಾಡ್ತಾರೋ ಏನೋ ಎನ್ನುವ ದಿಗಿಲು. ಸ್ಪರ್ಧೆ ಇರೋದು 9 ಗಂಟೆಗೆ, ಅಲ್ಲಿಯ ತನಕ ಎಲ್ಲಿರಲಿ?- ಇದು ನನ್ನನ್ನು ಕಾಡುತ್ತಿದ್ದ ಪ್ರಶ್ನೆ.
ದಿಕ್ಕೇ ತೋಚದಾಗಿ, ಅಲ್ಲೇ ಚಹಾ ಕುಡಿಯುತ್ತಾ ಕುಳಿತಿದ್ದೆ. ಯಾರೋ ಪುಣ್ಯಾತ್ಮ ಆಟೋ ಚಾಲಕ ಬಳಿ ಬಂದು, ವಿಚಾರಿಸಿದ. ಮೊದ ಮೊದಲಿಗೆ ನಾನು ಅವನೊಂದಿಗೆ ಮಾತಾಡಲು ಹಿಂಜರಿದೆನಾದರೂ, ನಂತರ ಯಾಕೋ ಒಳ್ಳೆಯವನು ಅಂತನ್ನಿಸಿಬಿಟ್ಟ. “9 ಗಂಟೆಯವರಿಗೆ ಎಲ್ಲಿರಬೇಕೋ, ತಿಳಿಯುತ್ತಿಲ್ಲ’ ಅಂದೆ. ಅವನು ಅಲ್ಲೇ ಇದ್ದ, ಅವನ ಸ್ನೇಹಿತನ ಅಂಗಡಿಯಲ್ಲಿ 9 ಗಂಟೆಯವರೆಗೆ ಉಳಿಯಲು ಅವಕಾಶ ಕಲ್ಪಿಸಿಕೊಟ್ಟ. ಕೊನೆಗೆ ಸೇರಬೇಕಾದ ಸ್ಥಳಕ್ಕೂ ಆಟೋದಲ್ಲಿ ನನ್ನನ್ನು ಮುಟ್ಟಿಸಿದ. “ಬೆಂಗಳೂರು ಜನ, ಹುಷಾರು’ ಅಂತ ಯಾರ್ಯಾರೋ ಹೇಳಿದ್ದನ್ನು ಕೇಳಿದ್ದೆ. ಆದರೆ, ಇವನು ಆ ಅಪವಾದವನ್ನು ದೂರ ಮಾಡಿಬಿಟ್ಟ. ಥ್ಯಾಂಕ್ಯೂ ಸರ್…
– ಶಾಮ ಪ್ರಸಾದ್, ಹನಗೋಡು